ದುಡಿದ ದುಡಿಮೆಗೆ ಕೂಲಿ ಕೇಳಿ ಹಾಗೂ ಊರಿಗೆ ಹೋಗಲು ವ್ಯವಸ್ಥೆ ಮಾಡಬೇಕು ಎಂದು ಹೇಳಿ ವಲಸೆ ಕಾರ್ಮಿಕರು ಪ್ರತಿಭಟನೆ ನಡೆಸಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ.
ಗುಜರಾತಿನ ಸೂರತ್ನಲ್ಲಿ ಸಿಲುಕಿರುವ ನೂರಾರು ವಲಸೆ ಕಾರ್ಮಿಕರು ಶುಕ್ರವಾರ ರಾತ್ರಿ ಆಕ್ರೋಶಗೊಂಡು ಹಲವು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಅವರು ತಮ್ಮ ಊರಿಗೆ ಮರಳಲು ವ್ಯವಸ್ಥೆಗಳನ್ನು ಮಾಡಬೇಕು ಹಾಗೂ ದುಡಿಮೆಯ ಬಾಕಿ ಹಣವನ್ನು ನೀಡುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಸೂರತ್ ನಗರಕ್ಕೆ ಉದ್ಯೋಗ ಹರಸಿ ದೂರದ ಊರುಗಳಿಂದ ವಲಸೆ ಬಂದಿದ್ದ ಕಾರ್ಮಿಕರು ದೇಶದಾದ್ಯಂತ ಲಾಕ್ಡೌನ್ ವಿಧಿಸಿರುವ ಕಾರಣದಿಂದ ಕೂಲಿಯೂ ಇಲ್ಲದೆ, ತಮ್ಮೂರಿಗೂ ಹೋಗಲಾರದೆ ಕಂಗಾಲಾಗಿದ್ದರು. ಇಲ್ಲಿಯವರೆಗೆ ಕೂಡಿಟ್ಟಿದ್ದ ಅಲ್ಪಸ್ವಲ್ಪ ಹಣದಲ್ಲಿ ಜೀವನ ಸಾಗಿಸಿರುವ ಈ ಕಾರ್ಮಿಕರು, ಈಗ ಆಹಾರಕ್ಕೆ ಹಣವೂ ಇಲ್ಲದೆ, ಕೂಲಿಯೂ ಇಲ್ಲದೆ ಪರಿತಪಿಸುತ್ತಿದ್ದಾರೆ.
ಕಟ್ಟಡ ಕೆಲಸ, ಹಮಾಲಿ ಕೆಲಸ ಮಾಡಿಕೊಂಡಿದ್ದ ಕಾರ್ಮಿಕರು ತಾವು ಲಾಕ್ಡೌನ್ಗೂ ಮುನ್ನ ದುಡಿದಿದ್ದ ದುಡಿಮೆಗೆ ಕೆಲಸ ಮಾಡಿಸುವ ಮೇಸ್ತ್ರಿಗಳು ಕೂಲಿ ಕೊಡದೆ ಸತಾಯಿಸಿದ್ದು, ತಾವು ದುಡಿದಿರುವ ಕೆಲಸಕ್ಕೆ ಕೂಲಿ ಕೊಡುವಂತೆ ಹಾಗೂ ಅವರೆಲ್ಲರೂ ತಮ್ಮೂರಿಗೆ ಮರಳಿ ಹೋಗಲು ಅವಕಾಶ ನೀಡಬೇಕೆಂದು ಆಗ್ರಹಿಸಿ ನಗರದ ಹೊರ ವಲಯದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
Bad news coming in from Surat. Migrant workers in the city came out on the streets in huge numbers asking for their salaries and demanding permission to get back home. Torching of vegetable carts, stone pelting and lathicharging followed. Around 70 detained. pic.twitter.com/qjg2vAb2OR
— Asmita Nandy (@NandyAsmita) April 10, 2020
ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ಮುಂದಾದ ಸಂದರ್ಭದಲ್ಲಿ ಕಲ್ಲು ತೂರಾಟ, ಬೆಂಕಿ ಹಚ್ಚುವುದು ನಡೆದಿದೆ ಎನ್ನಲಾಗಿದೆ. ಪ್ರತಿಭಟನೆಯನ್ನು ಹತೋಟಿಗೆ ತಂದಿರುವ ಪೊಲೀಸರು ಹಿಂಸಾತ್ಮಕ ಪ್ರತಿಭಟನೆಯಲ್ಲಿ ತೊಡಗಿದ್ದಕ್ಕಾಗಿ 70 ಕ್ಕೂ ಹೆಚ್ಚು ಕಾರ್ಮಿಕರನ್ನು ಬಂಧಿಸಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ನಿರ್ಗತಿಕರಿಗೆ, ವಲಸೆ ಕಾರ್ಮಿಕರಿಗೆ ಅಗತ್ಯವಿರುವ ಸೌಲಭ್ಯವನ್ನು ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿರುವುದು ಕಾರ್ಮಿಕರ ಪ್ರತಿಭಟನೆಗೆ ಕಾರಣವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ.
ಗುಜರಾತ್ನಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 378 ಕ್ಕೆ ಏರಿಕೆಯಾಗಿದೆ. ಸೋಂಕಿನಿಂದಾಗಿ 19 ಜನರು ಸಾವಿಗೀಡಾಗಿದ್ದಾರೆ.