ರಾಜ್ಯಪಾಲರು ಅನಿರ್ಧಿಷ್ಟಾವಧಿಗೆ ಮಸೂದೆಗಳನ್ನು ತಡೆ ಹಿಡಿಯಬಾರದು. ಈ ಮೂಲಕ ಶಾಸಕಾಂಗದ ಕಾರ್ಯ ನಿರ್ವಹಣೆಗೆ ಅಡ್ಡಿಯಾಗಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಜೆಬಿ ಪಾರ್ದೀವಾಲ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠ, ರಾಜ್ಯಪಾಲರು ರಾಜ್ಯದ ಸಾಂವಿಧಾನಿಕ ವ್ಯವಸ್ಥೆಯ ಮುಖ್ಯಸ್ಥರು. ಅವರು ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶವಿದೆ. ಆದರೆ, ಮಸೂದೆಗಳನ್ನು ಅನಿರ್ಧಿಷ್ಟಾವಧಿಗೆ ಬಾಕಿ ಉಳಿಸಿಕೊಳ್ಳಬಾರದು. ರಾಜ್ಯಪಾಲರು ಮಸೂದೆಗೆ ಅಂಕಿತ ಹಾಕದಿದ್ದರೆ ಅದನ್ನು ಮರು ಪರಿಶೀಲನೆಗೆ ಶಾಸಕಾಂಗಕ್ಕೆ ಹಿಂದಿರುಗಿಸಬೇಕು ಎಂದು ತಿಳಿಸಿದೆ.
ಕಳೆದ ಜೂನ್ 19 ಮತ್ತು 20ರಂದು ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಮಸೂದೆಗಳನ್ನು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಇತ್ಯರ್ಥ ಮಾಡಿಲ್ಲ ಎಂದು ಪಂಜಾಬ್ನ ಆಮ್ ಆದ್ಮಿ ನೇತೃತ್ವದ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಈ ಅರ್ಜಿಯನ್ನು ಇತ್ಯರ್ಥಪಡಿಸಿರುವ ನ್ಯಾಯಾಲಯ ನವೆಂಬರ್ 10 ರಂದು ತೀರ್ಪು ನೀಡಿದೆ. 27 ಪುಟಗಳ ಅದೇಶದ ಪ್ರತಿಯನ್ನು ಸುಪ್ರೀಂ ಕೋರ್ಟ್ನ ವೆಬ್ಸೈಟ್ನಲ್ಲಿ ಗುರುವಾರ ಅಪ್ಲೋಡ್ ಮಾಡಲಾಗಿದೆ.
ಸಂವಿಧಾನದ 200ನೇ ವಿಧಿಯ ಪ್ರಕಾರ ರಾಜ್ಯಪಾಲರು ಮೂರು ಆಯ್ಕೆಗಳನ್ನು ಹೊಂದಿದ್ದಾರೆ. ಮಸೂದೆಗೆ ಅಂಕಿತ ಹಾಕುವುದು, ಅಂಕಿತ ಹಾಕುವುದನ್ನು ತಡೆಯುವುದು ಅಥವಾ ರಾಷ್ಟ್ರಪತಿಗಳು ಪರಿಶೀಲನೆ ನಡೆಸುವ ಸಂಬಂಧ ಮಸೂದೆಗಳನ್ನು ಕಾಯ್ದಿರಿಸುವುದು. ಆದರೆ, ಶಾಸಕಾಂಗದ ಕಾರ್ಯ ವಿಫಲಗೊಳಿಸುವ ರೀತಿಯಲ್ಲಿ ರಾಜ್ಯಪಾಲರು ಮಸೂದೆಗಳನ್ನು ತಡೆ ಹಿಡಿಯಬಾರದು ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
ಇದನ್ನೂ ಓದಿ: ಉ. ಪ್ರದೇಶದ ಗೋಹತ್ಯೆ ತಡೆ ಕಾಯ್ದೆ ಗೋಮಾಂಸ ಸಾಗಾಟ ನಿಷೇಧಿಸಿಲ್ಲ: ಅಲಹಾಬಾದ್ ಹೈಕೋರ್ಟ್