Homeಅಂಕಣಗಳುಕಳೆದು ಹೋದ ದಿನಗಳು - 16: ಇಂದಿರಾಗಾಂಧಿ ಚಿಕ್ಕಮಗಳೂರಿನಲ್ಲಿ ಚುನಾವಣೆ ಗೆದ್ದುದ್ದು..

ಕಳೆದು ಹೋದ ದಿನಗಳು – 16: ಇಂದಿರಾಗಾಂಧಿ ಚಿಕ್ಕಮಗಳೂರಿನಲ್ಲಿ ಚುನಾವಣೆ ಗೆದ್ದುದ್ದು..

ಆಗ ಸಣ್ಣ ರೈತರು, ಕೂಲಿ ಕಾರ್ಮಿಕರು, ದಲಿತರು, ಸಹಜವಾಗಿಯೇ ಇಂದಿರಾ ಪರವಾಗಿ ಇದ್ದರು. ಬ್ಯಾಂಕ್ ರಾಷ್ಟ್ರೀಕರಣದಿಂದ ಸಾಲ ಸೌಲಭ್ಯ ಪಡೆದವರು ಸಂತುಷ್ಟರಾಗಿದ್ದರು.

- Advertisement -
- Advertisement -

ರವೀಂದ್ರನಾಥರು ಪ್ರಾರಂಭಿಸಿದ್ದ ಹೈನುಗಾರಿಕೆ ಸಕಲೇಶಪುರ ತಾಲ್ಲೂಕಿನಲ್ಲಿ ಒಂದು ಆಂದೋಲನದಂತೆ ಬೆಳೆಯಿತು.

ಆಗ ಉಪಾಸಿ ಸಂಸ್ಥೆಯಿಂದ ಹೈನುಗಾರಿಕೆ ಅಭಿವೃದ್ಧಿ ಯೋಜನೆಯೊಂದು ಪ್ರಾರಂಭವಾಗಿತ್ತು. ಉಪಾಸಿ ಸಂಸ್ಥೆಯ ಕೇಂದ್ರ ಕಛೇರಿಯಿರುವ ತಮಿಳುನಾಡಿನ ಕೂನೂರಿನಲ್ಲಿ ಒಂದು ಹೈನುಗಾರಿಕೆ ತರಬೇತಿ ಕೇಂದ್ರವಿತ್ತು. ಸಕಲೇಶಪುರ ತಾಲ್ಲೂಕಿನಿಂದ ತರಬೇತಿಗಾಗಿ ಮೂವರನ್ನು ರವೀಂದ್ರನಾಥರು ಅಲ್ಲಿಗೆ ಕಳುಹಿಸಿದರು. ಅವರಲ್ಲಿ ಒಬ್ಬ ನಾನು, ಇನ್ನೊಬ್ಬರು ಹಾರ್ಲೆಯಲ್ಲಿ ಡೈರಿ ಕೆಲಸ ಮಾಡುತ್ತಿದ್ದ ವಿಶ್ವನಾಥ್ ಎಂಬವರು. ಮತ್ತೊಬ್ಬರು ದೇವಾಲದ ಕೆರೆಯ ಕಾಫಿ ಬೆಳೆಗಾರ ಉಮೇಶ್. ವಿಶ್ವನಾಥ್ ಈಗ ಬೆಂಗಳೂರಿನಲ್ಲಿ ಸ್ವಂತ ಉದ್ಯಮ ನಡೆಸುತ್ತಿದ್ದಾರೆ.

ಕಾಫಿ ತೋಟಗಳಲ್ಲಿ ಕೆಲಸಗಾರರ ಪ್ರತಿ ಕುಟುಂಬಕ್ಕೂ ಒಂದೊಂದು ಹಸು ಕೊಡಿಸುವುದು, ಸಹಕಾರಿ ಪದ್ಧತಿಯಲ್ಲಿ ಅದರ ಉಸ್ತುವಾರಿ. ತೋಟದಲ್ಲೇ ಅದಕ್ಕಾಗಿ ಕೊಟ್ಟಿಗೆಗಳನ್ನು ಕಟ್ಟಿ ವ್ಯವಸ್ಥೆ ಮಾಡುವುದು. ರವೀಂದ್ರನಾಥರಲ್ಲಿ ಹೀಗೆಲ್ಲ ಯೋಜನೆಗಳಿದ್ದವು.

ಅದನ್ನು ಪ್ರಾರಂಭಿಸುವ ಮುಂಚೆ ಸಕಲೇಶಪುರದ ರೋಟರಿ ಭವನದಲ್ಲಿ ಕಾಫಿಬೆಳೆಗಾರರರ ಸಭೆಯೊಂದನ್ನು ರವೀಂದ್ರನಾಥರು ಕರೆದಿದ್ದರು. ಆ ದಿನ ಯಾಕೋ ನನಗೆ “ನೀನೂ ಸಭೆಗೆ ಬಾ” ಎಂದಿದ್ದರು. ಹಾಗೇ “ನೀನು ನಿನ್ನ ಅಭಿಪ್ರಾಯವನ್ನು ಅಲ್ಲಿ ಹೇಳಬಹುದು” ಎಂದೂ ಸೂಚನೆ ಕೊಟ್ಟಿದ್ದರು.

ಸಭೆಯಲ್ಲಿ ರವೀಂದ್ರನಾಥರು ಅದರ ವಿವರಗಳನ್ನು ಹೇಳುತ್ತಿದ್ದಂತೆ ನನಗೆ ಅದ್ಭುತ ಯೋಜನೆ ಎನಿಸಿತು.

“ಆದರೆ ಕೆಲವರು ಪ್ಲಾಂಟರುಗಳಿಗೆ ಕಡು ಕೋಪ ತರಿಸಿತು. ಇದೆಲ್ಲಾ ಮಾಡಿದರೆ ಆಳುಗಳೆಲ್ಲ ಹೆಚ್ಚಿಕೊಂಡು ಬಿಡ್ತಾರೆ. ನಾಳೆ ಕೆಲಸಕ್ಕೇ ಬರಲ್ಲ” ಎಂದು ತಕರಾರು ತೆಗೆದರು. ರವೀಂದ್ರನಾಥರು ನನ್ನತ್ತ ಕೈ ತೋರಿಸಿ ಇಲ್ಲೊಬ್ಬ ಇದ್ದಾನೆ ಅವನೇನು ಹೇಳ್ತಾನೆ ಕೇಳೋಣ ಎಂದರು. ನನಗೆ ಮಾತನಾಡಲು ಯಾವ ಸಿದ್ಧತೆಯೂ ಇರಲಿಲ್ಲ.

“ನಾನು ಎದ್ದು ನಿಂತು, ಕಾರ್ಮಿಕರ ಮತ್ತು ಮಾಲಿಕರ ಸಂಬಂಧ ಇರಬೇಕಾದ್ದು ಹೀಗೆ. ನನಗೆ ಈ ಯೋಜನೆಯಲ್ಲಿ ನನಗೂ ಒಂದು ಪಾಲು ಸಿಗುತ್ತದೆ ಎಂದು ಸಂತೋಷವಾಯಿತು. ನಾವು ದೇಶ ಎನ್ನುತ್ತೇವೆ. ದೇಶ ಭಕ್ತಿ ಎನ್ನುತ್ತೇವೆ, ನನ್ನದು ಎಂದು ಏನೂ ಇಲ್ಲದವನಿಗೆ ಇದು ನಿನ್ನ ದೇಶ ಎನ್ನುವುದಕ್ಕೆ ಏನರ್ಥ? ಎಂದು ಬಿಟ್ಟೆ.

ರವೀಂದ್ರನಾಥರು ಇದ್ದುದರಿಂದಲೋ ಏನೋ ನಾನು ಸಭೆಯಿಂದ ಹೊರಹಾಕಿಸಿಕೊಳ್ಳದೆ ಬಚಾವಾದೆ. ಆದರೆ ಆ ಸಭೆಯಲ್ಲಿ ನಾನೊಬ್ಬ ಅನಪೇಕ್ಷಿತ ಎಂದು ಹಲವರ ಮುಖಭಾವದಲ್ಲೇ ತಿಳಿಯುತ್ತಿತ್ತು.

ಯಾರೋ ಒಬ್ಬರು “ಯೋಜನೆಯೇನೋ ಒಳ್ಳೆಯದೇ ರವಿ, ಈಗ ಪ್ರಾಯೋಗಿಕವಾಗಿ ಅದನ್ನು ಅವರೇ ಮಾಡುತ್ತಾರೆ ನಂತರ ನಾವೆಲ್ಲ ಮಾಡೋಣ” ಎಂದು ತಿಪ್ಪೆ ಸಾರಿಸಿ ಸಭೆಯನ್ನು ಮುಗಿಸಿದರು.

ನಂತರ ಒಬ್ಬರು ಹಿಂದಿನಿಂದ, ರವಿ ಬೇಕಾಗಿ ಆ ತಲೆಹರಟೆಯನ್ನು (ನಾನು) ಕರೆದುಕೊಂಡು ಬಂದಿದ್ದಾರೆ, ಎಂದರು. ಇನ್ನುಕೆಲವರು, “ಇದೆಲ್ಲ ಪುಸ್ತಕದ ಬದನೇ ಕಾಯಿ” ಎಂದರು.

ಇದೇ ರೀತಿ ಒಮ್ಮೆ ಗಣಪಯ್ಯನವರೂ ಕೆಲಸಗಾರರಿಗೆ “ನೀವೆಲ್ಲ ತೋಟದ ಷೇರುದಾರರಾಗಿ ನಾವೆಲ್ಲ ಸೇರಿ ಕಂಪೆನಿ ಮಾಡೋಣ” ಎಂದಿದ್ದರು. ಆದರೆ ಅದು ಯಾವುದೂ ಆ ಕಾಲದಲ್ಲಿ ಕೆಲಸಗಾರರಿಗೂ ಅರ್ಥವಾಗುವ ಸ್ಥಿತಿ ಇರಲಿಲ್ಲ ಆದ್ದರಿಂದ ಇವು ಯಾವುವೂ ಜಾರಿಗೆ ಬರುವ ಸಾಧ್ಯತೆಯೂ ಇರಲಿಲ್ಲವೆನಿಸುತ್ತದೆ.

ವಾಸುದೇವರಾವ್ ಹಾರ್ಲೆಯ ಮ್ಯಾನೇಜರ್ ಆಗಿ ಹಲವು ವರ್ಷಗಳು ಕಳೆದಿದ್ದವು. ಸಕಲೇಶಪುರ ಸುತ್ತ ಮತ್ತ ಅವರೊಂದು ರೀತಿಯಲ್ಲಿ ದಂತ ಕತೆಯಂತಾಗಿದ್ದರು. ಅವರ ಉಗ್ರ ಶಿಸ್ತಿನಿಂದಾಗಿ ಅನೇಕ ಮೋಜಿನ ಪ್ರಸಂಗಗಗಳು ನಡೆಯುತ್ತಿದ್ದವು.

ಹಾರ್ಲೆ ತೋಟಗಳಲ್ಲಿ ಪಶುಸಂಗೋಪನೆ ಪ್ರಾರಂಭಿಸಿದ ಮೇಲೆ ಸಕಲೇಶಪುರ ನಗರದಲ್ಲಿಯೂ  ಒಂದು ಘಟಕವಿತ್ತು. ಸುಮಾರು ಇಪ್ಪತ್ತು ಮೂವತ್ತು ಕರೆಯುವ ಹಸುಗಳನ್ನು ಅಲ್ಲಿ ಇಟ್ಟಿರುತ್ತಿದ್ದರು. ಸುತ್ತಲಿನ ನೂರಾರು ಮನೆಗಳವರು ಅಲ್ಲಿನ ಗ್ರಾಹಕರು. ಒಂದಿಷ್ಟೂ ನೀರು ಹಾಕದ ಶುದ್ಧ ತಾಜಾ ಹಾಲಿನಿಂದ ಅವರೆಲ್ಲ ಸಂತುಷ್ಟರಾಗಿದ್ದರು. ಇನ್ನು ಉಳಿದಂತೆ ಪೂರ್ಣಿಮಾ ಡೈರಿ, ಶ್ರೀನಿವಾಸ ಎಸ್ಟೇಟ್, ಹಾಗೂ ಕಪ್ಪಳ್ಳಿ ಘಟಕಗಳಿಂದ ಅಲ್ಲಿ ಸ್ಥಳೀಯವಾಗಿ ಕೊಟ್ಟು ಉಳಿದ ಹಾಲು ಸೈಕಲ್ ಮೂಲಕ ನಗರಕ್ಕೆ ಬರುತ್ತಿತ್ತು.

ಹಾರ್ಲೆ ಡೈರಿಗಳಿಗೆ ಲಾರಿ ಲೋಡುಗಳ ಲೆಕ್ಕದಲ್ಲಿ ಪಶು ಆಹಾರ ಬೇಕಿತ್ತು. ತಾಲ್ಲೂಕಿನಲ್ಲಿ ಬೇರೆಯವರೂ ಪಶು ಆಹಾರ ಕೊಳ್ಳುವವರಿದ್ದರು. ಹಾಗಾಗಿ ರವೀಂದ್ರನಾಥರು ಸಕಲೇಶಪುರದಲ್ಲಿ ಒಂದು ಪಶು ಆಹಾರ ಮಾರಾಟ ಮಳಿಗೆಯನ್ನು ಪ್ರಾರಂಭಿಸಿದರು.

ಅದನ್ನು ನೋಡಿಕೊಳ್ಳಲು ಒಬ್ಬ ಯುವಕನಿದ್ದ. ಕೆಲವೇ ಕಡೆಗಳಲ್ಲಿ ಫೋನಿದ್ದ ಕಾಲವದು. ಆಗ ಹಾರ್ಲೆ ಬಂಗಲೆಯಲ್ಲಿ ಒಂದು ಫೋನಿತ್ತು ಅಷ್ಟೇ. ಉಳಿದ ಕಡೆಗಳಲ್ಲಿ ಫೋನಿರಲಿಲ್ಲ. ಸಕಲೇಶಪುರದ ಪಶು ಆಹಾರ ಅಂಗಡಿಗೂ ಫೋನಿರಲಿಲ್ಲ, ಪಕ್ಕದ ಶೆಟ್ಟರ ಅಂಗಡಿಯಲ್ಲೊಂದು ಫೋನಿತ್ತು. ಕೆಲವು ಸಲ ತೋಟಕ್ಕೇನಾದರೂ ಸಾಮಾನು ಬೇಕಾದರೆ ಅಲ್ಲಿಗೆ ಫೋನ್ ಮಾಡಿ ತಿಳಿಸುತ್ತಿದ್ದರು.

ಒಮ್ಮೆ ಹೀಗೇ ಏನೋ ವಿಷಯಕ್ಕೆ ವಾಸುದೇವರಾವ್ ಅವರು ಅಂಗಡಿಯ ಯುವಕನಿಗೆ ಫೋನ್ ಮಾಡಿದ್ದಾರೆ. ಫೋನ್ ಕರೆ ಬರುವಾಗ ಸಿಗರೇಟು ಆತ ಸೇದುತ್ತಿದ್ದ. ಆತನಿಗೆ ಗಾಭರಿಯಾಯಿತು. ತಾನು ಸಿಗರೇಟು ಸೇದುತ್ತಿರುವುದು ವಾಸುದೇವರಾವ್ ಅವರಿಗೆ ತಿಳಿದರೆ? ಸಿಗರೇಟನ್ನು ಅಲ್ಲೇ ದೂರಕ್ಕೆ ಎಸೆದ.

ಮ್ಯಾನೇಜರ್ ವಾಸುದೇವ ರಾವ್ (ಕನ್ನಡಕ ಧಾರಿ)

ವಾಸನೆ ಬಂದರೆ? ಎಂದುಕೊಂಡ. ಬಾಯಿ ಮುಕ್ಕಳಿಸಲು ನೀರಿಲ್ಲ. ಬೇರೆ ಏನೂ ಪಕ್ಕದಲ್ಲಿ ಇರಲಿಲ್ಲ. “ಒಂದು ನಿಮಿಷ ಶೆಟ್ಟರೇ” ಎಂದು ಹೇಳಿ ಒಂದು ಹಿಡಿ ಪಶು ಆಹಾರವನ್ನು ಬಾಯಿಗೆ ಹಾಕಿಕೊಂಡು ಬೇಗ ಬೇಗ ಅಗಿದು ಉಗಿದು…..ಬಾಯಿ ಒರೆಸಿಕೊಂಡು ಹೋಗಿ ಮಾತಾಡಿದ!

ಸಾಮಾನ್ಯವಾಗಿ ಅವರ ಎದುರು ನಿಂತು ಮಾತಾಡಲು ಎಲ್ಲರೂ ಹೆದರುತ್ತಿದ್ದರು. ನಾವು ಹೇಳಿದ್ದು ಅವರಿಗೆ ವಿರೋಧವಾದರೆ ಅವರು ಕೆಲವು ಸಲ ಹಠಕ್ಕೆ ಬೀಳುವರು.

ನನಗೆ ಸ್ವತಂತ್ರವಾಗಿ ಏನಾದರೂ ಮಾಡಬೇಕೆಂಬ ಹಂಬಲವಿದ್ದುದರಿಂದ ನನ್ನ ಮುಂದಿನ ಗುರಿ ಇದ್ದುದು, ಹೇಗಾದರೂ ಮಾಡಿ ವಾಸಕ್ಕೊಂದು ಮನೆ ಮಾಡಿಕೊಳ್ಳುವುದು ಮತ್ತು ಊಟಕ್ಕೆ ಆಗುವಷ್ಟು ಏನಾದರೂ ವ್ಯವಸ್ಥೆ ಮಾಡಿಕೊಳ್ಳುವುದು. ಇಷ್ಟಿದ್ದರೆ ನಾನು ಮನೆಯವರನ್ನು ಕಟ್ಟಿಕೊಂಡೇ ಮನಸ್ಸು ಬಂದಾಗ ಕೆಲಸ ಬಿಡಬಹುದೆಂದು ನನ್ನ ಯೋಜನೆ. ಬಾಲ್ಯದಿಂದಲೇ ಇದೇ ಊರಲ್ಲೇ ಬೆಳೆದವನಾದ್ದರಿಂದ ಊರೊಳಗೆ ನನಗೆ ಚೆನ್ನಾಗಿ ಸಂಪರ್ಕವಿತ್ತು. ಊರಿನ ಗೆಳೆಯರ ಮತ್ತು ಹಿರಿಯರ ಸಹಾಯ ಪಡೆದು ಪಕ್ಕದಲ್ಲೇ ಒಬ್ಬರು ರೈತರ ಒಂದು ಎಕರೆ ಗದ್ದೆಯನ್ನು ಹತ್ತು ವರುಷಕ್ಕೆ ಗುತ್ತಿಗೆಗೆ ಪಡೆದೆ. ಹೇಗೂ ಮಡಿಕೇರಿಯಲ್ಲಿ ಕಾಲೇಜಿಗೆ ಹೋಗುವಾಗ ಬಂಧುಗಳ ಮನೆಯಲ್ಲಿ ಎರಡು ವರ್ಷ ಗದ್ದೆಯಲ್ಲಿ ಎಲ್ಲ ಕೆಲಸ ಮಾಡಿದ ಅನುಭವ ಇತ್ತು.

ಆದರೆ ನಾನು ಗದ್ದೆ ಗುತ್ತಿಗೆ ಮಾಡಿದ್ದು ಎಸ್ಟೇಟಿನ ಕಾನೂನಿಗೆ ವಿರೋಧ. ನಾನು ಕೆಲಸಕ್ಕೆ ಬೇರೆಯವರನ್ನು ಇಟ್ಟಿದ್ದರೂ, ನನ್ನ ಕೆಲಸವನ್ನು ನಾನು ಸರಿಯಾಗಿ ಮಾಡುತ್ತಿದ್ದರೂ.. ಕಾನೂನು ಕಾನೂನೇ…

ವಾಸುದೇವರಾವ್ ಇದನ್ನ ಒಪ್ಪಲು ಸಾಧ್ಯವೇ ಇರಲಿಲ್ಲ. ಹಾಗಾಗಿ ನಾನು ತೋಟದ ಪಟ್ಟಿಯಲ್ಲಿ ಸೇರುವುದನ್ನು ಮುಂದೆ ಹಾಕುತ್ತ ಹೋದೆ.  ಹೀಗಾಗಿ ನಾನು ಇನ್ನೂ ಅವರ ಹಿಡಿತಕ್ಕೆ ಸಿಕ್ಕಿರಲಿಲ್ಲ.

ನಾನು  ಎಸ್ಟೇಟ್‌ನ ಪಟ್ಟಿಯಲ್ಲಿ ದಾಖಲಾಗದೆ ಇದ್ದುದರಿಂದ ನನಗೆ ಸಂಬಳವಲ್ಲದೆ ಬೇರೆ ಯಾವ ಸೌಲಭ್ಯಗಳು ಸಿಗುವಂತಿರಲಿಲ್ಲ. ಈ ಬಗ್ಗೆ ರವೀಂದ್ರನಾಥರು ನನ್ನನ್ನು ಎಚ್ಚರಿಸಿದ್ದರೂ ನಾನು ಸುಮ್ಮನಿದ್ದೆ.

ಒಂದು ದಿನ ರವೀಂದ್ರನಾಥರು ನೀನು ಹೀಗೆ ಇದ್ದರಾಗದು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು. ನಾನು ಏನೂ ಮಾತಾಡಲಿಲ್ಲ ನಂತರ ಯೋಚಿಸಿ ಅಗತ್ಯ ಬಿದ್ದರೆ ರಾಜೀನಾಮೆ ಕೊಟ್ಟರಾಯಿತು ಎಂದುಕೊಂಡು ಅಧಿಕೃತವಾಗಿ ಕೆಲಸಕ್ಕೆ ಸೇರಿದೆ.

ಆ ವೇಳೆಗಾಗಲೇ ನಾನೊಬ್ಬ ಡೋಂಟ್ ಕೇರ್ ಮಾಸ್ಟರ್, ಸ್ವಲ್ಪ ಉಡಾಫೆಯವನು ಎಂದೆಲ್ಲಾ ಖ್ಯಾತಿಯನ್ನು ಪಡೆದಿದ್ದೆ.

ಕಾಲೇಜು ದಿನಗಳಲ್ಲೇ ಪಿತ್ರಾರ್ಜಿತ ಹವ್ಯಾಸವಾದ ಬೀಡಿಸೇದುವುದು ಅಭ್ಯಾಸವಾಗಿತ್ತು. ಅದೀಗ ಸಿಗರೇಟಿಗೆ ಭಡ್ತಿ ಹೊಂದಿತು. ಒಮ್ಮೆ ವಾಸುದೇವರಾಯರ ಆಫೀಸಿಗೆ ಹೋಗುವಾಗ ಸಿಗರೇಟು ಸೇದಿದ ನಂತರ ಹೋಗಿದ್ದೆ. ಆಫೀಸಿನಲ್ಲಿ ಮಾತಾಡುವಾಗ ಅವರಿಗೆ ವಾಸನೆ ಬಂದಿರಬೇಕು. ಒಂದರೆಡು ಸಲ ಉಸಿರಿನಲ್ಲೇ ವಾಸನೆಯ ಅಭಿವ್ಯಕ್ತಿ ಆಯಿತು. ನಾನು ಜಗ್ಗಲಿಲ್ಲ ಅಲ್ಲೇ ಇದ್ದೆ. ಮತ್ತೊಮ್ಮೆ ಮೂಗಿನಲ್ಲೇ ಫ್ಙೂ ಪ್ಙೂ ಎಂದರು. ಅದಕ್ಕೂ ನಾನು ಸೊಪ್ಪು ಹಾಕಲಿಲ್ಲ.

ನಂತರ ಅವರೇ “ ಏನು ಸಿಗರೇಟು ಸೇದಿದ್ದೀಯಾ?” ಎಂದು ಗುಡುಗಿದರು.

“ಹೌದು ಸೇದಿದ್ದೀನಿ” ಬಹಳ ಆತ್ಮ ವಿಶ್ವಾಸದಿಂದ, ನಿರ್ವಿಕಾರದಿಂದ ಹೇಳಿದೆ!

“ಇಲ್ಲ” ಎಂದು ಸುಳ್ಳು ಹೇಳುತ್ತಾನೆ. ಆಗ ಜೋರುಮಾಡಬಹುದು ಎಂದು ಅಂದುಕೊಂಡಿದ್ದರೇನೋ, ಅವರಿಗೆ ಜಗ್ಗುತ್ತಿದ್ದ ಹಗ್ಗವನ್ನೂ ಕೈಬಿಟ್ಟಂತಾಗಿರಬೇಕು. ಏನೂ ಹೇಳಲು ಹೊಳೆಯಲಿಲ್ಲ, ಒಂದು ಕ್ಷಣ ಸುಮ್ಮನಾಗಿಬಿಟ್ಟರು. ಆದರೆ ಸಾವರಿಸಿಕೊಂಡು ಮತ್ತೆ ಅದೇ ದೊಡ್ಡದನಿಯಲ್ಲಿ “ಒಂದು ಕಾಲದಲ್ಲಿ ನಾನೂ ಸೇದ್ತಿದ್ದೆ, ಅದೆಲ್ಲ ಹಾಳುಬುದ್ದಿ ಅಂತ ಗೊತ್ತಾದ ಮೇಲೆ ಬಿಟ್ಟೆ” ಎಂದರು.

ಆಮೇಲೆ ನಾನು ಹೋದ ಕೆಲಸ ಮುಗಿಸಿಕೊಂಡು ಹೊರಟೆ. ಆಗ ನಾನು ಸುಮ್ಮನಿರಲಾರದೆ,

“ನಾನೂ ಅಷ್ಟೆ, ಅದೆಲ್ಲ ಹಾಳು ಬುದ್ದಿ ಅಂತ ಗೊತ್ತಾದ ಮೇಲೆ ಬಿಡ್ತೇನೆ” ಎಂದು ಅಧಿಕ ಪ್ರಸಂಗಿತನ ಮಾಡಿದೆ.

ವಾಸುದೇವರಾಯರಿಗೆ ಸಿಟ್ಟು ತಡೆಯಲಾಗಲಿಲ್ಲ. ನನಗೆ ಮುಖ ತೋರಿಸಬೇಡ ಹೋಗು ಇಲ್ಲಿಂದ ಎಂದು ಬೈದು ಅಟ್ಟಿದರು.

ಇಂತಹ ಹಲವು ಪ್ರಸಂಗಗಳು ನಡೆದಿದ್ದರೂ, ಅವರು ನಿವೃತ್ತರಾದ ನಂತರ ಅವರ ಮನೆಗೆ ಹೋದಾಗ ಪ್ರೀತಿಯಿಂದ ಮಾತಾಡಿದ್ದಾರೆ. ನನ್ನ ಅಪ್ಪನೊಡನೆ ಅವರಿಗೆ ವಿಶ್ವಾಸವಿತ್ತು. ನಿವೃತ್ತಿಯ ನಂತರವೂ ಅವರಿಬ್ಬರಲ್ಲಿ ಪತ್ರ ವ್ಯವಹಾರವೂ ಇತ್ತು.

ಇಂತ ಸಮಯದಲ್ಲೇ ನನಗೆ ಮತ್ತೊಂದು ಸದವಕಾಶ ಸಿಕ್ಕಿತು. ಅದು ಇಂದಿರಾ ಗಾಂಧಿಯವರ ಚಿಕ್ಕಮಗಳೂರು ಚುನಾವಣೆ. ಇಡೀ ದೇಶವೇ ಎದ್ದುಕುಳಿತು ನೋಡಿದ ಚುನಾವಣೆ ಅದು, ಗಣಪಯ್ಯ ರವಿಂದ್ರನಾಥ ಇಬ್ಬರೂ ಚುನಾವಣೆ ಕೆಲಸಗಳಲ್ಲಿ ಭಾಗಿಯಾಗಿದ್ದರು. ಸಕಲೇಶಪುರ ತಾಲ್ಲೂಕಿನಿಂದ ನೂರಾರು ಯುವಕರು ಇಂದಿರಾ ವಿರುದ್ಧ ಪ್ರಚಾರಕ್ಕೆ ತೆರಳಿದ್ದರು. ನಾನು ಒಂದು ದಿನ ರಜೆ ಹಾಕಿ ಮೂಡಿಗೆರೆ ತಾಲ್ಲೂಕಿನಲ್ಲಿ ಪ್ರಚಾರಕ್ಕೆ ಹೋದೆ. ಅದು ಗಣಪಯ್ಯನವರಿಗೆ ತಿಳಿಯಿತು. “ನೀನು ಪ್ರಚಾರಕ್ಕೆ ಹೋದರೆ ಮೂಡಿಗೆರೆಲಿ ನಿನಗೆ ಯಾರಿದ್ದಾರೆ?” ಎಂದರು. ನಾನಾಗ ಮೂಡಿಗೆರೆ, ಮಾತ್ರವಲ್ಲ ನನಗೆ  ಚಿಕ್ಕಮಗಳೂರಿನ ಹಲವು ಕಡೆ ಗೆಳೆಯರಿದ್ದಾರೆ ಎಂದು ಉತ್ಸಾಹದಿಂದ ವಿವರ ಕೊಟ್ಟೆ.  ನನಗೆ ನಾಲ್ಕು ದಿನ ಅಧಿಕೃತವಾಗಿಯೇ ಪ್ರಚಾರಕ್ಕೆ ಹೋಗಲು ಅನುಮತಿ ಸಿಕ್ಕಿತು. ಇದು ಜಾರ್ಜ್ ಫೆರ್ನಾಂಡಿಸ್‌ರಂತವರನ್ನು ಹತ್ತಿರದಿಂದ ಕಾಣುವ ಅವರ  ಜೊತೆ ಓಡಾಡುವ ಅವಕಾಶವನ್ನು ಮಾಡಿಕೊಟ್ಟಿತು. ಅಷ್ಟೇ ಅಲ್ಲ ಹಲವಾರು ಜನ ಎಡ ಪಕ್ಷಗಳ ಕಾರ್ಯಕರ್ತರ ನಿಕಟ ಸಂಪರ್ಕಕ್ಕೆ ಕಾರಣವಾಯಿತು.

ಅದೇ ಚುನಾವಣೆಯಲ್ಲಿ ಕಲಿಯುಗ ಕೃಷ್ಣ ಎಂದು ಬಣ್ಣಿಸಲ್ಪಟ್ಟ ಜಾರ್ಜ್ ಫರ್ನಾಂಡೀಸ್

ಆಗ ಸಣ್ಣ ರೈತರು, ಕೂಲಿ ಕಾರ್ಮಿಕರು, ದಲಿತರು, ಸಹಜವಾಗಿಯೇ ಇಂದಿರಾ ಪರವಾಗಿ ಇದ್ದರು. ಕಾಫಿ ಪ್ಲಾಂಟರುಗಳಲ್ಲಿಯೂ ಗಣನೀಯ ಸಂಖ್ಯೆಯ ಜನರು ಕಾಫಿಗೆ ಒಳ್ಳೆಯ ಬೆಲೆ ಸಿಕ್ಕಿ, ಬ್ಯಾಂಕ್ ರಾಷ್ಟ್ರೀಕರಣದಿಂದ ಸಾಲ ಸೌಲಭ್ಯ ಸುಲಭವಾಗಿದ್ದರಿಂದ ಸಂತುಷ್ಟರಾಗಿದ್ದರು. ಇವರೆಲ್ಲರೂ ಇಂದಿರಾ ಪರವಾಗಿದ್ದರು.

ಹಾಗಾದರೆ ಜನತಾ ಬೆಂಬಲಿಗರು ಯಾರಾಗಿದ್ದರು? ಎಂದರೆ ಮುಖ್ಯವಾಗಿ ಮೊದಲಿನಿಂದಲೂ ರಾಜಕೀಯವಾಗಿ ಕಾಂಗ್ರೆಸ್ ಪಕ್ಷದ ವಿರೋಧಿ ನೆಲೆಯಲ್ಲಿದ್ದವರು. ತುರ್ತುಪರಿಸ್ಥಿತಿಯ ಸರ್ವಾಧಿಕಾರಿ ನಡೆಯನ್ನು ವಿರೋಧಿಸಿದ ಸಾಂಸ್ಕೃತಿಕ ವಲಯದವರು. ಎಡ ಪಕ್ಷಗಳ ಕಾರ್ಮಿಕ ಸಂಘಟನೆಗಳು. ಜೊತೆಗೆ ಭೂಸುಧಾರಣೆ ಕಾಯಿದೆಯ ವಿರೋಧಿಗಳು ಮತ್ತು ಋಣ ಮುಕ್ತ ಕಾಯಿದೆಯಿಂದ ಹಣ ಕಳೆದುಕೊಂಡವರು ಇದ್ದರು.

ಅತಿ ದೊಡ್ಡ ಜಿದ್ದಾ ಜಿದ್ದಿನ, ಆ ಚುನಾವಣೆಯನ್ನು ದೇವರಾಜ ಅರಸರು ಇಂದಿರಾ ಗಾಂಧಿಗೆ ಗೆದ್ದುಕೊಟ್ಟರು. ಆದರೆ ಚುನಾವಣೆಯೆಂದರೆ ಹೇಗಾದರೂ ಸರಿ, ಏನು ಬೇಕಾದರೂ ಮಾಡಿ ಗೆಲ್ಲುವ ಯುದ್ಧ ಎಂಬ ಸಿದ್ಧಾಂತಕ್ಕೆ ಎರಡೂ ಕಡೆಯವರು ಬೀಜ ಬಿತ್ತಿದ್ದರು. ಮುಂದೆ ಇದು ಭೂತಾಕಾರವಾಗಿ ಬೆಳೆಯಿತು.

ಇದಾದ ನಂತರ ಗಣಪಯ್ಯನವರೂ ಅವರ ಸಾಮಾಜಿಕ ಕೆಲಸಗಳಲ್ಲಿ ನನಗೆ ಸಣ್ಣ ಸಣ್ಣ ಜವಾಬ್ದಾರಿಗಳನ್ನು ಕೊಡಲು ಪ್ರಾರಂಭಿಸಿದರು. ನಂತರ ವಾಸುದೇವ ರಾವ್ ನನ್ನನ್ನು ವಿಚಾರಿಸಿಕೊಳ್ಳುವುದನ್ನೇ ಬಿಟ್ಟರು!

ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದು ಹೋದ ದಿನಗಳು  -8: ಕರ್ನಾಟಕದಲ್ಲಿ ಸ್ವತಂತ್ರ ಪಾರ್ಟಿ ಕಟ್ಟಿ ಬೆಳೆಸಿದ್ದ ಗಣಪಯ್ಯನವರು..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...