ಶಿವಮೊಗ್ಗ ಜಿಲ್ಲೆ ಸಾಗರದಲ್ಲಿರುವ ಖಾಸಗಿ ವಸತಿ ಶಾಲೆಯೊಂದರಲ್ಲಿ 13 ವರ್ಷದ ದಲಿತ ಬಾಲಕಿ ಅನುಮಾನಾಸ್ಪದ ಸಾವನ್ನಪ್ಪಿದ್ದು, ಶಾಲೆಯ ಮುಖ್ಯಸ್ಥನ ವಿರುದ್ಧ ಗುರುತರವಾದ ಆರೋಪ ಬಂದಿದೆ.
“ಬಲವಂತವಾಗಿ ಎರಡು ಬಕೆಟ್ ನೀರು ಕುಡಿಸಿದ್ದರಿಂದ ಬಾಲಕಿ ಸಾವನ್ನಪ್ಪಿದ್ದಾಳೆ” ಎಂಬ ದೂರುಗಳು ವ್ಯಕ್ತವಾಗಿವೆ.
ಸೊರಬ ತಾಲ್ಲೂಕು ಶಿವಪುರ ಗ್ರಾಮದ ಕಡುಬಡ ದಲಿತ ಕುಟುಂಬದ ತೇಜಸ್ವಿನಿಯವರನ್ನು ಸಾಗರದ ವನಶ್ರೀ ಎಂಬ ವಸತಿ ಶಾಲೆಗೆ ಐದು ದಿನಗಳ ಹಿಂದೆ ಸೇರಿಸಲಾಗಿತ್ತು. ವನಶ್ರೀ ಶಾಲೆ ನಡೆಸುವ ಎಚ್.ಪಿ. ಮಂಜಪ್ಪ ಬಲವಂತವಾಗಿ ನೀರು ಕುಡಿಸಿದ್ದರು ಎಂದು ಸ್ಥಳದಲ್ಲಿದ್ದ ವಿದ್ಯಾರ್ಥಿಗಳು ಹೇಳುತ್ತಿರುವುದಾಗಿ ವರದಿಯಾಗಿದೆ. ಮಂಜಪ್ಪ ಅವರು ಆರ್ಎಸ್ಎಸ್ ಹಿನ್ನೆಲೆಯವರೆಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.
ಈ ಕುರಿತು ವರದಿ ಮಾಡಿರುವ ‘ವಿಜಯ ಕರ್ನಾಟಕ’ ಪತ್ರಿಕೆಯು, ಸಾವಿಗೀಡಾದ ಬಾಲಕಿಯ ಅಣ್ಣನ ಹೇಳಿಕೆಯನ್ನು ದಾಖಲಿಸಿದೆ. “ಬುಧವಾರ ರಾತ್ರಿ ವಸತಿ ಶಾಲೆಯಲ್ಲಿದ್ದವರು ತಮ್ಮ ಕುಟುಂಬದವರೊಂದಿಗೆ ಮಾತನಾಡಿದಾಗ ಹೇಳಿದ್ದೇ ಬೇರೆ. ಶಾಲೆಯಲ್ಲಿ ಯೋಗಾಸನ ಮಾಡಿಸಿದ್ದರಿಂದ ತೇಜಸ್ವಿನಿ ಕಾಲು ನೋವಾಗಿದೆ. ಇದಕ್ಕೆ ಮುಲಾಮು ಹಚ್ಚಿದ್ದು, ಗುಣಮುಖರಾಗುತ್ತಾರೆ ಎಂದು ಮಂಜಪ್ಪ ತಿಳಿಸಿದ್ದರು. ಗುರುವಾರ ಘಟನೆ ನಡೆದ ಬಳಿಕ ಮಕ್ಕಳೊಂದಿಗೆ ಮಾತನಾಡಿದಾಗ, ‘ನಾನು ನೀರು ಕುಡಿಸಿಯೇ ಇದನ್ನು ಪರಿಹರಿಸುತ್ತೇನೆ’ ಎಂದು ಮಂಜಪ್ಪ ಅವರು ಕುಡಿಯಲು ಲೀಟರ್ಗಟ್ಟಲೆ ನೀರು ಕೊಟ್ಟಿದ್ದಾರೆ. ಕಾಲಿಗೆ ಬಿದ್ದು ಪೋಷಕರೊಂದಿಗೆ ಮಾತನಾಡಲು ಕೇಳಿಕೊಂಡರೂ ಅವರು ಒಪ್ಪಿಲ್ಲ ಎಂಬುದು ತಿಳಿಯಿತು” ಎಂದು ನೋವು ತೋಡಿಕೊಂಡಿದ್ದಾರೆ.
“ಬಾಲಕಿಯ ಸಾವಿಗೆ ಕಾರಣವೇನು? ತಾಸುಗಟ್ಟಲೆ ಬಾಲಕಿಯನ್ನು ಕೂಡಿಹಾಕಲಾಗಿತ್ತು. ಯಾಕೆ ಈ ಭಯಾನಕ ಕೃತ್ಯ ಎಸಗಲಾಯಿತು? ಸತ್ಯ ಹೊರಗೆ ಬರಬೇಕು” ಎಂದು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ.
13 ವರ್ಷದ ತೇಜಸ್ವಿನಿ 8ನೇ ಕ್ಲಾಸ್ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ವಸತಿ ಶಾಲೆಯಲ್ಲಿ ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ವಿದ್ಯಾರ್ಥಿನಿಯು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾಳೆಂದು ಪೋಷಕರು, ಮೃತಳ ಸಂಬಂಧಿಗಳು ತಿಳಿಸಿದ್ದಾರೆ.
ಖಾಸಗಿ ವಸತಿ ಶಾಲೆಯ ಸಿಬ್ಬಂದಿ ಕೂಡಲೇ ಸಾಗರ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿದ್ದರು ಎಂದು ಹೇಳಲಾಗುತ್ತಿದೆ. ಆಸ್ಪತ್ರೆಗೆ ದಾಖಲಿಸುವ ಮೊದಲೇ ವಿದ್ಯಾರ್ಥಿನಿಯು ಮೃತಪಟ್ಟಿರುವ ಕುರಿತು ವೈದ್ಯರು ದೃಢಪಡಿಸಿದ್ದಾರೆ.
“ಆರೋಗ್ಯವಾಗಿದ್ದ ಮಗಳು, ವಸತಿ ಶಾಲೆಗೆ ಹೋದ ಕೆಲವೇ ದಿನದಲ್ಲಿ ಅನಾರೋಗ್ಯಕ್ಕೊಳಗಾಗಿದ್ದು ಹೇಗೆ? ಈ ಕುರಿತು ವಸತಿ ಶಾಲೆಯವರು ಯಾವುದೇ ಮಾಹಿತಿಯನ್ನು ಪೋಷಕರಿಗೆ ಕೊಟ್ಟಿರಲಿಲ್ಲ. ಈ ಹಿನ್ನಲೆಯಲ್ಲಿ ಮೃತಳ ಶವವನ್ನು ಮರಣೋತ್ತರ ಪರೀಕ್ಷೆಗೆ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಮೃತಳ ಶವವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ. ಹಾಸ್ಟೆಲ್ನಲ್ಲಿರುವ ಅವ್ಯವಸ್ಥೆಯಿಂದಲೇ ವಿದ್ಯಾರ್ಥಿನಿಯು ಮೃತಪಟ್ಟಿದ್ದಾಳೆ” ಎಂದು ಕುಟುಂಬಸ್ಥರು ದೂರಿದ್ದಾರೆ.
ಇದನ್ನೂ ಓದಿರಿ: ಬಿಕ್ಕಟ್ಟಿನಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ; ಚರ್ಚೆಗೆ ಗ್ರಾಸವಾದ ಸಿಎಂ ಶಿಂಧೆ ಪುತ್ರನ ರಾಜೀನಾಮೆ ಹೇಳಿಕೆ
ಸಾಗರ ತಾಲೂಕಿನ ವನಶ್ರೀ ವಸತಿ ಶಾಲೆಯಲ್ಲಿ ಸ್ಥಳೀಯ ಬಡ ಹೆಣ್ಣು ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಇಲ್ಲಿ ಆರೋಗ್ಯ ಸಮಸ್ಯೆ ಆಗಿದ್ದರೂ, ಹಾಸ್ಟೇಲ್ನಲ್ಲಿರುವ ಸಿಬ್ಬಂದಿ ಮತ್ತು ವಾರ್ಡನ್ಗಳು ನಿರ್ಲಕ್ಷ್ಯ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿನಿಯ ಸಾವು ಹಾಸ್ಟೇಲ್ನಲ್ಲೇ ಆಗಿದೆ ಎನ್ನುವುದು ಕುಟುಂಬಸ್ಥರ ವಾದವಾಗಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿಯ ಅನುಮಾನಸ್ಪದ ಸಾವು ಕುರಿತು ಕೇಸ್ ದಾಖಲಾಗಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ವಸತಿ ಶಾಲೆ ಮುಖ್ಯಸ್ಥ ಎಚ್.ಪಿ. ಮಂಜಪ್ಪ, “ಭಾನುವಾರ 8ನೇ ತರಗತಿಗೆ ತೇಜಸ್ವಿನಿ ಅವರನ್ನು ದಾಖಲಿಸಿಕೊಳ್ಳಲಾಗಿತ್ತು. ಇವರ ಜತೆ ಇವರದೇ ಕುಟುಂಬದ 7 ಮಕ್ಕಳನ್ನು ಸೇರಿಸಿಕೊಳ್ಳಲಾಗಿತ್ತು. ಬುಧವಾರ ರಾತ್ರಿ ವಿದ್ಯಾರ್ಥಿನಿ ಸುಸ್ತು ಎಂದು ಹೇಳಿದ್ದಾಳೆ. ಕೂಡಲೇ ಶಾಲೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಗುರುವಾರ ಬೆಳಗ್ಗೆ ತೇಜಸ್ವಿನಿ ರೂಮಿನಲ್ಲಿ ವಾಂತಿ ಮಾಡಿಕೊಂಡಿದ್ದಾಳೆ. ಸುದ್ದಿ ತಿಳಿಯುತ್ತಿದ್ದಂತೆ ಆಕೆಯನ್ನು ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಯಿತು. ವಿದ್ಯಾರ್ಥಿನಿ ಶಾಲೆಗೆ ಬಂದು ಐದು ದಿನವಾಗಿದ್ದರಿಂದ ಹೆಚ್ಚಿನ ಮಾಹಿತಿ ನಮಗಿಲ್ಲ. ನಮ್ಮ ವಸತಿ ಶಾಲೆಯಲ್ಲಿ ಯಾವುದೇ ಲೋಪದೋಷಗಳಾಗಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸತ್ಯ ತಿಳಿಯಲಿದೆ” ಎಂದು ತಿಳಿಸಿದ್ದಾರೆ.
ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಸೂಕ್ತ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.