Homeರಾಜಕೀಯಬೆನ್ನು ಬಿಡದ ಅಪರಾಧ

ಬೆನ್ನು ಬಿಡದ ಅಪರಾಧ

- Advertisement -
- Advertisement -

ಮಂಡ್ಯ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಿಂತ ಸುಮಲತಾ ಅಂಬರೀಶರ ಚುನಾವಣಾ ಪ್ರಚಾರ ಮಾಡಿ ಸುಸ್ತಾಗಿ ಬಂದು ಮನೆ ಮುಂದೆ ನಿಂತಿದ್ದೆ. ಆಗ ನಾಗಮಂಗಲದಲ್ಲಿ ನಡೆದ ದೇವೇಗೌಡರ ಸಭೆಯ ಬಗ್ಗೆ ಮನಸ್ಸು ಒಂದಿಷ್ಟು ಘಾಸಿಗೊಂಡಿತ್ತು. ಏಕೆಂದರೆ ಕಾಂಗ್ರೆಸ್ ಮತ್ತು ದಳದ ಘಟಾನುಘಟಿ ಲೀಡರುಗಳ ಸಮ್ಮುಖದಲ್ಲಿ ಮಾತನಾಡುತ್ತಿದ್ದ ಗೆಳೆಯ ಶಿವರಾಮೇಗೌಡ ಸುಮಲತಾರನ್ನು ‘ಮಾಯಾಂಗನೆ’ ಎಂದು ಮೂದಲಿಸಿದ್ದಲ್ಲದೆ, ‘ಕರ್ನಾಟಕದ ಜಯಲಲಿತ ಆಗಲು ಬಂದಿದ್ದಾಳೆ’ ಎಂದುಬಿಟ್ಟಿದ್ದ. ಇದು ಅವನ ವ್ಯಕ್ತಿತ್ವಕ್ಕೆ ಸರಿಯಾದ ಮಾತು, ಆದರೆ ಆ ಸಭೆಯಲ್ಲಿದ್ದ ಸಿದ್ದರಾಮಯ್ಯ ಮತ್ತು ದೇವೇಗೌಡರು ಸಭ್ಯತೆಯ ಎಲ್ಲೆ ಮೀರಿದ್ದ ಶಿವರಾಮೇಗೌಡನ ಮಾತಿಗೆ ಆಕ್ಷೇಪವೆತ್ತಿರಲಿಲ್ಲ. ಬದಲಿಗೆ ದೇವೇಗೌಡರ ಮಾತಿಗೆ ಅವಕಾಶ ದೊರೆತಾಗ ‘ನಾನು ಭಾಷಣ ಮಾಡಲ್ಲ. ಶಿವರಾಮೇಗೌಡರ ಮಾತೇ ಅಂತಿಮ’ ಎಂದು ಹೇಳಿ ದಂಗುಬಡಿಸಿದ್ದರು. ಅಂತು ಇವರಿಗೇನೂ ಕೇಡುಗಾಲ ಎಂದುಕೊಂಡು ಸುಮ್ಮನೆ ಊರಿಗೆ ಬಂದಿದ್ದೆ.

ಆ ದಿನ ಸಾಯಂಕಾಲ ಮನೆ ಮುಂದೆ ಒಂದು ಬೈಕ್ ಬಂದು ನಿಂತಿತು. ಅಲ್ಲದೆ ‘ನಮಸ್ಕಾರ ಕಣಣ್ಣಾ’ ಎಂದಿತು. ನಸುಗತ್ತಲಾದ್ದರಿಂದ ಯಾರೆಂದು ಅರಿವಾಗಲಿಲ್ಲ ಹತ್ತಿರ ಹೋದೆ. ‘ನಾನು ಕಣಣ್ಣ ಎಂದ’. ‘ನಾನು ಮತ್ತೂ ಅನುಮಾನಿಸಿ ಗೊತ್ತಾಗಲಿಲ್ಲ’ ಎಂದೆ. ‘ನಾನು ಕಣಣ್ಣ, ಅದೇ ಗಂಗಾಧರಮೂರ್ತಿ’ ಎಂದ. ಆಗ ತಿಳಿಯಿತು. ನಮ್ಮೂರ ಮಗಳ ಮಗನಾದ ಈತ ತನ್ನ ಪರಿಚಯ ಹೇಳಿಕೊಳ್ಳಲು ‘ನಾನು ಗಂಗಾಧರ ಮೂರ್ತಿ ಕೊಂದವನು’ ಎಂದು ಹೇಳಿಕೊಳ್ಳುತ್ತಿದ್ದಾನೆ’ ಎಂಬುದು ಅರಿವಿಗೆ ಬಂತು. ಒಂದುಕ್ಷಣ ಅಳುಕಾಗಿ ‘ಏನಪ್ಪ ಸಮಾಚಾರ’ ಎಂದೆ. ‘ಏನಿಲ್ಲ ಕಣಣ್ಣ ನಿಮ್ಮತ್ರ ಏನೋ ಹೇಳಬೇಕಾಗ್ಯದೆ’ ಎಂದ. ‘ಏನು ವಿಷಯ’ ಎಂದೆ. ‘ಅದೆ ಶಿವರಾಮೇಗೌಡನ ವಿಷಯ ಕಣಣ್ಣ’ ಎಂದೆ. ‘ಅಯ್ಯೊ ಅವುನ ವಿಷಯ ಬಂದೂ ಬಂದೂ ಸಾಕಾಗ್ಯದೆ ಕಣಪ್ಪ. ಈಗವುನ್ನೇನು ಮುಟ್ಟಂಗಿಲ್ಲ. ದೇವೇಗೌಡ್ರು ಕರಕಂಡು ಬಂದು ಎಂ.ಪಿ ಮಾಡ್ಯವುರೆ’ ಎಂದೆ. ಆದ್ರು ಬರಿಬೇಕು ಬುಡಬಾರ್ದು ಕಣಣ್ಣ’ ಎಂದ. ‘ಆಯ್ತು ಬರಿಯನ ಅದೇನೇಳು’ ಎಂದೆ. ನೀವೊಂದೆರಡು ದಿನ ಬಿಡುವಾಗಿ ಸಿಕ್ಕಬೇಕಲ್ಲಣ್ಣ’ ಎಂದ. ‘ಸಿಗನ ತಗೊ ನನಿಗೇನು ಕ್ಯಲ್ಸಿಲ್ಲ’ ಎಂದೆ. ಶಿವರಾಮೇಗೌಡ ಕೋರ್ಟಿಗೋಗಬಹುದು’ ಎಂದ. ‘ಯಾಕೆ!’ ಎಂದೆ. ‘ಗಂಗಾಧರ ಮೂರ್ತಿ ಕೊಲೇಲಿ ನಮ್ಮನ್ನ ಹ್ಯಂಗೆ ಬಳಸಿಗಂಡ ಅನ್ನದನ್ಯಲ್ಲ ಹೇಳತಿನಿ’ ಎಂದ.

‘ನೋಡ್ರಪ್ಪ ಈಚೆಗೆ ನಮ್ಮ ಕೋರ್ಟಿಗೆ ಯಾರೂ ಹೆದರತಾಯಿಲ್ಲ. ಕೇಸಿನ ತೀರ್ಪು ಬರಕ್ಕೆ ಕನಿಷ್ಟ ಇಪ್ಪತ್ತು ವರ್ಷ ಆಯ್ತಾ ಅದೆ. ಅಷ್ಟೊತ್ತಿಗೆ ಶಿವರಾಮ ನೀನು ನಾನು ಯಾರೂ ಇರದಿಲ್ಲ ಆದ್ರಿಂದ ಧೈರ್ಯವಾಗಿ ಹೇಳು ಬರಿಯನ’ ಎಂದೆ. ಬರಿಬೇಕು ಕಣಣ್ಣ. ಇವತ್ತು ನಾನು ಬಾಳ ಯಾತನೇಲಿದ್ದಿನಿ’ ಎಂದ. ಒಂದಿಷ್ಟು ಸುಮ್ಮನಾದ. ನಾನು ಗಂಗಾಧರ ಮೂರ್ತಿ ಕೊಲೆ ಕಾಡಿಸುತ್ತಿರಬಹುದೆ. ಈತ ಹೊಡೆದ ಮಚ್ಚಿನೇಟಿಗೆ ಮರು ಮಾತನಾಡದೆ ಬೈಕ್ ಸಮೇತ ಭೂಮಿಗೊರಗಿದ. ಆ ದೃಶ್ಯ ಜೀವ ಹಿಂಡುತ್ತಿರಬಹುದೆ. ಎಂದು ಒಂದುಕ್ಷಣ ಯೋಚಿಸಿ ‘ಯಾಕಪ್ಪ ಏನಾಯ್ತು’ ಎಂದೆ. ‘ನನಿಗೆ ಜೀವಾವಧಿ ಆಯ್ತು ಕಣಣ್ಣ. ಅದೇ ಟೈಮಿಗೆ ನನಿಗೆ ಮಗ ಹುಟ್ಟಿದ. ಇತ್ತಗೆ ಹೆರಿಗೆ ಆದ್ರೆ ಅತ್ತಗೆ ನಾನು ಜೈಲಿಗೋದೆ. ಹೋಗುವಾಗ ನನ್ನೆಡ್ತಿಗೆ ಧೈರ್ಯ ಹೇಳಿ ಹೋಗಿದ್ದೆ. ಪೆರೋಲ್ ಮ್ಯಾಲೆ ಬಿಡುಗಡೆ ಆಯ್ತು ಸಾ… ಅದು ಎಂಟು ದಿನಕ್ಕೆ ಮಾತ್ರ. ಊರಿಗೆ ಬಂದು ನೋಡ್ತಿನಿ. ಮಗನಿಗಾಗ್ಲೆ ಹನ್ನೆರಡೊರ್ಸ. ಅವುನ ಜೊತೆ ಅರಾಮಾಗಿದ್ದು ಪುನಃ ಜೈಲಿಗೋದೆ ಕಣಣ್ಣ. ಒಳ್ಳೆ ನಡವಳಿಕೆ ಕಾರಣಕ್ಕೆ ಬೇಗ ಬಿಡುಗಡೆಯಾಗಕ್ಕೆ ಕುಮಾರಸ್ವಾಮಿಗೆ ಹೇಳೋದಕ್ಕೆ ಯವಸ್ಥೆ ಮಾಡಿದ್ದೆ ಕಣಣ್ಣ. ಅಷ್ಟರಲ್ಲಿ ನನ್ನ ಮಗ ಆತ್ಮಹತ್ಯೆ ಮಾಡಿಕೊಂಡ ಅನ್ನ ಸುದ್ದಿ ಬಿತ್ತು ಕಣಣ್ಣ’ ಎಂದು ಹೇಳುವಷ್ಟರಲ್ಲಿ, ಲೋಕೇಶನ ಗಂಟಲು ಬಿಗಿದು ಬಂದು ಕಣ್ಣು ತುಂಬಿಕೊಂಡವು. ‘ಅಯ್ಯೊ ಯಂತ ದುರಂತನಯ್ಯ’ ಎಂದು ಉದ್ಘಾರ ತೆಗೆದ. ನಾನು, ಬರೋಬ್ಬರಿ 26 ವರ್ಷಕ್ಕೆ ಮಗುಚಿಕೊಂಡೆ. ಆಗ ಇದೇ ಲೋಕೇಶ್‍ನಂತೆ ನನಗೂ ದುಃಖ ಒತ್ತರಿಸಿ ಬಂದು ಗೆಳೆಯರು ಸುಮ್ಮನಿರಿಸಿದರೂ ಆಗದೇ ಗೊಳೋ ಎಂದು ಅತ್ತು ಬಿಟ್ಟಿದ್ದೆ. ಎದೆಯ ದುಃಖ ಬಸಿದ ನಂತರ ಸಮಾಧಾನ ಮಾಡಿಕೊಂಡು ಆಲಿಸಿದೆ. ನನ್ನ ಅಳುವಿಗೆ ಕಾರಣನಾಗಿದ್ದ ಗಂಗಾಧರ ಮೂರ್ತಿ ಮಗ ರವಿವರ್ಮನ ಅಳು ನಿಂತಿತ್ತು. ತನ್ನ ತಂದೆಯ ಶವಸಂಸ್ಕಾರ ಮುಗಿದ ಮೇಲೆ ಇದ್ದಕ್ಕಿದ್ದಂತೆ ಅಪ್ಪನನ್ನ ನೆನೆಸಿಕೊಂಡು ಯಾರೂ ಸುಮ್ಮನಿರಿಸಲಾಗದ ಅಳುವಿಗೆ ತುತ್ತಾಗಿತ್ತು. ಈಗ ಸುಸ್ತಾಗಿ ಸುಮ್ಮನಾಗಿತ್ತು. ಆ ದಾರುಣ ಸಂದರ್ಭ ನನ್ನ ಮನಸ್ಸಿನಲ್ಲಿ ಉಳಿದುಬಿಟ್ಟಿತ್ತು. ಆವತ್ತು ಅಪ್ಪನನ್ನು ಕಳೆದುಕೊಂಡು ಮಗು ರವಿವರ್ಮ ಅಳುತ್ತಿದ್ದರೆ, ಈಗ ಮಗನನ್ನು ಕಳೆದುಕೊಂಡು ಲೋಕೇಶ್ ದುಃಖಿತನಾಗಿದ್ದ. ಬಹುಶಃ ಇಂತಹ ದುಃಖವೇ ಆತನನ್ನ ಶಿವರಾಮೇಗೌಡನ ವಿರುದ್ಧ ಸೇಡಿಗೆ ಪ್ರಚೋದಿಸಿರಬಹುದು ಎಂದುಕೊಳ್ಳುತ್ತಿರುವಾಗ, ಲೋಕೇಶ್ ‘ಮಗನ ಸಾವಿನ ದುಃಖ ಮರಿಯಕ್ಕೆ ಆಗಾಗ್ಗೆ ಕುಡಿತಿನಿ ಕಣಣ್ಣ’ ಎಂದ. ಈ ಬಗ್ಗೆ ನಾನು ಏನೂ ಹೇಳಲಾಗಲಿಲ್ಲ. ಆದರೆ, ಜೈಲಿನಲ್ಲಿದ್ದ ಅಪ್ಪ ಪೆರೋಲ್ ಮೇಲೆ ಬಂದು ಮಗನನ್ನ ಮಾತನಾಡಿಸಿ ಮುದ್ದಾಡಿ ಮತ್ತೆ ಜೈಲಿಗೆ ಹೋದಾಗ, ಆ ಹುಡುಗ ಏನು ಯೋಚಿಸಿರಬಹುದು. ಶಾಲೆಯಲ್ಲಿ ಯಾರಾದರೂ ಹಂಗಿಸಿರಬಹುದೇ ಎಂದೆಲ್ಲ ಆ ಯೋಚಿಸುತ್ತಿರುವಾಗ ‘ಬರ್ತಿನಿ ಕಣಣ್ಣ ಬಿಡುವು ಮಾಡಿಕೊಂಡು ಸಿಕ್ಕಿ ಯಲ್ಲನು ಹೇಳ್ತಿನಿ’ ಎಂದು ಹೊರಟ. ಈಗ ಅದ್ಯಾವುದರಿಂದ ಏನೂ ಪ್ರಯೋಜನವಿಲ್ಲ ಎಂದುಕೊಂಡರೂ, ಗಂಗಾಧರ ಮೂರ್ತಿ ಕೊಲೆ ನಡೆದು ಇಪ್ಪತ್ತಾರು ವರ್ಷಗಳಾಗಿವೆ. ಈ ನಡುವೆ ರಾಜಕೀಯವಾಗಿ ಮತ್ತು ಮತೀಯವಾಗಿ ನೂರಾರು ಕೊಲೆಗಳಾಗಿವೆ. ಆದರೂ ಇದೊಂದು ಕೊಲೆಗೆ ಸಂಬಂಧಿಸಿದವರು ಅಶಾಂತಿ ಮತ್ತು ದುಃಖದಿಂದ ತತ್ತರಿಸುತ್ತಿರುವುದು ಗೋಚರವಾಗುತ್ತಿದ್ದಂತೆ ಆಶ್ಚರ್ಯವಾಗತೊಡಗಿತು. ನಿಜಕ್ಕೂ ಅದೊಂದು ಅಮಾಯಕನ ಕೊಲೆಯಾಗಿತ್ತು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುತ್ತಿದ್ದಾರೆ, ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು: ಮಲ್ಲಿಕಾರ್ಜುನ ಖರ್ಗೆ

0
'ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮಮಂದಿರದ ಮೇಲೆ ಬುಲ್ಡೋಜರ್ ಹರಿಸಲಿದೆ' ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಚುನಾವಣಾ ಆಯೋಗ...