Homeಕರ್ನಾಟಕಹಂಪಿಯಲ್ಲಿ ಪ್ರವಾಹ: ಪ್ರವಾಸಿಗರು, ಹೋಟೆಲ್ ಮಾಲೀಕರು ಮಾಡಿದ್ದು ತಪ್ಪಲ್ಲವೇ? ಇದಕ್ಕೆ ಶಿಕ್ಷೆಯಿಲ್ಲವೇ?

ಹಂಪಿಯಲ್ಲಿ ಪ್ರವಾಹ: ಪ್ರವಾಸಿಗರು, ಹೋಟೆಲ್ ಮಾಲೀಕರು ಮಾಡಿದ್ದು ತಪ್ಪಲ್ಲವೇ? ಇದಕ್ಕೆ ಶಿಕ್ಷೆಯಿಲ್ಲವೇ?

- Advertisement -
- Advertisement -

ಅತ್ತ ಸಹ್ಯಾದ್ರಿ ಪರ್ವತ ಶ್ರೇಣಿ ಮತ್ತು ಮಲೆನಾಡಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದಂತೆ ಇತ್ತ ದೂರದ ಕೊಪ್ಪಳ ಜಿಲ್ಲೆಯಲ್ಲಿರುವ ತುಂಗಭದ್ರಾ ಜಲಾಶಯ ತುಂಬುವುದು ಎಲ್ಲರಿಗೂ ಖಾತ್ರಿಯಾಗಿ ಹೋಯಿತು. ಮಳೆ ಸುರಿಯುವ ಮೊದಲು ಜಲಾಶಯದಲ್ಲಿ ಬರೀ 32 ಟಿಎಂಸಿ ಅಡಿ ನೀರಿತ್ತು. ಒಂದೇ ವಾರದಲ್ಲಿ 100 ಟಿಎಂಸಿ ಅಡಿಗೆ ಬಂತು ನಿಂತಿತು. ಆದರೆ, ಮಲೆನಾಡಿನಲ್ಲಿ ಮಳೆ ಮಾತ್ರ ನಿಂತಿರಲಿಲ್ಲ. ಸುಮಾರು 2 ಲಕ್ಷ ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಲೇ ಇತ್ತು. ಜಲಾಶಯದ ಗೇಟುಗಳನ್ನು ತೆರೆದು ನದಿಗೆ ನೀರು ಬಿಡುವುದು ಅನಿವಾರ್ಯವಾಯಿತು.

ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದ ಕೊಪ್ಪಳದ ಯುವ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಜಲಾಶಯದಿಂದ ಎರಡೂವರೆ-ಮೂರು ಲಕ್ಷ ಕ್ಯೂಸೆಕ್ ನೀರನ್ನು ಬಿಟ್ಟರೆ ಜಗತ್ಪ್ರಸಿದ್ಧ ವಿಶ್ವಪಾರಂಪರಿಕ ತಾಣವಾದ ಹಂಪಿಯ ಕೆಲ ಸ್ಮಾರಕಗಳು ಜಲಾವೃತವಾಗುತ್ತವೆ ಹಾಗೂ ಹಂಪಿಯ ಪಕ್ಕದಲ್ಲಿರುವ ವಿರುಪಾಪುರ ನಡುಗಡ್ಡೆಯಲ್ಲಿನ ಜನ ತೊಂದರೆಗೆ ಸಿಲುಕಿಕೊಳ್ಳುತ್ತಾರೆ ಎಂಬುದನ್ನು ಮೊದಲೇ ಊಹಿಸಿದ್ದರು. ಅದಕ್ಕಾಗಿಯೇ ಅವರು ಅತ್ತ ಜಲಾಶಯದ ನೀರಿನ ಮಟ್ಟ ಏರುತ್ತಿದ್ದಂತೆ ವಿರುಪಾಪುರ ನಡುಗಡ್ಡೆಯಿಂದ ಜನರನ್ನು ತೆರವುಗೊಳಿಸುವ ಸಿದ್ಧತೆ ಮಾಡಿಕೊಂಡರು. ಮೊದಲು ತನ್ನ ಅಧಿಕಾರಿಗಳನ್ನು ಕಳಿಸಿ ಪ್ರವಾಸಿಗರು ನಡುಗಡ್ಡೆಗೆ ಬರುವುದನ್ನು ತಡೆಯಲು ಪ್ರಯತ್ನಿಸಿದರು. ಡಂಗೂರ ಹೊಡೆಸಿ ನಡುಗಡ್ಡೆಯಲ್ಲಿರುವ ಜನ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಸಾರಿಸಿದರು. ಕೊನೆಗೆ ತಾವೇ ಖುದ್ದಾಗಿ ನಡುಗಡ್ಡೆಗೆ ಹೋಗಿ ಎಲ್ಲಾ ಹೊಟೇಲ್ ಮತ್ತು ರೆಸಾರ್ಟ್ ಗಳನ್ನು ಮುಚ್ಚಬೇಕು ಎಂದು ಅವುಗಳ ಮಾಲಿಕರಿಗೆ ನಿರ್ದೇಶನ ಕೊಟ್ಟು ಬಂದರು. ಅಷ್ಟೇ ಅಲ್ಲದೇ, ಈ ನಿಟ್ಟಿನಲ್ಲಿ ಒಂದು ಅಧಿಕೃತ ಆದೇಶವನ್ನೂ ಹೊರಡಿಸಿದರು.

ಇಷ್ಟೆಲ್ಲಾ ಮಾಡಿದ ನಂತರವೂ ಆಗಿದ್ದೇನು ಗೊತ್ತೆ?

ವಿಶ್ವಪ್ರಸಿದ್ಧ ಹಂಪಿಗೆ ದೇಶವಿದೇಶಗಳಿಂದ ಹಲವು ಪ್ರವಾಸಿಗರು ಬರುತ್ತಾರೆ. ಬಂದವರಲ್ಲಿ ಬಹುತೇಕರು ಮೋಜು-ಮಸ್ತಿಗೆ ಹೆಸರುವಾಸಿಯಾದ ಈ ವಿರುಪಾಪುರ ಗಡ್ಡಿಗೆ ಬಂದೇ ಬರುತ್ತಾರೆ. ದೇಶಿ-ವಿದೇಶಿ ಪ್ರವಾಸಿಗರನ್ನು ಹಲವು ರೀತಿಯಲ್ಲಿ ತೃಪ್ತಿಪಡಿಸುವುದಕ್ಕಾಗಿಯೇ ಅಲ್ಲಿ ಅನೇಕ ಐಷಾರಾಮಿ ಹೊಟೇಲುಗಳು, ರೆಸಾರ್ಟುಗಳು ತಲೆಯೆತ್ತಿವೆ. ದುಡ್ಡು ಮಾಡುವ ಖಯಾಲಿಗೆ ಬಿದ್ದಿರುವ ಹೊಟೇಲ್ ಮಾಲಿಕರು ಜಿಲ್ಲಾಧಿಕಾರಿ ನೀಡಿದ ಮನವಿ, ನಿರ್ದೇಶನ, ಎಚ್ಚರಿಕೆ ಮತ್ತು ಆದೇಶವನ್ನೂ ಗಾಳಿಗೆ ತೂರಿ ತಮ್ಮ ಹೊಟೇಲ್ ಮತ್ತು ರೆಸಾರ್ಟುಗಳನ್ನು ಬಂದ್ ಮಾಡಲಿಲ್ಲ.

ಅದೂ ಸಾಲದೆಂಬಂತೆ, “ನದಿಯಲ್ಲಿ ನೀರು ಹೆಚ್ಚಾದರೆ, ನಾವೇ ನಿಮ್ಮನ್ನು ಖಾಸಗಿ ದೋಣಿಗಳಲ್ಲಿ ಆಚೆಗೆ ಬಿಟ್ಟುಬರುತ್ತೇವೆ. ನೀವೇನು ಹೆದರಬೇಡಿ. ಬೇಕಿದ್ದರೆ ನಿಮ್ಮ ಕಾರುಗಳನ್ನು ನದಿಯಿಂದ ದೂರ ನಿಲ್ಲಿಸಿ ಬನ್ನಿ” ಎಂದು ಪ್ರವಾಸಿಗರನ್ನು ಹುರಿದುಂಬಿಸಿ, ಅವರಿಗೆ ಆಶ್ವಾಸನೆಗಳನ್ನು ಕೊಟ್ಟು ತಮ್ಮಲ್ಲೇ ಉಳಿಸಿಕೊಂಡರು. ಎರಡನೇ ಶನಿವಾರ, ಭಾನುವಾರ ಮತ್ತು ಸೋಮವಾಗ (ಈದ್) ರಜಾ ದಿನಗಳಾಗಿದ್ದರಿಂದ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿತ್ತು; ಅಂತೆಯೇ ಹೊಟೇಲ್ ಮಾಲಿಕರಿಗೆ ಲಾಭವೂ ಕೂಡ.

ಆಮೇಲೆ ಏನಾಯಿತು? ಜಿಲ್ಲಾಧಿಕಾರಿ ಸುನೀಲ್ ಕುಮಾರ್ ನಿರೀಕ್ಷಿಸಿದಂತೆಯೇ ಮಲೆನಾಡಿನಲ್ಲಿ ಮಳೆ ಬಿಡಲಿಲ್ಲ. ತುಂಗಭದ್ರಾ ಜಲಾಶಯಕ್ಕೆ ಬೃಹತ್ ಪ್ರಮಾಣದ ಒಳಹರಿವು ಬರುವುದು ನಿಲ್ಲಲಿಲ್ಲ. ಜಲಾಶಯದಿಂದ ನೀರು ಹೊರಹರಿಸುವುದೂ ಅನಿವಾರ್ಯವಾಯಿತು. ಯಾವಾಗ ಜಲಾಶಯದಿಂದ ಹೊರಹರಿವು ಎರಡೂವರೆ ಲಕ್ಷ ಕ್ಯೂಸೆಕ್ ದಾಟಿತೋ ಅತ್ತ ಹಂಪಿ ಸ್ಮಾರಕಗಳೂ ಜಲಾವೃತವಾದವು, ಇತ್ತ ನಡುಗಡ್ಡೆಯಲ್ಲೂ ಜನ ನೆರವಿಗಾಗಿ ಕೂಗಲಾರಂಭಿಸಿದರು.

ನಡುಗಡ್ಡೆಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ಪ್ರತಿಸ್ಪಂದನಾ ಪಡೆ (NDRF), ನಾಗರಿಕ ರಕ್ಷಣಾ ಪಡೆ ಮತ್ತು ಅಗ್ನಿಶಾಮಕ ದಳಗಳನ್ನು ಕರೆಸಲಾಯಿತು. ಮೋಜು-ಮಸ್ತಿಗಾಗಿ ನಡುಗಡ್ಡೆಯಲ್ಲಿ ಉಳಿದಿದ್ದ ಪ್ರವಾಸಿಗರನ್ನು ಹಾಗೂ ಲಾಭಕ್ಕಾಗಿ ಅವರನ್ನು ಉಳಿಸಿಕೊಂಡಿದ್ದ ಹೊಟೆಲ್ ಮಾಲಿಕರು/ನಿರ್ವಾಹಕರನ್ನು ರಕ್ಷಿಸಲು ರಕ್ಷಣಾ ದಳಗಳ ಯೋಧರು ತಮ್ಮ ಪ್ರಾಣಗಳನ್ನು ಪಣಕ್ಕೊಡ್ಡಿ ಮೈಯಿಗೆ ಲೈಫ್ ಜಾಕೇಟ್ ಹಾಕಿಕೊಂಡು ಭೋರ್ಗರೆಯುತ್ತಿದ್ದ ನದಿಗೆ ಇಳಿಯಬೇಕಾಯಿತು. ಎನ್.ಡಿ.ಆರ್.ಎಫ್ ತಂಡ ಆಗಲೇ ರಬ್ಬರ್ ಬೋಟ್ ಬಳಸಿ ಒಂದು ಟ್ರಿಪ್ ಹೋಗಿ ಬಂದು ವಿದೇಶಿ ಪ್ರವಾಸಿಗರನ್ನು ಕರೆತಂದಿತ್ತು. ನಡುಗಡ್ಡೆಯಲ್ಲಿ ಸುಮಾರು ಮುನ್ನೂರು ಜನ ಇದ್ದಿದ್ದರಿಂದ ಒಂದೇ ದೋಣಿಯಲ್ಲಿ ಪ್ರತೀ ಸಾರಿ ನಾಲ್ಕೈದು ಜನರನ್ನು ರಕ್ಷಿಸುತ್ತಾ ಹೋದರೆ ಒಂದು ವಾರ ಬೇಕಾಗುತ್ತದೆ. ಆದ್ದರಿಂದ ಇನ್ನೊಂದು ದೋಣಿ ಧುಮ್ಮಿಕ್ಕಿ ಬರುತ್ತಿದ್ದ ಅಪಾಯಕಾರಿ ನದಿಗೆ ಇಳಿಯಿತು. ಅದರಲ್ಲಿ ಐವರು ರಕ್ಷಣಾ ಸಿಬ್ಬಂದಿಗಳಿದ್ದರು. ಅದು ತನ್ನ ಮೊದಲ ಬಾರಿಗೆ ಪ್ರವಾಸಿಗರನ್ನು ಕರೆತರಲು ನಡುಗಡ್ಡೆಯತ್ತ ಹೋಗುವಾಗಲೇ ನದಿಯ ನಡುವೆ ನಿಂತಿದ್ದ ಮರಕ್ಕೆ ಬಡಿದು ಮಗುಚಿಬಿದ್ದಿತು..! ಜನರ ರಕ್ಷಣೆಗೆ ಹೋಗಿದ್ದ ಐವರೂ ರಭಸವಾಗಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದರು.

ಕೂಡಲೇ ಜಿಲ್ಲಾಧಿಕಾರಿ ಸುನೀಲ್ ಕುಮಾರ್ ವಾಯುಪಡೆ ಮತ್ತು ನೌಕಾಪಡೆಗಳನ್ನು ಸಂಪರ್ಕಿಸಿ ಮೂರು ಹೆಲಿಕ್ಯಾಪ್ಟರ್ ಗಳನ್ನು ತರಿಸಿ ಮೊದಲು ನದಿಯಲ್ಲಿ ಕೊಚ್ಚಿ ಹೋಗಿದ್ದ ರಕ್ಷಣಾ ಸಿಬ್ಬಂದಿಯನ್ನು ರಕ್ಷಿಸುವ ಕೆಲಸ ಪ್ರಾರಂಭಿಸಿದರು. ಅದೃಷ್ಟವಶಾತ್ ಕೆಲವೇ ಗಂಟೆಗಳಲ್ಲಿ ಎಲ್ಲಾ ಐವರನ್ನೂ  ರಕ್ಷಿಸುವಲ್ಲಿ ವಾಯುಪಡೆ ಮತ್ತು ನೌಕಾಪಡೆಯ ಹೆಲಿಕ್ಯಾಪ್ಟರುಗಳು ಯಶಸ್ವಿಯಾದವು.

ಕೊನೆಗೆ ದೋಣಿಯ ಮೂಲಕ ನಡುಗಡ್ಡೆಯಲ್ಲಿ ಸಿಲುಕಿರುವ ಪ್ರವಾಸಿಗರನ್ನು ರಕ್ಷಿಸುವ ಯೋಚನೆಯನ್ನೇ ಬಿಟ್ಟು ಇದೇ ಹೆಲಿಕ್ಯಾಪ್ಟರುಗಳ ಮೂಲಕ ಅವರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸುವ ಕೆಲಸ ಪ್ರಾರಂಭಿಸಿದರು.

ವಾಯುಪಡೆಯ ಒಂದು ಹೆಲಿಕ್ಯಾಪ್ಟರ್ 20 ಜನರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದರೆ ಇನ್ನೊಂದು ಹೆಲಿಕ್ಯಾಪ್ಟರ್ 10 ಜನರನ್ನು ತುಂಬಿಕೊಂಡು ಹೋಗುವ ಸಾಮರ್ಥ್ಯ ಹೊಂದಿತ್ತು. ಈ ಹೆಲಿಕ್ಯಾಪ್ಟರುಗಳು ಕಂಡಕಂಡಲ್ಲಿ ಇಳಿಯುವುದು ಕಷ್ಟ. ಹಾಗಾಗಿ, ನಡುಗಡ್ಡೆಯಿಂದ ಹೊತ್ತೊಯ್ದ ಜನರನ್ನು ಜಿಂದಾಲ್ ಏರ್ ಸ್ಟ್ರಿಪ್ ನಲ್ಲಿ ಇಳಿಸಿದವು. ಇನ್ನೊಂದು ನೌಕಾಪಡೆಯ ಹೆಲಿಕ್ಯಾಪ್ಟ್ ಕೇವಲ ಏಳೆಂಟು ಜನರನ್ನು ಹೊತ್ತೊಯ್ಯುವ ಸಾಮರ್ಥ್ಯವಿದ್ದು ಅದು ಯಾವುದೇ ಸಪಾಟು ನೆಲದ ಮೇಲೆ ಇಳಿಯಬಲ್ಲದು. ಅದು ಸಮೀಪದ ರಸ್ತೆಗಳಲ್ಲಿಯೇ ಜನರನ್ನು ಇಳಿಸಿತು. ಹೀಗೆ ಸಂಜೆಯ ಹೊತ್ತಿಗೆ ಸುಮಾರು ಇನ್ನೂರೈವತ್ತು ಜನರನ್ನು ವಾಯುಪಡೆ ಮತ್ತು ನೌಕಾಪಡೆಯ ಯೋಧರು ರಕ್ಷಿಸಿದರು. ಇನ್ನೂ ನೂರು ಮಂದಿ ಅಲ್ಲೇ ಉಳಿದಿದ್ದರು. ಇವತ್ತು ಅವರನ್ನು ಕರೆತರುವ ಕಾರ್ಯಾಚರಣೆ ಶುರುವಾಗಿಬಹುದು.

ಇಷ್ಟೆಲ್ಲಾ ಏಕೆ ಬರೆಯಬೇಕಾಯಿತು ಎಂದರೆ, ಜಿಲ್ಲಾಧಿಕಾರಿಯ ಮಾತನ್ನು ಪ್ರವಾಸಿಗರು, ಹೊಟೇಲ್ ಮಾಲಿಕರು ಕೇಳಿದ್ದರೆ ಇಷ್ಟೆಲ್ಲಾ ತೊಂದರೆಯಾಗುವ ಪ್ರಮೇಯವೇ ಬರುತ್ತಿರಲಿಲ್ಲ. ಇಷ್ಟೊಂದು ಸಮಯ, ಹಣ, ಶಕ್ತಿ ಪೋಲಾಗುವ ಸಂಭವವೇ ಇರುತ್ತಿರಲಿಲ್ಲ. ಮೋಜು-ಮಸ್ತಿ ಮಾಡುವವರ ರಕ್ಷಣೆಗಾಗಿ ತಮ್ಮ ಜೀವದ ಹಂಗು ತೊರೆದು ನದಿಗಿಳಿದು ಕೊಚ್ಚಿಹೋದ ಯೋಧರಿಗೆ ಏನಾದರೂ ಹೆಚ್ಚೂಕಮ್ಮಿಯಾಗಿದ್ದರೆ ಅದಕ್ಕೆ ಯಾರು ಹೊಣೆ?

ನಮ್ಮ ಜನಕ್ಕೆ ಯಾವಾಗ ಬುದ್ದಿ ಬರುತ್ತೆ ಅಂತ ಅರ್ಥವಾಗುತ್ತಿಲ್ಲ. 

ಅಂದಹಾಗೆ, ಜಿಲ್ಲಾಧಿಕಾರಿ ಸುನೀಲ್ ಕುಮಾರ್ ಗೂ ಈಗ ಪಿತ್ತ ನೆತ್ತಿಗೇರಿದ ಹಾಗೆ ಕಾಣುತ್ತಿದೆ. ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆ ಮಾಡಿದ್ದಕ್ಕಾಗಿ ಹೊಟೆಲ್/ ರೆಸಾರ್ಟ್ ಮಾಲಿಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಕ್ಕೆ ಅವರು ಮುಂದಾಗಿದ್ದಾರೆ. ಪ್ರಾಕೃತಿಕ ವಿಕೋಪ ನಿರ್ವಹಣೆಯಲ್ಲಿ ತನಗೆ ಸಹಕಾರ ತೋರದ ಈ ಮಾಲಿಕರ ವಿರುದ್ಧ  ವಿಕೋಪ ನಿರ್ವಹಣಾ ಕಾಯ್ದೆಯ ಅಡಿಯಲ್ಲೂ ಕ್ರಮ ಜರುಗಿಸಲು ಮುಂದಾಗಿದ್ದಾರೆ. ಇವರ ಲೈಸನ್ಸುಗಳನ್ನು ರದ್ಧುಪಡಿಸುವ ಸಂಭವವೂ ಇದೆ. ಹಾಗಾದಾಗ ಮಾತ್ರ ಈ ಧನದಾಹಿಗಳು ಒಂದಿಷ್ಟು ಬುದ್ದಿಕಲಿಯುತ್ತಾರೆ ಅನ್ನಿಸುತ್ತದೆ.

ಕೃಪೆ- ಕುಮಾರ್ ಬುರಡಿಕಟ್ಟಿಯವರ ಫೇಸ್ ಬುಕ್ ಗೋಡೆಯಿಂದ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...

ಜಿರಳೆ ಜನತಾ ಪಕ್ಷದ ಖಾತೆಗೆ ನಿರ್ಬಂಧ; ದೆಹಲಿ ಹೈಕೋರ್ಟ್‌ನಿಂದ ಕೇಂದ್ರ-ಎಕ್ಸ್‌ಗೆ ನೋಟಿಸ್

ಜಿರಳೆ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ದೆಹಲಿ ಹೈಕೋರ್ಟ್ (ಮೇ 29) ಕೇಂದ್ರ ಸರ್ಕಾರ ಮತ್ತು ಸಾಮಾಜಿಕ...