ಗುಜರಾತ್ ಸರಕಾರವು ಶಾಲಾ ಮಕ್ಕಳಿಗೆ ‘ಭಗವದ್ಗೀತೆ’ ಕುರಿತು ಕಲಿಸಲು ಪೂರಕ ಪಠ್ಯಪುಸ್ತಕವನ್ನು ಬಿಡುಗಡೆ ಮಾಡಿದ್ದು, ಮುಂದಿನ ವರ್ಷದಿಂದಲೇ 6 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ‘ಭಗವದ್ಗೀತೆ’ ಬೋಧಿಸುವುದಾಗಿ ಹೇಳಿದೆ.
ಗುಜರಾತ್ನಲ್ಲಿ ಮುಂಬರುವ ಶೈಕ್ಷಣಿಕ ವರ್ಷದಂದಲೇ 6 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಪಾಠಗಳನ್ನು ಕಲಿಸಲಾಗುತ್ತಿದೆ. ಗೀತಾ ಜಯಂತಿಯಂದು ಈ ಘೋಷಣೆ ಮಾಡಲಾಗಿದೆ. ಗುಜರಾತ್ನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಭಗವದ್ಗೀತೆಯಲ್ಲಿರುವ ಆಧ್ಯಾತ್ಮಿಕ ತತ್ವಗಳನ್ನು ಪೂರಕ ಪಠ್ಯಪುಸ್ತಕದ ಮೂಲಕ ಬೋಧನಾ ಕಾರ್ಯ ನಡೆಯಲಿದೆ.
ಗುಜರಾತ್ನ ಶಿಕ್ಷಣ ರಾಜ್ಯ ಸಚಿವ ಪ್ರಫುಲ್ ಪನ್ಶೇರಿಯಾ ಈ ಕುರಿತು ಮಾಹಿತಿ ನೀಡಿದ್ದು, 6ರಿಂದ 8ನೇ ತರಗತಿಯ ಪಠ್ಯಕ್ರಮದಲ್ಲಿ ಭಗವದ್ಗೀತೆಯಿಂದ ಆಯ್ದ ಆಧ್ಯಾತ್ಮಿಕ ತತ್ವಗಳು ಮತ್ತು ಮೌಲ್ಯಗಳನ್ನು ಪೂರಕ ಪಠ್ಯಪುಸ್ತಕವಾಗಿ ಸೇರಿಸಲು ರಾಜ್ಯ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ನಿರ್ಧಾರವು 3 ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಜಾರಿಗೆ ತಂದ ರಾಷ್ಟ್ರೀಯ ಶಿಕ್ಷಣ ನೀತಿಯ ತತ್ವಗಳೊಂದಿಗೆ ಹೊಂದಿಕೆಯಾಗುತ್ತದೆ ಎಂದು ಹೇಳಿದ್ದಾರೆ.
ಈ ನಿರ್ಧಾರಕ್ಕಾಗಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಕೃತಜ್ಞತೆಗಳು. ಈ ಮೂಲಕ ವಿದ್ಯಾರ್ಥಿಗಳಿಗೆ ಭಾರತದ ಶ್ರೀಮಂತ, ವೈವಿಧ್ಯಮಯ, ಪ್ರಾಚೀನ ಸಂಸ್ಕೃತಿ ಮತ್ತು ಸಂಪ್ರದಾಯಗಳ ಜ್ಞಾನ ಸಿಗಲಿದೆ. ಪೂಜ್ಯ ಗ್ರಂಥವನ್ನು ಆಧರಿಸಿದ ಪೂರಕ ಪಠ್ಯಪುಸ್ತಕವು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ತುಂಬುತ್ತದೆ. 6 ರಿಂದ 8ನೇ ತರಗತಿಗಳಿಗೆ ಮೊದಲ ಭಾಗವನ್ನು ಶೀಘ್ರದಲ್ಲೇ ದೇಶಾದ್ಯಂತ ಶಾಲೆಗಳಿಗೆ ವಿತರಿಸಲಾಗುವುದು ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020ರಡಿಯಲ್ಲಿ ತೆಗೆದುಕೊಂಡ ಈ ನಿರ್ಧಾರವು ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪನ್ಶೇರಿಯಾ ಹೇಳಿದರು.
ಮಾ.2022ರಲ್ಲಿ ಗುಜರಾತ್ ಸರ್ಕಾರವು ಭಗವದ್ಗೀತೆಯನ್ನು 6ರಿಂದ 12ನೇ ತರಗತಿಗಳಿಗೆ ರಾಜ್ಯದಾದ್ಯಂತ ಶಾಲಾ ಪಠ್ಯಕ್ರಮದಲ್ಲಿ ಕಲಿಸಲಿದೆ ಎಂದು ಗುಜರಾತ್ ಸರಕಾರವು ವಿಧಾನಸಭೆಯಲ್ಲಿ ಹೇಳಿತ್ತು.
ಈ ಬಗ್ಗೆ ಮಾತನಾಡಿದ ಗುಜರಾತ್ ಸರ್ಕಾರದ ಬುಡಕಟ್ಟು ಅಭಿವೃದ್ಧಿ, ಪ್ರಾಥಮಿಕ, ಮಾಧ್ಯಮಿಕ ಮತ್ತು ವಯಸ್ಕ ಶಿಕ್ಷಣದ ಸಚಿವ ಕುಬೇರ್ ದಿಂಡೋರ್, ರಾಷ್ಟ್ರೀಯ ಶಿಕ್ಷಣ ನೀತಿ ಅನುಸಾರವಾಗಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ನೇತೃತ್ವದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಗುಜರಾತ್ ಶಿಕ್ಷಣ ಇಲಾಖೆಯು ಸಂಸ್ಕೃತ ಶ್ಲೋಕಗಳು, ಭಗವದ್ಗೀತೆಯ ಗುಜರಾತ್ನಲ್ಲಿ ಭಾಷಾಂತರವನ್ನು ಹೊಂದಿರುವ ಪೂರಕ ಪಠ್ಯಪುಸ್ತಕವನ್ನು ಬಿಡುಗಡೆ ಮಾಡಿದೆ. ಜೀವನ ಮೌಲ್ಯಗಳ ಪಾಠಗಳನ್ನು ಕಲಿಸುವ ಈ ಪುಸ್ತಕವನ್ನು ಅಧ್ಯಯನದ ಅನುಕ್ರಮದಲ್ಲಿ ಸೇರಿಸುವ ಮೂಲಕ ಮಕ್ಕಳಲ್ಲಿ ಜೀವನದ ಮೌಲ್ಯಗಳು ಮತ್ತು ಕರ್ಮದ ತತ್ವಗಳನ್ನು ಬಲಪಡಿಸುವುದು ಗುರಿಯಾಗಿದೆ ಎಂದು ಅದು ಹೇಳಿದೆ. ಇಲಾಖೆಯು 12ನೇ ತರಗತಿಯವರೆಗೆ ಭಗವದ್ಗೀತೆ ಪಾಠಗಳನ್ನು ಸೇರಿಸಲು ಸಿದ್ದತೆ ನಡೆಸುತ್ತಿದೆ.
ಇದನ್ನು ಓದಿ: ಕೇರಳ: ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆ ವೇಳೆ ಉದ್ವಿಗ್ನ: ಪೊಲೀಸರಿಂದ ಅಶ್ರುವಾಯು ಪ್ರಯೋಗ