ಕನ್ನಡ ವಿಶ್ವವಿದ್ಯಾಲಯ ಹಂಪಿ ಕ್ಯಾಂಪಸ್ಸಿನಲ್ಲಿನ ಸಂಶೋಧನ ವಿದ್ಯಾರ್ಥಿಗಳಿಗೆ ಎರಡು ವರ್ಷದಿಂದ ಫೆಲೋಶಿಪ್ ಬಂದಿಲ್ಲ. ಇದರಿಂದ ತಮ್ಮ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆಯೆಂದು ನಿನ್ನೆಯಿಂದ ಸುಮಾರು 200 ಕ್ಕೂ ಹೆಚ್ಚಿನ ಸಂಶೋಧನ ವಿದ್ಯಾರ್ಥಿಗಳು ಅಹೋರಾತ್ರಿ ಧರಣಿ ಮಾಡುತ್ತಿದ್ದಾರೆ.
ಆಡಳಿತಾಂಗ ಅನುದಾನವಿಲ್ಲದ ಕಾರಣ ಫೆಲೋಶಿಪ್ ಪಾವತಿಸಲು ಸಮಯ ಬೇಕು ಅನ್ನುತ್ತಿದ್ದಾರೆ. ಆದರೆ ಇಲ್ಲಿ ಓದುತ್ತಿರುವ ಸಂಶೋಧನಾ ವಿದ್ಯಾರ್ಥಿಗಳ ಕಷ್ಟ ಯಾರು ಕೇಳುತ್ತಾರೆ? ಸರ್ಕಾರ ಅನುದಾನ ಬಿಡುಗಡೆ ಮಾಡಲು ಯಾಕೆ ವಿಳಂಬ ಮಾಡುತ್ತಿದ್ದಾರೆ? ಬೇರೆಲ್ಲಾ ಚಟುವಟಿಕೆಗಳಿಗೆ ಅನುದಾನವಿರುವಾಗ ಶೈಕ್ಷಣಿಕ ಚಟುವಟಿಕೆಗಳಿಗೆ, ಸಂಶೋಧನೆಗಳಿಗೆ ಅನುದಾನ ಏಕಿಲ್ಲ? ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗುತ್ತಿದ್ದು ಅರ್ಧದಲ್ಲಿ ಶಿಕ್ಷಣ ಬಿಡಬೇಕಾಗಿದೆ ಎಂದು ವಿಶ್ವವಿದ್ಯಾನಿಲಯ ಜಿ.ಡಿ ಸಂತೋಷ್ ರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ತಿಂಗಳು ಹೇಗಾದರೂ ಸಹಿಸಿಕೊಳ್ಳಬಹುದು. ಸಾಲ ಮಾಡಿ ಎರಡು ತಿಂಗಳು ಬೇಕಾದರೂ ಹೊಂದಿಕೊಳ್ಳಬಹುದು. ಆದರೆ 2 ವರ್ಷ ಹಣವಿಲ್ಲದೇ ಹೇಗೆ ಬದುಕಲ ಸಾಧ್ಯ ನೀವೇ ಹೇಳಿ ಎಂದು ವಿದ್ಯಾರ್ಥಿಗಳು ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.
ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಬಳಿ ಬಂದ ಕುಲಪತಿಗಳು ಈ ವಿಷಯ ನಮ್ಮ ಗಮನಕ್ಕೆ ಬಂದಿಲ್ಲ, ವಿಚಾರಿಸುತ್ತೇವೆ ಎಂದಾಗ ವಿದ್ಯಾರ್ಥಿಗಳು ಹರಿಹಾಯ್ದಿದ್ದಾರೆ. ಈಗಾಗಲೇ ಐದಾರ ಬಾರಿ ಮನವಿ ಕೊಟ್ಟು ಹೋರಾಟ ಮಾಡಿದರೂ ವಿ.ವಿಯಿಂದ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದ್ದಾರೆ. ನಂತರ ವಿ.ಸಿಯವರು ಇಂದು 2.30 ರೊಳಗೆ ಮನವಿ ಕೊಡಿ ಎಂದು ಹೇಳಿ ಹೋಗಿದ್ದಾರೆ.
ಅದರಂತೆ ವಿದ್ಯಾರ್ಥಿಗಳು ತಮ್ಮ ಹಕ್ಕೊತ್ತಾಯಗಳನ್ನು ಸಲ್ಲಿಸಲು ವಿ.ಸಿಯವರ ಚೇಂಬರ್ ಗೆ ಹೋದರೆ ಅಲ್ಲಿ ಅವರು ಇರಲಿಲ್ಲ. ಕಾದು ನಂತರ ನಂತರ ಪ್ರತಿಭಟನಾ ಸ್ಥಳಕ್ಕೆ ವಿದ್ಯಾರ್ಥಿಗಳು ತೆರಳಿದ್ದಾರೆ. 3:30 ರ ನಂತರ ಬಂದ ವಿ.ಸಿಯವರು ಮನವಿ ಕೊಡದೇ ಹಾಗೆಯೇ ಪ್ರತಿಭಟನೆ ಮುಂದುವರೆಸುತ್ತೀದ್ದೀರಿ, ಪೊಲೀಸರನ್ನು ಕರೆಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಬಗ್ಗದ ವಿದ್ಯಾರ್ಥಿಗಳು ಹೋರಾಟ ಮುಂದುವರೆಸಿದ್ದಾರೆ.
ಹಿಂದುಳಿದ ದಲಿತ ದಮನಿತ ಬುಡಕಟ್ಟು ಅಲ್ಪಸಂಖ್ಯಾತ ವಿದ್ಯಾರ್ಥಿ ವಿದ್ಯಾರ್ಥಿನಿಯರು ಎರಡು ವರ್ಷದಿಂದ ಫೆಲೋಶಿಪ್ ಇಲ್ಲದೆ ಹೋದರೆ ಸಂಶೋಧನೆಯಲ್ಲಿ ತೊಡಗುವುದಾದರೂ ಹೇಗೆ? ಹೀಗಾಗಿ ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ಈ ಕೂಡಲೆ ಈ ವಿದ್ಯಾರ್ಥಿಗಳ ಬೇಡಿಕೆಗೆ ಕಿವಿಗೊಟ್ಟು ವಿಶ್ವವಿದ್ಯಾಲಯಕ್ಕೆ ಅನುದಾನ ನೀಡಿ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸಬೇಕಿದೆ. ಬಿಜೆಪಿಯ ಕಾರ್ಯಕರ್ತರು ಮಾನ್ಯ ಮುಖ್ಯಮಂತ್ರಿಗಳಿಗೆ ಈ ಮಾಹಿತಿ ತಲುಪಿಸಬೇಕಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಅರುಣ್ ಜೋಳದಕೂಡ್ಲಿಗಿ ಪ್ರತಿಕ್ರಿಯಿಸಿದ್ದಾರೆ.