ಮಹಿಳಾ ಆಟಗಾರರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಭಾರತದ ಕುಸ್ತಿ ಫೆಡರೇಶನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸುವುದಾಗಿ ದೆಹಲಿ ಪೊಲೀಸರು ಶುಕ್ರವಾರ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಇಂದು (ಶುಕ್ರವಾರ) ಸಂಜೆಯೊಳಗೆ ಎಫ್ಐಆರ್ ದಾಖಲಿಸಲಾಗುವುದು ಎಂದು ಸಾಲಿಸಿಟರ್ ತುಷಾರ್ ಮೆಹ್ತಾ ಸುಪ್ರೀಂ ಕೋರ್ಟ್ಗೆ ತಿಳಿಸಿದ್ದಾರೆ. ಇದು ಕ್ರೀಡಾಪಟುಗಳಿಗೆ ಸಿಕ್ಕ ಮೊದಲ ಗೆಲುವು, ಆದರೆ ಸಿಂಗ್ ಬಂಧನಚವಾಗುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಪ್ರತಿಭಟನಾ ನಿರತ ಕ್ರೀಡಾಪಟುಗಳು ತಿಳಿಸಿದ್ದಾರೆ.
ಲೈಂಗಿಕ ಕಿರುಕುಳದ ವಿಚಾರವಾಗಿ ಕ್ರೀಡಾ ಆಡಳಿತ ಮಂಡಳಿಯ ಮುಖ್ಯಸ್ಥರ ವಿರುದ್ಧ ಏಳು ಪ್ರತ್ಯೇಕ ದೂರು ನೀಡಿದರೂ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಳ್ಳದ ಕಾರಣ ದೇಶದ ಅಗ್ರ ಕುಸ್ತಿಪಟುಗಳು ಎಫ್ಐಆರ್ ದಾಖಲಿಸುವಂತೆ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರ ಪೀಠವು ದೇಶದ ಅಗ್ರ ಕುಸ್ತಿಪಟುಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿದೆ.
ಏಪ್ರಿಲ್ 23 ರಂದು, ಒಲಿಂಪಿಕ್ ಕಂಚಿನ ಪದಕ ವಿಜೇತರಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಮತ್ತು ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ವಿನೇಶ್ ಫೋಗಟ್ ಸೇರಿದಂತೆ ಹಲವಾರು ಕ್ರೀಡಾಪಟುಗಳು ಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೆಹಲಿಯ ಜಂತರ್ ಮಂತರ್ನಲ್ಲಿ ತಮ್ಮ ಧರಣಿ ಪ್ರತಿಭಟನೆಯನ್ನು ಪುನರಾರಂಭಿಸಿದರು.
ಅಪ್ರಾಪ್ತ ವಯಸ್ಕ ಸೇರಿದಂತೆ ಏಳು ಮಹಿಳಾ ಕುಸ್ತಿಪಟುಗಳು ಏಪ್ರಿಲ್ 21ರಂದು ದೆಹಲಿಯಲ್ಲಿ ಆತನ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಕುಸ್ತಿಪಟುಗಳ ಪ್ರತಿಭಟನೆ ದೇಶಕ್ಕೆ ಕಳಂಕ ಎಂದ ಪಿಟಿ ಉಷಾ: ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ
ಈ ವಿಚಾರವಾಗಿ ಕುಸ್ತಿಪಟುಗಳು ಮೊದಲು ಜನವರಿಯಲ್ಲಿ ಬೀದಿಗಿಳಿದಿದ್ದರು. ಈ ವೇಳೆ ಸರ್ಕಾರವು ಬಿಜೆಪಿ ಸಂಸದ ಸಿಂಗ್ ಅವರನ್ನು ಕೆಲವು ವಾರಗಳ ಕಾಲ ಅಧಿಕಾರದಿಂದ ದೂರವಿಡುವಂತೆ ಮತ್ತು ಆರೋಪಗಳನ್ನು ಪರಿಶೀಲಿಸಲು ಮೇಲ್ವಿಚಾರಣಾ ಸಮಿತಿಯನ್ನು ರಚಿಸಿತು. ಆ ನಂತರ ಕ್ರೀಡಾಪಟುಗಳು ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದರು. ಸಮಿತಿಯ ವರದಿಯನ್ನು ಬಹಿರಂಗಪಡಿಸದ ಕಾರಣ ಮತ್ತೆ ಪ್ರತಿಭಟನೆ ಆರಂಭಿಸಿದ್ದಾರೆ.
ಮಂಗಳವಾರ ವಿಚಾರಣೆ ಆರಂಭಿಸಿದ ಸುಪ್ರೀಂ ಕೋರ್ಟ್, ಕುಸ್ತಿಪಟುಗಳ ಅರ್ಜಿಯಲ್ಲಿನ ಆರೋಪಗಳು “ಗಂಭೀರ” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಒಂದು ದಿನದ ನಂತರ, ಅಧಿಕಾರಿಗಳು ಪ್ರಕರಣವನ್ನು ದಾಖಲಿಸುವ ಮೊದಲು ಪ್ರಾಥಮಿಕ ತನಿಖೆ ಅಗತ್ಯ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.
ಸುಪ್ರೀಂ ಕೋರ್ಟ್ನಲ್ಲಿ ಶುಕ್ರವಾರದ ವಿಚಾರಣೆಗೆ ಮುನ್ನ, ರಾಷ್ಟ್ರೀಯ ಶ್ರೇಯಾಂಕದ ಕುಸ್ತಿಪಟು ಮತ್ತು ಪುನಿಯಾ ಅವರ ಪತ್ನಿ ಸಂಗೀತಾ ಫೋಗಟ್, ಸಿಂಗ್ಗೆ ಶಿಕ್ಷೆಯಾಗುವವರೆಗೂ ಕ್ರೀಡಾಪಟುಗಳು ಪ್ರತಿಭಟನಾ ಸ್ಥಳದಲ್ಲೇ ಇರುತ್ತಾರೆ ಎಂದು ಪ್ರತಿಪಾದಿಸಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
”ನಮಗೆ ಈ ಮೊದಲು ನ್ಯಾಯ ಸಿಗಲಿಲ್ಲ. ಮಹಿಳಾ ಆಟಗಾರರ ಮೇಲಿನ ಲೈಂಗಿಕ ಕಿರುಕುಳಕ್ಕಾಗಿ ಆತನನ್ನು ದೂಷಿಸಿದ್ದಾರೆ ಆದ್ದರಿಂದ ಎಫ್ಐಆರ್ ದಾಖಲಿಸಬೇಕು ಮತ್ತು ಕೃತ್ಯಗಳ ಪ್ರಕಾರ ಶಿಕ್ಷೆಗೆ ಗುರಿಯಾಗಬೇಕು. ನೀವು ನೋಡುವಂತೆ ಯಾರೂ ನಮ್ಮ ಬಳಿಗೆ ಬಂದಿಲ್ಲ, ನಾವು ಫೋನ್ ಕರೆಯನ್ನು ಸ್ವೀಕರಿಸಲಿಲ್ಲ. ನಮಗೆ ನ್ಯಾಯ ಸಿಗುತ್ತದೆ ಎಂದು ಯಾರೂ ನಮಗೆ ಹೇಳಿಲ್ಲ” ಎಂದು ಕ್ರೀಡಾಪಟುಗಳು ನೋವು ತೋಡಿಕೊಂಡಿದ್ದಾರೆ.
ಶ್ರೀ ರಾಮನ ಭಕ್ತರು ಪರಸ್ತ್ರಿಯರನ್ನು ಕಣ್ಣೆತ್ತಿಯೂ ಕೂಡ ನೋಡುವುದಿಲ್ಲ ಅಂತದರಲ್ಲಿ…..