ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಜಾರಿಯಾಗಬೇಕು. ಇದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿಯಾಗಬೇಕು. ರಾಜ್ಯದಲ್ಲಿ ಪರಿಶಿಷ್ಟ ಜಾತಿಯವರು 14.1% ಮತ್ತು ಪರಿಶಿಷ್ಟ ವರ್ಗದವರು 7% ಇದ್ದಾರೆ. ಇದೇ ಕಾರಣಕ್ಕೆ ನಾನು ಮುಖ್ಯಮಂತ್ರಿಯಾಗಿದ್ದಾಗ ಜನಸಂಖ್ಯೆ ಆಧಾರದ ಮೇಲೆ ಅನುದಾನ ಹಂಚಿಕೆಯಾಗಬೇಕೆಂದು ಎಸ್ಸಿಪಿ/ಟಿಎಸ್ಪಿ ಯೋಜನೆ ಜಾರಿಗೊಳಿಸಿದ್ದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಶ್ರೀ ಕ್ಷೇತ್ರದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಅವರು, 2013 ರಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಬಳಕೆಯಾಗುತ್ತಿದ್ದ ಅನುದಾನ ಕೇವಲ ನಾಲ್ಕೈದು ಸಾವಿರ ಕೋಟಿ ರೂಪಾಯಿ. ನಮ್ಮ ಸರ್ಕಾರ ಎಸ್ಸಿಪಿ/ಟಿಎಸ್ಪಿ ಜಾರಿಗೊಳಿಸಿದ ಮೇಲೆ 2018 ರಲ್ಲಿ ರೂ.20,000 ತಲುಪಿತ್ತು. ಪ್ರಸಕ್ತ ಸಾಲಿನಲ್ಲಿ ಈ ಅನುದಾನ ರೂ.30,000 ಕೋಟಿ ಮೀರಿದೆ ಎಂದಿದ್ದಾರೆ.
ಸಾಮಾಜಿಕ ನ್ಯಾಯವೆಂದರೆ ಇದೇ ಅಲ್ಲವೆ? ಬೇಡ, ನಾಯಕ ಮತ್ತು ವಾಲ್ಮೀಕಿ ಜಾತಿಗಳು ವಿ.ಎಸ್. ಉಗ್ರಪ್ಪ ಮತ್ತು ಚಿಕ್ಕಮಾದು ಅವರ ಪರಿಶ್ರಮದ ಫಲದಿಂದ ಮೊದಲ ಬಾರಿ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳ್ಳುವಂತಾಯಿತು. ಉಳಿದಂತೆ ಪರಿವಾರ ಮತ್ತು ತಳವಾರ ಜಾತಿಗಳು ಕೂಡಾ ಶೀಘ್ರದಲ್ಲಿಯೇ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಯಾಗಲಿವೆ ಎಂದು ಹೇಳಿದ್ದಾರೆ.
ವಾಲ್ಮೀಕಿ ಸಮುದಾಯಕ್ಕೆ 7.5% ಮೀಸಲಾತಿ ನೀಡುವುದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಶೀಘ್ರದಲ್ಲಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವ ಕೆಲಸ ಮಾಡಲಿ ಎಂದು ಒತ್ತಾಯಿಸುತ್ತೇನೆ. ಅಧಿಕಾರ ಇರಲಿ, ಇರದೆ ಇರಲಿ ನಾನು ಸದಾ ಸಾಮಾಜಿಕ ನ್ಯಾಯಕ್ಕೆ ಬದ್ಧ. ವಾಲ್ಮೀಕಿ ಗುರುಪೀಠದ ಶ್ರೀಗಳ ಆಶೀರ್ವಾದದಿಂದ ಬೆಂಗಳೂರಿನ ಶಾಸಕರ ಭವನದ ಮುಂಭಾಗದಲ್ಲಿ ಭವ್ಯವಾದ ಮಹರ್ಷಿ ವಾಲ್ಮೀಕಿಯವರ ಪ್ರತಿಮೆ ನಿರ್ಮಾಣ ಮಾಡಿ, ಆ ಜಾಗಕ್ಕೆ “ತಪೋವನ” ಎಂದು ಹೆಸರಿಟ್ಟಿದ್ದು ನಮ್ಮ ಸರ್ಕಾರ. ಇದು ನಾನು ವಾಲ್ಮೀಕಿಯವರಿಗೆ ಸಲ್ಲಿಸಿದ ಗೌರವ ಎಂದು ಭಾವಿಸಿದ್ದೇನೆ ಎಂದಿದ್ದಾರೆ.
ಕನಕ ಗುರುಪೀಠ ರಚನೆಯಾದಾಗ ನಾನು ‘ಈ ಪೀಠ ಕೇವಲ ಕುರುಬ ಜನಾಂಗಕ್ಕೆ ಸೀಮಿತವಲ್ಲ, ಇದು ಎಲ್ಲ ಶೋಷಿತ ವರ್ಗಗಳ ಪೀಠದಂತೆ’ ಎಂದಿದ್ದೆ. ಅದೇ ರೀತಿ ವಾಲ್ಮೀಕಿ ಪೀಠವೂ ಎಲ್ಲಾ ಶೋಷಿತ ಸಮುದಾಯಗಳ ಪೀಠವಾಗಿದೆ. ಸಮಾಜದಲ್ಲಿ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಜಾಗೃತಿಯನ್ನು ಮೂಡಿಸುವ ಕೆಲಸ ಈ ಧಾರ್ಮಿಕ ಪೀಠಗಳು ಮಾಡಿದರೆ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ಹೇಳಿದ್ದಾರೆ.
ವಾಲ್ಮೀಕಿ ರಾಮಾಯಣವು ಸಾಮಾಜಿಕ, ಮಾನವೀಯ, ಆಧ್ಯಾತ್ಮಿಕ ಮೌಲ್ಯಗಳನ್ನು ಎತ್ತಿಹಿಡಿಯುವಂತಹ ಮಹಾಕಾವ್ಯ. ಉಳಿದೆಲ್ಲ ರಾಮಾಯಣಗಳಿಗೂ ಈ ಮಹಾಕಾವ್ಯವೇ ಮೂಲ ಆಕರ. ಪ್ರತಿಯೊಬ್ಬರೂ ಇದನ್ನು ಅಧ್ಯಯನ ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.