ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಖಾಸಗಿ ಕೈಗಾರಿಕಾ ಘಟಕಗಳು ಮತ್ತು ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ 75 % ಉದ್ಯೋಗ ಮೀಸಲಾತಿ ಕಾಯ್ದಿರಿಸುವ ಮಸೂದೆಯನ್ನು ಮಂಡಿಸುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ತಮ್ಮ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನಿರುದ್ಯೋಗದ ಬಗ್ಗೆ ಹೆಚ್ಚು ಮಾತನಾಡಿದ್ದ ಜಗನ್ ಖಾಸಗೀ ಕ್ಷೇತ್ರದಲ್ಲಿ ಸ್ಥಳೀಯರಿಗೆ 75% ಮೀಸಲಾತಿ ನೀಡುವುದಾಗಿ ಆಶ್ವಾಸನೆ ನೀಡಿದ್ದರು. ಇದೀಗ ಅದನ್ನು ಜಾರಿ ಮಾಡಲು ಮುಂದಾಗಿದ್ದು ಹೊಸ ಮಸೂದೆಯನ್ನು ಮಂಡಿಸಿದ್ದಾರೆ.
The Andhra Pradesh Employment of Local Candidates in Industries/Factories Act, 2019 ಅನ್ನು ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಜಗನ್ ಮಂಡಿಸಿದ್ದಾರೆ. ಇನ್ನು ಮುಂದೆ ಖಾಸಗಿ ಕೈಗಾರಿಕಾ ಘಟಕಗಳು ಮತ್ತು ಕಾರ್ಖಾನೆಗಳು ಸರ್ಕಾರಿ ಖಾಸಗಿ ಸಹಭಾಗತ್ವದ ಅಡಿಯಲ್ಲಿ ಸ್ಥಳೀಯರಿಗೆ 75 % ಉದ್ಯೋಗ ಮೀಸಲಾತಿ ಕಾಯ್ದಿರಿಸಿರಬೇಕಾಗಿದೆ.
ಸ್ಥಳೀಯರು ಅಗತ್ಯ ಕೌಶಲ್ಯ ಹೊಂದಿರದಿದ್ದರೆ, ರಾಜ್ಯಸರ್ಕಾರದ ಸಹಯೋಗದಲ್ಲಿ ಕಂಪನಿಗಳು ಅವರಿಗೆ ತರಬೇತಿ ನೀಡಿ ನಂತರ ಅವರನ್ನು ನೇಮಿಸಿಕೊಳ್ಳಬೇಕು ಎಂದು ಹೊಸ ಮಸೂದೆಯಲ್ಲಿ ಹೇಳಲಾಗಿದೆ. ಕಾಯಿದೆ ಪ್ರಾರಂಭವಾದ ಮೂರು ವರ್ಷಗಳಲ್ಲಿ ಕಂಪನಿಗಳು ಈ ನಿಬಂಧನೆಗಳನ್ನು ಪಾಲಿಸಬೇಕಾಗುತ್ತದೆ ಮತ್ತು ಸ್ಥಳೀಯ ನೇಮಕಾತಿಗಳ ಬಗ್ಗೆ ತ್ರೈಮಾಸಿಕ ವರದಿಗಳನ್ನು ನೋಡಲ್ ಏಜೆನ್ಸಿಗೆ ಒದಗಿಸಬೇಕು ಎಂದೂ ಮಸೂದೆಯನ್ನು ನಮೂದಿಸಲಾಗಿದೆ.
“ಇದು ಕೈಗಾರಿಕೆಗಳ ಸ್ಥಾಪನೆಗಾಗಿ ತಮ್ಮ ಭೂಮಿಯನ್ನು ಮತ್ತು ಉದ್ಯೋಗವನ್ನು ಕಳೆದುಕೊಂಡಿರುವ ವ್ಯಕ್ತಿಗಳಿಗೆ ಮತ್ತು ಇತರ ನಿರುದ್ಯೋಗಿ ಯುವಜನರಿಗೆ ಸಹಾಯ ಮಾಡುತ್ತದೆ ಮತ್ತು ಅವರ ಸುಸ್ಥಿರ ಜೀವನೋಪಾಯವನ್ನು ಖಾತರಿಪಡಿಸುತ್ತದೆ” ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.
ಖಾಸಗಿ ಉದ್ಯೋಗಗಳ ದೊಡ್ಡ ಭಾಗವನ್ನು ಸ್ಥಳೀಯರಿಗಾಗಿ ಕಾಯ್ದಿರಿಸುವ ಬಗ್ಗೆ ಅನೇಕ ರಾಜ್ಯಗಳಲ್ಲಿ ಚರ್ಚೆ ನಡೆಯುತ್ತಿವೆ. ಆದರೆ ಆ ಚರ್ಚೆಯನ್ನು ಮಧ್ಯಪ್ರದೇಶ ಮತ್ತು ಆಂಧ್ರ ಪ್ರದೇಶವನ್ನು ಹೊರತು ಪಡಿಸಿ ಯಾವ ರಾಜ್ಯವೂ ಇನ್ನೂ ಜಾರಿಗೆ ತಂದಿಲ್ಲ. 2018ರ ಡಿಸೆಂಬರ್ನಲ್ಲಿ ಅಧಿಕಾರಕ್ಕೆ ಬಂದ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ನಾಥ್ ಅವರು ಕೈಗಾರಿಕಾ ನೀತಿಯನ್ನು ಘೋಷಿಸಿ ಕಂಪೆನಿಗಳಲ್ಲಿ ಸ್ಥಳೀಯರಿಗೆ 70% ಉದ್ಯೋಗ ನೀಡುವುದನ್ನು ಜೂಲೈ 09ರಿಂದ ಕಡ್ಡಾಯಗೊಳಿಸಿದ್ದಾರೆ.