‘ಒಂದು ರಾಷ್ಟ್ರ, ಒಂದು ಚುನಾವಣೆ’ ಇತ್ತೀಚೆಗೆ ದೇಶದಲ್ಲಿ ಭಾರೀ ಸುದ್ದು ಮಾಡಿತ್ತು. ಈ ಕುರಿತು ವರದಿ ಸಲ್ಲಿಕೆಗೆ ಕೇಂದ್ರ ಸರಕಾರ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯನ್ನು ಕೂಡ ರಚಿಸಿತ್ತು. ಆದರೆ ಈಗ ಉನ್ನತ ಮಟ್ಟದ ಸಮಿತಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡದೆ ಕೇಂದ್ರ ಸರಕಾರ ನುಣುಚಿಕೊಂಡಿದೆ.
‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಗೆ ವರದಿ ಸಲ್ಲಿಸಲು ಗಡುವು ನೀಡಲಾಗಿದೆಯೇ ಎಂಬ ಬಗ್ಗೆ ಮೂವರು ಕಾಂಗ್ರೆಸ್ ಸಂಸದರು ಕೇಳಿದ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಕಾಂಗ್ರೆಸ್ ಸಂಸದರಾದ ಅಡೂರ್ ಪ್ರಕಾಶ್, ಆಂತೋ ಆಂತೋನಿ ಮತ್ತು ಸು.ತಿರುನಾವುಕ್ಕರಸರ್ ಅವರು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ಪ್ರಶ್ನೆಯನ್ನು ಕೇಳಿದ್ದು, ಸಮಿತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೂಡ ನೀಡುವಂತೆ ಆಗ್ರಹಿಸಿದ್ದರು.
ಒಂದು ರಾಷ್ಟ್ರ, ಒಂದು ಚುನಾವಣೆ ಎಂಬ ಸಿದ್ಧಾಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಆಡಳಿತಾರೂಢ ಬಿಜೆಪಿ ನಾಯಕರು ಪ್ರತಿಪಾದಿಸುತ್ತಿದ್ದರೂ, ಆ ಕುರಿತ ನಡೆಯ ಬಗ್ಗೆ ಸರ್ಕಾರ ಈಗ ಮೌನವಾಗಿದೆ. ಕಳೆದ ಆಗಸ್ಟ್ನಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ವಿಚಾರ ಹೆಚ್ಚು ಚರ್ಚೆಗೆ ಬಂದಿದ್ದವು.
ಸೆ.1ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಮಾಜಿ ರಾಷ್ಟ್ರಪತಿ ಕೋವಿಂದ್ ಅವರ ಜೊತೆ ನಡೆಸಿದ ಸಭೆಯ ಬಳಿಕ ಏಕಕಾಲದಲ್ಲಿ ಸಂಸತ್ತಿಗೆ ಮತ್ತು ವಿಧಾನಸಭೆ ಚುನಾವಣೆಗಳನ್ನು ನಡೆಸುವ ಬಗ್ಗೆ ಪರಿಶೀಲಿಸಲು ಕೋವಿಂದ್ ಅವರ ನೇತೃತ್ವದ ಸಮಿತಿಗೆ ಸೂಚಿಸಿದ್ದರು.
8 ಸದಸ್ಯರ ಸಮಿತಿಯ ರಚನೆಯ ಕುರಿತಾದ ಅಧಿಸೂಚನೆಯು ಸುದ್ದಿಯಾಗಿತ್ತು. ವಿಶೇಷವಾಗಿ ಸೆಪ್ಟೆಂಬರ್ 18 ಮತ್ತು 22ರ ನಡುವೆ ಹಮ್ಮಿಕೊಂಡಿದ್ದ ವಿಶೇಷ ಅಧಿವೇಶನಕ್ಕೆ ಮೊದಲು ಈ ಕುರಿತು ಬೆಳವಣಿಗೆ ನಡೆದಿತ್ತು. ಭಾರತದ ಚುನಾವಣಾ ಆಯೋಗವು ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಅಂತಿಮಗೊಳಿಸುತ್ತಿದ್ದ ಸಮಯವೂ ಇದಾಗಿತ್ತು.
ಸರ್ಕಾರದ ಸೆ.1ರ ಅಧಿಸೂಚನೆಯಲ್ಲಿ ಕೋವಿಂದ್ ಅವರನ್ನು ಹೊರತುಪಡಿಸಿ, ಸಮಿತಿಯಲ್ಲಿ ಅಮಿತ್ ಶಾ, ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಮತ್ತು ಮಾಜಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್, ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎನ್.ಕೆ. ಸಿಂಗ್, ಹಿರಿಯ ವಕೀಲ ಹರೀಶ್ ಸಾಳ್ವೆ, ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಕಶ್ಯಪ್ ಮತ್ತು ಮಾಜಿ ಮುಖ್ಯ ವಿಜಿಲೆನ್ಸ್ ಕಮಿಷನರ್ ಸಂಜಯ್ ಕೊಠಾರಿ ಇತರ ಸದಸ್ಯರಾಗಿದ್ದರು. ಅಧೀರ್ ರಂಜನ್ ಚೌದರಿ ಸಮಿತಿಯ ಭಾಗವಾಗಲು ನಿರಾಕರಿಸಿದ್ದರು.
ಸೆ.23 ರಂದು ಕೋವಿಂದ್ ಅವರು ನವದೆಹಲಿಯಲ್ಲಿ ಸಮಿತಿಯ ಮೊದಲ ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಪಡೆಯಲು ರಾಜಕೀಯ ಪಕ್ಷಗಳು ಮತ್ತು ಕಾನೂನು ಆಯೋಗವನ್ನು ಆಹ್ವಾನಿಸಿದ್ದರು. ಅ.23 ರಂದು ಕಾನೂನು ಆಯೋಗವು ಕೋವಿಂದ್ ಸಮಿತಿಗೆ ಈ ವಿಷಯದಲ್ಲಿ ಹೇಗೆ ಮುಂದುವರಿಯಬೇಕು ಎಂಬ ಮಾರ್ಗಸೂಚಿಯನ್ನು ಸೂಚಿಸಿತ್ತು.
ಡಿ.8 ರಂದು ಕಾಂಗ್ರೆಸ್ ಸಂಸದರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವಾಗ, ಕಾನೂನು ಸಚಿವಾಲಯವು ಲಿಖಿತ ಉತ್ತರದಲ್ಲಿ ಸಮಿತಿಯು ತನ್ನ ವರದಿಯನ್ನು ಸಲ್ಲಿಸಲು ಯಾವುದೇ ನಿಗದಿತ ಅವಧಿಯನ್ನು ನಿಗದಿಪಡಿಸಲಾಗಿದೆಯೇ ಎಂದು ಉತ್ತರಿಸಿಲ್ಲ. ಪ್ರತಿ ಒಂದು ಅಥವಾ ಎರಡು ವರ್ಷಗಳಿಗೊಮ್ಮೆ ಚುನಾವಣೆಗಳನ್ನು ಆಯೋಜಿಸುವುದರಿಂದ ಇದು ಹೆಚ್ಚಿನ ವೆಚ್ಚಕ್ಕೆ ಕಾರಣವಾಗುತ್ತದೆ. ಭದ್ರತಾ ಪಡೆಗಳು ಸೇರಿದಂತೆ ಮಾನವ ಶಕ್ತಿಯ ಹೆಚ್ಚಿನ ಬಳಕೆಗೆ ಕಾರಣವಾಗುತ್ತದೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುತ್ತದೆ ಎಂದು ಹೇಳಿದೆ.
ಇದನ್ನು ಓದಿ: ‘ಮಾಸ್ಟರ್ ಶೆಫ್ ಇಂಡಿಯಾ’ ಗೆದ್ದ ಮಂಗಳೂರಿನ ಯುವಕ ಮೊಹಮ್ಮದ್ ಆಶಿಕ್