ದ್ವೇಷದ ಭಾಷಣಗಳು ದೇಶದ ಜಾತ್ಯತೀತ ರಚನೆಯ ಮೇಲೆ ಪರಿಣಾಮ ಬೀರುವ ಗಂಭೀರ ಅಪರಾಧ ಎಂದು ಬಣ್ಣಿಸಿರುವ ಸುಪ್ರೀಂ ಕೋರ್ಟ್, ಯಾವುದೇ ದೂರು ದಾಖಲಾಗದಿದ್ದರೂ ಅಂತಹ ಅಪರಾಧಗಳಲ್ಲಿ ಪ್ರಕರಣಗಳನ್ನು ದಾಖಲಿಸುವಂತೆ ರಾಜ್ಯಗಳಿಗೆ ನಿರ್ದೇಶನ ನೀಡಿದೆ.
ದ್ವೇಷ ಭಾಷಣದ ವಿಚಾರವಾಗಿ ಕ್ರಮ ಕೈಗೊಳ್ಳುವಲ್ಲಿ ರಾಜ್ಯಗಳು ನಿಷ್ಕ್ರಿಯತೆ ತೋರಿರುವ ಪ್ರಕರಣಗಳ ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್ ಈ ಅಭಿಪ್ರಾಯವನ್ನು ತಾಳಿದೆ. “ಇಂತಹ ಪ್ರಕರಣಗಳನ್ನು ದಾಖಲಿಸಲು ವಿಳಂಬ ಮಾಡಿದರೆ ಅದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗುವುದು” ಎಂದು ಎಚ್ಚರಿಕೆಯನ್ನೂ ನೀಡಿದೆ.
ನ್ಯಾಯಮೂರ್ತಿಗಳಾದ ಕೆ.ಎಂ ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರ ಪೀಠವು ಕಳೆದ ತಿಂಗಳು ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿತ್ತು. “ಸರ್ಕಾರ ಶಕ್ತಿಹೀನವಾಗಿದೆ, ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ದ್ವೇಷದ ಭಾಷಣಗಳಾಗುತ್ತಿವೆ. ರಾಜಕೀಯ ಮತ್ತು ಧರ್ಮವನ್ನು ಪ್ರತ್ಯೇಕಿಸಿದ ಕ್ಷಣ ಇದು ನಿಲ್ಲುತ್ತದೆ” ಎಂದು ನ್ಯಾಯಮೂರ್ತಿಗಳು ಹೇಳಿದ್ದರು.
ದ್ವೇಷದ ಭಾಷಣಗಳು, ಹಿಂಸಾಚಾರದ ಘಟನೆಗಳು, ವಿಶೇಷವಾಗಿ ಅಲ್ಪಸಂಖ್ಯಾತರಲ್ಲಿ ಆತಂಕವನ್ನು ಹೆಚ್ಚಿಸುವ ವಿದ್ಯಮಾನಗಳ ನಡುವೆ ಸುಪ್ರೀಂಕೋರ್ಟ್ ಈ ಮಹತ್ವದ ಅಭಿಪ್ರಾಯ ತಾಳಿದೆ.
ನ್ಯಾಯಪೀಠವು ಕಳೆದ ತಿಂಗಳು, “ಹೆಚ್ಚು ಅಗತ್ಯವಿರುವಾಗ ಕಾರ್ಯನಿರ್ವಹಿಸಲು ಸರ್ಕಾರ ಅಸಮರ್ಥತೆ ತೋರಿಸುತ್ತಿದೆ” ಎಂದು ಟೀಕಿಸಿತ್ತು. “ರಾಜಕೀಯ ಮತ್ತು ಧರ್ಮವನ್ನು ಪ್ರತ್ಯೇಕಿಸಿದರೆ ಇದು ನಿಲ್ಲುತ್ತದೆ” ಎಂದು ತಿಳಿಸಿತ್ತು.
ಇದನ್ನೂ ಓದಿರಿ: ಸುಪ್ರೀಂ ಕೋರ್ಟ್ ನೋಟಿಸ್ ನಂತರ ಬಿಜೆಪಿ ಸಂಸದ ಸಿಂಗ್ ವಿರುದ್ಧ FIR: ಕ್ರೀಡಾಪಟುಗಳ ಹೋರಾಟಕ್ಕೆ ಮೊದಲ ಜಯ