ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದರಾಗಿರುವ ಬ್ರಿಜ್ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ, ಬೆದರಿಕೆ ಆರೋಪ ಮಾಡಿ, ಅವರ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳ ನಡೆ ಬಗ್ಗೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ಅಧ್ಯಕ್ಷೆ ಪಿ.ಟಿ. ಉಷಾ ಟೀಕಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪಿಟಿ ಉಷಾ, ”ಕುಸ್ತಿಪಟುಗಳು ದೆಹಲಿಯಲ್ಲಿ ಸಾರ್ವಜನಿಕ ಪ್ರತಿಭಟನೆಗೆ ಕುಳಿತುಕೊಳ್ಳಲು ನಿರ್ಧರಿಸುವ ಮುನ್ನ ತಾವು ಮಾಡಿದ ಆರೋಪಗಳನ್ನು ಪರಿಶೀಲಿಸುವ ಸಮಿತಿಯ ವರದಿ ಹೊರಬರುವವರೆಗು ಕಾಯಬೇಕಿತ್ತು. ಅದಕ್ಕೂ ಮುನ್ನ ಪ್ರತಿಭಟನೆಗೆ ಇಳಿದಿರುವುದು ಅಶಿಸ್ತಿನ ನಡೆಯಾಗಿದೆ ಎಂದು ಹೇಳಿದ್ದಾರೆ.
ಈ ಆಟಗಾರರು ಬೀದಿಗಿಳಿದು ಪ್ರತಿಭಟನೆ ಮಾಡಬಾರದಿತ್ತು. ಕನಿಷ್ಠ ಸಮಿತಿಯ ವರದಿ ಬರುವವರೆಗಾದರೂ ಕಾಯಬೇಕಿತ್ತು. ಕುಸ್ತಿಪಟುಗಳ ಪ್ರತಿಭಟನೆಯಿಂದಾಗಿ ದೇಶದ ಘನತೆಗೆ ಧಕ್ಕೆಯಾಗುತ್ತಿದೆ. ಇದು ನಕಾರಾತ್ಮಕ ಧೋರಣೆ ಎಂದಿದ್ದಾರೆ.
ಲೈಂಗಿಕ ಕಿರುಕುಳದ ವಿರುದ್ಧ ಪ್ರತಿಭಟೆನೆ ನಡೆಸುತ್ತಿರುವುದನ್ನು ಟೀಕಿಸಿರುವ ಪಿಟಿ ಉಷಾ ಮೇಲೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಪಿಟಿ ಉಷಾ ಮಹಿಳೆಯಾಗಿ ನಮ್ಮ ಪ್ರತಿಭಟನೆಗೆ ಬೆಂಬಲ ನೀಡದಿರುವುದು ನೋವಾಗಿದೆ: ಕುಸ್ತಿಪಟು ಸಾಕ್ಷಿ ಮಲಿಕ್
ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಅಧ್ಯಕ್ಷೆ ಪಿಟಿ ಉಷಾ ಕುಸ್ತಿಪಟುಗಳ ವಿರುದ್ಧ ತೀವ್ರವಾಗಿ ಟೀಕಿಸಿದ ಒಂದು ದಿನದ ನಂತರ ಒಲಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರು ಟ್ವೀಟ್ ಮಾಡಿದ್ದಾರೆ.
”ನಮ್ಮ ಕ್ರೀಡಾಪಟುಗಳು ನ್ಯಾಯಕ್ಕಾಗಿ ಬೀದಿಗಿಳಿದಿರುವುದನ್ನು ನೋಡುವುದು ನನಗೆ ನೋವುಂಟುಮಾಡುತ್ತದೆ. ಅವರು ನಮ್ಮ ಮಹಾನ್ ರಾಷ್ಟ್ರವನ್ನು ಪ್ರತಿನಿಧಿಸಲು ಮತ್ತು ನಮಗೆ ಹೆಮ್ಮೆ ತರಲು ಶ್ರಮಿಸಿದ್ದಾರೆ. ರಾಷ್ಟ್ರವಾಗಿ, ಪ್ರತಿಯೊಬ್ಬ ವ್ಯಕ್ತಿಯ ಸಮಗ್ರತೆ ಮತ್ತು ಘನತೆಯನ್ನು ಕಾಪಾಡುವ ಜವಾಬ್ದಾರರು, ಇದು ಎಂದಿಗೂ ಸಂಭವಿಸಬಾರದು” ಎಂದು ಅಭಿಪ್ರಾಯ ಹೊರ ಹಾಕಿದ್ದಾರೆ.
”ಇದೊಂದು ಸೂಕ್ಷ್ಮ ವಿಷಯವಾಗಿದ್ದು, ನಿಷ್ಪಕ್ಷಪಾತ ಮತ್ತು ಪಾರದರ್ಶಕ ರೀತಿಯಲ್ಲಿ ವ್ಯವಹರಿಸಬೇಕು. ನ್ಯಾಯ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
— Neeraj Chopra (@Neeraj_chopra1) April 28, 2023
”ಪ್ರೀತಿಯ ಪಿಟಿ ಉಷಾ ಅವರೇ, ನಿಮ್ಮ ಸಹ ಕ್ರೀಡಾಪಟುಗಳು ಪುನರಾವರ್ತಿತ ಮತ್ತು ಅನಪೇಕ್ಷಿತ ಲೈಂಗಿಕ ಕಿರುಕುಳದ ಬಗ್ಗೆ ಆರೋಪಿಸಿ ಪ್ರತಿಭಟನೆ ಮಾಡುವುದನ್ನು ಅವಹೇಳನ ಮಾಡುವುದು ನಿಮಗೆ ವ್ಯಕ್ತಿತ್ವಕ್ಕೆ ಸರಿಯಾದುದಲ್ಲ. ಅವರ ಹಕ್ಕುಗಳಿಗಾಗಿ ಅವರು ಪ್ರತಿಭಟಿಸುತ್ತಿದ್ದಾರೆ. ಅದು “ರಾಷ್ಟ್ರದ ಇಮೇಜ್ ಅನ್ನು ಕಳಂಕಗೊಳಿಸುವುದಿಲ್ಲ”. ಅವರ ಕಳವಳಗಳನ್ನು ನಿರ್ಲಕ್ಷಿಸುವುದು – ಅವುಗಳನ್ನು ಕೇಳುವ ಬದಲು, ಅವುಗಳನ್ನು ತನಿಖೆ ಮಾಡುವುದು ಮತ್ತು ಕ್ರಮ ಕೈಗೊಳ್ಳುವ ಕೆಲಸ ಮಾಡಬೇಕು” ಎಂದು ಕಾಂಗ್ರೆಸ್ ನಾಯಕ ಶಶಿ ತರೂರು ಟ್ವೀಟ್ ಮಾಡಿದ್ದಾರೆ.
Dear @PTUshaOfficial, it is does not become you to disparage the justified protests of your fellow sportspersons in the face of repeated & wanton sexual harassment. Their standing up for their rights does not “tarnish the image of the nation”. Ignoring their concerns — instead of…
— Shashi Tharoor (@ShashiTharoor) April 28, 2023
ಪಿಟಿ ಉಷಾ ಅವರ ಹೇಳಿಕೆ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ”ನಾನು ಇವತ್ತು ಪಯ್ಯೋಳಿ ಎಕ್ಸ್ಪ್ರೆಸ್ ಅಭಿಮಾನಿ ಎಂಬ ನನ್ನ ಇಷ್ಟದ ಹಣೆಪಟ್ಟಿಯನ್ನು ಕಳಚಿಕೊಂಡಿದ್ದೇನೆ” ಎಂದಿದ್ದಾರೆ.
”ದೇಶಕ್ಕೆ ಕೀರ್ತಿ ತಂದ ಕುಸ್ತಿ ಪಟು ಹೆಣ್ಣುಮಕ್ಕಳು, ತಮ್ಮ ಮೇಲೆ ನಡೆದಿರುವ ದೌರ್ಜನ್ಯದ ವಿರುದ್ಧ ಹೋರಾಟಕ್ಕೆ ಸಹಾಯ ಕೊಡಿ ಎಂದು ದಿಲ್ಲಿಯಲ್ಲಿ ಧರಣಿ ಹಮ್ಮಿಕೊಂಡು ಅಂಗಲಾಚಿ ಕುಳಿತಿರುವಾಗ, ಮೊದಲು ಬಂದು ಅವರ ಅಹವಾಲು ಕೇಳಬೇಕಿದ್ದ ಭಾರತ ಒಲಿಂಪಿಕ್ ಅಸೋಸಿಯೇಷನ್ನ ಹೊಸ ಅಧ್ಯಕ್ಷೆ ಪಿ ಟಿ ಉಷಾ ಅವರು, ಈ ಹೆಣ್ಣುಮಕ್ಕಳು ದೇಶದ ಮರ್ಯಾದೆಗೆ ಧಕ್ಕೆ ತರುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ. ಇದು ಅತ್ಯಂತ ಶೋಚನೀಯ ಸ್ಥಿತಿ” ಎಂದು ಹೇಳಿದ್ದಾರೆ.
”ಐದಾರು ತಿಂಗಳ ಹಿಂದೆ ಇದೇ ಪಿ ಟಿ ಉಷಾ ಅವರು ತಮ್ಮ ಅಕಾಡೆಮಿಯಲ್ಲಿ ಭೂವಿವಾದವೊಂದು ಸೃಷ್ಟಿ ಆಗಿದ್ದಾಗ (ಅದರ ಒಳಸುಳಿಗಳು ಏನಿವೆ ನನಗೆ ಅರಿವಿಲ್ಲ), ತಾವೇ ಸ್ವತಃ ಮಾಧ್ಯಮಗಳ ಎದುರು ಬಂದು ತಮ್ಮ ಸಂಸ್ಥೆಯ ದಯನೀಯ ಸ್ಥಿತಿಯ ಬಗ್ಗೆ ಅಲವತ್ತುಕೊಂಡದ್ದು ರಾಷ್ಟ್ರೀಯ ಸುದ್ದಿ ಆಗಿತ್ತು. ಹಾಗಾಗಿ, ಒಂದು ಸಮಸ್ಯೆ ಎದುರಾದಾಗ, ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದರೆ ಪರಿಹಾರ ಸಿಗಬಹುದೆಂಬ ಪೂರ್ವೋದಾಹರಣೆ ಹಾಕಿಕೊಟ್ಟ ಹಿರಿಯಕ್ಕ ಅವರೇ, ಈಗ ಅದನ್ನೇ ಅನುಸರಿಸಿದ ಕಿರಿಯ ಕ್ರೀಡಾಪಟುಗಳ ಮೇಲೆ ಹರಿಹಾಯುವುದು ಖಂಡಿತಕ್ಕೂ ಭಾರತದ ಕ್ರೀಡಾಜಗತ್ತಿನ ನೈತಿಕ ಸ್ಥೈರ್ಯಕ್ಕೆ ಮರ್ಮಾಘಾತ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
”ಈಗ ಸ್ವತಃ ರಾಜ್ಯಸಭಾ ಸದಸ್ಯರಾಗಿ, ಒಲಿಂಪಿಕ್ ಅಸೋಸಿಯೇಷನ್ನ ಅಧ್ಯಕ್ಷೆಯಾಗಿ ಉಷಾ ಅವರಿಗೆ ತೀರಿಸಲು ಸಾಕಷ್ಟು ದೊಡ್ಡ ಋಣದ ಹೊರೆ ಇರಬಹುದು. ಆದರೆ, ಅದನ್ನು ತೀರಿಸಲು, ಈ ಕ್ರೀಡಾಪಟುಗಳ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯದ ಪರೋಕ್ಷ ಸಮರ್ಥನೆಗೆ ಇಳಿಯುವ ಮೂಲಕ ಪಿ ಟಿ ಉಷಾ, ತಮ್ಮ ಜಾಗತಿಕ ಮಟ್ಟದ ಕ್ರೀಡಾಸಾಧನೆಗಳ ಸಾಮಾಜಿಕ ಔನ್ನತ್ಯವನ್ನು ರಾಜಕೀಯದ ಕೆಸರು ರಾಡಿಯಲ್ಲಿ ಮುಳುಗಿಸಿ ಸಣ್ಣವರಾಗಿದ್ದಾರೆ. ಆ ಹೆಣ್ಣುಮಕ್ಕಳ ದೂರನ್ನು ಕನಿಷ್ಠ ಏನೆಂದು ಕೇಳುವ ನೈತಿಕತೆಯನ್ನು ಅವರು ಉಳಿಸಿಕೊಳ್ಳಬೇಕಾಗಿತ್ತು. ತುಂಬಾ ಬೇಸರದಿಂದ ಇದನ್ನು ದಾಖಲಿಸುತ್ತಿದ್ದೇನೆ” ಎಂದು ತಲ್ಲೂರು ಅವರು ಬರೆದುಕೊಂಡಿದ್ದಾರೆ.
ಮಹೇಂದ್ರ ಹಿಪ್ಪರಗಿ ಎನ್ನುವವರು ಸಾಮಾಜಿಕ ಮಾಧ್ಯಮ ಫೇಸ್ಬುಕ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ”ದಿಲ್ಲಿ ಬೀದಿಯಲ್ಲಿ ದೇಶಕ್ಕೆ ಕೀರ್ತಿ ತಂದ ಕುಸ್ತಿಪಟು ಹೆಣ್ಣು ಮಕ್ಕಳು ತಮ್ಮ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯಕ್ಕೆ ನ್ಯಾಯ ಒದಗಿಸಿ ಎಂದು ಅಂಗಲಾಚಿ ಕುಳಿತಿರುವಾಗ ಸ್ವತಃ ಕ್ರೀಡಾಪಟು, ಭಾರತ ಒಲಿಂಪಿಕ್ ಅಸೋಸಿಯೇಷನ್ನ ಅಧ್ಯಕ್ಷೆ ಇವೆಲ್ಲಕ್ಕಿಂತ ಮುಖ್ಯವಾಗಿ ತಾನೊಬ್ಬ ಹೆಣ್ಣು ಮಗಳಾಗಿ ಎಲ್ಲರಿಗಿಂತ ಮೊದಲು ಬಂದು ಅವರ ಅಹವಾಲು ಕೇಳಬೇಕಿತ್ತು. ಆದರೆ ಪಿ ಟಿ ಉಷಾ ಧರಣಿ ನಿರತ ಈ ಹೆಣ್ಣು ಮಕ್ಕಳು ದೇಶದ ಮರ್ಯಾದೆಗೆ ಧಕ್ಕೆ ತರುತ್ತಿದ್ದಾರೆ ಎನ್ನುತ್ತಿದ್ದಾಳಲ್ಲ ಈಕೆ ನಿಜವಾಗಿಯೂ ಮನುಷ್ಯಳಾ…?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.