ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನೆ ಮಧ್ಯೆ ಮುರಿದು ಬಿದ್ದ ಮೈತ್ರಿ, ಶಿವಸೇನೆ, ಎನ್ಸಿಪಿ, ಕಾಂಗ್ರೆಸ್ ನಡುವೆ ಮೂಡದ ಹೊಂದಾಣಿಕೆಯಿಂದಾಗಿ, ಕೊನೆಗೂ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ. ರಾಜ್ಯದಲ್ಲಿ ಸ್ಥಿರ ಸರ್ಕಾರ ರಚನೆಗೆ ಭಾರೀ ಕಸರತ್ತು ನಡೆಸಿದ ಶಿವಸೇನೆಗೆ ಭಾರಿ ಮುಖಭಂಗವಾಗಿದೆ. ಆದರೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಇನ್ನೂ ತಮ್ಮ ಪ್ರಯತ್ನವನ್ನು ಕೈಬಿಟ್ಟಿಲ್ಲ.
ರಾಜ್ಯದಲ್ಲಿ ಸ್ಥಿರ ಸರ್ಕಾರ ರಚನೆ ಮತ್ತು ಸಿಎಂ ಗಾದಿ ಅಲಂಕರಿಸಲು ರಣತಂತ್ರ ರೂಪಿಸಿರುವ ಶಿವಸೇನೆ, ಎನ್ಸಿಪಿಯ ಶರದ್ ಪವಾರ್ ಅವರಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಮತ್ತೆ ಮನವಿ ಮಾಡಿದ್ದಾರೆ. ಎನ್ಸಿಪಿ ಹಲವು ಷರತ್ತುಗಳನ್ನು ಮುಂದಿರಿಸಿದ್ದು, ತಲಾ ಎರಡೂವರೆ ವರ್ಷ ಸಿಎಂ ಸ್ಥಾನ ಹಂಚಿಕೆ ಬಗ್ಗೆಯೂ ಷರತ್ತು ವಿಧಿಸಬಹುದು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಸುಪ್ರೀಂ ತೀರ್ಪು ಬೆನ್ನಲ್ಲೇ ಅನರ್ಹ ಶಾಸಕರ ಜೊತೆಗೆ ಸಭೆಗೆ ಮುಂದಾದ ಸಿಎಂ ಯಡಿಯೂರಪ್ಪ
ಶಿವಸೇನೆ 56 ಸ್ಥಾನಗಳನ್ನು ಎನ್ಸಿಪಿ 54 ಸ್ಥಾನಗಳನ್ನು ಗೆದ್ದಿದೆ. ಎರಡೂ ಪಕ್ಷಗಳ ಮಧ್ಯೆ ಕೇವಲ ಎರಡು ಸ್ಥಾನಗಳ ಅಂತರವಿದೆ. ಹೀಗಾಗಿ ಸಿಎಂ ಹುದ್ದೆಗೆ ಎನ್ಸಿಪಿ ಬೇಡಿಕೆಯಿಡಬಹುದು ಎಂದು ಮೂಲಗಳು ತಿಳಿಸಿವೆ. ಇನ್ನು ಶಿವಸೇನೆ, ಕಾಂಗ್ರೆಸ್, ಎನ್ಸಿಪಿ ಪಕ್ಷಗಳನ್ಉ ಸೇರಿಸಿದರೆ ಒಟ್ಟು 154 ಅಂಕಿ ಬರುತ್ತದೆ. ಸರ್ಕಾರ ರಚನೆಗೆ ಬೇಕಿರುವ ಸ್ಥಾನ 145.
ಇನ್ನು ಶಿವಸೇನೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿರುವ ಪಕ್ಷಗಳ ಜತೆ ಸರ್ಕಾರ ರಚಿಸಲು ಹೊರಟಿದೆ ಇದು ಅಸ್ಥಿರ ಒಕ್ಕೂಟಕ್ಕೆ ಕಾರಣವಾಗಬಹುದು ಎಂಬ ಪ್ರಶ್ನೆಗೆ ಉದ್ಧವ್ ಠಾಕ್ರೆ ಉತ್ತರಿಸಿದ್ದಾರೆ. ’ನಾವು ವಿಭಿನ್ನ ಸಿದ್ಧಾಂತಗಳಿಂದ ಬಂದಿದ್ದೇವೆ. ಆದರೆ ನಾವು ಒಟ್ಟಿಗೆ ಸರ್ಕಾರ ರಚಿಸಿ, ಮುನ್ನಡೆಯಲು ಯಾವುದೇ ಸಮಸ್ಯೆಯಿಲ್ಲ. ನಾವು ಒಂದಾಗಿ ಮುಂದುವರೆಯಬಹುದು. ಈಗ ಎನ್ಸಿಪಿ ಮತ್ತು ಕಾಂಗ್ರೆಸ್ ಜತೆ ಹೋಗುವ ಸಮಯ ಬಂದಿದೆ. ಅವರೊಂದಿಗೆ ನಾವು ಹೆಚ್ಚಿನ ಮಾತುಕತೆ ನಡೆಸುತ್ತೇವೆ’ ಎಂದು ಹೇಳಿದ್ದಾರೆ.
ಇನ್ನು ಶಿವಸೇನೆ ನೀಡಿದ ಆಫರ್ ಹಾಗೂ ಮನವಿ ಬಗ್ಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನಿರ್ಧಾರ ತೆಗೆದುಕೊಳ್ಳುವಲ್ಲಿ ತಡ ಮಾಡಿದ್ದಾರೆ. ಭಿನ್ನ ಸಿದ್ಧಾಂತ ಹೊಂದಿರುವ ಶಿವಸೇನೆಯೊಂದಿಗೆ ಕೈ ಜೋಡಿಸುವುದು ಅಷ್ಟು ಸುಲಭವಲ್ಲ ಎಂಬುದನ್ನು ಹೇಳಿದ್ದಾರೆ.