ಗುಜರಾತ್ ವಿಧಾನಸಭೆಯ ಎರಡನೇ ಹಂತದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ನಾಮಪತ್ರ ಸಲ್ಲಿಸಿದ ಕಾರಣಕ್ಕಾಗಿ ಬಿಜೆಪಿಯು ಮಂಗಳವಾರ 12 ಬಂಡಾಯ ನಾಯಕರನ್ನು ಅಮಾನತುಗೊಳಿಸಿದೆ ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಡಿಸೆಂಬರ್ 1 ರಂದು ನಡೆಯಲಿರುವ ಮೊದಲ ಹಂತದ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಕ್ಕಾಗಿ ಇಬ್ಬರು ಮಾಜಿ ಶಾಸಕರು ಸೇರಿದಂತೆ ಏಳು ಮುಖಂಡರನ್ನು ಬಿಜೆಪಿಯಿಂದ ಅಮಾನತುಗೊಳಿಸಿದ ಎರಡು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.
ಬಿಜೆಪಿ ಟಿಕೆಟ್ ನೀಡಲು ನಿರಾಕರಿಸಿದ ನಂತರ 12 ನಾಯಕರು ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಶಾಸಕರನ್ನು ಆರು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸಿ.ಆರ್.ಪಾಟೀಲ್ ಹೇಳಿದ್ದಾರೆ.
ಪದ್ರಾ ವಿಧಾನಸಭಾ ಕ್ಷೇತ್ರದಿಂದ ದಿನೇಶ್ ಪಟೇಲ್, ವಘೋಡಿಯಾದಿಂದ ಮಧು ಶ್ರೀವಾಸ್ತವ್ ಮತ್ತು ಸಾವ್ಲಿಯಿಂದ ಕುಲದೀಪ್ ಸಿಂಗ್ ರೌಲ್ಜಿ ಅವರನ್ನು ಪಕ್ಷ ಅಮಾನತುಗೊಳಿಸಿದೆ.
ರೌಲ್ಜಿ ಅಕ್ಟೋಬರ್ನಲ್ಲಿ ಕಾಂಗ್ರೆಸ್ಗೆ ಸೇರಿದ್ದರು. ಈಗ ಸಾವ್ಲಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಅವರು ಎರಡು ಅವಧಿಗೆ ಶಾಸಕರಾಗಿದ್ದರು. ಬಿಜೆಪಿ ಅಭ್ಯರ್ಥಿ ಕೇತನ್ ಇನಾಮದಾರ್ ವಿರುದ್ಧ ಚುನಾವಣೆಯಲ್ಲಿ ಈಗ ಸ್ಪರ್ಧಿಸಿದ್ದಾರೆ. ಎರಡು ಅವಧಿಗೆ ಶಾಸಕರಾಗಿದ್ದ ದಿನೇಶ್ ಪಟೇಲ್ ಮತ್ತು ಆರು ಅವಧಿಗೆ ಶಾಸಕರಾಗಿದ್ದ ಮಧು ಶ್ರೀವಾಸ್ತವ್ ಅವರು ಈಗಾಗಲೇ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಪಂಚಮಹಲ್ ಜಿಲ್ಲೆಯ ಸೆಹ್ರಾದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಖಾತು ಪಾಗಿ ಅವರನ್ನು ಬಿಜೆಪಿ ಅಮಾನತುಗೊಳಿಸಿದೆ. ಮಹಿಸಾಗರದ ಲುನವಾಡದಲ್ಲಿ ಬಿಜೆಪಿಯು ಎಸ್ಎಂ ಖಾಂತ್ ಮತ್ತು ಜೆಪಿ ಪಟೇಲ್ ಅವರನ್ನು ಪಕ್ಷದಿಂದ ಹೊರಹಾಕಿದೆ.
2022ರ ಗುಜರಾತ್ ಚುನಾವಣೆಯು 2017ರ ಚುನಾವಣೆಗಿಂತ ಬಹಳ ಭಿನ್ನವಾಗಿದೆ. ಮೀಸಲಾತಿಗಾಗಿ ಒತ್ತಾಯಿಸಿ ನಡೆದ ಪಾಟಿದಾರ್ ಆಂದೋಲನವು 2017ರ ಚುನಾವಣೆಯಲ್ಲಿ ಗಮನ ಸೆಳೆದಿತ್ತು. ಆ ಸಮಯದಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಕಾಂಗ್ರೆಸ್ ಸವಾಲಾಗಿ ಪರಿಣಮಿಸಿತು. ಗ್ರಾಮೀಣ ಸಮಸ್ಯೆಗಳನ್ನು ದೊಡ್ಡ ಚುನಾವಣಾ ವಿಷಯವಾಗಿ ಕಾಂಗ್ರೆಸ್ ಮುಂದುಮಾಡಿತು. ಗುಜರಾತ್ನಲ್ಲಿ ಬಿಜೆಪಿ ಸರಳ ಬಹುಮತವನ್ನು ಗಳಿಸುವಲ್ಲಿ ಯಶಸ್ವಿಯಾದರೆ, ಕಾಂಗ್ರೆಸ್ 1985ರಿಂದ ಸೀಟು ಹಂಚಿಕೆಯಲ್ಲಿ ರಾಜ್ಯದಲ್ಲಿ ತನ್ನ ಅತ್ಯುತ್ತಮ ಸಾಧನೆಯನ್ನು ದಾಖಲಿಸಿದೆ. ಕಾಂಗ್ರೆಸ್ನ ಗೆಲುವಿನ ಸಂಖ್ಯೆ ಹೆಚ್ಚಾಗಲು ಗ್ರಾಮೀಣ ಪ್ರದೇಶದಲ್ಲಿ ಮೇಲುಗೈ ಸಾಧಿಸಿರುವುದು ಕಾರಣವಾಗಿದೆ. ಈ ಚುನಾವಣೆಯಲ್ಲಿ ಆಮ್ಆದ್ಮಿ ಪಕ್ಷವೂ ಸ್ಪರ್ಧಿಸಿರುವುದರಿಂದ ನಗರ ಭಾಗದಲ್ಲಿ ಬಿಜೆಪಿಯ ಮತಗಳನ್ನು ಎಎಪಿ ತನ್ನತ್ತ ಸೆಳೆಯುವ ಸಾಧ್ಯತೆಗಳಿವೆ ಎಂಬ ವಿಶ್ಲೇಷಣೆಗಳು ಬರುತ್ತಿವೆ.