ಉತ್ತರ ಪ್ರದೇಶದ ವೈದ್ಯ ಡಾ.ಕಫೀಲ್ ಖಾನ್ ಅವರನ್ನು ಅಕ್ರಮ ಬಂಧನದಿಂದ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಅವರ ತಾಯಿ ನುಝಟ್ ಪರ್ವೀನ್ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಿಚಾರಣೆ ನಡೆಸುತ್ತಿದ್ದು, ಇದಕ್ಕೆ ಉತ್ತರ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ದೀಪಕ್ ವರ್ಮಾ ನೇತೃತ್ವದ ನ್ಯಾಯಪೀಠವು, ಅರ್ಜಿಗೆ ಉತ್ತರ ಸಲ್ಲಿಸಲು ಹತ್ತು ದಿನಗಳ ಕಾಲಾವಕಾಶ ನೀಡಿದ್ದು, ಮುಂದಿನ ವಿಚಾರಣೆ ಆಗಸ್ಟ್ 19, 2020 ರೊಳಗೆ ಉತ್ತರ ನೀಡಬೇಕೆಂದು ನಿರ್ದೇಶಿಸಿದೆ.
ಸಿಎಎ ವಿರೋಧಿ ಹೋರಾಟಗಳು ಉತ್ತುಂಗದಲ್ಲಿದ್ದಾಗ 2019 ರ ಡಿಸೆಂಬರ್ 13 ರಂದು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಡಾ.ಕಫೀಲ್ ಖಾನ್ ಅವರನ್ನು ಜನವರಿಯಲ್ಲಿ ಮುಂಬೈನಲ್ಲಿ ಬಂಧಿಸಲಾಗಿದೆ. ಅವರು ಪ್ರಸ್ತುತ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಮಥುರಾ ಜೈಲಿನಲ್ಲಿದ್ದಾರೆ.
ಫೆಬ್ರವರಿ 10 ರಂದು ಖಾನ್ ಅವರಿಗೆ ಸಿಜೆಎಂ, ಅಲಿಘರ್ ನ್ಯಾಯಾಲಯವು ಜಾಮೀನು ನೀಡಿತ್ತು. ಆದರೆ ಫೆಬ್ರವರಿ 15 ರಂದು ಅವರ ಮೇಲೆ ಎನ್ಎಸ್ಎ ಪ್ರಕರಣ ದಾಖಲಿಸಲಾಗಿದೆ.
ಈ ಹಿಂದೆ ಮಾರ್ಚ್ನಲ್ಲಿಯೇ ಕಫೀಲ್ ಖಾನ್ರವರ ತಾಯಿ ನುಝಟ್ ಪರ್ವೀನ್, ತನ್ನ ಮಗ ನಿರಾಪರಾಧಿಯಾಗಿದ್ದು, ಆತನನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸುಪ್ರೀಂ ಮೆಟ್ಟಿಲೇರಿದ್ದರು. ಆದರೆ, ಸಿಜೆಐ ಎಸ್ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಬಿ.ಆರ್. ಗವಾಯಿ ಅವರನ್ನೊಳಗೊಂಡ ನ್ಯಾಯಪೀಠವು ಅಲಹಾಬಾದ್ ಹೈಕೋರ್ಟ್ ಈ ವಿಷಯವನ್ನು ನಿಭಾಯಿಸಲು ಸೂಕ್ತ ಎಂಬ ಅಭಿಪ್ರಾಯದೊಂದಿಗೆ ಮನವಿಯನ್ನು ಇತ್ಯರ್ಥಗೊಳಿಸಿತ್ತು.
ಈ ಹಿಂದೆಯೂ ಸಹ ಕಫೀಲ್ ಖಾನ್ರವರನ್ನು ಆಗಸ್ಟ್ 2017 ರಲ್ಲಿ ಗೋರಖ್ಪುರದ ಬಿಆರ್ಡಿ ವೈದ್ಯಕೀಯ ಕಾಲೇಜಿನಲ್ಲಿ ನಡೆದ 60 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಆದರೆ 9 ತಿಂಗಳ ನಂತರ ಅವರು ನಿರಪರಾಧಿಗಳೆಂದು ಬಿಡುಗಡೆ ಮಾಡಲಾಗಿತ್ತು.
ಇದನ್ನೂ ಓದಿ: ವೈದ್ಯ ಕಫೀಲ್ ಖಾನ್ ಬಿಡುಗಡೆಗೆ ಒತ್ತಾಯಿಸಿ ಕಾಂಗ್ರೆಸ್ ಪ್ರತಿಭಟನಾ ಅಭಿಯಾನ