ಹರಿಯಾಣದ ಜಿಂದ್ನಲ್ಲಿರುವ ಗೋಶಾಲೆಯಿಂದ ಪತ್ತೆಯಾದ ಸುಟ್ಟ ದೇಹಗಳು ಮತ್ತು ಎಸ್ಯುವಿ ಕಾರ್ನಲ್ಲಿ ಪತ್ತೆಯಾದ ರಕ್ತದ ಕಲೆಗಳು ಜುನೈದ್ ಮತ್ತು ನಾಸಿರ್ ಅವರದ್ದೇ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ದೃಢಪಡಿಸಿದೆ ಎಂದು ರಾಜಸ್ಥಾನ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಪಹರಣಕ್ಕೊಳಗಾಗಿದ್ದ ರಾಜಸ್ಥಾನದ ಭರತ್ಪುರ ಮೂಲದ ವ್ಯಕ್ತಿಗಳ ಶವಗಳು ಫೆಬ್ರವರಿ 16ರಂದು ಹರಿಯಾಣದ ಭಿವಾನಿ ಜಿಲ್ಲೆಯಲ್ಲಿ ವಾಹನದೊಳಗೆ ಪತ್ತೆಯಾಗಿದ್ದವು. ಮೃತರ ಕುಟುಂಬಗಳು ಅವರನ್ನು ಬಜರಂಗದಳದ ಗೂಂಡಾಗಳು ಹೊಡೆದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
“ಎಫ್ಎಸ್ಎಲ್ (ವಿಧಿ ವಿಜ್ಞಾನ ಪ್ರಯೋಗಾಲಯ) ವರದಿಯು ಜಿಂದ್ನ (ಹರಿಯಾಣ) ಗೋಶಾಲಾದಿಂದ ವಶಪಡಿಸಿಕೊಂಡ ಎಸ್ಯುವಿಯಲ್ಲಿನ ಸುಟ್ಟ ದೇಹಗಳು ಮತ್ತು ರಕ್ತದ ಕಲೆಗಳು ನಾಸಿರ್ ಮತ್ತು ಜುನೈದ್ ಅವರದ್ದು ಎಂದು ದೃಢಪಡಿಸುತ್ತದೆ” ಎಂದು ಭರತ್ಪುರ ರೇಂಜ್ ಐಜಿ ಗೌರವ್ ಶ್ರೀವಾಸ್ತವ್ ಹೇಳಿದ್ದಾರೆ.
ಸುಟ್ಟ ವಾಹನವು ಚಾಸಿಸ್ ನಂಬರ್ಗೆ ಹೊಂದಿಕೆಯಾಗುತ್ತಿದೆ ಎಂದು ಅವರು ಹೇಳಿದರು, ಆದರೆ ಒಳಗಿರುವ ದೇಹಗಳನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಸ್ಥಳದಿಂದ ಎಫ್ಎಸ್ಎಲ್ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ನಾಸಿರ್ ಮತ್ತು ಜುನೈದ್ ಅವರ ಕುಟುಂಬದ ಸದಸ್ಯರ ರಕ್ತದ ಮಾದರಿಗಳನ್ನು ಸಹ ಸಂಗ್ರಹಿಸಲಾಗಿದ್ದು, ಎಸ್ಯುವಿಯಲ್ಲಿ ಕಂಡುಬಂದ ರಕ್ತದ ಕಲೆಗಳು ಮತ್ತು ಸುಟ್ಟ ವಾಹನದಲ್ಲಿ ಪತ್ತೆಯಾದ ಮೂಳೆಗಳು ಹೊಂದಾಣಿಕೆಯಾಗುತ್ತವೆ. ವರದಿಯು ಈಗ ಎರಡೂ ಶವಗಳ ಗುರುತನ್ನು ದೃಢಪಡಿಸಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಇಬ್ಬರು ಮುಸ್ಲಿಮರ ಹತ್ಯೆ ವಿವಾದ; ರಾಜಸ್ಥಾನ ಪೊಲೀಸರ ವಿರುದ್ಧ ಹರಿಯಾಣ ಪೊಲೀಸರಿಂದ ಪ್ರಕರಣ ದಾಖಲು
”ನಮ್ಮ ತಂಡಗಳು ಹರಿಯಾಣದಲ್ಲಿ ಕ್ಯಾಂಪ್ ಮಾಡುತ್ತಿವೆ ಮತ್ತು ಆರೋಪಿಗಳನ್ನು ಹಿಡಿಯಲು ಹರಿಯಾಣ ಪೊಲೀಸರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿವೆ” ಎಂದು ಭರತ್ಪುರ ರೇಂಜ್ ಐಜಿ ಗೌರವ್ ಶ್ರೀವಾಸ್ತವ್ ಹೇಳಿದರು.
ಘಟನೆ ಬಗ್ಗೆ ಮಾಹಿತಿ:
ಹರಿಯಾಣದ ಗಡಿಯಲ್ಲಿರುವ ರಾಜಸ್ಥಾನದ ಘಟ್ಮೀಕಾ ಗ್ರಾಮದಲ್ಲಿ ಫೆ.16ರ ರಾತ್ರಿ ಭಾರೀ ಪೊಲೀಸರು ಜಮಾಯಿಸಿದ್ದರು. ಆದರೆ ರಾತ್ರಿಯ ವಿಲಕ್ಷಣ ಮೌನವು ಬೆಳಿಗ್ಗೆ ಇಲ್ಲವಾಗಿತ್ತು. ಘಟಮೀಕಾದ ಇಬ್ಬರು ಮುಸ್ಲಿಮರನ್ನು ಹತ್ಯೆಗೈದವರ ವಿರುದ್ಧ ಪ್ರತಿಭಟಿಸಲು ಸಮೀಪದ ಹಳ್ಳಿಗಳಿಂದ ಸುಮಾರು 2,000ಕ್ಕೂ ಜನರು ಧಾವಿಸಿದ್ದರು.
ರಾಜಸ್ಥಾನ-ಹರಿಯಾಣ ಗಡಿಗೆ ಸಮೀಪವಿರುವ ಹರಿಯಾಣದಲ್ಲಿ ನಾಸಿರ್ ಮತ್ತು ಜುನೈದ್ ಅವರನ್ನು ಹತ್ಯೆ ಮಾಡಿರುವ ಕುರಿತು ‘ದಿ ವೈರ್’ ವರದಿ ಮಾಡಿತ್ತು. ಈ ಅಪರಾಧಕ್ಕೆ ಸಂಬಂಧಿಸಿದ ಕಾರಣಗಳು ಮತ್ತು ಸ್ವಯಂಘೋಷಿತ ‘ಗೋ ರಕ್ಷಕರು’ ಎಂದು ಕರೆದುಕೊಂಡಿರುವ ಆರೋಪಿಗಳಿಂದಾಗಿ ಭೀತಿ ಉಂಟಾಗಿದೆ.
(ರಾಷ್ಟ್ರ ರಾಜಧಾನಿಯಿಂದ ಕೇವಲ 100 ಕಿಲೋಮೀಟರ್ಗಳಷ್ಟು ದೂರದಲ್ಲಿ ಘಟನೆ ಈ ನಡೆದಿದ್ದು, ಗೋರಕ್ಷಣೆ ಹೆಸರಲ್ಲಿ ದುಷ್ಕೃತ್ಯ ಜರುಗಿದೆ. ರಾಜಸ್ಥಾನ-ಹರಿಯಾಣ ಗಡಿಯಲ್ಲಿದ್ದ ಇಬ್ಬರು ಮುಸ್ಲಿಮರನ್ನು ದುಷ್ಕರ್ಮಿಗಳ ಗುಂಪು ಅಪಹರಿಸಿ, ಕಾರಿನೊಳಗೆ ಕೂಡಿಹಾಕಿ ಜೀವಂತವಾಗಿ ಕೊಂದಿರುವ ಆರೋಪ ಕೇಳಿಬಂದಿತ್ತು.)
ಘಟಮೀಕದಲ್ಲಿ ಸಣ್ಣ ರೈತರು ಮತ್ತು ಲಾರಿ ಚಾಲಕರು ಹೆಚ್ಚಾಗಿ ವಾಸಿಸುತ್ತಿದ್ದು, 2017ರಲ್ಲಿ ಉಮರ್ ಖಾನ್ ಹತ್ಯೆಯಾಗಿತ್ತು. ಆ ನಂತರದಲ್ಲಿ ಈ ಗ್ರಾಮದಲ್ಲಿ ಅಂತಹ ಉದ್ವಿಗ್ನ ವಾತಾವರಣ ಕಂಡುಬಂದಿರಲಿಲ್ಲ.