Homeಕರ್ನಾಟಕಹಂಪಿಯಲ್ಲಿ ಪ್ರವಾಹ: ಪ್ರವಾಸಿಗರು, ಹೋಟೆಲ್ ಮಾಲೀಕರು ಮಾಡಿದ್ದು ತಪ್ಪಲ್ಲವೇ? ಇದಕ್ಕೆ ಶಿಕ್ಷೆಯಿಲ್ಲವೇ?

ಹಂಪಿಯಲ್ಲಿ ಪ್ರವಾಹ: ಪ್ರವಾಸಿಗರು, ಹೋಟೆಲ್ ಮಾಲೀಕರು ಮಾಡಿದ್ದು ತಪ್ಪಲ್ಲವೇ? ಇದಕ್ಕೆ ಶಿಕ್ಷೆಯಿಲ್ಲವೇ?

- Advertisement -
- Advertisement -

ಅತ್ತ ಸಹ್ಯಾದ್ರಿ ಪರ್ವತ ಶ್ರೇಣಿ ಮತ್ತು ಮಲೆನಾಡಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದಂತೆ ಇತ್ತ ದೂರದ ಕೊಪ್ಪಳ ಜಿಲ್ಲೆಯಲ್ಲಿರುವ ತುಂಗಭದ್ರಾ ಜಲಾಶಯ ತುಂಬುವುದು ಎಲ್ಲರಿಗೂ ಖಾತ್ರಿಯಾಗಿ ಹೋಯಿತು. ಮಳೆ ಸುರಿಯುವ ಮೊದಲು ಜಲಾಶಯದಲ್ಲಿ ಬರೀ 32 ಟಿಎಂಸಿ ಅಡಿ ನೀರಿತ್ತು. ಒಂದೇ ವಾರದಲ್ಲಿ 100 ಟಿಎಂಸಿ ಅಡಿಗೆ ಬಂತು ನಿಂತಿತು. ಆದರೆ, ಮಲೆನಾಡಿನಲ್ಲಿ ಮಳೆ ಮಾತ್ರ ನಿಂತಿರಲಿಲ್ಲ. ಸುಮಾರು 2 ಲಕ್ಷ ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಲೇ ಇತ್ತು. ಜಲಾಶಯದ ಗೇಟುಗಳನ್ನು ತೆರೆದು ನದಿಗೆ ನೀರು ಬಿಡುವುದು ಅನಿವಾರ್ಯವಾಯಿತು.

ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದ ಕೊಪ್ಪಳದ ಯುವ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಜಲಾಶಯದಿಂದ ಎರಡೂವರೆ-ಮೂರು ಲಕ್ಷ ಕ್ಯೂಸೆಕ್ ನೀರನ್ನು ಬಿಟ್ಟರೆ ಜಗತ್ಪ್ರಸಿದ್ಧ ವಿಶ್ವಪಾರಂಪರಿಕ ತಾಣವಾದ ಹಂಪಿಯ ಕೆಲ ಸ್ಮಾರಕಗಳು ಜಲಾವೃತವಾಗುತ್ತವೆ ಹಾಗೂ ಹಂಪಿಯ ಪಕ್ಕದಲ್ಲಿರುವ ವಿರುಪಾಪುರ ನಡುಗಡ್ಡೆಯಲ್ಲಿನ ಜನ ತೊಂದರೆಗೆ ಸಿಲುಕಿಕೊಳ್ಳುತ್ತಾರೆ ಎಂಬುದನ್ನು ಮೊದಲೇ ಊಹಿಸಿದ್ದರು. ಅದಕ್ಕಾಗಿಯೇ ಅವರು ಅತ್ತ ಜಲಾಶಯದ ನೀರಿನ ಮಟ್ಟ ಏರುತ್ತಿದ್ದಂತೆ ವಿರುಪಾಪುರ ನಡುಗಡ್ಡೆಯಿಂದ ಜನರನ್ನು ತೆರವುಗೊಳಿಸುವ ಸಿದ್ಧತೆ ಮಾಡಿಕೊಂಡರು. ಮೊದಲು ತನ್ನ ಅಧಿಕಾರಿಗಳನ್ನು ಕಳಿಸಿ ಪ್ರವಾಸಿಗರು ನಡುಗಡ್ಡೆಗೆ ಬರುವುದನ್ನು ತಡೆಯಲು ಪ್ರಯತ್ನಿಸಿದರು. ಡಂಗೂರ ಹೊಡೆಸಿ ನಡುಗಡ್ಡೆಯಲ್ಲಿರುವ ಜನ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಸಾರಿಸಿದರು. ಕೊನೆಗೆ ತಾವೇ ಖುದ್ದಾಗಿ ನಡುಗಡ್ಡೆಗೆ ಹೋಗಿ ಎಲ್ಲಾ ಹೊಟೇಲ್ ಮತ್ತು ರೆಸಾರ್ಟ್ ಗಳನ್ನು ಮುಚ್ಚಬೇಕು ಎಂದು ಅವುಗಳ ಮಾಲಿಕರಿಗೆ ನಿರ್ದೇಶನ ಕೊಟ್ಟು ಬಂದರು. ಅಷ್ಟೇ ಅಲ್ಲದೇ, ಈ ನಿಟ್ಟಿನಲ್ಲಿ ಒಂದು ಅಧಿಕೃತ ಆದೇಶವನ್ನೂ ಹೊರಡಿಸಿದರು.

ಇಷ್ಟೆಲ್ಲಾ ಮಾಡಿದ ನಂತರವೂ ಆಗಿದ್ದೇನು ಗೊತ್ತೆ?

ವಿಶ್ವಪ್ರಸಿದ್ಧ ಹಂಪಿಗೆ ದೇಶವಿದೇಶಗಳಿಂದ ಹಲವು ಪ್ರವಾಸಿಗರು ಬರುತ್ತಾರೆ. ಬಂದವರಲ್ಲಿ ಬಹುತೇಕರು ಮೋಜು-ಮಸ್ತಿಗೆ ಹೆಸರುವಾಸಿಯಾದ ಈ ವಿರುಪಾಪುರ ಗಡ್ಡಿಗೆ ಬಂದೇ ಬರುತ್ತಾರೆ. ದೇಶಿ-ವಿದೇಶಿ ಪ್ರವಾಸಿಗರನ್ನು ಹಲವು ರೀತಿಯಲ್ಲಿ ತೃಪ್ತಿಪಡಿಸುವುದಕ್ಕಾಗಿಯೇ ಅಲ್ಲಿ ಅನೇಕ ಐಷಾರಾಮಿ ಹೊಟೇಲುಗಳು, ರೆಸಾರ್ಟುಗಳು ತಲೆಯೆತ್ತಿವೆ. ದುಡ್ಡು ಮಾಡುವ ಖಯಾಲಿಗೆ ಬಿದ್ದಿರುವ ಹೊಟೇಲ್ ಮಾಲಿಕರು ಜಿಲ್ಲಾಧಿಕಾರಿ ನೀಡಿದ ಮನವಿ, ನಿರ್ದೇಶನ, ಎಚ್ಚರಿಕೆ ಮತ್ತು ಆದೇಶವನ್ನೂ ಗಾಳಿಗೆ ತೂರಿ ತಮ್ಮ ಹೊಟೇಲ್ ಮತ್ತು ರೆಸಾರ್ಟುಗಳನ್ನು ಬಂದ್ ಮಾಡಲಿಲ್ಲ.

ಅದೂ ಸಾಲದೆಂಬಂತೆ, “ನದಿಯಲ್ಲಿ ನೀರು ಹೆಚ್ಚಾದರೆ, ನಾವೇ ನಿಮ್ಮನ್ನು ಖಾಸಗಿ ದೋಣಿಗಳಲ್ಲಿ ಆಚೆಗೆ ಬಿಟ್ಟುಬರುತ್ತೇವೆ. ನೀವೇನು ಹೆದರಬೇಡಿ. ಬೇಕಿದ್ದರೆ ನಿಮ್ಮ ಕಾರುಗಳನ್ನು ನದಿಯಿಂದ ದೂರ ನಿಲ್ಲಿಸಿ ಬನ್ನಿ” ಎಂದು ಪ್ರವಾಸಿಗರನ್ನು ಹುರಿದುಂಬಿಸಿ, ಅವರಿಗೆ ಆಶ್ವಾಸನೆಗಳನ್ನು ಕೊಟ್ಟು ತಮ್ಮಲ್ಲೇ ಉಳಿಸಿಕೊಂಡರು. ಎರಡನೇ ಶನಿವಾರ, ಭಾನುವಾರ ಮತ್ತು ಸೋಮವಾಗ (ಈದ್) ರಜಾ ದಿನಗಳಾಗಿದ್ದರಿಂದ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿತ್ತು; ಅಂತೆಯೇ ಹೊಟೇಲ್ ಮಾಲಿಕರಿಗೆ ಲಾಭವೂ ಕೂಡ.

ಆಮೇಲೆ ಏನಾಯಿತು? ಜಿಲ್ಲಾಧಿಕಾರಿ ಸುನೀಲ್ ಕುಮಾರ್ ನಿರೀಕ್ಷಿಸಿದಂತೆಯೇ ಮಲೆನಾಡಿನಲ್ಲಿ ಮಳೆ ಬಿಡಲಿಲ್ಲ. ತುಂಗಭದ್ರಾ ಜಲಾಶಯಕ್ಕೆ ಬೃಹತ್ ಪ್ರಮಾಣದ ಒಳಹರಿವು ಬರುವುದು ನಿಲ್ಲಲಿಲ್ಲ. ಜಲಾಶಯದಿಂದ ನೀರು ಹೊರಹರಿಸುವುದೂ ಅನಿವಾರ್ಯವಾಯಿತು. ಯಾವಾಗ ಜಲಾಶಯದಿಂದ ಹೊರಹರಿವು ಎರಡೂವರೆ ಲಕ್ಷ ಕ್ಯೂಸೆಕ್ ದಾಟಿತೋ ಅತ್ತ ಹಂಪಿ ಸ್ಮಾರಕಗಳೂ ಜಲಾವೃತವಾದವು, ಇತ್ತ ನಡುಗಡ್ಡೆಯಲ್ಲೂ ಜನ ನೆರವಿಗಾಗಿ ಕೂಗಲಾರಂಭಿಸಿದರು.

ನಡುಗಡ್ಡೆಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ಪ್ರತಿಸ್ಪಂದನಾ ಪಡೆ (NDRF), ನಾಗರಿಕ ರಕ್ಷಣಾ ಪಡೆ ಮತ್ತು ಅಗ್ನಿಶಾಮಕ ದಳಗಳನ್ನು ಕರೆಸಲಾಯಿತು. ಮೋಜು-ಮಸ್ತಿಗಾಗಿ ನಡುಗಡ್ಡೆಯಲ್ಲಿ ಉಳಿದಿದ್ದ ಪ್ರವಾಸಿಗರನ್ನು ಹಾಗೂ ಲಾಭಕ್ಕಾಗಿ ಅವರನ್ನು ಉಳಿಸಿಕೊಂಡಿದ್ದ ಹೊಟೆಲ್ ಮಾಲಿಕರು/ನಿರ್ವಾಹಕರನ್ನು ರಕ್ಷಿಸಲು ರಕ್ಷಣಾ ದಳಗಳ ಯೋಧರು ತಮ್ಮ ಪ್ರಾಣಗಳನ್ನು ಪಣಕ್ಕೊಡ್ಡಿ ಮೈಯಿಗೆ ಲೈಫ್ ಜಾಕೇಟ್ ಹಾಕಿಕೊಂಡು ಭೋರ್ಗರೆಯುತ್ತಿದ್ದ ನದಿಗೆ ಇಳಿಯಬೇಕಾಯಿತು. ಎನ್.ಡಿ.ಆರ್.ಎಫ್ ತಂಡ ಆಗಲೇ ರಬ್ಬರ್ ಬೋಟ್ ಬಳಸಿ ಒಂದು ಟ್ರಿಪ್ ಹೋಗಿ ಬಂದು ವಿದೇಶಿ ಪ್ರವಾಸಿಗರನ್ನು ಕರೆತಂದಿತ್ತು. ನಡುಗಡ್ಡೆಯಲ್ಲಿ ಸುಮಾರು ಮುನ್ನೂರು ಜನ ಇದ್ದಿದ್ದರಿಂದ ಒಂದೇ ದೋಣಿಯಲ್ಲಿ ಪ್ರತೀ ಸಾರಿ ನಾಲ್ಕೈದು ಜನರನ್ನು ರಕ್ಷಿಸುತ್ತಾ ಹೋದರೆ ಒಂದು ವಾರ ಬೇಕಾಗುತ್ತದೆ. ಆದ್ದರಿಂದ ಇನ್ನೊಂದು ದೋಣಿ ಧುಮ್ಮಿಕ್ಕಿ ಬರುತ್ತಿದ್ದ ಅಪಾಯಕಾರಿ ನದಿಗೆ ಇಳಿಯಿತು. ಅದರಲ್ಲಿ ಐವರು ರಕ್ಷಣಾ ಸಿಬ್ಬಂದಿಗಳಿದ್ದರು. ಅದು ತನ್ನ ಮೊದಲ ಬಾರಿಗೆ ಪ್ರವಾಸಿಗರನ್ನು ಕರೆತರಲು ನಡುಗಡ್ಡೆಯತ್ತ ಹೋಗುವಾಗಲೇ ನದಿಯ ನಡುವೆ ನಿಂತಿದ್ದ ಮರಕ್ಕೆ ಬಡಿದು ಮಗುಚಿಬಿದ್ದಿತು..! ಜನರ ರಕ್ಷಣೆಗೆ ಹೋಗಿದ್ದ ಐವರೂ ರಭಸವಾಗಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದರು.

ಕೂಡಲೇ ಜಿಲ್ಲಾಧಿಕಾರಿ ಸುನೀಲ್ ಕುಮಾರ್ ವಾಯುಪಡೆ ಮತ್ತು ನೌಕಾಪಡೆಗಳನ್ನು ಸಂಪರ್ಕಿಸಿ ಮೂರು ಹೆಲಿಕ್ಯಾಪ್ಟರ್ ಗಳನ್ನು ತರಿಸಿ ಮೊದಲು ನದಿಯಲ್ಲಿ ಕೊಚ್ಚಿ ಹೋಗಿದ್ದ ರಕ್ಷಣಾ ಸಿಬ್ಬಂದಿಯನ್ನು ರಕ್ಷಿಸುವ ಕೆಲಸ ಪ್ರಾರಂಭಿಸಿದರು. ಅದೃಷ್ಟವಶಾತ್ ಕೆಲವೇ ಗಂಟೆಗಳಲ್ಲಿ ಎಲ್ಲಾ ಐವರನ್ನೂ  ರಕ್ಷಿಸುವಲ್ಲಿ ವಾಯುಪಡೆ ಮತ್ತು ನೌಕಾಪಡೆಯ ಹೆಲಿಕ್ಯಾಪ್ಟರುಗಳು ಯಶಸ್ವಿಯಾದವು.

ಕೊನೆಗೆ ದೋಣಿಯ ಮೂಲಕ ನಡುಗಡ್ಡೆಯಲ್ಲಿ ಸಿಲುಕಿರುವ ಪ್ರವಾಸಿಗರನ್ನು ರಕ್ಷಿಸುವ ಯೋಚನೆಯನ್ನೇ ಬಿಟ್ಟು ಇದೇ ಹೆಲಿಕ್ಯಾಪ್ಟರುಗಳ ಮೂಲಕ ಅವರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸುವ ಕೆಲಸ ಪ್ರಾರಂಭಿಸಿದರು.

ವಾಯುಪಡೆಯ ಒಂದು ಹೆಲಿಕ್ಯಾಪ್ಟರ್ 20 ಜನರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದರೆ ಇನ್ನೊಂದು ಹೆಲಿಕ್ಯಾಪ್ಟರ್ 10 ಜನರನ್ನು ತುಂಬಿಕೊಂಡು ಹೋಗುವ ಸಾಮರ್ಥ್ಯ ಹೊಂದಿತ್ತು. ಈ ಹೆಲಿಕ್ಯಾಪ್ಟರುಗಳು ಕಂಡಕಂಡಲ್ಲಿ ಇಳಿಯುವುದು ಕಷ್ಟ. ಹಾಗಾಗಿ, ನಡುಗಡ್ಡೆಯಿಂದ ಹೊತ್ತೊಯ್ದ ಜನರನ್ನು ಜಿಂದಾಲ್ ಏರ್ ಸ್ಟ್ರಿಪ್ ನಲ್ಲಿ ಇಳಿಸಿದವು. ಇನ್ನೊಂದು ನೌಕಾಪಡೆಯ ಹೆಲಿಕ್ಯಾಪ್ಟ್ ಕೇವಲ ಏಳೆಂಟು ಜನರನ್ನು ಹೊತ್ತೊಯ್ಯುವ ಸಾಮರ್ಥ್ಯವಿದ್ದು ಅದು ಯಾವುದೇ ಸಪಾಟು ನೆಲದ ಮೇಲೆ ಇಳಿಯಬಲ್ಲದು. ಅದು ಸಮೀಪದ ರಸ್ತೆಗಳಲ್ಲಿಯೇ ಜನರನ್ನು ಇಳಿಸಿತು. ಹೀಗೆ ಸಂಜೆಯ ಹೊತ್ತಿಗೆ ಸುಮಾರು ಇನ್ನೂರೈವತ್ತು ಜನರನ್ನು ವಾಯುಪಡೆ ಮತ್ತು ನೌಕಾಪಡೆಯ ಯೋಧರು ರಕ್ಷಿಸಿದರು. ಇನ್ನೂ ನೂರು ಮಂದಿ ಅಲ್ಲೇ ಉಳಿದಿದ್ದರು. ಇವತ್ತು ಅವರನ್ನು ಕರೆತರುವ ಕಾರ್ಯಾಚರಣೆ ಶುರುವಾಗಿಬಹುದು.

ಇಷ್ಟೆಲ್ಲಾ ಏಕೆ ಬರೆಯಬೇಕಾಯಿತು ಎಂದರೆ, ಜಿಲ್ಲಾಧಿಕಾರಿಯ ಮಾತನ್ನು ಪ್ರವಾಸಿಗರು, ಹೊಟೇಲ್ ಮಾಲಿಕರು ಕೇಳಿದ್ದರೆ ಇಷ್ಟೆಲ್ಲಾ ತೊಂದರೆಯಾಗುವ ಪ್ರಮೇಯವೇ ಬರುತ್ತಿರಲಿಲ್ಲ. ಇಷ್ಟೊಂದು ಸಮಯ, ಹಣ, ಶಕ್ತಿ ಪೋಲಾಗುವ ಸಂಭವವೇ ಇರುತ್ತಿರಲಿಲ್ಲ. ಮೋಜು-ಮಸ್ತಿ ಮಾಡುವವರ ರಕ್ಷಣೆಗಾಗಿ ತಮ್ಮ ಜೀವದ ಹಂಗು ತೊರೆದು ನದಿಗಿಳಿದು ಕೊಚ್ಚಿಹೋದ ಯೋಧರಿಗೆ ಏನಾದರೂ ಹೆಚ್ಚೂಕಮ್ಮಿಯಾಗಿದ್ದರೆ ಅದಕ್ಕೆ ಯಾರು ಹೊಣೆ?

ನಮ್ಮ ಜನಕ್ಕೆ ಯಾವಾಗ ಬುದ್ದಿ ಬರುತ್ತೆ ಅಂತ ಅರ್ಥವಾಗುತ್ತಿಲ್ಲ. 

ಅಂದಹಾಗೆ, ಜಿಲ್ಲಾಧಿಕಾರಿ ಸುನೀಲ್ ಕುಮಾರ್ ಗೂ ಈಗ ಪಿತ್ತ ನೆತ್ತಿಗೇರಿದ ಹಾಗೆ ಕಾಣುತ್ತಿದೆ. ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆ ಮಾಡಿದ್ದಕ್ಕಾಗಿ ಹೊಟೆಲ್/ ರೆಸಾರ್ಟ್ ಮಾಲಿಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಕ್ಕೆ ಅವರು ಮುಂದಾಗಿದ್ದಾರೆ. ಪ್ರಾಕೃತಿಕ ವಿಕೋಪ ನಿರ್ವಹಣೆಯಲ್ಲಿ ತನಗೆ ಸಹಕಾರ ತೋರದ ಈ ಮಾಲಿಕರ ವಿರುದ್ಧ  ವಿಕೋಪ ನಿರ್ವಹಣಾ ಕಾಯ್ದೆಯ ಅಡಿಯಲ್ಲೂ ಕ್ರಮ ಜರುಗಿಸಲು ಮುಂದಾಗಿದ್ದಾರೆ. ಇವರ ಲೈಸನ್ಸುಗಳನ್ನು ರದ್ಧುಪಡಿಸುವ ಸಂಭವವೂ ಇದೆ. ಹಾಗಾದಾಗ ಮಾತ್ರ ಈ ಧನದಾಹಿಗಳು ಒಂದಿಷ್ಟು ಬುದ್ದಿಕಲಿಯುತ್ತಾರೆ ಅನ್ನಿಸುತ್ತದೆ.

ಕೃಪೆ- ಕುಮಾರ್ ಬುರಡಿಕಟ್ಟಿಯವರ ಫೇಸ್ ಬುಕ್ ಗೋಡೆಯಿಂದ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...