Homeಅಂಕಣಗಳುದಲಿತರಿಗೆ ವಸತಿ ಮಂಜೂರು ಮತ್ತು ಆತ್ಮವಿಶ್ವಾಸ ತುಂಬುತ್ತಿದ್ದ ಗಣಪಯ್ಯನವರ ಕುಟುಂಬ

ದಲಿತರಿಗೆ ವಸತಿ ಮಂಜೂರು ಮತ್ತು ಆತ್ಮವಿಶ್ವಾಸ ತುಂಬುತ್ತಿದ್ದ ಗಣಪಯ್ಯನವರ ಕುಟುಂಬ

ಆಗ ಒಂದು ಮನೆಯ ಒಟ್ಟು ಖರ್ಚು ಒಟ್ಟು ಎರಡೂವರೆ ಸಾವಿರ ರೂಗಳು. ಅದರಲ್ಲಿ ಎರಡು ಸಾವಿರ ರೂ ಇಪ್ಪತ್ತು ವರ್ಷಗಳ ಅವಧಿಯ ಸರ್ಕಾರದ ಸಾಲವಿದ್ದರೆ, ಉಳಿದ ಐದುನೂರು ರೂಗಳನ್ನು ಫಲಾನುಭವಿಯೇ ಭರಿಸಬೇಕಿತ್ತು.

- Advertisement -
- Advertisement -

ಕಳೆದುಹೋದ ದಿನಗಳು – 20

ಡೈರಿ ಕೆಲಸ ಬೆಳಗ್ಗೆ ಐದು ಗಂಟೆಗೆ ಪ್ರಾರಂಭವಾಗುತ್ತಿತ್ತು. ಹಸುಗಳ ಸೆಗಣಿಯನ್ನು ತೆಗೆಯುವವರು, ಹಸುಗಳಿಗೆ ಹಿಂಡಿ ಕೊಡುವವರು, ತೊಳೆಯುವವರು, ಹೀಗೆ ಎಲ್ಲರೂ ಅವರವರ ಕೆಲಸಗಳಲ್ಲಿ ತೊಡಗುವರು. ಆರುಗಂಟೆಗೆ ಹಾಲು ಕರೆಯಲು ಪ್ರಾರಂಭ. ಸುಮಾರು ಮೂವತ್ತು ಹಸುಗಳು ಹಾಲು ಕರೆಯಲು ಇರುತ್ತಿದ್ದವು.

ಡೈರಿಫಾರಂನ ಉಸ್ತುವಾರಿಯೆಂದರೆ ತೋಟದ ಕೆಲಸಗಳ ಹಾಗಲ್ಲ, ಅದನ್ನು ನೋಡಿಕೊಳ್ಳುವವನಿಗೆ ಅದಕ್ಕೆ ಸಂಬಂಧಪಟ್ಟ ಎಲ್ಲ ಕೆಲಸಗಳು ಸ್ವತಃ ಮಾಡಿ ಗೊತ್ತಿರಬೇಕು ಮತ್ತು ಸಾಂದರ್ಭಿಕವಾಗಿ ಮಾಡಲು ತಯಾರಿರಬೇಕು. ಯಾಕೆಂದರೆ ಬೇರೆ ಯಾವುದೇ ಕೃಷಿ ಕೆಲಸವನ್ನು ನಾಳೆಗೆ ಮುಂದೂಡಬಹುದು. ಹಸುಗಳಿಗೆ ಆಹಾರ, ಹುಲ್ಲು, ನೀರು ಕೊಡುವುದು, ಹಾಲುಕರೆಯುವುದು, ಕಾಯಿಲೆ ಬಂದರೆ ಔಷಧಿ ತಪ್ಪಿಸುವಂತೆಯೇ ಇಲ್ಲ.

ನನಗೆ ಎಲ್ಲ ಕೆಲಸವೂ ಅಭ್ಯಾಸವಾಗಿತ್ತು, ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪ್ರತಿಹೊತ್ತಿನಲ್ಲಿ ಏಳೆಂಟು ಹಸುಗಳ ಹಾಲನ್ನು ಕರೆಯುವ ಅಭ್ಯಾಸ ಇಟ್ಟುಕೊಂಡಿದ್ದೆ. ನನ್ನ ಹದಿನಾಲ್ಕು ವರ್ಷಗಳ ಡೈರಿ ಉಸ್ತುವಾರಿಯ ಕಾಯಕದಲ್ಲಿ ಕೆಲಸಕ್ಕೆ ಹೋದ ಒಂದು ದಿನವೂ ಅದನ್ನು ತಪ್ಪಿಸಲಿಲ್ಲ.

ಕೂನೂರಿನಲ್ಲಿ ತರಬೇತಿ ಪಡೆದ ನಂತರ, ಹಸುಗಳಿಗೆ ಕ್ಯಾಲ್ಸಿಯಂ ಡ್ರಿಪ್ ಹಾಕುವುದು, ಗಬ್ಬ ಕಟ್ಟಿದೆಯೇ ಎಂದು ಪರೀಕ್ಷೆ ಮಾಡುವುದು, ಕರು ಹಾಕುವಾಗ ಎಚ್ಚರಿಕೆಯಿಂದ ಪ್ರಸವ ಮಾಡಿಸುವುದು, ಮುಂತಾದ ಕೆಲಸಗಳಲ್ಲದೆ ಕಾಲಕಾಲಕ್ಕೆ ಪಶುವೈದ್ಯರು ಹೇಳಿದ ಔಷಧಿ ಇಂಜೆಕ್ಷನ್‌ಗಳನ್ನು ಕೊಡುವುದು ಮುಂತಾದವನ್ನು ಮಾಡುತ್ತಿದ್ದೆ. ಜೊತೆಗೆ ಪಶುಸಂಗೋಪನೆಗೆ ಸಂಬಂಧಿಸಿದ ಪುಸ್ತಕಗಳನ್ನು ತಂದು ಓದತೊಡಗಿದೆ.

ಪೂರ್ಣಿಮಾ ಎಸ್ಟೇಟ್ ಡೈರಿ

ಇದರಿಂದಾಗಿ ಸುತ್ತಲಿನ ಅನೇಕರು ಅವರಲ್ಲಿ ದನ ಕರುಗಳಿಗೆ ಏನಾದರೂ ಅನಾರೋಗ್ಯವಾದಾಗ ನನಗೆ ಹೇಳಿ ಕಳುಹಿಸತೊಡಗಿದರು. ಹೇಗೂ ಸುತ್ತಾಡಲೂ ಸೈಕಲ್ಲಿತ್ತು, ಕೆಲಸ ಮಾಡುವ ಉತ್ಸಾಹವೂ ಇತ್ತು. ಸುತ್ತಲಿನ ಹಲವಾರು ಕೃಷಿಕರಿಗೆ ಅವಸರದ ಅಗತ್ಯಗಳಿಗೆ ನಾನೊಬ್ಬ ಪಶು ಚಿಕಿತ್ಸಕನಾದೆ. ಹೀಗೆ ಹೊರಗೆ ಹೋಗಿ ಕೆಲಸ ಮಾಡಲು ರವೀಂದ್ರನಾಥರ ಅನುಮತಿ ಕೇಳಿದಾಗ ಅವರು, “ನಿನಿಗೆ ಸಮಯ ಮತ್ತು ಮನಸ್ಸು ಇದ್ದರೆ ಮಾಡು. ಅವರಿಗೂ ಒಂದು ಸಹಾಯವಾಗುತ್ತದೆ” ಎಂದರು.

ಆದರೆ ಎಲ್ಲವೂ ಉಚಿತ ಸೇವೆ, ಔಷಧಿಯನ್ನು ಬಳಸಿದ್ದರೆ ಅದರ ಹಣ ಮಾತ್ರ ಪಡೆಯುತ್ತಿದ್ದೆ. ಇಲ್ಲವೇ ಔಷಧಿಯನ್ನು ಅವರಲ್ಲೇ ತರಲು ಹೇಳುತ್ತಿದ್ದೆ.

ಆ ಕಾಲದಲ್ಲಿ ಇನ್ನೂ ಸಾಕ್ಷರತಾ ಆಂದೋಲನ ಪ್ರಾರಂಭವಾಗಿಲಿಲ್ಲ. ಅದರೆ ವಯಸ್ಕರ ಶಿಕ್ಷಣ ಸಮಿತಿ ಇತ್ತು. ಅದರ ಮೂಲಕ ಒಂದಷ್ಟು ರಾತ್ರಿ ಶಾಲೆಗಳನ್ನು ಪ್ರಾರಂಭ ಮಾಡಲಾಯಿತು. ಅದಕ್ಕಾಗಿ ಸಕಲೇಶಪುರ ನಗರದಲ್ಲಿ ಒಂದು ಹತ್ತು ದಿನಗಳ ತರಬೇತಿ ಶಿಬಿರ ನಡೆಯಿತು. ತರಬೇತಿ ಪಡೆದವರು ನಂತರ ತಮ್ಮ ತಮ್ಮ ಊರಿನಲ್ಲಿ ರಾತ್ರಿ ಶಾಲೆಗಳನ್ನು ನಡೆಸಬೇಕಿತ್ತು. ಅದಕ್ಕಾಗಿ ಒಂದಷ್ಟು ಪಠ್ಯ ಪುಸ್ತಕಗಳು, ಇತರ ಪರಿಕರಗಳು, ಒಂದು ಲಾಟೀನು, ಅದಕ್ಕೊಂದಷ್ಟು ಸೀಮೆ ಎಣ್ಣೆ ದೊರೆಯುತ್ತಿತ್ತು. ಜೊತೆಯಲ್ಲಿ ತರಗತಿ ನಡೆಸುವವರಿಗೆ ಸಣ್ಣ ಸಂಭಾವನೆಯೂ ಇತ್ತು. ಆಗ ರವೀಂದ್ರನಾಥರು ಹಲವು ಯುವಕರನ್ನು ಅಲ್ಲಿ ತರಬೇತಿ ಪಡೆಯಲು ಕಳುಹಿಸಿದರು. ಹಾಗೆ ಹೋದವರಲ್ಲಿ ನಮ್ಮೂರಿನ ಪಕ್ಕದ ಮಾವಿನ ಹಳ್ಳಿ ಕಾಳಯ್ಯ ಎಂಬವರಿದ್ದರು.

ರವೀಂದ್ರನಾಥರು ಅವರ ಹೆಸರನ್ನು ಬರೆಸುವಾಗ ಕಾಳಿಪ್ರಸಾದ್ ಎಂದು ಬರೆಸಿದರು. ನಂತರ ಆತನಲ್ಲಿ ಯಾರು ಕೇಳಿದರೂ ನೀನು ನಿನ್ನ ಹೆಸರನ್ನು ಕಾಳಿಪ್ರಸಾದ್ ಎಂದು ಹೇಳು ಎಂದರು.

ನನಗೆ ಆಗ ಇದು ವಿಚಿತ್ರವೆನಿಸಿತು. ಆದರೆ ಸುಮ್ಮನಿದ್ದೆ. ದಿನಕಳೆದಂತೆ ಕಾಳಿಪ್ರಸಾದ್ ತಮ್ಮ ಕಡೆಯ ಅನೇಕ ಹುಡುಗರಿಗೆ ಇದೇ ರೀತಿ ಮರು ನಾಮಕರಣ ಮಾಡಿದರು. ಆಗ ನಾನು ಈ ವಿಚಾರವನ್ನು ರವೀಂದ್ರನಾಥರಿಗೆ ಹೇಳಿದೆ. ಆಗ ಅವರು ನೋಡು ಅವನಿಗೆ ಸ್ವಲ್ಪ ವಿದ್ಯೆ ಮೊದಲೇ ಇತ್ತು. ಆದರೆ ಅವನು ಮೂರನೆಯ ತರಗತಿಗೇ ಶಾಲೆ ಬಿಟ್ಟಿದ್ದಾನೆ. ಅದಕ್ಕೆ ಅವನ ಬಡತನ ಒಂದೇ ಕಾರಣ ಅಂತ ತಿಳಿಯಬೇಡ. ಮೊದಲು ನಾನು ಅವನ ಹೆಸರನ್ನು ಕೇಳಿದಾಗ, ಹಿಂಜರಿಯುತ್ತ “ಕಾಳಯ್ಯ” ಅಂತ ಗಂಟಲೊಳಗಿಂದ ಹೇಳಿದ.

ಪೂರ್ಣಿಮಾ ಎಸ್ಟೇಟ್ ಹಸುಗಳು

ಈಗ ಅವನ ಹೆಸರನ್ನು ಹೇಳುವಾಗ ಅವನ ಸ್ವರದಲ್ಲಾದ ಬದಲಾವಣೆ ಮತ್ತು ಆತ್ಮವಿಶ್ವಾಸವನ್ನು ನೋಡು ಎಂದರು.

ಕಾಳಿಪ್ರಸಾದ್ ಮುಂದೆ ಜಿಲ್ಲಾ ಪರಿಷತ್ ಸದಸ್ಯರೂ ಆದರು. ಅದು ಬೇರೆಯೇ ಒಂದು ಕಥೆಯಿದೆ.

ತರಬೇತಿಯ ನಂತರ ಕಾಳಿಪ್ರಸಾದ್ ಗಾಣದಹೊಳೆಯಲ್ಲಿ ರಾತ್ರಿ ಶಾಲೆಯನ್ನು ನಡೆಸತೊಡಗಿದರು. ಈ ರೀತಿ ಹಲವು ಕಡೆಗಳಲ್ಲಿ ಶಾಲೆಗಳು ನಡೆಯುತ್ತಿದ್ದವು. ಅದರಿಂದ ಹಲವರಿಗೆ ಒಂದಷ್ಟು ಸಂಭಾವನೆ ಇತ್ಯಾದಿ ದೊರೆತರೂ ಬಹಳ ಪ್ರಯೋಜನವೇನು ಆಗಲಿಲ್ಲ. ಅದಕ್ಕೆ ಹಲವಾರು ಕಾರಣಗಳಿದ್ದವು. ಮುಖ್ಯವಾಗಿ ಆಗ ಅದು ಒಂದು ಜನಾಂದೋಲನದ ರೂಪದಲ್ಲಿ ಇರಲಿಲ್ಲ. ಬಹಳಷ್ಟು ಜನರು ಇದು ತರಗತಿ ನಡೆಸುವವರು ಹಣ ಪಡೆಯಲು ಮಾಡುತ್ತಿದ್ದಾರೆಂದು ತಿಳಿದು ಅದರಲ್ಲಿ ಆಸಕ್ತಿ ತೋರಲಿಲ್ಲ. ಜೊತೆಗೆ ಈ ವಯಸ್ಕರ ಶಿಕ್ಷಣವನ್ನೇ ಲೇವಡಿ ಮಾಡುತ್ತ, ಕುಹಕ ವ್ಯಂಗ್ಯಗಳಿಂದ ನಿರುತ್ಸಾಹಗೊಳಿಸುವ ಮಂದಿಯೂ ಸಾಕಷ್ಟು ಇದ್ದರು. ಇವರಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಅರೆಶಿಕ್ಷಿತ ಭೂಮಾಲಿಕ ವರ್ಗವೇ ವಯಸ್ಕರ ಶಿಕ್ಷಣದ ವಿರುದ್ಧವಾಗಿದ್ದರು. ಇದೇ ವಿಷಯವನ್ನಿಟ್ಟುಕೊಂಡೇ ನಾವು “ಸತ್ಯಕ್ಕೆ ಸಾವಿಲ್ಲ” ಎಂಬ ನಾಟಕವನ್ನು ಮಾಡಿದ್ದು. ಮುಂದೆ ಬದಲಾವಣೆಯ ದಿನಗಳು ಬಂದವು ಆದರೆ ಅದಕ್ಕಾಗಿ ಮುಂದೆ ಸಾಕ್ಷರತಾ ಆಂದೋಲನದವರೆಗೆ ಕಾಯಬೇಕಾಯಿತು.

ಗಣಪಯ್ಯನವರು ಈಗಾಗಲೇ ನಡಹಳ್ಳಿ ಗ್ರಾಮದಲ್ಲಿ ದಲಿತರಿಗೆ ನೆಲ ಕೊಡಿಸಿ ತೋಟ ಮಾಡಿಕೊಡುವ ಪ್ರಯತ್ನದಲ್ಲಿ ಇದ್ದರು. ಅದರ ಮುಂದುವರಿಕೆಯಾಗಿ ಅಗಲಟ್ಟಿ ಮತ್ತು ಮಾವಿನಹಳ್ಳಿ ಗ್ರಾಮದಲ್ಲಿ ಸುಮಾರು ನೂರು ಎಕರೆ ಜಮೀನನ್ನು ನಲುವತ್ತು ದಲಿತ ಕುಟುಂಬಗಳಿಗೆ ಮಂಜೂರು ಮಾಡಿಸಿದರು. ಅದು ಮರಗಿಡಗಳಿಲ್ಲದ ಬೋಳು ದೀಣೆ ಪ್ರದೇಶವಾಗಿದ್ದು ತುಂಬಾ ಈಚಲು ಗುತ್ತಿಗಳಿದ್ದವು. ಬೇರೆಯವರೆಲ್ಲ ಆಗ “ಗಣಪಯ್ಯ ನಿಮ್ಮಗೆಲ್ಲ ಈಚಲು ಗುತ್ತಿ ಅಗಿಯಕ್ಕೆ ಮಾಡಿಕೊಡ್ತಾ ಇದ್ದಾರೆ” ಎಂದು ಕುಟುಕುತ್ತಿದ್ದರು.  ಪ್ರಾರಂಭದ ಹಂತದಲ್ಲಿ ದಲಿತರು ಆ ನೆಲವನ್ನು ಪಡೆಯಲು ಸ್ವಲ್ಪ ಹಿಂಜರಿದರೂ ನಿಧಾನವಾಗಿ ಅವರೂ ಅರ್ಥಮಾಡಿಕೊಂಡು, ಅಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಹೀಗೆ ಜಮೀನು ಪಡೆದವರಲ್ಲಿ ಕಾಳಿಪ್ರಸಾದ್ ಕುಟುಂಬದವರೂ ಇದ್ದಾರೆ.

ವಯಸ್ಕರ ಶಿಕ್ಷಣ ತರಬೇತಿ ಯ ನೋಟ್ಸ್

ಬಡವರಿಗಾಗಿ ಆಗ ಜನತಾ ಮನೆಗಳ ಯೋಜನೆ ಜಾರಿಗೆ ಬಂದಿತ್ತು. ಆಗ ಒಂದು ಮನೆಯ ಒಟ್ಟು ಖರ್ಚು ಒಟ್ಟು ಎರಡೂವರೆ ಸಾವಿರ ರೂಗಳು. ಅದರಲ್ಲಿ ಎರಡು ಸಾವಿರ ರೂ ಇಪ್ಪತ್ತು ವರ್ಷಗಳ ಅವಧಿಯ ಸರ್ಕಾರದ ಸಾಲವಿದ್ದರೆ, ಉಳಿದ ಐದುನೂರು ರೂಗಳನ್ನು ಫಲಾನುಭವಿಯೇ ಭರಿಸಬೇಕಿತ್ತು. ಅದರಲ್ಲಿ ಒಂದು ಸಾವಿರ ರೂಗಳಿಗೆ ಹೆಂಚು ಮತ್ತು ಮರವನ್ನು ಸರ್ಕಾರವೇ ಟೆಂಡರ್ ಮೂಲಕ ಪಡೆದು ಹಂಚುತ್ತಿತ್ತು. ಉಳಿದ ಹಣದಲ್ಲಿ ತಳಪಾಯ, ಗೋಡೆ, ಬಡಗಿ ಕೆಲಸ, ಸಾರಣೆ ಇತ್ಯಾದಿಗಳು ಆಗಬೇಕಿತ್ತು. ಈ ಹಣದಲ್ಲಿ ಮನೆಯನ್ನು ಪೂರ್ತಿ ಮಾಡಲು ಸಾಧ್ಯವಾಗುತ್ತಿರಲಿಲ್ಲವಾದ್ದರಿಂದ ನಿಜವಾದ ಬಡವರಿಗೆ ಮನೆ ಕಟ್ಟಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟೇ ಅಲ್ಲ ಅದಕ್ಕಾಗಿ ಕೂಲಿಕೆಲಸ ಬಿಟ್ಟು ಹಲವು ಸಲ ತಾಲ್ಲೂಕಿನ ಕೇಂದ್ರಕ್ಕೆ, ಕಛೇರಿಗಳಿಗೆ ತಿರುಗಲೂ ಅವರಿಂದ ಆಗುತ್ತಿರಲಿಲ್ಲ

ಈ ರೀತಿ ಮನೆಗಳನ್ನು ಕಟ್ಟಿಸಲು ಫಲಾನುಭವಿಗಳನ್ನು ಹುಡುಕಿ ಅರ್ಜಿ ಸಂಗ್ರಹಿಸುವುದು, ಮುಂತಾದ ಕೆಲಸಗಳನ್ನು ಗಣಪಯ್ಯ ಪ್ರಾರಂಭಿಸಿದರು, ಅದರ ಹಲವು ಕೆಲಸಗಳು ನನ್ನ ಪಾಲಿಗೆ ಬಂದವು.

ನನಗೆ ತಿರುಗಾಟಕ್ಕೆ ಹೇಗೂ ಸೈಕಲಿತ್ತು, ಜೊತೆಗೆ ನನ್ನ ಪಶುಚಿಕಿತ್ಸೆಯ ನಿಮಿತ್ತ ಅನೇಕ ಕಡೆಗಳಿಗೆ  ಹೋಗುತ್ತಿದ್ದರಿಂದ ಹಲವರ ಪರಿಚಯವಾಗಿತ್ತು. ಅಲ್ಲಿನ ಕೆಲವರು ವಸತಿ ಇಲ್ಲದವರ ಮಾಹಿತಿಯೂ ಸಿಗುತ್ತಿತ್ತು.

ಈ ರೀತಿ ನೂರಾರು ಜನರ ಪಟ್ಟಿ ಸಿದ್ಧವಾಯಿತು. ಮಾವಿನಹಳ್ಳಿ, ಹಾರ್ಲೆ, ಕೂಡಿಗೆ, ಕುಂಬರಡಿ, ನಡಹಳ್ಳಿ, ಹೆಬ್ಬಸಾಲೆ, ಕೃಷ್ಣಾಪುರ, ಹೆನ್ನಲಿ, ಅಜ್ಜನಕೆರೆ, ಹಾಗೆಯೇ ಸಕಲೇಶಪುರದಿಂದ ಆಚೆ ಕೆಲವು ಗ್ರಾಮಗಳಲ್ಲಿಯೂ ಬಡವರಿಗೆ ಮನೆ ಕಟ್ಟಿಸುವ ಯೋಜನೆ ಸಿದ್ಧವಾಯಿತು.

ಆದರೆ ಫಲಾನುಭವಿಗಳ ಐನೂರು ರೂಗಳು ಹಣವನ್ನು ಭರಿಸಬೇಕು ಅಂದಾಗ ಹೆಚ್ಚಿನವರು ಹಿಂಜರಿದರು. ಆಗ ದಿನಗೂಲಿ ಆರು ರೂಪಾಯಿ ಇತ್ತು ಐನೂರು ರೂಗಳೆಂದರೆ ಇಂದಿನ ನಲುವತ್ತು ಸಾವಿರಕ್ಕೆ ಸಮವಾಗಬಹುದು.

ಹಲವು ಬ್ಯಾಂಕುಗಳಲ್ಲಿ ಗಣಪಯ್ಯ ಸಾಲಕ್ಕಾಗಿ ವಿಚಾರಿಸಿದರು. ಹೆಚ್ಚಿನ ಬ್ಯಾಂಕುಗಳು ಈ ಯೋಜನೆಗೆ ಆಸಕ್ತಿ ತೋರಲಿಲ್ಲ. ಆಗ ಸಹಾಯಕ್ಕೆ ಬಂದವರು ವಿಜಯಾ ಬ್ಯಾಂಕಿನ ಅಂದಿನ ಮ್ಯಾನೇಜರ್ ವಿಠ್ಠಲ ಶೆಟ್ಟರು. ಅವರು ದಲಿತರಿಗೆಲ್ಲ ಬುಟ್ಟಿ ಹೆಣೆಯುವುದು ಮುಂತಾದ ನಾನಾ ಕಾರಣಗಳನ್ನು ತೋರಿಸಿ ತಲಾ ಐನೂರು ರೂ ಸಾಲ ಕೊಟ್ಟರು. ಈ ಎಲ್ಲಾ ಸಾಲಕ್ಕೂ ರವೀಂದ್ರನಾಥರು ಜಾಮೀನಾದರು.

ಫಲಾನುಭವಿಗಳ ಒಟ್ಟು ಸಂಖ್ಯೆ ಐನೂರಕ್ಕೂ ಹೆಚ್ಚಿತ್ತು. ಆ ವರ್ಷವೇ ಅತೀ ಅಗತ್ಯವಿರುವ ಮುನ್ನೂರು ಜನರನ್ನು ಆಯ್ಕೆ ಮಾಡಲಾಯಿತು. ಅವರಲ್ಲಿ ಶೇ ಎಂಬತ್ತರಷ್ಟು ದಲಿತರಿದ್ದರು. ಉಳಿದವರಲ್ಲಿ ಎಲ್ಲಾ ಜಾತಿಗೆ ಸೇರಿದ ಬಡವರಿದ್ದರು. ಈ ಮನೆಗಳಿಗೆ ಸಂಬಂಧಪಟ್ಟ ಕೆಲಸಗಳಿಗೆ ಕಛೇರಿ ತಿರುಗುವ ಮತ್ತು ಬೇರೆ ಕೆಲಸಗಳ ಹೊಣೆಯೂ ನನಗೇ ಬಂತು.

ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದು ಹೋದ ದಿನಗಳು – 16: ಇಂದಿರಾಗಾಂಧಿ ಚಿಕ್ಕಮಗಳೂರಿನಲ್ಲಿ ಚುನಾವಣೆ ಗೆದ್ದುದ್ದು..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...