ದೆಹಲಿಯ ಸುಂದರ್ ನಗರದಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸೂಚನೆ ಮೇರೆಗೆ ಮನೆಗಳನ್ನು ತೆರವು ಮಾಡಲಾಗಿದ್ದು, ಇದರಿಂದ ಸ್ಲಂ ನಿವಾಸಿಗಳು ಅತಂತ್ರರಾಗಿದ್ದಾರೆ. ಪುನರ್ವಸತಿಯನ್ನು ಕಲ್ಪಿಸದೆ ಸ್ಲಂ ನಿವಾಸಿಗಳ ಮನೆಗಳನ್ನು ಏಕಾಏಕಿ ತೆರವು ಮಾಡಿ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಸುಂದರ್ ನಗರದಲ್ಲಿ ಕೈಗೊಂಡ ಮನೆಗಳ ತೆರವು ಕಾರ್ಯಾಚರಣೆ 200ಕ್ಕೂ ಹೆಚ್ಚು ಕುಟುಂಬಗಳ ಮೇಲೆ ಪರಿಣಾಮ ಬೀಡಿದೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸೂಚನೆ ಮೇರೆ ಮನೆಗಳನ್ನು ತೆರವು ಮಾಡಲಾಗಿದೆ ಮತ್ತು ದೆಹಲಿ ಹೈಕೋರ್ಟ್ ತೆರವು ಕಾರ್ಯಚರಣೆಗೆ ತಡೆಯಲು ನಿರಾಕರಿಸಿತ್ತು.
ನ.18 ರಂದು ಪೋಸ್ಟರ್ಗಳು ಮತ್ತು ನೋಟಿಸ್ಗಳನ್ನು ಹಾಕಲಾಯಿತು ಮತ್ತು ಸ್ಲಂಗಳನ್ನು ತಕ್ಷಣವೇ ಖಾಲಿ ಮಾಡುವಂತೆ ಆದೇಶ ನೀಡಲಾಯಿತು. ಇಲ್ಲಿ ವಾಸಿಸುವ ಹೆಚ್ಚಿನವರು ಮಹಿಳೆಯರು ಮತ್ತು ಪುರುಷರು ಚಿಂದಿ ಆಯುವವರು, ರಿಕ್ಷಾ ಚಾಲಕರು ಮತ್ತು ಮನೆಗೆಲಸ ಮಾಡುವವರು. ಅವರಲ್ಲಿ ಹಲವರು ಬಾಡಿಗೆಗೆ ವಾಸಿಸುತ್ತಿದ್ದಾರೆ. ಕೆಲವರು 40 ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದರು.
ಸುಂದರ್ ನಗರ ಬಸ್ತಿಯಲ್ಲಿರುವ ಮನೆಗಳನ್ನು ಕೆಡವುವಾಗ ಅಧಿಕಾರಿಗಳು 2015ರ ನೀತಿಯಲ್ಲಿ ರೂಪಿಸಲಾದ ದೆಹಲಿ ಸ್ಲಂ ಮತ್ತು ಜೆಜೆ ಪುನರ್ವಸತಿ ಮತ್ತು ಸ್ಥಳಾಂತರ ನೀತಿ ಎಂಬ ಪ್ರೋಟೋಕಾಲ್ಗಳನ್ನು ಅನುಸರಿಸಬೇಕಿತ್ತು. ಆದರೆ ಭೂ ಮತ್ತು ಅಭಿವೃದ್ಧಿ ಕಚೇರಿ (L&DO) ಜನರು ವಾಸಿಸುತ್ತಿದ್ದ ಮನೆಗಳನ್ನು ಕೆಡವುವ ಸಮಯದಲ್ಲಿ ಹಲವಾರು ಪ್ರೋಟೋಕಾಲ್ಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಲಾಗಿದೆ.
ಸುಂದರ್ ನಗರ ಬಸ್ತಿಯಲ್ಲಿರುವ ಫಾತಿಮಾ ಎಂಬವರ ಮನೆಯನ್ನು ನ.21ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಕೆಡವಲಾಗಿದೆ. ಅವರ ಪತಿ ಟೂರಿಸ್ಟ್ ಟ್ಯಾಕ್ಸಿ ಚಾಲಕರಾಗಿದ್ದು ಆಗ್ರಾಕ್ಕೆ ತೆರಳಿದ್ದರು. ಪ್ರವಾಸಿಗರಿಗೆ ತಾಜ್ ಮಹಲ್ ತೋರಿಸಿ ಮನೆಗೆಂದು ವಾಪಾಸ್ಸು ಬರುವಾಗ ಮನೆಯೇ ನೆಲಸಮಗೊಂಡಿತ್ತು. ಮನೆ ಕಳೆದುಕೊಂಡು ಫಾತಿಮಾ (20) ಬೀದಿಯಲ್ಲಿ ತನ್ನ 4 ತಿಂಗಳ ಮಗಳನ್ನು ತೊಟ್ಟಿಲಲ್ಲಿ ಹಾಕಿಕೊಂಡು ಕುಳಿತಿದ್ದರು. ಪಕ್ಕದ ರಸ್ತೆಯಲ್ಲಿ ಗೃಹೋಪಯೋಗಿ ವಸ್ತುಗಳು ಬಿದ್ದುಕೊಂಡಿದ್ದವು. ಫಾತಿಮಾಳ ಪಕ್ಕದಲ್ಲಿ ಪಾರ್ಶ್ವವಾಯುವಿನಿಂದ ನರಳುತ್ತಿದ್ದ ಅತ್ತಿಗೆ ಕಣ್ಣೀರಿಡುತ್ತಿದ್ದರು.
ಮನೆಗಳನ್ನು ಕೆಡವಲು 15 ದಿನಗಳ ಮೊದಲು ಪರ್ಯಾಯ ಪುನರ್ವಸತಿಯನ್ನು ಒದಗಿಸಬೇಕು ಎಂದು ನಿಯಮವು ಹೇಳುತ್ತದೆ. ಗುಜಿರಿ ಕೆಲಸ ಮಾಡುತ್ತಿದ್ದ ಪ್ಯಾರೆ ಲಾಲ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ನ.18 ರಂದು ಮನೆಗಳನ್ನು ತೆರವುಗೊಳಿಸುವುದಾಗಿ ಪೋಸ್ಟರ್ ಹಾಕಿದ್ದಾರೆ. ನೋಟಿಸ್ ನಮ್ಮನ್ನು ಭಯಭೀತರನ್ನಾಗಿ ಮಾಡಿತ್ತು. ತದನಂತರ ಇದ್ದಕ್ಕಿದ್ದಂತೆ ಬುಲ್ಡೋಜರ್ಗಳು ಬಂದವು. ನಮ್ಮ ಮನೆಗಳನ್ನು ನೆಲಸಮ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಮನೆ ಕಳೆದುಕೊಂಡವರು ಈ 3 ದಿನಗಳ ಅವಧಿಯಲ್ಲಿ ವಸತಿಗಳನ್ನು ಬಾಡಿಗೆಗೆ ಪಡೆಯಲು ಬೇಕಾದಷ್ಟು ಆರ್ಥಿಕ ಸಾಮರ್ಥ್ಯವನ್ನು ಹೊಂದಿರಲಿಲ್ಲ. ಅವರಲ್ಲಿ ಬಹುಪಾಲು ದಿನಗೂಲಿದಾರರು, ಮನೆ ಕೆಲಸಗಾರರು ಮತ್ತು ಗುಜಿರಿ ಸಂಗ್ರಹಿಸುವವರಾಗಿದ್ದರು. ಸ್ಥಳಾಂತರಗೊಂಡ ಒಂದು ಕುಟುಂಬಕ್ಕೂ ಪರ್ಯಾಯ ಪುನರ್ವಸತಿ ಒದಗಿಸಲು DUSIB ವಿಫಲವಾಗಿದೆ. ಮನೆಗಳನ್ನು ಕೆಡವಿದ ಸ್ಥಳದಿಂದ 5 ಕಿಲೋಮೀಟರ್ಗಳ ಒಳಗೆ ಪರ್ಯಾಯ ಪುನರ್ವಸತಿಯನ್ನು ಒದಗಿಸಬೇಕು ಎಂದು ನೀತಿಯು ಉಲ್ಲೇಖಿಸುತ್ತದೆ. ಆದರೆ ಜನರಿಗೆ ವಸತಿ ವ್ಯವಸ್ಥೆಯನ್ನು ಮಾಡಿರಲಿಲ್ಲ.
ಸುಂದರ್ ನಗರದ ಸ್ಥಳಾಂತರಗೊಂಡ ಕುಟುಂಬಗಳಿಗೆ ಜೀವನೋಪಾಯದ ಮತ್ತು ಮಕ್ಕಳ ಶಿಕ್ಷಣದ ಬಗೆಗೆ ಸಮಸ್ಯೆ ಎದುರಾಗಿದೆ. ನಾಸಿರಾ ಬೀಬಿ (33) ಸಮೀಪದ ಐಷಾರಾಮಿ ಬಂಗಲೆಯಲ್ಲಿ ಮನೆ ಕೆಲಸಗಾರ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ನಾವು ದೂರ ಹೋದರೆ ಇನ್ನು ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಮಕ್ಕಳು ದೆಹಲಿ ಪಬ್ಲಿಕ್ ಸ್ಕೂಲ್ನಲ್ಲಿ ಕಲಿಯುತ್ತಿದ್ದರು. ಮನೆಗಳನ್ನು ತೆರವಿನ ಬಳಿಕ ಮಕ್ಕಳ ಭವಿಷ್ಯವು ಅತಂತ್ರವಾಗಿದೆ ಎಂದು ಹೇಳಿದ್ದಾರೆ.
ಶಾಲಾ-ಕಾಲೇಜು ಪರೀಕ್ಷೆಗಳು ನಡೆಯುವಾಗ ಮನೆಗಳನ್ನು ಕೆಡವಬಾರದು ಎಂದು ನಿಯಮವು ಹೇಳುತ್ತದೆ. ಆದರೆ ಫಲಕ್ ಎಂಬಾಕೆ 12ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಆಕೆಯ ಮನೆಯನ್ನು ಕೂಡ ಕೆಡವಲಾಗಿದೆ. ಮುಂದಿನ ತಿಂಗಳು ಅವರ ಪ್ರಿ-ಬೋರ್ಡ್ ಪರೀಕ್ಷೆಗಳು ನಡೆಯಲಿವೆ. ನಾಳೆ ನನಗೆ ವಾರದ ಪರೀಕ್ಷೆ ಇದೆ. ನನಗೆ ಮನಸ್ಸಿಗೆ ಶಾಂತಿ ಇಲ್ಲ ಎಂದು ಫಲಕ್ ಅಳಲು ತೋಡಿಕೊಂಡಿದ್ದಾರೆ. ಪ್ರಿಯಾ (38) ಅವರು ಈ ಬಗ್ಗೆ ಮಾತನಾಡಿದ್ದು, ಮಕ್ಕಳ ಮತ್ತು ನಮ್ಮ ಭವಿಷ್ಯಗಳು ಈಗ ಮಂಕಾಗಿವೆ ಎಂದು ಹೇಳಿದ್ದಾರೆ.
ಇದನ್ನು ಓದಿ: ‘ಒಂದು ರಾಷ್ಟ್ರ, ಒಂದು ಚುನಾವಣೆ’: ಕೇಂದ್ರದ ಉತ್ತರದಲ್ಲಿ ಸ್ಪಷ್ಟನೆ ಇಲ್ಲ!