Homeಅಂಕಣಗಳುಸರ್ಕಾರ ಎಂದರೆ ದೇಶ ಅಲ್ಲ... ದೇಶವೆಂಬುದು ಸರ್ಕಾರಕ್ಕಿಂತ ದೊಡ್ಡದು: ಡಿ ಉಮಾಪತಿ

ಸರ್ಕಾರ ಎಂದರೆ ದೇಶ ಅಲ್ಲ… ದೇಶವೆಂಬುದು ಸರ್ಕಾರಕ್ಕಿಂತ ದೊಡ್ಡದು: ಡಿ ಉಮಾಪತಿ

- Advertisement -
- Advertisement -

ಸ್ವಾತಂತ್ರ್ಯ- ಸಮಾನತೆ- ಸಾಮಾಜಿಕ ನ್ಯಾಯದ ಮಾತುಗಳನ್ನು ದೇಶದ್ರೋಹದ ಶಿಲುಬೆಗೆ ಏರಿಸಲಾಗಿದೆ.

ಸರ್ಕಾರ ಎಂದರೆ ದೇಶವೆಂಬ ಕಥಾನಕವನ್ನು ಇತ್ತೀಚಿನ ವರ್ಷಗಳಲ್ಲಿ ಕಟ್ಟಿ ಬೆಳೆಸಲಾಗಿದೆ. ದೇಶ ಸರ್ಕಾರಕ್ಕಿಂತ ದೊಡ್ಡದು ಎಂಬ ಸತ್ಯವನ್ನು ಮರೆಮಾಚಲಾಗಿದೆ. ಸರ್ಕಾರವನ್ನು ಟೀಕಿಸಿದರೆ ದೇಶವನ್ನು ಟೀಕಿಸಿದಂತೆ ಎಂಬುದು ಅತ್ಯಂತ ದುಷ್ಟ ಮತ್ತು ಪ್ರತಿಗಾಮಿವಾದ. ಆದರೆ ಈ ವಾದವನ್ನು ವೈಭವೀಕರಿಸಲಾಗಿದೆ.

ಪರಮದೈವ ಎಂದು ಪ್ರಧಾನಿಯವರೇ ಘೋಷಿಸುವ ಅದೇ ಸಂವಿಧಾನದ ಮೌಲ್ಯಗಳನ್ನು ಆಚರಣೆಯ ಮಾತು ಬಂದಾಗ ಹರಿದ ಕಾಗದದ ಚೂರುಗಳಂತೆ ಗಾಳಿಗೆ ತೂರಲಾಗುತ್ತಿದೆ. ಸಮಾಜವನ್ನು ಹರಿದುಹಂಚುವವರು ಭಾರೀ ತ್ರಿವರ್ಣ ಧ್ವಜವನ್ನು ಹಿಡಿದು ವಂದೇಮಾತರಂ ಹೇಳಿ ದೇಶಭಕ್ತರೆಂಬ ಬಿರುದು ಬಾವಲಿ ಗಳಿಸುತ್ತಿದ್ದಾರೆ. ಅಂಬೇಡ್ಕರ್ ಅವರನ್ನು ಶಕಪುರುಷನೆಂದು ಹಾಡಿ ಹೊಗಳಿದ ಅವೇ ನಾಲಗೆಗಳು ಅಂಬೇಡ್ಕರ್‌ವಾದಿಗಳನ್ನು ದೇಶದ್ರೋಹಿಗಳೆಂದು ನಿಂದಿಸಿ ಹಲ್ಲು ಮಸೆಯುತ್ತಿವೆ. ರಕ್ತದಾಹದ ರಾಷ್ಟ್ರಭಕ್ತಿ ಹೂಂಕರಿಸಿ ದೀನ ದುರ್ಬಲರಲ್ಲಿ ಭಯ ಬಿತ್ತತೊಡಗಿವೆ.

ಭಿನ್ನಮತ ಅಥವಾ ಭಿನ್ನಾಭಿಪ್ರಾಯವನ್ನು, ಶಾಂತಿಯುತ ಪ್ರತಿಭಟನೆಗಳನ್ನು ಕ್ರೂರವಾಗಿ ದಂಡಿಸಲಾಗುತ್ತಿದೆ. ಅದಕ್ಕೆ ಭಯೋತ್ಪಾದನೆ ಇಲ್ಲವೇ ರಾಜದ್ರೋಹದ ಹಣೆಪಟ್ಟಿಗಳನ್ನು ಹಚ್ಚಲಾಗುತ್ತಿದೆ. ಬೇಹುಗಾರಿಕೆ, ಬಂಧನ, ಪೊಲೀಸು-ತೆರಿಗೆ ದಾಳಿಗಳಿಗೆ ಗುರಿಪಡಿಸಲಾಗುತ್ತಿದೆ. ಭಯೋತ್ಪಾದನೆ ನಿಗ್ರಹಕ್ಕೆ ಪ್ರಯೋಗಿಸಲಾಗುವ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಕಡು ಕಠಿಣ ಕಾಯಿದೆಗಳನ್ನು ಪ್ರಯೋಗಿಸಲಾಗುತ್ತಿದೆ. ಬಾಲಬಡುಕ ಮೀಡಿಯಾ ಸರ್ಕಾರದೊಂದಿಗೆ ಶಾಮೀಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನಮತವನ್ನು ಬೇಟೆಯಾಡಲಾಗುತ್ತಿದೆ. ಸರ್ಕಾರದ ನೀತಿ ನಿರ್ಧಾರಗಳ ವಿರುದ್ಧ ದನಿ ಎತ್ತಿದ ವಿದ್ಯಾರ್ಥಿಗಳು, ಅಲ್ಪಸಂಖ್ಯಾತರು, ರೈತರು, ಪತ್ರಕರ್ತರು, ಸಾಮಾಜಿಕ ಆಂದೋಲನಕಾರರು ಯಾರೇ ಇರಲಿ ಅವರನ್ನು ದೇಶದ್ರೋಹಿಗಳೆಂದು ಬಿಂಬಿಸಿ ಗುಂಡಿಟ್ಟು ಹೊಡೆಯಬೇಕು ಎಂಬ ಘೋಷಣೆಗಳನ್ನು ಆಳುವ ಪಕ್ಷಕ್ಕೆ ಸೇರಿದವರು ಮತ್ತು ಬೆಂಬಲಿಗರು ಕೂಗತೊಡಗಿದ್ದಾರೆ.

ಕವಿಗಳು-ಕಲಾವಿದರ ಸಾಂಸ್ಕೃತಿಕ ಪ್ರತಿರೋಧ, ಮಾನವಹಕ್ಕುಗಳ ಹೋರಾಟಗಾರರ ಅದಮ್ಯ ಛಲ ಪ್ರಭುತ್ವದ ಆಕ್ರೋಶಕ್ಕೆ ಗುರಿಯಾಗುತ್ತಲೇ ಬಂದಿದೆ.

ಸರ್ಕಾರ ಅನಾಯಾಸವಾಗಿ ಹೇಳುವ ಸುಳ್ಳುಗಳನ್ನು ಸುಳ್ಳೆಂದು ಹೇಳುವುದೂ ರಾಜದ್ರೋಹವಾಗಿ ಪರಿಣಮಿಸಿದೆ. “ತೀವ್ರ ದಮನಕಾರಿ ನಾಯಕತ್ವದ ಪ್ರತಿಯೊಂದು ಸಂದೇಶವೂ ಸತ್ಯವನ್ನು ತಿರುವುಮುರುವು ಮಾಡುತ್ತದೆ. ಉದಾಹರಣೆಗೆ ಹೇಳುವುದಾದರೆ ’ಸಮರವೇ ಶಾಂತಿ’ ಮತ್ತು ’ಸ್ವಾತಂತ್ರ್ಯ ಎಂಬುದು ಗುಲಾಮಗಿರಿ’ ಎಂಬುದಾಗಿ ನಿರಂತರ ಪುನರುಚ್ಚರಿಸಲಾಗುತ್ತದೆ. ಸತ್ಯದ ಸಚಿವ ಖಾತೆಯು ಸುಳ್ಳುಗಳನ್ನು ಹರಡುತ್ತಿರುತ್ತದೆ. ಪ್ರೇಮ ಪ್ರೀತಿಯ ಸಚಿವ ಖಾತೆಯು ಪ್ರೇಮಿಗಳನ್ನು ಚಿತ್ರಹಿಂಸೆಗೆ ಗುರಿಪಡಿಸುತ್ತ ಇರುತ್ತದೆ” ಎಂಬ ಜಾರ್ಜ್ ಆರ್ವೆಲ್ ಮಹಾಶಯನ ಮಾತುಗಳು ಈ ಸನ್ನಿವೇಶದಲ್ಲಿ ಉಲ್ಲೇಖಿಸಬೇಕಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನಲ್ಲಿ ಟೀಕಿಸುವ ಮತ್ತು ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕೂ ಅಡಗಿದೆ ಎಂಬುದನ್ನು ಸುಪ್ರೀಮ್ ಕೋರ್ಟು ಈ ಹಿಂದೆ ಹಲವಾರು ಸಲ ಹೇಳಿದೆ.

ಭಿನ್ನಮತವಿಲ್ಲದೆ ಜನತಂತ್ರವಿಲ್ಲ. ಭಿನ್ನಾಭಿಪ್ರಾಯ ಎಂಬುದು ಪ್ರಜಾಪ್ರಭುತ್ವದ ಜೀವಾಳ ಎಂಬುದು ಕಾಯಂ ಮೌಲ್ಯವೇ ವಿನಾ ಕೇವಲ ಮಾತಲ್ಲ.

ಭಾರತದ ಸಂವಿಧಾನದ ಪೀಠಿಕೆಯಲ್ಲಿ ಆಲೋಚನೆ, ಅಭಿವ್ಯಕ್ತಿ, ನಂಬಿಕೆ, ಶ್ರದ್ಧೆ ಹಾಗೂ ಆರಾಧನೆಯ ಸ್ವಾತಂತ್ರ್ಯಗಳನ್ನು ನೀಡಲಾಗಿದೆ. 19 (1)ನೆಯ ಪರಿಚ್ಛೇದದ (ಎ)(ಬಿ)(ಸಿ) ಅಡಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ಹತಾರುಗಳಿಲ್ಲದೆ ಶಾಂತಿಯುತವಾಗಿ ಸಭೆ ಸೇರುವ ಹಾಗೂ ಸಂಘಸಂಸ್ಥೆಗಳನ್ನು ಕಟ್ಟಿಕೊಳ್ಳುವ ಸ್ವಾತಂತ್ರ್ಯಗಳನ್ನು ನಮೂದಿಸಲಾಗಿದೆ. ಈ ಮೂರೂ ಸ್ವಾತಂತ್ರ್ಯಗಳು ಭಿನ್ನಮತವನ್ನು ವ್ಯಕ್ತಪಡಿಸಬಹುದಾದ ವಾಹಕಗಳು. ಅಭಿಪ್ರಾಯ ಸ್ವಾತಂತ್ರ್ಯ ಮತ್ತು ಆತ್ಮಸಾಕ್ಷಿಯ ಸ್ವಾತಂತ್ರ್ಯಗಳಲ್ಲಿ ಒಪ್ಪದೆ ಇರುವ ಸ್ವಾತಂತ್ರ್ಯ ನಿಹಿತವಾಗಿದೆ. ಒಪ್ಪದೆ ಇರುವ ಹಕ್ಕು, ಭಿನ್ನಮತದ ಹಕ್ಕು ಹಾಗೂ ಭಿನ್ನದೃಷ್ಟಿಕೋನವನ್ನು ತಳೆಯುವ ಹಕ್ಕುಗಳು ಈ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಉಂಟು.

ಅಪ್ಪ ನೆಟ್ಟ ಆಲಕ್ಕೇ ಜೋತುಬೀಳುವುದು ಸಾಮಾಜಿಕ ಅಧಃಪತನಕ್ಕೆ ದಾರಿ ಮಾಡುತ್ತದೆ. ಸರ್ವಮಾನ್ಯ ಕಟ್ಟು ಕಟ್ಟಳೆಗಳನ್ನು ಪ್ರಶ್ನಿಸುವ ಪ್ರಕ್ರಿಯೆಯು ಕಾಲಕಾಲಕ್ಕೆ ಹೊಸ ಚಿಂತಕರು ಮತ್ತು ಸಮಾಜ ಸುಧಾರಕರ ಹುಟ್ಟಿಗೆ ಕಾರಣವಾಗಿದೆ. ತುಳಿದುಕೊಂಡು ಬಂದಿರುವ ಹಾದಿಯನ್ನೇ ಎಲ್ಲರೂ ಕಟ್ಟುನಿಟ್ಟಾಗಿ ತುಳಿಯುತ್ತ ಹೋದರೆ ಹೊಸ ದಾರಿಗಳು ಹುಟ್ಟುವುದಿಲ್ಲ, ಹೊಸ ಶೋಧನೆಗಳು ಆಗುವುದಿಲ್ಲ, ಹೊಸ ದಿಗಂತಗಳು ಕಾಣುವುದಿಲ್ಲ. ಸನಾತನ ವ್ಯವಸ್ಥೆಯ ಕುರಿತು ಪ್ರಶ್ನೆಗಳನ್ನೇ ಕೇಳದೆ ಹೋದರೆ, ಸಂದೇಹಗಳನ್ನು ಪ್ರಕಟಿಸದೆ ಹೋದರೆ ಹೊಸ ವ್ಯವಸ್ಥೆಗಳು ವಿಕಸಿಸುವುದಿಲ್ಲ, ಮನೋದಿಗಂತಗಳು ವಿಸ್ತರಿಸುವುದಿಲ್ಲ. ಬುದ್ಧ, ಮಹಾವೀರ, ಯೇಸುಕ್ರಿಸ್ತ, ಪ್ರವಾದಿ ಮಹಮ್ಮದ್, ಗುರುನಾನಕ್, ಮಾರ್ಟಿನ್ ಲೂಥರ್, ಕಬೀರ್, ರಾಜಾರಾಮ್ ಮೋಹನ್ ರಾಯ್, ಕಾರ್ಲ್ ಮಾರ್ಕ್ಸ್, ಮಹಾತ್ಮಾ ಗಾಂಧೀ ಅವರು ಒಪ್ಪಿತ ಮೌಲ್ಯಗಳನ್ನು, ಆಚರಣೆಗಳೂ-ರೂಢಿ ಸಂಪ್ರದಾಯಗಳನ್ನು ಪ್ರಶ್ನಿಸದೆ ಎತ್ತಿ ಹಿಡಿಯುತ್ತ ಹೋಗಿದ್ದರೆ ಹೊಸ ಚಿಂತನೆಗಳಿಗೆ ಅವಕಾಶವೇ ಇರುತ್ತಿರಲಿಲ್ಲ ಎನ್ನುತ್ತಾರೆ ಸುಪ್ರೀಮ್ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ದೀಪಕ್ ಗುಪ್ತ.

ಬಹುಮತದ ಆಳ್ವಿಕೆ ಜನತಂತ್ರದ ಅವಿಭಾಜ್ಯ ಅಂಗ ಎಂಬುದು ಸರಿ. ಆದರೆ ಬಹುಸಂಖ್ಯಾತರ ಆಳ್ವಿಕೆಯು ಜನತಾಂತ್ರಿಕ ತಿರುಳಿನ ಉಲ್ಲಂಘನೆ. ನಮ್ಮ ಹಾಲಿ ಚುನಾವಣಾ ವ್ಯವಸ್ಥೆಯ ಪ್ರಕಾರ ಆಯ್ಕೆಯಾಗುವ ಸರ್ಕಾರಗಳು ಜನಸಂಖ್ಯೆಯ ಬಹುಮತವನ್ನು ಪ್ರತಿನಿಧಿಸುವುದಿಲ್ಲ. ಅಷ್ಟೇ ಅಲ್ಲ, ಮತ ಚಲಾಯಿಸಿದವರ ಸಂಖ್ಯೆಯನ್ನು ಲೆಕ್ಕಕ್ಕೆ ಹಿಡಿದರೂ ಸರ್ಕಾರಗಳು ಬಹುಮತದ ಮತದಾರರನ್ನು ಪ್ರತಿನಿಧಿಸುವುದಿಲ್ಲ.

ಹೀಗಾಗಿ ತಾವು ಜನಮತವನ್ನು ಪ್ರನಿಧಿಸುತ್ತಿದ್ದೇವೆ ಎಂದು ಸರ್ಕಾರ ನಡೆಸುವವರು ಹೇಳಿಕೊಳ್ಳುವುದಕ್ಕೆ ಆಧಾರವೇ ಇಲ್ಲ. ಸರ್ಕಾರ ನಡೆಸುವವರನ್ನು ಜನ ಆಯ್ಕೆ ಮಾಡಿರಬಹುದು. ಆದರೆ ಅವರು ದೇಶದ ಇಡೀ ಜನಸಂಖ್ಯೆಯ ಬೆಂಬಲವನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಹೇಳಲು ಬರುವುದಿಲ್ಲ.

ಆಳುವವರಿಗೆ ಶೇ.50ಕ್ಕಿಂತ ಹೆಚ್ಚು ಮತಗಳು ಬಿದ್ದಿವೆ ಎಂದು ಒಂದು ವೇಳೆ ಅಂದುಕೊಂಡರೂ, ಉಳಿದ ಶೇ.49ರಷ್ಟು ಜನರಿಗೆ ಈ ದೇಶದ ಆಳ್ವಿಕೆಯಲ್ಲಿ ದನಿಯೇ ಇಲ್ಲ ಎನ್ನಲಾದೀತೇ? ಈ ಶೇ.49ರಷ್ಟು ಜನ ಮುಂದಿನ ಐದು ವರ್ಷಗಳ ಕಾಲ ಬಾಯಿ ಹೊಲಿದುಕೊಂಡಿರಬೇಕೇ, ಅವರು ಸರ್ಕಾರವನ್ನು ವಿರೋಧಿಸಿದರೆ ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಬೇಕೇ? ಖಂಡಿತ ಸಾಧ್ಯವಿಲ್ಲ ಎನ್ನುತ್ತಾರೆ ನ್ಯಾಯಮೂರ್ತಿ ಗುಪ್ತ.

ಐದು ವರ್ಷಗಳಿಗೊಮ್ಮೆ ಮತದಾನ ಮಾಡಿದ ನಂತರ ನಾಗರಿಕನ ಹಕ್ಕು ಹೊಣೆಗಾರಿಕೆ ಎರಡೂ ತೀರಿತು ಎಂಬುದು ಆಳುವ ಸರ್ವಾಧಿಕಾರಿ ಸರ್ಕಾರಗಳ ಧೋರಣೆ. ಆದರೆ ಮತದಾನ ಮಾಡಿದ ನಂತರ ದೇಶವನ್ನು ಯಾವ ರೀತಿ ನಡೆಸಲಾಗುತ್ತಿದೆ ಎಂಬುದರಲ್ಲಿ ಪಾಲ್ಗೊಳ್ಳುವುದೂ ಪ್ರತಿಯೊಬ್ಬ ನಾಗರಿಕನ ಹಕ್ಕು. ಸರ್ಕಾರದ ನಡೆನುಡಿಗಳನ್ನು ಟೀಕಿಸುವ ಬಾಯಿಗಳಿಗೆ ಬೀಗ ಹಾಕಿ ಸೆರೆಮನೆಗೆ ತಳ್ಳಿದರೆ ಈ ಹಕ್ಕಿಗೆ ಯಾವ ಅರ್ಥವೂ ಉಳಿಯುವುದಿಲ್ಲ. ಆಳುವವರ ಅಭಿಮತಗಳಿಗೆ ಸಾರಾಸಗಟು ವ್ಯತಿರಿಕ್ತ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸುವ ಹಕ್ಕು ನಾಗರಿಕನಿಗೆ ಉಂಟು. ಆದರೆ ಈ ಅಭಿಪ್ರಾಯವನ್ನು ಪ್ರಕಟಿಸುವ ರೀತಿನೀತಿಗಳು ಶಾಂತಿಯುತವಾಗಿರಬೇಕು ಅಷ್ಟೇ. ಸರ್ಕಾರದ ಕ್ರಮಗಳು ಸರಿಯಾಗಿಲ್ಲವೆಂದು ನಾಗರಿಕರಿಗೆ ಅನಿಸಿದರೆ ಶಾಂತಿಯುತವಾಗಿ ಸಭೆ ಸೇರಿ ಪ್ರತಿಭಟಿಸುವ ಹಕ್ಕು ಅವರಿಗೆ ಇದ್ದೇ ಇದೆ. ನಾಗರಿಕರ ತಿಳಿವಳಿಕೆ ಸದಾ ಸರಿಯಿರಲೇಬೇಕಿಲ್ಲ. ಹಾಗೆಯೇ ಸರ್ಕಾರದ ಕ್ರಮ ಕೂಡ ದಾರಿ ತಪ್ಪಿರುವ ಸಾಧ್ಯತೆ ಇದೆ ಎಂದು ನ್ಯಾಯಮೂರ್ತಿ ವಾದಿಸಿದ್ದಾರೆ.

ವಕೀಲರು, ಪ್ರಾಧ್ಯಾಪಕರು, ಕವಿಗಳು, ಮಾನವ ಹಕ್ಕುಗಳ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ದಮನಿತರ ಪರವಾಗಿ ಧೈರ್ಯದಿಂದ ದನಿಯೆತ್ತುವವರು. ಕೋಟಿ ಕೋಟಿ ಭಾರತೀಯರು ಕೇಳಲು ಹೆದರುವ ಪ್ರಶ್ನೆಗಳನ್ನು ಅಂಜಿಕೆಯಿಲ್ಲದೆ ಕೇಳುವವರು. ಅವರ ದಮನ ಜನಕೋಟಿಯ ದನಿಯ ದಮನ. ಈ ದಮನದ ಖಂಡನೀಯ ಕೃತ್ಯಕ್ಕೆ ಆಳುವ ಸರ್ಕಾರದ ಮಡಿಲಿನಲ್ಲಿ ಹಚ್ಚಗೆ ಬೆಚ್ಚಗೆ ಆಡಿಕೊಂಡಿರುವ ಮಾಧ್ಯಮಗಳು ಗಾಳಿ ಹಾಕತೊಡಗಿರುವುದು ಘೋರ ವಿಪರ್ಯಾಸ.

ಪ್ರತಿಕಿಚ್ಚನ್ನು ಹಚ್ಚಿ ಕಾಳ್ಗಿಚ್ಚನ್ನು ಅಡಗಿಸುವುದು ಅರಣ್ಯದಲ್ಲಿ ಸಾಧ್ಯ. ಆದರೆ ಸಮಾಜ ಅರಣ್ಯ ಅಲ್ಲ. ಮನುಷ್ಯರೆಂದರೆ ಹುಲ್ಲಿನ ಒಣಹುಲ್ಲಿನ ಎಸಳುಗಳಲ್ಲ. ಸ್ವತಂತ್ರ ಚೇತನಗಳು ಎಂದು ಹಿಂದೊಮ್ಮೆ ಸುಪ್ರೀಂ ಕೋರ್ಟ್ ಹೇಳಿದ್ದ ಮಾತುಗಳು, ಹುಲ್ಲುಕಡ್ಡಿಗೂ ಸಮನಲ್ಲ ಎಂಬಂತೆಯೇ ಸರ್ಕಾರಗಳು ನಡೆದುಕೊಂಡು ಬಂದಿವೆ. ಈ ಸರ್ಕಾರ ಈ ಮಾತುಗಳನ್ನು ಗಾಳಿಗೆ ತೂರಿ ಬಹುಕಾಲವಾಗಿದೆ.

ಪ್ರಚಂಡ ನಾಯಕರು ಮತ್ತು ಬಹುಮತದ ಸರ್ಕಾರಗಳಿಗಿಂತ ದೇಶ ದೊಡ್ಡದು. ಮಾನವೀಯ ಮೌಲ್ಯಗಳು ದೇಶಕ್ಕಿಂತ ದೊಡ್ಡವು.


ಇದನ್ನೂ ಓದಿ: ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ: ಪೌರಕಾರ್ಮಿಕರ ಪ್ರತಿಭಟನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ಟೌನ್‌ಶಿಪ್: ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ‘ಸಂಯುಕ್ತ ಹೋರಾಟ ಸಮಿತಿ’ ತೀವ್ರ ಖಂಡನೆ

"ಬಿಡದಿ ಟೌನ್‌ಶಿಪ್ ಯೋಜನೆಯು ತೀವ್ರ ವಿವಾದದಲ್ಲಿರುವಾಗಲೇ ರೈತರೊಂದಿಗೆ ಯಾವುದೇ ಮಾತುಕತೆ ನಡೆಸದೆ, ಪೊಲೀಸ್ ಬಲಪ್ರಯೋಗದ ಮೂಲಕ ಸರ್ವಾಧಿಕಾರಿ ರೀತಿಯಲ್ಲಿ ಜಂಟಿ ಸರ್ವೆ (JMC) ನಡೆಸಲು ಮುಂದಾಗಿರುವ ಸರ್ಕಾರದ ಕ್ರಮ ಅತ್ಯಂತ ಖಂಡನೀಯ" ಎಂದು...

ಜ್ಞಾನವಾಪಿ, ಮಥುರಾ, ಸಂಭಾಲ್ ದೇವಾಲಯ-ಮಸೀದಿಗಳ ವಿವಾದ : ಸುಪ್ರೀಂ ಕೋರ್ಟ್‌ನ ಮಧ್ಯಸ್ಥಿಕೆ ಪ್ರಸ್ತಾಪ ತಿರಸ್ಕರಿಸಿದ ಹಿಂದೂ-ಮುಸ್ಲಿಂ ಪಕ್ಷಗಳು

ಧಾರ್ಮಿಕ ಸ್ಥಳಗಳ ವಿವಾದಗಳಿಗೆ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿ ವಿವಾದ, ಮಥುರಾದ ಕೃಷ್ಣ ಜನ್ಮಭೂಮಿ-ಶಾಹಿ ಇದ್ಗಾ ವಿವಾದ ಮತ್ತು ಸಂಭಾಲ್ ಜಮಾ ಮಸೀದಿ...

ಬಿಡದಿ ಟೌನ್‌ಶಿಪ್ ಸರ್ವೆಗೆ ರೈತರ ತೀವ್ರ ವಿರೋಧ: ಅಧಿಕಾರಿಗಳಿಗೆ ಪೊರಕೆ ಏಟು, ಕಾರುಗಳು ಜಖಂ

ರಾಮನಗರ: ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಯನ್ನು ವಿರೋಧಿಸಿ ಸ್ಥಳೀಯ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸೋಮವಾರ (ಜುಲೈ 13) ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಮಂಡಲಹಳ್ಳಿ...

ಮನೆಕೆಲಸದಾಕೆ ಮೇಲಿನ ದೌರ್ಜನ್ಯ ಆರೋಪ ಪ್ರಕರಣ : ಜೆಡಿಎಸ್ ಶಾಸಕ ಹೆಚ್​​​.ಡಿ. ರೇವಣ್ಣಗೆ ಸುಪ್ರೀಂ ಕೋರ್ಟ್​ ನೋಟಿಸ್​

ಮಹಿಳೆಯ ಘನತೆಗೆ ಧಕ್ಕೆ ಹಾಗೂ ಲೈಂಗಿಕ ಕಿರುಕುಳ ಆರೋಪಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್‌ ಸೋಮವಾರ (ಜು.13) ಜೆಡಿಎಸ್‌...

ದಲಿತ ಯುವಕರಿಗೆ ವಿದ್ಯುತ್ ಶಾಕ್‌ ಶಿಕ್ಷೆ: ಕಳ್ಳತನ ಆರೋಪದ ಮೇಲೆ ಇಬ್ಬರಿಗೆ ಚಿತ್ರಹಿಂಸೆ

ದಲಿತ ಯುವಕರ ಮೇಲೆ ಮಧ್ಯಪ್ರದೇಶದಲ್ಲಿ ನಡೆದಿರುವ ಅಮಾನವೀಯ ಕೃತ್ಯವೊಂದರ ವಿಡಿಯೋ ಇದೀಗ ನಾಗರಿಕ ಸಮಾಜವನ್ನೇ ಆಘಾತಕ್ಕೀಡು ಮಾಡಿದೆ. ನೀರಿನ ಪಂಪ್ ಮೋಟಾರ್ ಕದ್ದಿದ್ದಾರೆ ಎಂಬ ಶಂಕೆಯ ಮೇಲೆ ಇಬ್ಬರು ದಲಿತ ಯುವಕರನ್ನು ಕಂಬಕ್ಕೆ...

ರಾಮಮಂದಿರ ಹಗರಣ: ಕೇಂದ್ರ ಸರ್ಕಾರ, ಟ್ರಸ್ಟ್, ಉತ್ತರ ಪ್ರದೇಶ ಸರ್ಕಾರಕ್ಕೆ ‘ಸುಪ್ರೀಂ’ ನೋಟಿಸ್ 

ನವದೆಹಲಿ: ವಿಶ್ವಪ್ರಸಿದ್ಧ ಅಯೋಧ್ಯೆಯ ಶ್ರೀ ರಾಮಮಂದಿರಕ್ಕೆ ಸಾರ್ವಜನಿಕ ಭಕ್ತಾದಿಗಳಿಂದ ಹರಿದುಬಂದಿರುವ ಕೋಟ್ಯಂತರ ರೂಪಾಯಿ ದೇಣಿಗೆ ನಿಧಿಯ ಕಳ್ಳತನ, ದುರುಪಯೋಗ ಮತ್ತು ಆಡಳಿತಾತ್ಮಕ ಅಕ್ರಮಗಳ ಆರೋಪ ಇದೀಗ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಈ...

ಜಮ್ಮು-ಕಾಶ್ಮೀರ: ಪ್ರತ್ಯೇಕತಾವಾದಿಗಳು, ಉಗ್ರಗಾಮಿಗಳನ್ನು ವೈಭವೀಕರಿಸಿದ ಆರೋಪ: ಮೂವರು ಪ್ರಕಾಶಕರ ಬಂಧನ

ಜಮ್ಮು/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಹಾಗೂ ಭಯೋತ್ಪಾದಕ ನಾಯಕರನ್ನು ವೈಭವೀಕರಿಸುವ ಪುಸ್ತಕಗಳನ್ನು ಪ್ರಕಟಿಸಿ, ವಿತರಿಸಿದ ಗಂಭೀರ ಆರೋಪದ ಮೇಲೆ ಪ್ರತಿ-ಗುಪ್ತಚರ ವಿಭಾಗದ (ಸಿಐಜೆಕೆ) ಪೊಲೀಸರು ಭಾನುವಾರ ಇಬ್ಬರು ಪ್ರಮುಖ ಪ್ರಕಾಶನ ಸಂಸ್ಥೆಗಳಿಗೆ...

ಕರ್ನಾಟಕ ಎಸ್‍ಐಆರ್: ಮತದಾರರ ಸೌಲಭ್ಯ ಕೇಂದ್ರಗಳ ಕೊರತೆ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಅಡ್ಡಿ: ವರದಿ

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಆರಂಭವಾಗಿ ಸುಮಾರು ಎರಡು ವಾರಗಳು ಕಳೆಯುತ್ತಾ ಬಂದಿದ್ದರೂ, ಚುನಾವಣಾ ಆಯೋಗವು ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯಾದ್ಯಂತ ಅಗತ್ಯವಿರುವಷ್ಟು ಮತದಾರರ ಸೌಲಭ್ಯ ಕೇಂದ್ರಗಳನ್ನು...

27 ಮಂದಿಯನ್ನು ‘ವಿದೇಶಿಯರು’ ಎಂದಿದ್ದ ಅಸ್ಸಾಂ ನ್ಯಾಯಮಂಡಳಿಗಳ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಒಬ್ಬ ವ್ಯಕ್ತಿಯ ಪೌರತ್ವ ಮತ್ತು ವಿದೇಶಿಯರ ಸ್ಥಾನಮಾನವನ್ನು ನಿರ್ಧರಿಸುವಾಗ ಕೇವಲ ಯಾಂತ್ರಿಕವಾಗಿ ತೀರ್ಪು ನೀಡಲಾಗದು, ಬದಲಿಗೆ ಅತ್ಯಂತ ನ್ಯಾಯಯುತ, ಕಾನೂನುಬದ್ಧ ಹಾಗೂ ಸಮಂಜಸವಾದ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ...

ಶಿಕ್ಷಕ ‘ಖಾನ್ ಸರ್‌’ಗೆ ಪಟ್ನಾ ಕೋರ್ಟ್‌ನಲ್ಲಿ ಜಯ: ಕೋಚಿಂಗ್ ಸೆಂಟರ್ ದಾಳಿ ಪ್ರಕರಣದಲ್ಲಿ ಮುಂಗಡ ಜಾಮೀನು ಮಂಜೂರು

ಬಿಹಾರದ ಖ್ಯಾತ ಶಿಕ್ಷಕ ಫೈಸಲ್ ಖಾನ್ (ಜನಪ್ರಿಯವಾಗಿ ಖಾನ್ ಸರ್ ಎಂದು ಕರೆಯಲ್ಪಡುವ) ಅವರಿಗೆ ಪಟ್ನಾ ನ್ಯಾಯಾಲಯವು ಸೋಮವಾರ ಮುಂಗಡ ಜಾಮೀನು ಮಂಜೂರು ಮಾಡಿದೆ. ಈ ತಿಂಗಳ ಆರಂಭದಲ್ಲಿ ಅವರ ಕೋಚಿಂಗ್ ಇನ್ಸ್ಟಿಟ್ಯೂಟ್...