ವ್ಯಕ್ತಿಗಳು, ವಿಶೇಷವಾಗಿ ಮಾದ್ಯಮ ಪ್ರತಿನಿಧಿಗಳಿಂದ ಫೋನ್ಗಳು ಮತ್ತು ಲ್ಯಾಪ್ಟಾಪ್ಗಳಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿ ಮಾರ್ಗಸೂಚಿಗಳನ್ನು ಜಾರಿಗೆ ತರುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರ ಪೀಠವು, ಕೇಂದ್ರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರಲ್ಲಿ ತನಿಖಾ ಸಂಸ್ಥೆಗಳ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದಂತೆ ಗಂಭೀರ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಈ ವಿಷಯ ಗಂಭೀರವಾದುದು ಎಂದು ಹೇಳಿರುವ ಸುಪ್ರೀಂ ಕೋರ್ಟ್, ಕೇಂದ್ರದ ತನಿಖಾ ಸಂಸ್ಥೆಗಳಿಗೆ ಪರಮಾಧಿಕಾರ ನೀಡಿರುವುದು ಕಳವಳಕಾರಿ ಎಂದು ಹೇಳಿದೆ.
ಸರ್ವ ರೀತಿಯ ಅಧಿಕಾರವನ್ನು ತನಿಖಾ ಸಂಸ್ಥೆಗಳಿಗೆ ನೀಡಿರುವುದನ್ನು ಒಪ್ಪಿಕೊಳ್ಳುವುದು ನನಗೆ ತುಂಬಾ ಕಷ್ಟಕರವಾಗಿದೆ. ಇದು ತುಂಬಾ ಅಪಾಯಕಾರಿ ಎಂದು ನಾನು ಭಾವಿಸುತ್ತೇನೆ ಎಂದು ನ್ಯಾಯಮೂರ್ತಿ ಕೌಲ್ ಹೇಳಿದ್ದಾರೆ.
ಫೌಂಡೇಶನ್ ಆಫ್ ಮೀಡಿಯಾ ಪ್ರೊಫೆಷನಲ್ಸ್ ಪರವಾಗಿ ಕೋರ್ಟ್ಗೆ ಹಾಜರಾದ ವಕೀಲರು, ತನಿಖಾ ಸಂಸ್ಥೆಗಳು ಎಲೆಕ್ಟ್ರಾನಿಕ್ ಸಾಧನಗಳನ್ನು ಯಾವಾಗ ಮತ್ತು ಹೇಗೆ ವಶಪಡಿಸಿಕೊಳ್ಳುತ್ತವೆ ಎಂಬುದಕ್ಕೆ ಸಂಬಂಧಿಸಿದಂತೆ ಯಾವುದೇ ಮಾರ್ಗಸೂಚಿಗಳಿಲ್ಲದ ಕಾರಣ ಇದು ಒಂದು ಪ್ರಮುಖ ವಿಷಯವಾಗಿದೆ ಎಂದು ಹೇಳಿದ್ದಾರೆ.
ಈ ವಿಚಾರದಲ್ಲಿ ಜಟಿಲವಾದ ಕಾನೂನು ಸಮಸ್ಯೆಗಳು ತಲೆದೋರಿರುವುದರಿಂದ ಈ ವಿಚಾರದಲ್ಲಿ ಸ್ವಲ್ಪ ಕಾಲಾವಕಾಶ ನೀಡುವಂತೆ ರಾಜು ನ್ಯಾಯಾಲಯವನ್ನು ಕೋರಿದ್ದಾರೆ. ಪದೇಪದೇ ಅಪರಾಧ ಕೃತ್ಯಗಳನ್ನು ಎಸಗುವವರು ಅಥವಾ ದೇಶ ವಿರೋಧಿ ಶಕ್ತಿಗಳು ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಮಹತ್ವದ ದತ್ತಾಂಶಗಳನ್ನು ಮುಚ್ಚಿಟ್ಟಿರುತ್ತಾರೆ. ಇಂಥ ಸಾಧನಗಳನ್ನು ಜಪ್ತಿ ಮಾಡುವುದು ಅಗತ್ಯವಾಗುತ್ತದೆ ಎಂದು ಎಸ್.ವಿ.ರಾಜು ನ್ಯಾಯಪೀಠಕ್ಕೆ ತಿಳಿಸಿದರು.
ಅರ್ಜಿದಾರರ ವಕೀಲರು ರಾಜ್ಯದ ಅಧಿಕಾರ ಮತ್ತು ಖಾಸಗಿತನದ ಹಕ್ಕು ಸೇರಿದಂತೆ ವ್ಯಕ್ತಿಯ ಹಕ್ಕುಗಳಿಗೆ ಸಂಬಂಧಿಸಿದ ಸಮಸ್ಯೆಯನ್ನು ಕೋರ್ಟ್ ಗಮನಕ್ಕೆ ತಂದಿದ್ದಾರೆ. ಹಲವು ಮಾದ್ಯಮ ಪ್ರತಿನಿಧಿಗಳು ಸುದ್ದಿಗಳಿಗೆ ಸಂಬಂಧಿಸಿ ತಮ್ಮದೇ ಆದ ಮೂಲಗಳನ್ನು ಹೊಂದಿರುತ್ತಾರೆ. ಹೀಗಾಗಿ ಅವರ ಸಾಧನಗಳನ್ನು ಜಪ್ತಿ ಮಾಡುವುದು ಗಂಭೀರ ವಿಷಯ ಎಂದು ಹೇಳಿದ ನ್ಯಾಯಪೀಠ, ಎಲ್ಲ ಸಾಧನಗಳನ್ನು ನೀವು ವಶಕ್ಕೆ ಪಡೆದರೆ ಸಮಸ್ಯೆಯಾಗುತ್ತದೆ. ಈ ಕುರಿತು ಮಾರ್ಗಸೂಚಿಗಳನ್ನು ರಚಿಸಲೇಬೇಕು ಎಂದು ಹೇಳಿದೆ.
ಎರಡೂ ಪಕ್ಷದವರ ಹಿತಾಸಕ್ತಿ ರಕ್ಷಣೆಯಾಗಬೇಕು. ಯಾವುದೇ ದುಷ್ಪರಿಣಾಮವೂ ಉಂಟಾಗಬಾರದು. ಹೀಗಾಗಿ ಯಾವ ರೀತಿಯ ಮಾರ್ಗಸೂಚಿಗಳಿರಬೇಕು ಎಂಬ ಬಗ್ಗೆ ಕೇಂದ್ರ ಸರ್ಕಾರ ವಿಶ್ಲೇಷಣೆ ನಡೆಸಬೇಕು. ಮಾದ್ಯಮ ಪ್ರತಿನಿಧಿಗಳ ಹಿತಾಸಕ್ತಿಗಳನ್ನು ರಕ್ಷಿಸಲು ಸರಿಯಾದ ಮಾರ್ಗಸೂಚಿಗಳ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ವಿಷಯದ ಮುಂದಿನ ವಿಚಾರಣೆ ಡಿಸೆಂಬರ್ನಲ್ಲಿ ನಡೆಯಲಿದೆ.
ಇದನ್ನು ಓದಿ: ಅಲಿಘರ್ ನಗರದ ಹೆಸರು ಹರಿಘರ್ ಎಂದು ಬದಲಾಯಿಸಲು ಅನುಮೋದನೆ