ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಪ್ರಯತ್ನವನ್ನು ಶಿವಸೇನೆ ಮುಂದುವರೆಸಿದ್ದು ಇಂದು ಸುಖಾಂತ್ಯ ಕಾಣುವ ನಿರೀಕ್ಷೆಯಲ್ಲಿದೆ. ಎನ್ಸಿಪಿ ಮತ್ತು ಕಾಂಗ್ರೆಸ್ ಬೆಂಬಲದೊಂದಿಗೆ ಅಧಿಕಾರಕ್ಕೇರುವ ಉತ್ಸಾಹದಲ್ಲಿದೆ. ಈ ಕುರಿತು ಗುರುವಾರ ತಡರಾತ್ರಿ ಮುಂಬೈನಲ್ಲಿ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಪುತ್ರ ಆದಿತ್ಯ ಠಾಕ್ರೆ ಭೇಟಿಯಾಗಿದ್ದಾರೆ.
ದಕ್ಷಿಣ ಮುಂಬೈನಲ್ಲಿರುವ ಪವಾರ್ ಅವರ ನಿವಾಸ ‘ಸಿಲ್ವರ್ ಓಕ್’ನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದರು. ನಡೆದ ಸಭೆ, ಎನ್ಸಿಪಿ ಮತ್ತು ಕಾಂಗ್ರೆಸ್ ಬೆಂಬಲದೊಂದಿಗೆ ಶಿವಸೇನೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವುದು ಬಹುತೇಕ ಖಚಿತ ಎಂದಿದ್ದಾರೆ. ಉದ್ಧವ್ ಜತೆಗೆ ಶಿವಸೇನೆ ವಕ್ತಾರ ಸಂಜಯ್ ರಾವತ್ ಸಹ ಇದ್ದರು. ಸಭೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಜರಿರಲಿಲ್ಲ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ನಿರ್ಣಾಯಕ ಹಂತ ತಲುಪಿದ ಸರ್ಕಾರ ರಚನೆ ಗುದ್ದಾಟ: ಸೇನಾಗೆ ಕಾಂಗ್ರೆಸ್ ಬೆಂಬಲ..!
ಉಭಯ ಪಕ್ಷಗಳ ನಾಯಕರ ನಡುವೆ ನಡೆದ ಸಭೆ ಸರ್ಕಾರ ರಚನೆಯ ಅಂತಿಮ ಘಟ್ಟದ ಕುರಿತು ಹಾಗೂ ಹುದ್ದೆ ಹಂಚಿಕೆಗೆ ಅಂತಿಮ ಸ್ಪರ್ಶ ನೀಡುವ ಕುರಿತಾಗಿತ್ತು. ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಎಲ್ಲಾ ವಿಷಯಗಳ ಬಗ್ಗೆ ಎನ್ ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್ ಒಮ್ಮತ ಹೊಂದಿವೆ ಎಂದು ಎನ್ ಸಿಪಿ ಮುಖಂಡರೊಬ್ಬರು ಮಾಹಿತಿ ನೀಡಿದ್ದಾರೆ.
ಶಿವಸೇನೆ 15, ಎನ್ಸಿಪಿ 15 ಮತ್ತು ಕಾಂಗ್ರೆಸ್ಗೆ 12 ಸಚಿವ ಸ್ಥಾನಗಳು ಸಿಗುವ ನಿರೀಕ್ಷೆಯಿದ್ದು ಮುಖ್ಯಮಂತ್ರಿ ಹುದ್ದೆಯನ್ನು ಶಿವಸೇನೆಯೊಂದೇ ಕೇಳುತ್ತಿದೆ. ಆದರೂ ಪಟ್ಟುಬಿಡದ ಎನ್ಸಿಪಿ ತಲಾ ಎರಡೂವರೆ ವರ್ಷ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದೆ. ಇನ್ನು ಕಾಂಗ್ರೆಸ್ಗೆ ಉಪಮುಖ್ಯಮಂತ್ರಿ ಹುದ್ದೆ ದೊರೆಯಲಿದ್ದು, ಸ್ಪೀಕರ್ ಹುದ್ದೆಯನ್ನು ಕಾಂಗ್ರೆಸ್ ಮತ್ತು ಎನ್ಸಿಪಿ ಎರಡೂ ಬಯಸಿವೆ ಎನ್ನಲಾಗುತ್ತಿದೆ.
ಇನ್ನು ಮುಂಬೈನಲ್ಲಿ ಕಾಂಗ್ರೆಸ್ ಮತ್ತು ಎನ್ಸಿಪಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿವೆ. ತಮ್ಮ ಇತರೆ ಮಿತ್ರ ಪಕ್ಷಗಳಾದ ರೈತರ ವರ್ಕರ್ಸ್ ಪಾರ್ಟಿ, ಸಮಾಜವಾದಿ ಪಕ್ಷ, ಸ್ವಾಭಿಮಾನಿ ಪಕ್ಷ ಮತ್ತು ಸಿಪಿಐ (ಎಂ) ಗಳ ನಾಯಕರ ಜತೆ ಮಾತುಕತೆ ನಡೆಸಲಿವೆ. ನಂತರ ಸೇನಾ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ಇದಾದ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎನ್ ಸಿಪಿ ಮತ್ತು ಕಾಂಗ್ರೆಸ್ ನಾಯಕರು ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ.