ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಚಿತ ಆಹಾರ ಧಾನ್ಯ ಯೋಜನೆಯನ್ನು ಇನ್ನೂ 3 ತಿಂಗಳು ವಿಸ್ತರಣೆ ಮಾಡಬೇಕೆಂದು ಆಗ್ರಹಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
‘ಲಕ್ಷಾಂತರ ಭಾರತೀಯರು ಬಡತನದತ್ತ ಹೊರಳುವ ಅಪಾಯವಿದೆ’ ಎಂದು ಎಚ್ಚರಿಸಿರುವ ಸೋನಿಯಾ ಗಾಂಧಿ, ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಪ್ಯಾಕೇಜ್ (ಪಿಎಂಜಿಕೆಪಿ) ಅಡಿಯಲ್ಲಿ ಹೆಚ್ಚುವರಿ ಉಚಿತ ಆಹಾರ ಧಾನ್ಯವನ್ನು ಮತ್ತೊಂದು ಮೂರು ತಿಂಗಳುಗಳು ವಿಸ್ತರಿಸುವಂತೆ ಕೋರಿದ್ದಾರೆ.
ಆರಂಭಿಕ ಮೂರು ತಿಂಗಳ ಅವಧಿ ಜೂನ್ನಲ್ಲಿ ಕೊನೆಗೊಳ್ಳುತ್ತದೆ.
“ಜೀವನೋಪಾಯದ ಮೇಲೆ ಆದ ವ್ಯತಿರಿಕ್ತ ಪರಿಣಾಮವೂ ನಮ್ಮ ನಗರ ಮತ್ತು ಗ್ರಾಮೀಣ ಬಡವರಿಗೆ ದೀರ್ಘಕಾಲದ ಆಹಾರ ಅಭದ್ರತೆಗೆ ಕಾರಣವಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ದೇಶದ ಕೆಲವು ದುರ್ಬಲ ಜನರು ಎದುರಿಸುತ್ತಿರುವ ಹಸಿವಿನ ಬಿಕ್ಕಟ್ಟನ್ನು ಪರಿಹರಿಸಲು ಆಹಾರ ಅರ್ಹತೆಯನ್ನು ವಿಸ್ತರಿಸಬೇಕು” ಎಂದು ಸೋನಿಯಾ ಗಾಂಧಿ ಪತ್ರದಲ್ಲಿ ಬರೆದಿದ್ದಾರೆ.
ಮಾರ್ಚ್ 26 ರಂದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪಿಎಂಜಿಕೆಪಿಯನ್ನು ಘೋಷಿಸಿದಾಗ, ಪ್ಯಾಕೇಜ್ನ ಭಾಗವಾಗಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ಅಡಿಯಲ್ಲಿ 80 ಕೋಟಿ ಫಲಾನುಭವಿಗಳಿಗೆ 5 ಕಿಲೋಗ್ರಾಂಗಳಷ್ಟು ಧಾನ್ಯವನ್ನು (ಗೋಧಿ ಅಥವಾ ಅಕ್ಕಿ) ನೀಡಲಾಗುವುದು ಎಂದು ಅವರು ಹೇಳಿದ್ದರು.
ಈಗ ಆ ಅವಧಿ ಮುಗಿಯಲಿದ್ದು, ಲಾಕ್ಡೌನ್ನಿಂದಾಗಿ ಹೆಚ್ಚಿನ ಜನರಿಗೆ ಜೀವನೋಪಾಯದ ಕೆಲಸವೂ ಇಲ್ಲದಾಗಿದೆ.
ಅಲ್ಲದೆ ಹಲವಾರು ರಾಜ್ಯಗಳು ಸಹ ಉಚಿತ ಧಾನ್ಯದ ಅರ್ಹತೆಯನ್ನು ವಿಸ್ತರಿಸಬೇಕೆಂದು ಕೇಳಿಕೊಂಡಿವೆ. ಇಲ್ಲಿಯವರೆಗೆ, ಪಿಎಂಜಿಕೆಪಿ ಅಡಿಯಲ್ಲಿ ಆಹಾರ ಧಾನ್ಯ ಮತ್ತು ದ್ವಿದಳ ಧಾನ್ಯಗಳ ಹೆಚ್ಚುವರಿ ಹಂಚಿಕೆಯನ್ನು ವಿಸ್ತರಿಸಬೇಕು ಎಂದು ಬಿಜೆಪಿ ಆಡಳಿತದ ರಾಜ್ಯಗಳು ಸೇರಿದಂತೆ ಹತ್ತು ರಾಜ್ಯಗಳು ಹೇಳಿವೆ.