ಹರಿಯಾಣದ ಸೋನಿಪತ್ನ ಸ್ಯಾಂಡಲ್ ಕಲಾನ್ ಗ್ರಾಮದಲ್ಲಿ ಭಾನುವಾರ ಸುಮಾರು 20 ಜನರ ಗುಂಪೊಂದು ಮಸೀದಿಯನ್ನು ಧ್ವಂಸಗೊಳಿಸಿ ಅಲ್ಲಿ ನಮಾಜ್ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿದ್ದಾರೆ. ಆನಂತರ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ. ಈ ದಾಳಿ ನಡೆಸಿದವರು ಅದೇ ಗ್ರಾಮದ ಸ್ಥಳೀಯರು ಎಂದು ಹೇಳಲಾಗುತ್ತಿದೆ.
ಮುಸ್ಲಿಂ ಸಮುದಾಯದವರು ಗ್ರಾಮದಲ್ಲಿ ನಿರ್ಮಿಸಿರುವ ಸಣ್ಣ ಮಸೀದಿಯಲ್ಲಿ ರಂಜಾನ್ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಈ ವೇಳೆ 15-20 ಜನರ ಗುಂಪು ಶಸ್ತ್ರಾಸ್ತ್ರ ಹಿಡಿದು ಪ್ರಾರ್ಥನೆ ಸಲ್ಲಿಸುತ್ತಿದ್ದವರ ಮೇಲೆ ಹಲ್ಲೆ ಮಾಡಿದ್ದಾರೆ. ದಾಳಿಕೋರರು ಕೈಯಲ್ಲಿ ಲಾಠಿ (ಬಿದಿರು ಕೋಲು) ಹಿಡಿದುಕೊಂಡು ಗ್ರಾಮದ ಬೀದಿಗಳಲ್ಲಿ ಸಂಚರಿಸುತ್ತಿರುವ ಚಿತ್ರಗಳು ಹೊರಬಿದ್ದಿವೆ.
ಈ ಘಟನೆಯ ಹಿಂದಿನ ಕಾರಣ ಏನು ಎಂಬ ಬಗ್ಗೆ ಸ್ಪಷ್ವವಾಗಿ ತಿಳಿದುಬಂದಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ 19 ಜನರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, 16 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯಲ್ಲಿ ಇಸ್ತಾಕ್ ಅಲಿ, ಅಲಾಮಿರ್, ಸಬೀರ್ ಅಲಿ, ಫರ್ಯಾದ್, ಅನ್ಸರ್ ಅಲಿ, ಜುಲೇಖಾ, ಅಲಿ ತಾಬ್, ನರ್ಗೀಸ್ ಮತ್ತು ಜರೀನಾ ಎಂಬ ಒಂಬತ್ತು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸೋನಿಪತ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋನಿಪತ್ ಪ್ರಮುಖ ಕೈಗಾರಿಕಾ ಪ್ರದೇಶವಾಗಿದ್ದು, ಈ ಘಟನೆ ನಡೆದ ಬಳಿಕ ಪೊಲೀಸರು ಪ್ರಕರಣದ ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬಿಹಾರ: ರಾಮನವಮಿ ಹಿಂಸಾಚಾರದ ಮಾಸ್ಟರ್ ಮೈಂಡ್, ಬಜರಂಗದಳ ಸಂಚಾಲಕ ಪೊಲೀಸರಿಗೆ ಶರಣು