Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಗುಬ್ಬಿ: ಸೋಲಿಲ್ಲದ ಸರದಾರ ವಾಸಣ್ಣನವರ ಐದನೇ ಗೆಲುವು ಸುಲಭವೆ?

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಗುಬ್ಬಿ: ಸೋಲಿಲ್ಲದ ಸರದಾರ ವಾಸಣ್ಣನವರ ಐದನೇ ಗೆಲುವು ಸುಲಭವೆ?

- Advertisement -
- Advertisement -

ಮೊದಲ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಕಂಡು, ಆನಂತರ ಸತತವಾಗಿ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಜಯ ಸಾಧಿಸಿ ಸೋಲಿಲ್ಲದ ಸರದಾರ ಅನಿಸಿಕೊಂಡಿರುವ, ಒಂದಷ್ಟು ದಿನಗಳ ಕಾಲ ಸಚಿವರೂ ಆಗಿದ್ದ ಗುಬ್ಬಿಯ ಎಸ್.ಆರ್ ಶ್ರೀನಿವಾಸ್ (ವಾಸಣ್ಣ) ತಮ್ಮ 5ನೇ ವಿಧಾನಸಭಾ ಚುನಾವಣೆಯ ತಯಾರಿ ಆರಂಭಿಸಿದ್ದಾರೆ. ಈ ಬಾರಿ ವಾಸಣ್ಣನವರು ತಮ್ಮ ಕಾರ್ಯತಂತ್ರವನ್ನು ಬದಲಿಸಿದ್ದಾರೆ. ಆರಂಭದಲ್ಲಿ ಕಾಂಗ್ರೆಸ್‌ನಲ್ಲಿದ್ದು, ನಂತರ ಪಕ್ಷೇತರ ಶಾಸಕನಾಗಿದ್ದ ಅವರು ಕಳೆದ ಮೂರು ಚುನಾವಣೆಗಳನ್ನು ಜೆಡಿಎಸ್ ಚಿಹ್ನೆಯಡಿ ಗೆದ್ದಿದ್ದರು. ಚುನಾವಣೆ ಹತ್ತಿರವಿದ್ದಾಗ ಜೆಡಿಎಸ್ ತೊರೆದು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಬಯಸಿದ್ದಾರೆ. ಸದ್ಯ ಕಾಂಗ್ರೆಸ್‌ಗೆ ಅಷ್ಟೇನೂ ಒಲವಿಲ್ಲದ ಗುಬ್ಬಿಯಲ್ಲಿ ತಮ್ಮ ವೈಯಕ್ತಿಕ ವರ್ಚಸ್ಸಿನ ಮೂಲಕ ಚುನಾವಣೆ ಎದುರಿಸಲು ಸಿದ್ಧಿವಾಗಿದ್ದಾರೆ. ಅವರು ತಮ್ಮ 5ನೇ ಯತ್ನದಲ್ಲಿ ಸಫಲರಾಗುತ್ತಾರೆ ಎಂಬ ಪ್ರಶ್ನೆಗೂ ಮುನ್ನ ಕ್ಷೇತ್ರದ ರಾಜಕೀಯ ಇತಿಹಾಸವನ್ನೊಮ್ಮೆ ಮೆಲುಕು ಹಾಕೋಣ.

1951ರಲ್ಲಿ ಸಿ.ಎಂ ಅಣ್ಣಪ್ಪಯ್ಯ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. 1957ರಲ್ಲಿ ಸ್ವತಂತ್ರ ಅಭ್ಯರ್ಥಿ ಸಿ.ಜೆ ಮುಕ್ಕಣ್ಣಪ್ಪ ಗೆದ್ದು ಬಂದರು. 1962ರಲ್ಲಿಯೂ ಸ್ವತಂತ್ರ ಅಭ್ಯರ್ಥಿ ವಿ.ಎಂ ದೇವ ಆಯ್ಕೆಯಾದರು. 1967ರಲ್ಲಿ ಕಾಂಗ್ರೆಸ್‌ನ ಚಿಕ್ಕೇಗೌಡ ಗೆಲ್ಲುವ ಮೂಲಕ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಂಡರು.

1972ರಲ್ಲಿ ಗಟ್ಟಿ ಚಂದ್ರಶೇಖರ್ ಕಾಂಗ್ರೆಸ್‌ನಿಂದ ಗೆಲುವು ಕಂಡರೆ, 1978ರಲ್ಲಿ ಅವರೇ ಇಂದಿರಾ ಕಾಂಗ್ರೆಸ್‌ನಿಂದ ಗೆದ್ದು ಬಂದರು. 1983ರಲ್ಲಿ ಜನತಾಪಕ್ಷದ ಎಸ್.ರೇವಣ್ಣನವರು ಕಾಂಗ್ರೆಸ್‌ನ ಗಟ್ಟಿ ಚಂದ್ರಶೇಖರ್‌ರವರನ್ನು ಸೋಲಿಸಿದರು.

ಜಿ.ಎಸ್ ಶಿವನಂಜಪ್ಪ

1985 ಮತ್ತು 1989 ರಲ್ಲಿ ಲಿಂಗಾಯಿತ ಸಮುದಾಯದ ಜಿ.ಎಸ್ ಶಿವನಂಜಪ್ಪನವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಅಲ್ಲದೇ 1994ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಕಂಡು ಹ್ಯಾಟ್ರಿಕ್ ಸಾಧನೆ ಮಾಡಿದರು. ಅಲ್ಲಿಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರ ಆಡಳಿತಾವಧಿ ಕೊನೆಯಾಯಿತು. ಆನಂತರ ಕಾಂಗ್ರೆಸ್ ಗುಬ್ಬಿಯಲ್ಲಿ ಗೆದ್ದದ್ದೇ ಇಲ್ಲ. 1999ರಲ್ಲಿ ನಾಲ್ಕನೇ ಯತ್ನದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಜಿ.ಎಸ್ ಶಿವನಂಜಪ್ಪನವರನ್ನು ಜೆಡಿಎಸ್ ಪಕ್ಷದ ಎನ್.ವೀರಣ್ಣಗೌಡ ಮಣಿಸಿದರು. ಅಲ್ಲಿಗೆ ಲಿಂಗಾಯಿತ ಸಮುದಾಯದಿಂದ ಆಯ್ಕೆಯಾದ ಕೊನೆಯ ಶಾಸಕರೂ ಅವರೇ ಆಗಿದ್ದಾರೆ.

ವಾಸಣ್ಣನವರ ಆಗಮನ

2000ರಲ್ಲಿ ಜಿ.ಪಂ ಸದಸ್ಯರಾಗಿ ಆಯ್ಕೆಯಾಗಿದ್ದ ಒಕ್ಕಲಿಗ ಸಮುದಾಯದ ವಾಸಣ್ಣನವರು 2004ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಜಿ.ಎಸ್ ಶಿವನಂಜಪ್ಪರವರನ್ನು 11,577 ಮತಗಳ ಅಂತರದಿಂದ ಸೋಲಿಸಿ ಮೊದಲ ಬಾರಿಗೆ ಶಾಸಕರಾದರು. ಅಲ್ಲಿಂದೀಚೆಗೆ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. 2008ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ ವಾಸಣ್ಣನವರು ಬಿಜೆಪಿ ಅಭ್ಯರ್ಥಿ ಸಿ.ವಿ ಮಹದೇವಯ್ಯನವರನ್ನು 14,672 ಮತಗಳ ಅಂತರದಿಂದ ಮಣಿಸಿದರು. ವಾಸಣ್ಣ 52,302 ಮತಗಳನ್ನು ಪಡೆದರೆ, ಬಿಜೆಪಿಯ ಸಿ.ವಿ ಮಹದೇವಯ್ಯ 37,630 ಮತಗಳನ್ನು ಪಡೆದರು. ಕಾಂಗ್ರೆಸ್‌ನ ಶಿವಕುಮಾರ್‌ರವರು 27,280 ಮತಗಳಿಗೆ ಸೀಮಿತಗೊಂಡರು.

2013ರ ಚುನಾವಣೆಯಲ್ಲಿ ವಾಸಣ್ಣನವರು ಜೆಡಿಎಸ್‌ನಿಂದ ಕಣಕ್ಕಿಳಿದು 58,783 ಮತಗಳನ್ನು ಪಡೆದು ಹ್ಯಾಟ್ರಿಕ್ ಗೆಲುವು ಕಂಡರು. ಆಗ ಕೆಜೆಪಿಯಿಂದ ಸ್ಪರ್ಧಿಸಿದ್ದ ಜಿ.ಎನ್ ಬೆಟ್ಟಸ್ವಾಮಿಯವರು 51,539 ಮತಗಳನ್ನು ಪಡೆದು ನಿಕಟ ಪೈಪೋಟಿ ನೀಡಿದ್ದರು. ಕಾಂಗ್ರೆಸ್ ಪಕ್ಷದ ಹೊನ್ನಗಿರಿಗೌಡ 18,548 ಮತಗಳಿಗೆ ಕುಸಿದರೆ, ಬಿಜೆಪಿಯ ನಟರಾಜ್‌ರವರು ಕೇವಲ 2,392 ಮತಗಳನ್ನಷ್ಟೇ ಪಡೆದು ಮುಖಭಂಗ ಅನುಭವಿಸಿದ್ದರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮಧುಗಿರಿ: ಕೆ.ಎನ್. ರಾಜಣ್ಣ, ವೀರಭದ್ರಯ್ಯ ನಡುವಿನ ಹಣಾಹಣಿಗೆ ಬಿಜೆಪಿ ಎಂಟ್ರಿ

2018ರ ಚುನಾವಣೆಯಲ್ಲಿ ಮತ್ತೆ ಜೆಡಿಎಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ನಡೆಯಿತು. ಜೆಡಿಎಸ್‌ನ ವಾಸಣ್ಣನವರು 55,572 ಮತಗಳನ್ನು ಪಡೆದು ನಾಲ್ಕನೇ ಗೆಲುವು ಕಂಡರು. ಬಿಜೆಪಿಯ ಜಿ.ಎನ್ ಬೆಟ್ಟಸ್ವಾಮಿಯವರು 46,491 ಮತಗಳನ್ನು ಪಡೆದು 9,081 ಮತಗಳ ಅಂತರದಲ್ಲಿ ಸೋಲೊಪ್ಪಿಕೊಂಡರು. ಕಾಂಗ್ರೆಸ್‌ನ ಕೆ.ಕುಮಾರ್ 13,938 ಮತಗಳನ್ನು ಪಡೆದರೆ, ಸ್ವತಂತ್ರ ಅಭ್ಯರ್ಥಿ ಎಸ್.ಟಿ ದಿಲೀಪ್ ಕುಮಾರ್ 9,735 ಮತಗಳನ್ನು ಪಡೆದಿದ್ದರು.

ಅಂದಾಜು ಜಾತಿವಾರು ಮತಗಳು

ಒಟ್ಟು ಮತಗಳು: 1,90,000; ಲಿಂಗಾಯಿತ: 40,000; ಪರಿಶಿಷ್ಟ ಜಾತಿ: 35,000; ಒಕ್ಕಲಿಗರು: 35,000; ಗೊಲ್ಲರು (ಯಾದವರು): 25,000; ಪರಿಶಿಷ್ಟ ಪಂಗಡ: 11,000; ಮುಸ್ಲಿಂ: 11,000; ಕುರುಬರು: 10,000; ತಿಗಳರು: 8,000; ಇತರೆ: 15,000

ಹೊನ್ನಗಿರಿಗೌಡ

ಇದುವರೆಗೂ ಗುಬ್ಬಿಯಲ್ಲಿ ಲಿಂಗಾಯಿತ ಮತ್ತು ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳೆ ಶಾಸಕರಾಗುತ್ತಾ ಬಂದಿದ್ದಾರೆ. ಗೊಲ್ಲ ಸಮುದಾಯದ ಜಿ.ಎನ್ ಬೆಟ್ಟಸ್ವಾಮಿಯವರು ಗೆಲುವಿನ ಸನಿಹಕ್ಕೆ ಬಂದು ಮುಗ್ಗರಿಸಿದ್ದಾರೆ.

ಹಾಲಿ ಪರಿಸ್ಥಿತಿ

ವಾಸಣ್ಣನವರು ಮುಖ್ಯ ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರಿನಂತಹ ಒಂದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದು ಬಿಟ್ಟರೆ ಅಂತ ಎದ್ದು ಕಾಣುವ ಅಭಿವೃದ್ಧಿಯಾಗಿಲ್ಲ ಎನ್ನುವುದು ಮತದಾರರ ಆರೋಪ. ಈ ಅಂಶ 20 ವರ್ಷಗಳ ಕಾಲ ಶಾಸಕರಾಗಿರುವ ವಾಸಣ್ಣನವರಿಗೆ ಆಡಳಿತ ವಿರೋಧಿ ಅಲೆಯಾಗಿ ಮಾರ್ಪಟ್ಟಿದೆ. ರಾಜ್ಯಸಭಾ ಚುನಾವಣೆ ವೇಳೆ ಜೆಡಿಎಸ್ ಪಕ್ಷದ ವಿಪ್ ಉಲ್ಲಂಘಿಸಿ ಕಾಂಗ್ರೆಸ್‌ಗೆ ಮತ ಹಾಕಿದ್ದ ಅವರು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯಲ್ಲಿಯೂ ಭಾಗವಹಿಸಿದ್ದರು. ಆನಂತರ ಜೆಡಿಎಸ್ ತೊರೆದು ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದಾರೆ. ತಾವು ಮಾತ್ರವಲ್ಲದೇ ಅಪಾರ ಪ್ರಮಾಣದ ಜೆಡಿಎಸ್ ಕಾರ್ಯಕರ್ತರು ಸಹ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದ್ದಾರೆ. ವೈಯಕ್ತಿಕ ವರ್ಚಸ್ಸು ಹೊಂದಿರುವ ವಾಸಣ್ಣನವರು ನೆಲೆ ಇಲ್ಲದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಬಯಸಿದ್ದು ಅವರಿಗೆ ಟಿಕೆಟ್ ಸಿಕ್ಕಿದೆ.

ಅವರು ಕಾಂಗ್ರೆಸ್ ಸೇರುತ್ತಲೇ ಗುಬ್ಬಿ ಪಟ್ಟಣ ಪಂಚಾಯ್ತಿಯ 9 ಜೆಡಿಎಸ್ ಸದಸ್ಯರು ಮತ್ತು ಒಬ್ಬ ಪಕ್ಷೇತರ ಸದಸ್ಯ ವಾಸಣ್ಣನವರಿಗೆ ಬೆಂಬಲ ಘೋಷಿಸಿದ್ದಾರೆ.

ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯಿತ ಸಮುದಾಯದ ಜಿ.ಎಸ್ ಪ್ರಸನ್ನಕುಮಾರ್, ಒಕ್ಕಲಿಗ ಸಮುದಾಯದ ಹೊನ್ನಗಿರಿಗೌಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅವರು ವಾಸಣ್ಣನವರ ಕಾಂಗ್ರೆಸ್ ಸೇರ್ಪಡೆಯನ್ನು ಆರಂಭದಲ್ಲಿ ವಿರೋಧಿಸಿದ್ದರು. ಆದರೆ ಇವರಿಬ್ಬರಿಗೂ ಟಿಕೆಟ್ ಸಿಗುವುದು ಅನುಮಾನವಾಗಿದೆ.

ಜೆಡಿಎಸ್

ವಾಸಣ್ಣನವರು ಜೆಡಿಎಸ್‌ನಿಂದ ಒಂದು ಕಾಲು ಹೊರಗಿಟ್ಟಿದ್ದಾಗಲೇ ಜೆಡಿಎಸ್ ಪಕ್ಷವು ಪರ್ಯಾಯ ಅಭ್ಯರ್ಥಿಯ ಶೋಧದಲ್ಲಿತ್ತು. ಅವರ ಕಣ್ಣಿಗೆ ಬಿದ್ದ ಒಕ್ಕಲಿಗ ಸಮುದಾಯದ ನಾಗರಾಜುರವರಿಗೆ ಜೆಡಿಎಸ್ ಟಿಕೆಟ್ ಘೋಷಿಸಿದೆ. ಅಷ್ಟೇನೂ ವರ್ಚಸ್ಸು ಹೊಂದಿಲ್ಲದ ಅವರು ದೇವೇಗೌಡರು ಮತ್ತು ಕುಮಾರಸ್ವಾಮಿಯವರ ಕೃಪಾಕಟಾಕ್ಷದಿಂದ ಗೆಲುವು ಸಾಧಿಸುವ ಹಂಬಲದಲ್ಲಿದ್ದಾರೆ.

ನಾಗರಾಜು

ಬಿಜೆಪಿಯಲ್ಲಿ ಬಂಡಾಯದ ಬಿಸಿ

ಗುಬ್ಬಿ ಬಿಜೆಪಿಯಲ್ಲಿ ಅಭ್ಯರ್ಥಿಗಳ ದಂಡೇ ನೆರೆದಿದ್ದು, ಒಂದು ವೇಳೆ ಟಿಕೆಟ್ ಸಿಗದಿದ್ದರೆ ಬಂಡಾಯದ ಬಾವುಟ ಹಾರಿಸಲು ಅವರೆಲ್ಲರೂ ಸಜ್ಜಾಗಿದ್ದಾರೆ. ಕಳೆದೆರಡು ಬಾರಿ ಸೋತಿರುವ ಗೊಲ್ಲ ಸಮುದಾಯದ ಜಿ.ಎನ್ ಬೆಟ್ಟಸ್ವಾಮಿಯವರು ಬಿಜೆಪಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಸೋಲಿನ ಅನುಕಂಪದಿಂದ ಈ ಬಾರಿ ಶತಾಯಗತಾಯ ಗೆಲ್ಲುವ ಆಸೆ ಇಟ್ಟುಕೊಂಡಿದ್ದಾರೆ. ಆದರೆ ಅವರಿಗೆ ಸ್ವಪಕ್ಷೀಯರೇ ತಲೆನೋವಾಗಿದ್ದಾರೆ. ಏಕೆಂದರೆ 2018ರಲ್ಲಿ ಬಿಜೆಪಿ ಟಿಕೆಟ್ ವಂಚಿತ ಲಿಂಗಾಯಿತ ದಿಲೀಪ್ ಕುಮಾರ್ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಅವರ ಸೋಲಿಗೆ ಕಾರಣವಾಯ್ತು. ಅದು ಈ ಬಾರಿಯೂ ಮುಂದುವರಿಯುವ ಲಕ್ಷಣಗಳು ಗೋಚರಿಸುತ್ತಿವೆ. ದಿಲೀಪ್ ಕುಮಾರ್ ಈ ಬಾರಿ ಬಿಜೆಪಿ ಟಿಕೆಟ್ ಬೇಕೇಬೇಕೆಂದು ಪಟ್ಟು ಹಿಡಿದಿದ್ದು ಒಂದು ವೇಳೆ ಟಿಕೆಟ್ ಸಿಗದಿದ್ದರೆ ಬಂಡಾಯವಾಗಿ ಸ್ಪರ್ಧಿಸುವ ಎಚ್ಚರಿಕೆ ನೀಡುತ್ತಿದ್ದಾರೆ.

ಇನ್ನು ಮಾಜಿ ಜಿ.ಪಂ ಸದಸ್ಯರಾದ ಲಿಂಗಾಯಿತ ಸಮುದಾಯದ ಗ್ಯಾಸ್ ಬಾಬು (ಚಂದ್ರಶೇಖರ್) ಸಹ ಟಿಕೆಟ್ ಕೇಳುತ್ತಿದ್ದಾರೆ. ಜೊತೆಗೆ ತಾ.ಪಂ ಸದಸ್ಯ ಅ.ನಾ ಲಿಂಗಪ್ಪ ಸಹ ಬಿಜೆಪಿ ಟಿಕೆಟ್ ರೇಸ್‌ನಲ್ಲಿದ್ದಾರೆ. ಇಷ್ಟು ಸಾಲುವುದಿಲ್ಲ ಎಂಬಂತೆ ಸಚಿವ ವಿ.ಸೋಮಣ್ಣನವರ ಪುತ್ರ ಅರುಣ್ ಸೋಮಣ್ಣನವರ ಹೆಸರು ಗುಬ್ಬಿಯಲ್ಲಿ ಕೇಳಿ ಬರುತ್ತಿದೆ. ಈ ಐದು ಜನರಲ್ಲಿ ಟಿಕೆಟ್ ವಂಚಿತರು ಯಾವ ರೀತಿ ಒಳೇಟು ನೀಡುತ್ತಾರೆ ಎಂಬುದು ನಿಗೂಢವಾಗಿದೆ.

ದಿಲೀಪ್ ಕುಮಾರ್

ಇನ್ನು ಕೆ.ಆರ್.ಎಸ್ ಪಕ್ಷದಿಂದ ಒಕ್ಕಲಿಗ ಸಮುದಾಯದ ಪ್ರವೀಣ್ ಗೌಡರವರು ಅಭ್ಯರ್ಥಿಯಾಗಿದ್ದು ಅವರು ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಎಎಪಿ ಪಕ್ಷವು ಪ್ರಭುಸ್ವಾಮಿಯವರನ್ನ ಕಣಕ್ಕಿಳಿಸಿದೆ.

2023ರ ಸಾಧ್ಯತೆಗಳು

ಕಾಂಗ್ರೆಸ್ ಪಕ್ಷದ ವಾಸಣ್ಣನವರಿಗೆ ಆಡಳಿತ ವಿರೋಧಿ ಅಲೆ ಇದ್ದರೂ ಅವರು ತಮ್ಮ ವೈಯಕ್ತಿಕ ವರ್ಚಸ್ಸಿನ ಕಾರಣದಿಂದ ಕನಿಷ್ಟ 25,000ದಷ್ಟು ಮತಗಳ ಬೇಸ್ ಹೊಂದಿದ್ದಾರೆ. ಅವರು ಯಾವುದೇ ಪಕ್ಷಕ್ಕೆ ಹೋದರೂ ಆ ಮತಗಳು ಅವರನ್ನು ಹಿಂಬಾಲಿಸುತ್ತವೆ. ಇನ್ನು ಇದುವರೆಗೂ ಜೆಡಿಎಸ್‌ನಲ್ಲಿದ್ದಾಗ ಅವರು ಪಡೆಯುತ್ತಿದ್ದ ಒಕ್ಕಲಿಗ ಮತಗಳು ಈ ಬಾರಿ ಒಂದಷ್ಟು ಚದುರಿ ಹೋಗುವ ಸಂಭವವಿದೆ. ಆದರೂ ದಲಿತ ಮತ್ತು ಇತರ ಹಿಂದುಳಿದ ವರ್ಗದ ಮತಗಳು ತನ್ನ ಕೈ ಹಿಡಿಯಲಿವೆ ಎಂಬ ಲೆಕ್ಕಾಚಾರ ಅವರದು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕೊರಟಗೆರೆ: ಜಿ.ಪರಮೇಶ್ವರ್-ಸುಧಾಕರ್ ಲಾಲ್ ನಡುವೆ ಮತ್ತೆ ಫೈಟ್; ಲೆಕ್ಕಕ್ಕಿಲ್ಲದ ಬಿಜೆಪಿ ಆಟ

ಇನ್ನು ಜೆಡಿಎಸ್ ಪಕ್ಷದ ನಾಗರಾಜುರವರು ಒಕ್ಕಲಿಗ ಮತಗಳು ಮತ್ತು ಇತರ ಹಿಂದುಳಿದ ಮತಗಳ ಮೇಲೆ ಕಣ್ಣಿಟ್ಟು ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.

ಬಿಜೆಪಿ ಪಕ್ಷವು ಯಾರಿಗೆ ಟಿಕೆಟ್ ನೀಡುತ್ತದೆ ಎನ್ನುವುದರ ಮೇಲೆ ಗುಬ್ಬಿ ಕ್ಷೇತ್ರದ ಫಲಿತಾಂಶ ನಿರ್ಧಾರವಾಗುವ ಸಾಧ್ಯತೆಯಿದೆ. ಗೊಲ್ಲ ಸಮುದಾಯದ ಜಿ.ಎನ್ ಬೆಟ್ಟಸ್ವಾಮಿಯವರು ಅಭ್ಯರ್ಥಿಯಾಗಿ, ಉಳಿದವರು ಒಮ್ಮತದಿಂದ ಅವರ ಪರವಾಗಿ ಕೆಲಸ ಮಾಡಿದರೆ ಅವರು ಗೆಲುವಿನ ಕನಸು ಕಾಣಬಹುದು. ಆದರೆ ಪಕ್ಷದಲ್ಲಿ ಬಂಡಾಯ ಅಥವಾ ಒಳೇಟು ಕೆಲಸ ಮಾಡುವ ಸಾಧ್ಯತೆ ದಟ್ಟವಾಗಿದೆ. ಅಂತಹ ಸಂದರ್ಭದಲ್ಲಿ ಲಿಂಗಾಯಿತ ಸಮುದಾಯದ ಅಭ್ಯರ್ಥಿಯೊಬ್ಬರು ಕಣಕ್ಕಿಳಿಯುವುದರಿಂದ ಅದು ಕಾಂಗ್ರೆಸ್ ಅಭ್ಯರ್ಥಿ ವಾಸಣ್ಣನವರಿಗೆ ಅನುಕೂಲವಾಗುವ ಸಾಧ್ಯತೆಯಿದೆ.

ಒಟ್ಟಾರೆಯಾಗಿ ಗುಬ್ಬಿಯಲ್ಲಿ ಈ ಬಾರಿ ಮೂರು ಪಕ್ಷದಿಂದ ತ್ರಿಕೋನ ಸ್ಪರ್ಧೆ ಕಂಡುಬರುತ್ತಿದ್ದು, ಬಿಜೆಪಿ ಬಿ-ಫಾರಂ ಯಾರ ಕೈ ಸೇರುತ್ತದೆ ಎಂಬುದು ಕ್ಷೇತ್ರದ ಫಲಿತಾಂಶ ನಿರ್ಧರಿಸುವ ಅಂಶವಾಗಿ ಹೊರಹೊಮ್ಮಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ಶಾಸಕ ಹೆಚ್‌.ಡಿ ರೇವಣ್ಣ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡಿರುವ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ...