ಮದ್ಯ ನಿಷೇಧದ ಕುರಿತು ಚರ್ಚಿಸಲು ಮುಖ್ಯಮಂತ್ರಿಯವರು ಸಭೆ ಕರೆಯಬೇಕೆಂದು ಒತ್ತಾಯಿಸಿ ’ಮದ್ಯ ನಿಷೇಧ ಆಂದೋಲ’ದ ವತಿಯಿಂದ ನಡೆಯುತ್ತಿರುವ ಸತ್ಯಾಗ್ರಹದಲ್ಲಿ ಸ್ವಾತಂತ್ರ್ಯ ಸೇನಾನಿ ಎಚ್. ಎಸ್ ದೊರೆಸ್ವಾಮಿಯವರು ಭಾಗವಹಿಸಿ ಹೋರಾಟ ನಿರತ ಬಡ ಮಹಿಳೆಯರಿಗೆ ಬೆಂಬಲ ಸೂಚಿಸಿದ್ದಾರೆ.
ಪಾನಮುಕ್ತ ಕರ್ನಾಟಕ ಆಗಬೇಕು ಅಂತ ಈ ಹೆಣ್ಣುಮಕ್ಕಳು ಕಳೆದ ಬಾರಿ ಚಿತ್ರದುರ್ಗದಿಂದ ಬೆಂಗಳೂರಿಗೆ ಬಂದಿದ್ರು. ಆಗ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ರು. ಅವರು ಯಾಕೆ ಬಂದಿದ್ದಾರೆ ಏನು ಎತ್ತ ಅಂತ ಕೇಳಲೇ ಇಲ್ಲ. ಪಾಪ ಹೆಣ್ಣುಮಕ್ಕಳು ವಾಪಾಸ್ ಹೋದ್ರು. ಈಗ ಯಡಿಯೂರಪ್ಪ ಇದ್ದಾರೆ. ಹೆಣ್ಣುಮಕ್ಕಳು ಚಳವಳಿ ಮಾಡಲು ಬಂದಿಲ್ಲ, ಬಸಲಿಗೆ ಒಂದು ಸಭೆ ಮಾಡಲು ಬಂದಿದ್ದಾರೆ ಅದಕ್ಕೂ ಸಮಯ ಕೊಟ್ಟಿಲ್ಲ ಅಂದ್ರೆ ಹೇಗೆ? ಎಂದು ಶತಾಯುಷಿಗಳು ಬೇಸರ ವ್ಯಕ್ತಪಡಿಸಿದರು.
ಸತ್ಯಾಗ್ರಹಕ್ಕೆ ಪೋಲಿಸರೂ ಸ್ಥಳವೇ ಕೊಡಲ್ಲ ಅಂದ್ರೆ ಹೇಗೆ? ಮುಂದಿನ ದಿನಗಳಲ್ಲಿ ನೀವು ಹೀಗೆ ಮಾಡಿದ್ರೆ ನಮಗೆ ಬೇಕಾದ ಜಾಗದಲ್ಲಿ ಕೂತುಕೊಳ್ಳುತ್ತೇವೆ, ಬೇಕಾದ್ರೆ ಜೈಲಿಗೆ ಹಾಕಿ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳನ್ನೇ ಬೀದಿಪಾಲು ಮಾಡುತ್ತಿರೋದು ಸರಿ ಅಲ್ಲ. ನಾವು ಕಲ್ಲು, ದೊಣ್ಣೆ, ಬಾಂಬು ತಂದಿಲ್ಲ, ಬದಲಿಗೆ ಶಾಂತರೀತಿಯಿಂದ ಹೋರಾಟ ಮಾಡುತ್ತಿದ್ದೇವೆ ಎಂದರು.
ಇದನ್ನೂ ಓದಿ: ಮುಖ್ಯಮಂತ್ರಿಗಳೆ, ಮದ್ಯ ನಿಷೇಧಕ್ಕಾಗಿ ಸಭೆ ಕರೆಯಿರಿ: ನೂರಾರು ತಾಯಂದಿರ ಆಕ್ರಂದನ..
ಮದ್ಯ ನಿಷೇಧದ ಹೋರಾಟಕ್ಕೆ ಯಡಿಯೂರಪ್ಪ ಪೂರ್ಣ ಬೆಂಬಲ ಕೊಡ್ತೀವಿ ಅಂತ ಆಗ ಹೇಳಿದ್ರು. ಈಗ ಅವರ ಮಾತನ್ನೇ ಪುಷ್ಟಿ ಕೊಡೋಕೆ ಬಂದಿದ್ದೇವೆ. ಮದ್ಯ ನಿಷೇಧಕ್ಕೆ ಕೇಂದ್ರ ಸರ್ಕಾರ ಕೂಡ ಬೆಂಬಲಿಸಲಿದೆ. ಪೂರ್ಣಪ್ರತಿಬಂದಕ ಮಾಡೋದ್ರಿಂದ ರಾಜ್ಯ ಸರ್ಕಾರಕ್ಕೆ ಮೂರು ವರ್ಷಕ್ಕೆ ಆಗುವ ನಷ್ಟದ ಅರ್ಧ ಹಣ ಕೇಂದ್ರ ಕೊಡುತ್ತೆ ಅಂತ ಹೇಳಿದೆ. ಹಾಗಾಗಿ ರಾಜ್ಯ ಸರ್ಕಾರ ಮದ್ಯ ನಿಷೇಧ ಮಾಡಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿಗಳ ಕಛೇರಿ ಇಂದ ಸಭೆಗೆ ಇಂದೇ ನಮ್ಮನ್ನು ಕರಿಸುತ್ತಾರೆ ಅಂತ ನಂಬಿಕೆ ಇದೆ. ಏಕೆಂದರೆ ನಾವು ನಮ್ಮ ವಯಕ್ತಿಕ ವಿಚಾರ ಮಾತಾಡೋಕೆ ಬಂದಿಲ್ಲ. ಇದು ಸಾಮಾಜಿಕ ಪಿಡುಗು, ಇದನ್ನು ತೊಲಗಿಸಬೇಕು. ಅದಕ್ಕೆ ಸರ್ಕಾರದ, ಮುಖ್ಯಮಂತ್ರಿಗಳ ಜವಾಬ್ದಾರಿಯೂ ಇರುತ್ತದೆ ಎಂಬುದನ್ನು ಮರೆಯಬಾರದು ಎಂದಿದ್ದಾರೆ.
ಒಳ್ಳೆಯ ಸುದ್ದಿ ಬರುತ್ತಿದೆ. ಧನ್ಯವಾದಗಳು.
ಮೊದಲಿಗೆ, ಹೋರಾಟವಿರುವ ರಾಯಚೂರು ಕಡೆಯ ಊರುಗಳಲ್ಲಾದರೂ ಹೆಂಡಮಾರಾಟ ನಿಲ್ಲಿಸಲಿ.