ನಮ್ಮೊಳಗೇ ಇರುವ ಅಭಿವೃದ್ಧಿ ಎಂಬ ಭ್ರಮೆ ಅಥವಾ ಪರಿಕಲ್ಪನೆಯನ್ನು ಅರ್ಥಹೀನಗೊಳಿಸಿದರ ಫಲವಾಗಿಯೇ ನಾವು ವಿನಾಶದ ಅಂಚಿಗೆ ತಲುಪಿದ್ದೇವೆ. ಈ ನಮ್ಮ ಜೀವ ಜಗತ್ತು ಆಧುನಿಕತೆಯ ಓಟದಲ್ಲಿ ಸ್ಪರ್ಧೆಗಿಳಿಯುತ್ತಿರುವ ನಾವು ಜೀವಸೆಲೆಯನ್ನು ಕಳಕೊಂಡು ಯಾಂತ್ರಿಕವಾಗುತ್ತಿದ್ದೇವೆ. ಸಂವೇದನೆಗಳನ್ನೇ ಕಳೆದುಕೊಂಡ ಮೆಷಿನ್ ಗಳಾಗುತ್ತಿದ್ದೇವೆ. ಇಡೀ ಮಾನವ ಕುಲವೇ ಒಬ್ಬರೊಬ್ಬರ ಕೈಹಿಡಿದು ಜತೆ ಜತೆಯಾಗಿ ವಿಶ್ವಪಥದಲ್ಲಿ ಸಾಗುವುದನ್ನು ಮರೆತಿದ್ದೇವೆ. ತಂತ್ರಜ್ಞಾನ ಬಳಸಿ ನಾವು ಜಗತ್ತಿನ ಮೂಲೆ ಮೂಲೆಗಳನ್ನು ತಲುಪುತ್ತಿದ್ದೇವೆಯೇ ಹೊರತು ಹೃದಯಗಳನ್ನು, ಮನಸ್ಸುಗಳನ್ನು ತಲುಪುತ್ತಿಲ್ಲ. ಈ ನೆಲದಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕುಂಟು. ಇದಕ್ಕೆ ಯಾವುದೇ ಕಾನೂನಿನ ತೊಡಕುಗಳೂ ಆಗಬಾರದು. ಆದರೆ ನಾವೇ ಕಟ್ಟಿಕೊಂಡ ವ್ಯವಸ್ಥೆ ನಮ್ಮವರನ್ನೇ ಅಂತ್ಯ ಕಾಣಿಸಹೊರಟಿರುವುದು ದುರಂತದ ಪರಮಾವಧಿ..
ಇಷ್ಟೆಲ್ಲಾ ಪೀಠಿಕೆಗೆ ಕಾರಣ…? ತಮ್ಮ ತಪ್ಪಿಲ್ಲದ, ತಮ್ಮ ಅರಿವಿನ ಪರಿದಿಗೇ ಬಾರದ ಕಾನೂನಿನ ಬಲೆಯಲ್ಲಿ ಬಲಿಯಾಗಿ, ನಮ್ಮ ಆಧುನಿಕತೆಯ ಓಟವೆಬ್ಬಿಸುವ ಧೂಳಿನಲ್ಲಿ ಗುರುತಿಸಲೂ ಸಿಗದೇ ಕಣ್ಮರೆಯಾಗಿರುವ ಮುಗ್ದ ಪ್ರಪಂಚವೇ ಸೋಲಿಗ ಆದಿವಾಸಿ ಬುಡಕಟ್ಟು ಸಮುದಾಯ.
![](https://naanugauri.com/wp-content/uploads/2019/05/kt-vijay-kumar-300x300.jpg)
ಬಿಳಿಗಿರಿರಂಗನ ಬೆಟ್ಟದ ತಪ್ಪಲಿನ ಕಾಡುಗಳಲ್ಲಿ ಪರಂಪರಾನುಗತವಾಗಿ ವಾಸಿಸುತ್ತಾ, ಕಾಡಲ್ಲಿ ಕಾಡಾಗಿ ಬೆರೆತು ಕಾಡಿನ ಭಾಗವಾಗಿಯೇ ಆಗಿಹೋಗಿದ್ದ ಈ ಸಮುದಾಯದ ಸಂಸ್ಕೃತಿಯೇ ಪ್ರಕೃತಿಯ ಆರಾಧನೆ. ಬದುಕಿನ ಪ್ರತಿಕ್ಷಣದಲ್ಲೂ ಹಸಿರನ್ನು ಉಸಿರಾಗಿಸಿಕೊಂಡು ಜೀವಿಸುತ್ತಿದ್ದ ಈ ಸಮುದಾಯವು ಸರ್ಕಾರದ ಅಂಧಾ ಕಾನೂನೊಂದರ ಅನ್ವಯ ಕಾಡಿನ ಅಂಚಿಗೆ ದೂಡಲ್ವಡುತ್ತಾರೆ!? ಸ್ವತಂತ್ರವಾಗಿ, ಸ್ವಾವಲಂಬಿಯಾಗಿ ಬದುಕು ಸಾಗಿಸುತ್ತಿದ್ದ ಸೋಲಿಗರ ನೆಮ್ಮದಿಯನ್ನು ಕೆಡಿಸಿ, ತಮ್ಮ ಕಾಡಲ್ಲಿ ತಮಗೇ ಉಳಿಯುವ ಹಕ್ಕು ಮತ್ತು ಸ್ವಾತಂತ್ರವಿಲ್ಲದಂತೆ ಮಾಡಿ ಮುಂದೆಂದೂ ಕಾಡಿಗೆ ಪ್ರವೇಶಿಸದಂತೆ ಸರ್ಕಾರ ನಿಷೇಧ ಹೇರಿತು. ಈ ನಿಷೇಧ ಸೋಲಿಗರ ಬದುಕನ್ನೇ ನಾಶವಾಗಿಸಿತು, ಅವರ ಸ್ವಚ್ಚಂದ ಜೀವನಾದಾರವನ್ನೇ ಕಸಿಯಿತು. ಬದುಕಲು ಬೇಕಾದ ಮೂಲಭೂತ ಅಗತ್ಯತೆಗಳನ್ನೇ ಸರ್ಕಾರ ಪೂರೈಸದೇ ಹೋದದ್ದು, ಕೊಳ್ಳುಬಾಕರ ಕಾಲಡಿಯಲ್ಲಿ ಸಿಲುಕಿ ಸ್ವಾವಲಂಬಿ ಬದುಕನ್ನು ಕಂಡುಕೊಳ್ಳಲಾಗದೆ ಅತಂತ್ರಗೊಂಡ ಸೋಲಿಗರು ಶೋಚನೀಯ ಸ್ಥಿತಿಯಲ್ಲಿ ಈಗಲೂ ಬದುಕುತಿದ್ದಾರೆ, ಕಾಲ ತಳ್ಳುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯೇ ತಲೆತಗ್ಗಿಸುವಂತೆ ಮಾಡಿದೆ.
![](https://naanugauri.com/wp-content/uploads/2019/05/dingri-naresh-300x199.jpg)
ಸಮಾಜದಿಂದ ಕಡೆಗಣಿಸಲ್ಪಟ್ಟ ಈ ಸೋಲಿಗರ ಮತ್ತು ಇಂತದ್ದೇ ಶೋಷಣೆಗೊಳಗಾದವರ ಪರ ನ್ಯಾಯಕ್ಕಾಗಿ ಬೆಂಗಳೂರಿನ ಡಾ ಬಿ.ಆರ್ ಅಂಬೇಡ್ಕರ್ ವಿದ್ಯಾರ್ಥಿ ಸಂಘ ಕೃಷಿ ವಿಶ್ವವಿದ್ಯಾಲಯ(ಜಿಕೆವಿಕೆ) ಬೆಂಗಳೂರು ಗೊರುಕನ 1974 ನಾಟಕವನ್ನು ಸಿದ್ದಗೊಳಿಸಿ ಪ್ರದರ್ಶಿಸಲು ಮುಂದಾಗಿದೆ. ಡಾ ಕೆ.ಟಿ ವಿಜಯ್ ಕುಮಾರ್ ರವರ ಸೋಲಿಗರ ಬದುಕು ಬವಣೆಯ ಕುರಿತು ನಡೆಸಿದ ಸಂಶೋಧನೆಯ ಆಧಾರದ ಮೇಲೆ ರಂಗಕರ್ಮಿ ರಂಗನಾಥ ನೀನಾಸಂ ಕಥೆ ಹೆಣೆದು ನಾಟಕವಾಗಿ ರಚಿಸಿದ್ದಾರೆ, ಸದಾ ಶೋಷಣೆಯ ವಿರುದ್ದದ ದನಿಯಾಗಿ ರಂಗಕಾಯಕ ನಡೆಸುತ್ತಿರುವ ರಂಗಕರ್ಮಿ ಡಿಂಗ್ರಿ ನರೇಶ್ ನಾಟಕವನ್ನು ನಿರ್ದೇಶಿಸಿದ್ದಾರೆ. ನಾಟಕಕ್ಕೆ ಪೂರಕವಾಗಿ ಸಂಗೀತವನ್ನು ಸೂಕ್ಷ್ಮವಾಗಿ ಸಂಯೋಜಿಸಿದ್ದಾರೆ ರಾಘವ ಕಮ್ಮಾರ್. ಪಕ್ಕವಾದ್ಯದಲ್ಲಿ ಡಿಂಗ್ರಿ ಭರತ್ ಸಂಗೀತಕ್ಕೆ ಜತೆಗೂಡಿಸಿದ್ದಾರೆ. ಜಯರಾಮ್ ನೀನಾಸಂ ನಾಟಕಕ್ಕೆ ಬೆಳಕಿನ ವಿನ್ಯಾಸ ಮಾಡಿ ನಾಟಕಕ್ಕೆ ಬೆಳಕಾಗಿದ್ದಾರೆ. ಈ ನಾಟಕವನ್ನು ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ ಅಭಿನಯಿಸುತ್ತಿರುವುದು ವಿಶೇಷ. ಯುವಕರೇ ಪ್ರಧಾನವಾಗಿರುವ ತಂಡವು ಪ್ರತಿಭೆಯಿಂದ ಕೂಡಿದ್ದು, ಸ್ವಸ್ಥ ಸಮಾಜವನ್ನು ಕಟ್ಟಲು ಕೈಜೋಡಿಸಿದ್ದಾರೆ. ಈ ನಾಟಕ 2019 ರ ಮೇ 31 ರಂದು ಸಂಜೆ 6 ಕ್ಕೆ ಕುವೆಂಪು ಸಭಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ.
ಸಮಾಜಮುಖಯಾಗಿ ಯೋಚಿಸುವ ಯುವತಂಡ ಅಭಿನಯಿಸುವ ಈ ನಾಟಕ ನೋಡಲು ಅಥವಾ ಬೇರೆ ಕಡೆ ಪ್ರದರ್ಶಿಸ ಬಯಸುವವರು ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರಾಗಿ ಡಿಂಗ್ರಿ ನರೇಶ್ 8197707198 ಇವರನ್ನು ಸಂಪರ್ಕಿಸಬಹುದು.
????