ಗೋವಾದ ಖಾಸಗಿ ದಂತವೈದ್ಯರ ಗುಂಪೊಂದು ಪಣಜಿಯಲ್ಲಿ ನಡೆದ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಕೈಗೆ ಕಪ್ಪು ಪಟ್ಟಿಗಳನ್ನು ಧರಿಸಿ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯ ಸರ್ಕಾರವು ಇತ್ತೀಚೆಗೆ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಶುಲ್ಕವನ್ನು ಹೆಚ್ಚಿಸಿರುವುದನ್ನು ವಿರೋಧಿಸಿ ವೈದ್ಯರು ಪ್ರತಿಭಟನೆಯನ್ನು ದಾಖಲಿಸಿದ್ದಾರೆ.
ಬಿಜೆಪಿಯ ರಾಜ್ಯ ವೈದ್ಯಕೀಯ ಘಟಕವು ಬುಧವಾರ ಸಂಜೆ ವೈದ್ಯಕೀಯ ವೃತ್ತಿಪರರೊಂದಿಗೆ ಜೆ.ಪಿ. ನಡ್ಡಾ ಅವರ ಸಂವಾದ ಕಾರ್ಯಕ್ರಮ ಆಯೋಜಿಸಿತ್ತು. ಈ ವೇಳೆ ಇಂಡಿಯನ್ ಡೆಂಟಲ್ ಅಸೋಸಿಯೇಷನ್(ಐಡಿಎ) ದಂತವೈದ್ಯರು ಪ್ರತಿಭಟನೆ ನಡೆಸಿದ್ದಾರೆ.
ಸಂವಾದದಲ್ಲಿ ಉಪಸ್ಥಿತರಿದ್ದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ , ಬಿಜೆಪಿ ಅಧ್ಯಕ್ಷರ ಮುಂದೆ ಈ ರೀತಿಯ ಪ್ರತಿಭಟನೆ ನಡೆಸಿರುವುದು “ರಾಜಕೀಯ ಪ್ರೇರಿತ” ಎಂದು ಘನಟೆ ಬಳಿಕ ಆರೋಪಿಸಿದ್ದಾರೆ.
ಇದನ್ನೂ ಓದಿ: 2024 ರ ಚುನಾವಣೆಗೆ ಸಜ್ಜು: 100 ದಿನ ರಾಷ್ಟ್ರೀಯ ಪ್ರವಾಸ ಕೈಗೊಳ್ಳಲಿರುವ ಜೆ.ಪಿ.ನಡ್ಡಾ!
ನಡ್ಡಾ ಅವರೊಂದಿಗಿನ ಪ್ರಶ್ನೋತ್ತರ ಅವಧಿಯಲ್ಲಿ ವೈದ್ಯರು, ಗೋವಾ ಸರ್ಕಾರವು ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಶುಲ್ಕವನ್ನು ಹೆಚ್ಚಿಸಿರುವುದನ್ನು ವಿರೋಧಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಪ್ರತಿಭಟನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿರುವ ಐಡಿಎ ಸದಸ್ಯ ಡಾ.ಅನಿಲ್ ಡಿಸಿಲ್ವಾ, “ಹೆಚ್ಚಿನ ಮಟ್ಟದಲ್ಲಿ ಬಯೋಮೆಡಿಕಲ್ ತ್ಯಾಜ್ಯವನ್ನು ಉತ್ಪಾದಿಸುವ ವೈದ್ಯರ ಗುಂಪಿಗೆ ದಂತ ವೈದ್ಯರನ್ನು ಸೇರಿಸಿರುವುದು ಸರಿಯಲ್ಲ. ಬಯೋಮೆಡಿಕಲ್ ತ್ಯಾಜ್ಯವನ್ನು ಸಂಗ್ರಹಿಸಲು ದೆಹಲಿಯ ಹೊಸ ಖಾಸಗಿ ಗುತ್ತಿಗೆದಾರರನ್ನು ನೇಮಿಸಲಾಗಿದೆ. ಹೆಚ್ಚಿನ ಪ್ರಮಾಣದ ತ್ಯಾಜ್ಯವನ್ನು ಉತ್ಪಾದಿಸುವ ವರ್ಗದಲ್ಲಿ ದಂತವೈದ್ಯರನ್ನು ಆ ಸಂಸ್ಥೆ ಸೇರಿಸಿದೆ, ಇದರಿಂದಾಗಿ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಶುಲ್ಕಗಳು ಹೆಚ್ಚಾಗಿದೆ” ಎಂದು ಹೇಳಿದ್ದಾರೆ.
ಪ್ರತಿಭಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಸಿಎಂ ಪ್ರಮೋದ್ ಸಾವಂತ್, “ಈ ಹಿಂದೆ ದಂತ ವೈದ್ಯರು ತಮ್ಮನ್ನು ಭೇಟಿ ಮಾಡಿದ್ದು, ಅವರ ಬೇಡಿಕೆ ಪರಿಶೀಲನೆಯಲ್ಲಿದೆ. ಇದು ರಾಜ್ಯ ವಿಷಯವಾಗಿರುವುದರಿಂದ ಇಂತಹ ಸಮಾರಂಭದಲ್ಲಿ ಪ್ರತಿಭಟನೆ ಮಾಡುವ ಅಗತ್ಯವಿರಲಿಲ್ಲ. ಅವರ ಪ್ರಶ್ನೆಗಳಿಗೆ ನಾನು ಸರಿಯಾಗಿ ಉತ್ತರ ನೀಡಿದ್ದೆ’ ಎಂದಿದ್ದಾರೆ.
————————