ಗುಜರಾತ್ನ ವಡೋದರಾ ಜಿಲ್ಲೆಯ ಮಹಿಸಗರ್ ಹೋಟೆಲ್ ಸಿಬ್ಬಂದಿಯಿಂದ ಜಾತಿ ನಿಂದನೆ ಹಲ್ಲೆಗೊಳಗಾದ ದಲಿತ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದನ್ನು ಕೊಲೆ ಎಂದು ಕರೆದಿರುವ ಶಾಸಕ, ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
ಸವರ್ಣೀಯ ಜಾತಿ ಹೋಟೆಲ್ ಮಾಲೀಕ ಮತ್ತು ಸಿಬ್ಬಂದಿ ಕ್ಷುಲ್ಲಕ ಜಗಳದ ವಿಷಯಕ್ಕೆ ದಲಿತ ಸಮುದಾಯದ ರಾಜು ವಂಕರ್ ಎಂಬುವವರ ಮೇಲೆ ಜಾತಿ ನಿಂದನ ಮಾಡಿ, ಮನಬಂದಂತೆ ಥಳಿಸಿದ್ದಾರೆ. ಗಾಯಗೊಂಡ ಅವರನ್ನು ವಡೋದರ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಆಟೋ ಚಾಲಕರಾದ ರಾಜು ವಂಕರ್ ಹೋಟೆಲ್ಗೆ ಊಟ ಮಾಡಿಲು ಹೋಗಿದ್ದರು. ಅಲ್ಲದೇ ಊಟ ಪಾರ್ಸಲ್ ಸರಿಯಾಗಿ ಮಾಡಿಲ್ಲ, ಬೇಕಾಬಿಟ್ಟಿಯಾಗಿ ಮಾಡಲಾಗಿದೆ ಎಂದು ಪ್ರಶ್ನಿಸಿದ್ದಕ್ಕೆ ಹೋಟೆಲ್ ಮಾಲೀಕ ಸೇರಿ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಜಾತಿ ಹೆಸರಿಡಿದು ನಿಂದಿಸಲಾಗಿತ್ತು ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಇಬ್ಬರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323, 504, 506 (2) ಮತ್ತು 114 ಅಡಿಯಲ್ಲಿ ಮತ್ತು ದಲಿತ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ವಂಕರ್ ಸಾವಿನ ನಂತರ, ಪೊಲೀಸರು ಕೊಲೆಗೆ ಸಂಬಂಧಿಸಿದ ಐಪಿಸಿ ಸೆಕ್ಷನ್ 302 ಅನ್ನು ಸೇರಿಸಿದ್ದಾರೆ ಎಂದು ವರದಿಯಾಗಿದೆ.
“ಜಾತಿವಾದಿ ಗೂಂಡಾಗಳು” ಹಲ್ಲೆ ನಡೆಸಿದ್ದರಿಂದ ರಾಜು ವಂಕರ್ ಯಕೃತ್ತು ಹಾನಿಗೊಳಗಾಗಿ ಮೃತಪಟ್ಟಿದ್ದಾರೆ. ಗುಜರಾತ್ನಲ್ಲಿ ಜನರಿಗೆ ಕಾನೂನಿನ ಭಯವಿಲ್ಲ ಮತ್ತು ದಲಿತರ ಸ್ಥಿತಿ ಹದಗೆಡುತ್ತಿದೆ ಎಂಬುದನ್ನು ಈ ಕಥೆಗಳು ಸ್ಪಷ್ಟವಾಗಿ ತೋರಿಸುತ್ತವೆ. ಕೂಡಲೇ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಬೇಕು, ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಶಾಸಕ ಜಿಗ್ನೇಶ್ ಮೇವಾನಿ ಆಗ್ರಹಿಸಿದ್ದಾರೆ.
कुछ दिनों पहले गुजरात के पाटन में जातिवादी गुंडों द्वारा एक दलित युवक का अंगूठा काटा गया और अब महीसागर ज़िले में दाल-बाटी खाने गए एक युवक को इतना पीटा गया कि उसकी लीवर फटने से मौत हुई।
यह किस्से साफ़ दर्शाते है कि गुजरात में लोगों को कानून का कोई डर नहीं हैं और दलितों की स्तिथि… pic.twitter.com/lcxycvDIUx
— Jignesh Mevani (@jigneshmevani80) June 10, 2023
ಕಳೆದ ವಾರವಷ್ಟೇ ಕ್ರಿಕೆಟ್ ಆಡುತ್ತಿದ್ದಾಗ ದಲಿತ ಬಾಲಕ ಚೆಂಡನ್ನು ಮುಟ್ಟಿದ ವಿಚಾರವಾಗಿ ಜಗಳವಾಗಿ ದಲಿತ ವ್ಯಕ್ತಿಯೊಬ್ಬರ ಹೆಬ್ಬರಳನ್ನೇ ಕತ್ತರಿಸಿರುವ ಘಟನೆ ಗುಜರಾತ್ನ ಪಟಾನ್ ಜಿಲ್ಲೆಯಲ್ಲಿ ನಡೆದಿತ್ತು. ಆ ನೋವು ಮಾಸುವ ಮುನ್ನವೇ ಮತ್ತೊಂದು ದಲಿತ ದೌರ್ಜನ್ಯ ಪ್ರಕರಣ ವರದಿಯಾಗಿದೆ.
ಇದನ್ನೂ ಓದಿ: ಗುಜರಾತ್: ದಲಿತ ಬಾಲಕ ಕ್ರಿಕೆಟ್ ಬಾಲ್ ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯ ಹೆಬ್ಬೆರಳನ್ನೇ ಕತ್ತರಿಸಿದ್ರು…