ಸ್ಥಳೀಯ ಜನರ ವಿರೋಧದ ನಡುವೆಯೂ MSIL ಮದ್ಯದಂಗಡಿ ತೆರಯಲು ಅವಕಾಶ ನೀಡಿರುವ ಹಾಸನ ಜಿಲ್ಲಾಧಿಕಾರಿಗಳ ಕ್ರಮ ಖಂಡಿಸಿ ಮತ್ತು ಕೂಡಲೇ ಮದ್ಯದಂಗಡಿ ತೆರವಿಗೆ ಆಗ್ರಹಿಸಿ ಅಕ್ಟೋಬರ್ 07 ರಂದು ಜನಸಂಗ್ರಾಮ ಪರಿಷರ್ ವತಿಯಿಂದ ಅರಕಲಗೂಡಿನಿಂದ ಹಾಸನ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮತ್ತು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ಅರಕಲಗೂಡು ನಗರದ ‘ಅರಕಲಗೂಡು – ಮಲ್ಲಿಪಟ್ಟಣ ರಸ್ತೆಯಲ್ಲಿ’ MSIL ಮದ್ಯದಂಗಡಿ ತೆರೆಯುವುದಕ್ಕೆ ಅವಕಾಶ ನೀಡಬಾರದೆಂದು ಸ್ಥಳೀಯ ನಿವಾಸಿಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಸ್ಥಳೀಯ ಶಾಸಕರು ಸೇರಿ ನೂರಾರು ಜನರು ಮನವಿ ಸಲ್ಲಿಸಿದ್ದರೂ ಜಿಲ್ಲಾಡಳಿತ ಕಾನೂನುಬಾಹಿರವಾಗಿ ಅವಕಾಶ ನೀಡಿದೆ ಎಂದು ಸ್ಥಳೀಯರು ದೂರಿದ್ದಾರೆ.
ಈ ಕುರಿತು ಜನಸಂಗ್ರಾಮ ಪರಿಷತ್ ಕಾರ್ಯದರ್ಶಿ ಜಗದೀಶ್ರವರು ನಾನುಗೌರಿ.ಕಾಂ ಜೊತೆ ಮಾತನಾಡಿ, “ಯಾವುದೇ ಕಟ್ಟಡ ಮಳಿಗೆಗಳನ್ನು ರಾಜ್ಯ ಹೆದ್ದಾರಿ ಸೇರಿದಂತೆ ರಸ್ತೆಯಿಂದ 6 ಮೀಟರ್ ದೂರದಲ್ಲಿ ಕಟ್ಟಬೇಕು ಎನ್ನುವ ನಿಯಮವಿದೆ. ಆದರೆ ಸದರಿ ಮದ್ಯ ಮಳಿಗೆಯು ರಸ್ತೆಯಿಂದ ಕೇವಲ ಎರಡು ಮೀಟರ್ ಅಂತರದಲ್ಲಿದೆ. ಇದು ಕಾನೂನಿನ ಉಲ್ಲಂಘನೆಯಾಗಿದೆ. ಅದೇ ರೀತಿ MSIL ಮದ್ಯದಂಗಡಿಯ ಮುಂದೆ ಮದ್ಯಪಾನ ಮಾಡುವಂತಿಲ್ಲ. ಕೇವಲ ಮನೆಗೆ ತೆಗೆದಕೊಂಡು ಹೋಗುವ ಅವಕಾಶ ಮಾತ್ರವಿದೆ. ಆದರೆ ಅರಕಲಗೂಡಿನ ಈ ಮದ್ಯದಂಗಡಿ ಮುಂದೆಯೇ ಜನ ಮದ್ಯಪಾನ ಮಾಡುತ್ತಿದ್ದಾರೆ. ಇದರಿಂದ ರಸ್ತೆಯಲ್ಲಿ ಸಂಚರಿಸುವ ಮಹಿಳೆಯರು, ಶಾಲಾ ಮಕ್ಕಳಿಗೆ ತೀವ್ರ ತೊಂದರೆಯಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದರೆ ಅವರು ಉತ್ತಿರಿಸುತ್ತಿಲ್ಲ. ಹಾಗಾಗಿ ಹೋರಾಟವೊಂದೇ ನಮಗಿರುವ ಏಕೈಕ ದಾರಿಯಾಗಿದೆ. ಹಾಗಾಗಿ ಅಕ್ಟೋಬರ್ 07 ರಂದು ಜನಸಂಗ್ರಾಮ ಪರಿಷತ್ ಸದಸ್ಯರು ಮತ್ತು ಅರಕಲಗೂಡು – ಮಲ್ಲಿಪಟ್ಟಣ ರಸ್ತೆ ನಿವಾಸಿಗಳು ಸೇರಿ ಅರಕಲಗೂಡಿನಿಂದ ಹಾಸನ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸುತ್ತೇವೆ. ಅಕ್ಟೋಬರ್ 08 ರಿಂದ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇವೆ. ಮದ್ಯದಂಗಡಿ ತೆರವುಗೊಳಿಸುವವರೆಗೂ ಹೋರಾಟ ನಡೆಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ಪಡೆಯಲು ಹಾಸನ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸಲಾಯಿತು. ಆದರೆ ಅವರು ಲಭ್ಯವಾಗಿಲ್ಲ. ಅವರು ಪ್ರತಿಕ್ರಿಯೆಗೆ ಸಿಕ್ಕಲ್ಲಿ ಅದನ್ನು ಅಪ್ಡೇಟ್ ಮಾಡಲಾಗುವುದು.
ಕಾನೂನು ಏನು ಹೇಳುತ್ತದೆ?
ಕರ್ನಾಟಕ ಅಬಕಾರಿ ಅಧಿನಿಯಮ, 1967 ರ ರೂಲ್ 5 ರ ಪ್ರಕಾರ ಶಾಲೆ, ಧಾರ್ಮಿಕ ಸ್ಥಳ, ಆಸ್ಪತ್ರೆ, ಎಸ್ಸಿ ಎಸ್ಎಸ್ಟಿ ಸಮುದಾಯದ ಜನವಸತಿಯಿಂದ 100 ಮಿ. ಅಂತರದಲ್ಲಿ ಮದ್ಯದಂಗಡಿಯನ್ನು ತೆರೆಯುವಂತಿಲ್ಲ. ಕರ್ನಾಟಕ ವೈನ್ ಮರ್ಚೆಂಟ್ಸ್ vs ಕರ್ನಾಟಕ ರಾಜ್ಯ ಪ್ರಕರಣದಲ್ಲಿ ಹೈಕೋರ್ಟ್ ಜನವಸತಿ, ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸಂಸ್ಥೆ, ಧಾರ್ಮಿಕ ಸ್ಥಳದ ಸಮೀಪ ಮದ್ಯದಂಗಡಿಯನ್ನು ತೆರೆಯಬಾರದು ಎಂದು ಆದೇಶ ನೀಡಿದೆ. ಜನ ವಿರೋಧವಿದ್ದಾಗ 100 ಮೀ. ಎಂಬ ಸರ್ಕಾರಿ ಮಾನದಂಡಕ್ಕೆ ಕಟ್ಟು ಬಿದ್ದು ಮದ್ಯದಂಗಡಿ ತೆರೆಯುವುದು ಸೂಕ್ತವಲ್ಲ ಎಂದು ಮಾನ್ಯ ಕರ್ನಾಟಕ ಹೈಕೋರ್ಟ್ 1997 ರಲ್ಲಿ ಅಭಿಪ್ರಾಯ ಪಟ್ಟಿದೆ.
ಅಬಕಾರಿ ಪರವಾನಗೆಯನ್ನು ನೀಡುವ ಮುನ್ನ 100 ಮೀ. ಅಂತರ ಎಂಬ ನಿಯಮ 5 ಕ್ಕೆ ಬದ್ಧರಾಗಿ ಜನಸಾಮಾನ್ಯರ ಸಾಮಾಜಿಕ ಸ್ಥಿತಿಗತಿಗಳನ್ನು ಕಡೆಗಣಿಸಬಾರದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿರುತ್ತದೆ.
ಇದನ್ನೂ ಓದಿ: ಮಹಿಳೆಯರ ದಿಟ್ಟ ಹೋರಾಟಕ್ಕೆ ಜಯ: ಮದ್ಯದಂಗಡಿ ಸ್ಥಳಾಂತರಕ್ಕೆ ಆದೇಶ