Homeಮುಖಪುಟಮರುಕಳಿಸಿದ ದ್ವೇಷ ಭಾಷಣ: ಹೈಕೋರ್ಟ್ ಆದೇಶ ಉಲ್ಲಂಘಿಸಿ ಮತ್ತೆ ನಾಲಿಗೆ ಹರಿಬಿಟ್ಟ ಶಾಸಕ ರಾಜಾಸಿಂಗ್

ಮರುಕಳಿಸಿದ ದ್ವೇಷ ಭಾಷಣ: ಹೈಕೋರ್ಟ್ ಆದೇಶ ಉಲ್ಲಂಘಿಸಿ ಮತ್ತೆ ನಾಲಿಗೆ ಹರಿಬಿಟ್ಟ ಶಾಸಕ ರಾಜಾಸಿಂಗ್

- Advertisement -
- Advertisement -

ಕಳೆದ ವರ್ಷ ನವೆಂಬರ್‌ನಲ್ಲಿ ಶಾಸಕ ರಾಜಾ ಸಿಂಗ್‌ ಅವರನ್ನು ಬಿಡುಗಡೆ ಮಾಡುವ ಮುನ್ನ ತೆಲಂಗಾಣ ಹೈಕೋರ್ಟ್ ಮೂರು ಕಠಿಣ ಶರತ್ತುಗಳನ್ನು ವಿಧಿಸಿತ್ತು. 100ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್‌ಗಳನ್ನು ಹೊಂದಿರುವ ರಾಜಾ ಸಿಂಗ್‌ ಅವರನ್ನು, ಹೈದರಾಬಾದ್‌ನಲ್ಲಿ ಕೋಮು ಸೌದಾರ್ದತೆ ಕದಡಿದಕ್ಕಾಗಿ 76 ದಿನ ಜೈಲಿಗೆ ಕಳುಹಿಸಲಾಗಿತ್ತು.

ನ್ಯಾಯಮೂರ್ತಿಗಳಾದ ಎ. ಅಭಿಷೇಕ್ ರೆಡ್ಡಿ ಮತ್ತು ಜುವ್ವಾಡಿ ಶ್ರೀದೇವಿ ಅವರು ನವೆಂಬರ್ 9, 2022ರಂದು ನೀಡಿದ ಆದೇಶದಲ್ಲಿ ಸ್ಪಷ್ಟವಾದ ನಿರ್ಬಂಧಗಳನ್ನು ವಿಧಿಸಿದರು. “ರಾಜಾಸಿಂಗ್‌ ಬಿಡುಗಡೆಯಾದ ನಂತರ ಯಾವುದೇ ಸಂಭ್ರಮಾಚರಣೆ ರ್‍ಯಾಲಿಗಳಲ್ಲಿ/ಸಭೆಗಳಲ್ಲಿ ಭಾಗವಹಿಸಬಾರದು ಅಥವಾ ನಡೆಸಬಾರದು; ಮುದ್ರಣ ಮಾಧ್ಯಮ ಸೇರಿದಂತೆ ಯಾವುದೇ ರೀತಿಯ ಮಾಧ್ಯಮ ಸಂಸ್ಥೆಗಳಿಗೆ ಯಾವುದೇ ಸಂದರ್ಶನಗಳನ್ನು ಭವಿಷ್ಯದಲ್ಲಿ ನೀಡಬಾರದು; ಯಾವುದೇ ಧರ್ಮದ ವಿರುದ್ಧ ಯಾವುದೇ ಪ್ರಚೋದನಕಾರಿ ಭಾಷಣಗಳನ್ನು ಮಾಡಬಾರದು ಅಥವಾ ಫೇಸ್ಬುಕ್, ಟ್ವಿಟರ್, ವಾಟ್ಸ್‌ಅಪ್‌, ಯೂಟ್ಯೂಬ್‌ ಇತ್ಯಾದಿ ಯಾವುದೇ  ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಯಾವುದೇ ಅವಹೇಳನಕಾರಿ ಅಥವಾ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಮಾಡಬಾರದು” ಎಂದು ಕೋರ್ಟ್ ಸೂಚಿಸಿತ್ತು.

ಕೇವಲ ಮೂರು ತಿಂಗಳೊಳಗೆ ಎಲ್ಲಾ ಮೂರು ಷರತ್ತುಗಳನ್ನು ರಾಜಾ ಉಲ್ಲಂಘಿಸಿದ್ದಾರೆ. ತೀವ್ರಗಾಮಿ ಹಿಂದೂ ಗುಂಪು ಎಂದೇ ಗುರುತಿಸಿಕೊಂಡಿರುವ ‘ಸಕಲ್ ಹಿಂದೂ ಸಮಾಜ’ ಜನವರಿ 29ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಮುಂಬೈಗೆ ರಾಜಾ ಬಂದಿದ್ದರು. ಈ ಗುಂಪು ಆಯೋಜಿಸಿದ್ದ ‘ಹಿಂದೂ ಜನಕ್ರೋಶ್ ಮೋರ್ಚಾ’ದಲ್ಲಿ ಪಾಲ್ಗೊಂಡು, “ಮಹಾರಾಷ್ಟ್ರ ರಾಜ್ಯ ಸರ್ಕಾರವು ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತರದಿದ್ದರೆ, ಹಿಂದೂಗಳು ಶೀಘ್ರದಲ್ಲೇ ಶಸ್ತ್ರಸಜ್ಜಿತರಾಗುತ್ತಾರೆ” ಎಂದು ವಿಷಕಾರಿದರು.

ದೇಶದ ಅತ್ಯಂತ ವಿವಾದಾತ್ಮಕ ವಿಷಯಗಳಲ್ಲಿ ಒಂದಾದ ಮತಾಂತರ ವಿರೋಧಿ ಕಾನೂನು ಮೇಲ್ನೋಟಕ್ಕೆ ‘ಬಲವಂತದ ಮತಾಂತರ’ವನ್ನು ನಿರ್ಬಂಧಿಸುತ್ತದೆ, ಆದರೆ ಇದು ಧಾರ್ಮಿಕ ಹಕ್ಕಿನ ಮೇಲಿನ ಪ್ರಹಾರವಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ರಾಜಾ ಕೇವಲ ಹೊಸ ಕಾನೂನಿನ ಬಗ್ಗೆ ಪ್ರಚಾರ ಮಾಡಲಿಲ್ಲ. ಶಸ್ತ್ರಾಸ್ತ್ರಗಳನ್ನು ಎತ್ತಿಕೊಂಡು ಮುಸ್ಲಿಮರ ಮೇಲೆ ದಾಳಿ ಮಾಡುವಂತೆ ಸಭೆಯನ್ನು ಪ್ರಚೋದಿಸಿದರು. ನಿಂದನೀಯ, ಅವಹೇಳನಕಾರಿ ಪದಗಳನ್ನು ಬಳಸಿದರು. ಮುಸ್ಲಿಂ ಸಮುದಾಯದ ವಿರುದ್ಧ ನೇರ ಹಿಂಸಾಚಾರಕ್ಕೆ ಕರೆ ನೀಡಿದರು. ರಾಜಾ ಸಿಂಗ್‌ ಭಾಷಣವು ಕೇವಲ ಉಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಲಿಲ್ಲ. ಎರಡು ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸಿತು. ಈ ರೀತಿಯ ದುರುದ್ದೇಶವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಬಿ ಮತ್ತು 295-ಎ ಉಲ್ಲಂಘನೆಯಾಗಿತ್ತು.

ರಾಜಾ ಸಿಂಗ್ ಅವರ ಭಾಷಣದ ನಂತರ, ಮತ್ತೊಬ್ಬ ಹಿಂದುತ್ವ ಮುಖಂಡ ಸಾಕ್ಷಿ ಗಾಯಕ್ವಾಡ್ ಅಷ್ಟೇ ಪ್ರಚೋದನಕಾರಿ ಭಾಷಣ ಮಾಡಿದರು. ಮುಸ್ಲಿಮರ ನರಮೇಧವನ್ನು ಪ್ರಸ್ತಾಪಿಸಿದರು.

‘ಹಿಂದೂ ಜನ ಆಕ್ರೋಶ ಮೋರ್ಚಾ’ ದಾದರ್‌ನ ಶಿವಾಜಿ ಪಾರ್ಕ್‌ನಿಂದ ಪ್ರಾರಂಭವಾಗಿ ಪರೇಲ್‌ನ ಕಾಮ್‌ಗರ್ ಮೈದಾನದವರೆಗೆ (ನಾಲ್ಕು ಕಿಲೋಮೀಟರ್‌ಗಿಂತಲೂ ಹೆಚ್ಚು ದೂರ) ಕ್ರಮಿಸಿತು. ಆರ್‌ಎಸ್‌ಎಸ್‌, ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್‌ನಂತಹ ಬಲಪಂಥೀಯ ಸಂಘಟನೆಗಳ ನಾಯಕರು ಮತ್ತು ಕಾರ್ಯಕರ್ತರು ಈ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು.

ರಾಜಾ ಸಿಂಗ್ ಮತ್ತು ಇತರರ ಭಾಷಣಗಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೆಯಾಗಿವೆ. ಕೋಮು ದ್ವೇಷದ ಹೊರತಾಗಿಯೂ, ಮುಂಬೈ ಪೊಲೀಸರು ಭಾಷಣಕಾರರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ.

ಇದರ ನಡುವೆ, ಹೈದರಾಬಾದ್ ಪೊಲೀಸರು ರಾಜಾ ಸಿಂಗ್ ಅವರಿಗೆ ನೋಟಿಸ್ ಜಾರಿ ಮಾಡಿದರು. ಜೈಲಿನಿಂದ ಬಿಡುಗಡೆ ಮಾಡುವ ಮುನ್ನ ತೆಲಂಗಾಣ ಹೈಕೋರ್ಟ್‌ ವಿಧಿಸಿದ್ದ ಷರತ್ತುಗಳನ್ನು ಉಲ್ಲೇಖಿಸಿ ಕಳೆದ ನಾಲ್ಕು ದಿನಗಳಲ್ಲಿ ಹೈದರಾಬಾದ್‌ನ ಮಂಗಲ್‌ಹಟ್ ಪೊಲೀಸರು ಎರಡು ನೋಟಿಸ್‌ಗಳನ್ನು ರಾಜಾಸಿಂಗ್ ಅವರಿಗೆ ನೀಡಿದ್ದಾರೆ. ಭಾಷಣ ಮಾಡಿದ ಕೂಡಲೇ ಮೊದಲ ನೋಟೀಸ್ ಕಳುಹಿಸಲಾಗಿದೆ. ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವ ಸೂಚನೆಯನ್ನೂ ರವಾನಿಸಲಾಗಿದೆ.

“ನಿಮ್ಮ ಭಾಷಣದಲ್ಲಿ ನಿರ್ದಿಷ್ಟ ಸಮುದಾಯವನ್ನು ಪ್ರಯೋಚನೆ ಮಾಡಲಾಗಿದೆ. ಲವ್ ಜಿಹಾದ್, ಗೋಹತ್ಯೆ, ಮತಾಂತರ ಮೊದಲಾದ ಕಾನೂನಿನ ಬಗ್ಗೆ ಮಾತನಾಡಿದ್ದೀರಿ” ಎಂದು ಮಂಗಲ್‌ಹಟ್ ಪೊಲೀಸರು ರಾಜಾ ಸಿಂಗ್ ಅವರಿಗೆ ನೀಡಿದ್ದ ನೋಟಿಸ್‌ನಲ್ಲಿ ತಿಳಿಸಿದ್ದಾರೆ. “ನಿರ್ದಿಷ್ಟ ಧರ್ಮವನ್ನು ಕೆರಳಿಸುವ ನಿಮ್ಮ ಭಾಷಣವು ಹೈಕೋರ್ಟ್ ವಿಧಿಸಿರುವ ಷರತ್ತುಗಳ ಉಲ್ಲಂಘನೆಯಾಗಿದೆ” ಎಂದು ಎಚ್ಚರಿಸಲಾಗಿದೆ.

ಮುಂಬೈಗೆ ಭೇಟಿ ನೀಡುವ ಒಂದು ವಾರದ ಮೊದಲು, ಕಳೆದ ವರ್ಷ ಅಜ್ಮೀರ್ ದರ್ಗಾದಲ್ಲಿ ಇಷ್ಟೇ ಪ್ರಚೋದನಕಾರಿ ಭಾಷಣ ಮಾಡಿದ್ದಕ್ಕಾಗಿ ರಾಜಾ ಸಿಂಗ್ ಅವರಿಗೆ ಮತ್ತೊಂದು ನೋಟಿಸ್ ನೀಡಲಾಗಿದೆ. ಉದ್ದೇಶಪೂರ್ವಕವಾಗಿ ಕೋಮು ಭಾವನೆಗಳನ್ನು ಕೆರಳಿಸುವುದು ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸದಿದ್ದರೆ ಬಂಧನ ಮಾಡಲಾಗುವುದು ಎಂದು ಪೊಲೀಸರು ಆ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ. ಆದಾಗ್ಯೂ, ಪೊಲೀಸರು ಹೆಚ್ಚಿನ ನೋಟಿಸ್‌ಗಳನ್ನು ಮಾತ್ರ ನೀಡಿದ್ದಾರೆ, ರಾಜಾರನ್ನು ತಡೆಯುವ ನಿಟ್ಟಿನಲ್ಲಿ ಯಾವುದೇ ಕ್ರಮ ಜರುಗಿಸಿಲ್ಲ.

ರಾಜಾ ಸಿಂಗ್ ತೆಲಂಗಾಣ ಪೊಲೀಸರಿಗೆ ಸವಾಲು ಹಾಕಿದ್ದಾರೆ. ನೋಟಿಸ್ ನೀಡುವ ಪೊಲೀಸರ ನಿರ್ಧಾರವು ರಾಜಕೀಯ ಪ್ರೇರಿತವಾಗಿದೆ, ಮತ್ತೆ ಜೈಲಿಗೆ ಹೋಗುವ ಭಯವಿಲ್ಲ ಎಂದು ಸಿಂಗ್ ಹೇಳಿಕೊಂಡಿದ್ದಾರೆ. ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ವೀಡಿಯೊವನ್ನು ಪೋಸ್ಟ್ ಮಾಡಿದ್ದಕ್ಕಾಗಿ ರಾಜಾ ಸಿಂಗ್‌ ಅವರನ್ನು ಆಗಸ್ಟ್‌ನಲ್ಲಿ ಬಿಜೆಪಿಯಿಂದ ಅಮಾನತು ಮಾಡಲಾಗಿತ್ತು.

ಸಕಲ್ ಹಿಂದೂ ಸಮಾಜವು ಫೆಬ್ರವರಿ 5 ರಂದು ಮುಂಬೈ ನಗರದಲ್ಲಿ ಇದೇ ರೀತಿಯ ಮತ್ತೊಂದು ಸಾರ್ವಜನಿಕ ಕಾರ್ಯಕ್ರಮವನ್ನು ನಿಗದಿಪಡಿಸಿದೆ. ದ್ವೇಷ ಭಾಷಣ ತಡೆಯುವಂತಿದ್ದರೆ ಮಾತ್ರ ಮುಂಬೈನಲ್ಲಿ ಹಿಂದುತ್ವ ಸಂಘಟನೆಗಳು ಆಯೋಜಿಸಿರುವ ಈ ರ್‍ಯಾಲಿಗೆ ಅನುಮತಿ ನೀಡಬಹುದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

‘ಹಿಂದೂ ಜನಾಕ್ರೋಶ ಸಭೆ’ಯ ವಿಡಿಯೊ ರೆಕಾರ್ಡಿಂಗ್ ಮಾಡಿ ಮತ್ತು ಅದರ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಜೆ.ಬಿ.ಪರ್ದಿವಾಲಾ ಅವರಿದ್ದ ಪೀಠವು ಎಚ್ಚರಿಸಿದೆ. “ಕಾನೂನನ್ನು ಧಿಕ್ಕರಿಸಿ ಮತ್ತು ಸಾರ್ವಜನಿಕ ಆದೇಶವನ್ನು ಉಲ್ಲಂಘಿಸುವ ಯಾವುದೇ ದ್ವೇಷದ ಭಾಷಣವನ್ನು ಯಾರೂ ಮಾಡಬಾರದು ಎಂಬ ಷರತ್ತಿಗೆ ಒಳಪಟ್ಟು ಅನುಮತಿ ನೀಡಬಹುದು” ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.

ಹಿಂದುತ್ವ ಸಂಘಟನೆಗಳ ಒಕ್ಕೂಟ ಸಂಸ್ಥೆಯಾದ ‘ಸಕಲ್ ಹಿಂದೂ ಸಮಾಜ’ದ ಈ ಕಾರ್ಯಕ್ರಮವನ್ನು ನಿಷೇಧಿಸುವಂತೆ ಕೋರಿ ಶಹೀನ್ ಅಬ್ದುಲ್ಲಾ ಎಂಬುವರು ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಜನವರಿ 29ರಂದು ಒಕ್ಕೂಟವು ನಡೆಸಿದ ರ್‍ಯಾಲಿಯಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷದ ಭಾಷಣಗಳನ್ನು ಮಾಡಲಾಗಿದೆ ಎಂದು ಅಬ್ದುಲ್ಲಾ ವಾದಿಸಿದರು.

ಇದನ್ನೂ ಓದಿರಿ: ಬಿಬಿಸಿ ಸಾಕ್ಷ್ಯಚಿತ್ರಕ್ಕೆ ತಡೆ ವಿವಾದ; ಮೂರು ವಾರಗಳಲ್ಲಿ ವರದಿ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

ಜನವರಿ 29 ರಂದು ನಡೆದ ರ್‍ಯಾಲಿಯಲ್ಲಿ ಬಿಜೆಪಿಯ ಹಲವು ಮುಖಂಡರು ಪಾಲ್ಗೊಂಡಿದ್ದರು. ಬಿಜೆಪಿಯ ಮುಂಬೈ ಘಟಕದ ಅಧ್ಯಕ್ಷ ಆಶಿಶ್ ಶೆಲಾರ್, ಮಹಾರಾಷ್ಟ್ರ ಸಂಸದರಾದ ಗೋಪಾಲ್ ಶೆಟ್ಟಿ ಮತ್ತು ಮನೋಜ್ ಕೋಟಕ್, ಮಾಜಿ ಸಂಸದ ಕಿರಿತ್ ಸೋಮಯ್ಯ ಸೇರಿದಂತೆ ಹಲವು ಬಿಜೆಪಿ ನಾಯಕರು ಭಾಗವಹಿಸಿದ್ದರು. ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಬಣದ ಹಲವಾರು ನಾಯಕರು ಕೂಡ ಕಾರ್ಯಕ್ರಮದಲ್ಲಿ ಇದ್ದರು.

ಕಾರ್ಯಕ್ರಮದ ಭಾಷಣಕಾರರಲ್ಲಿ ಒಬ್ಬರಾದ ತೆಲಂಗಾಣ ಶಾಸಕ ಟಿ.ರಾಜಾ ಸಿಂಗ್ ಅವರು, “ಮುಸ್ಲಿಮರು ನಡೆಸುವ ಅಂಗಡಿಗಳಿಂದ ವಸ್ತುಗಳನ್ನು ಹಿಂದೂಗಳು ಕೊಳ್ಳಬಾರದು” ಎಂದು ದ್ವೇಷ ಕಾರಿದ್ದರು. ಹಿಂದುತ್ವ ಗುಂಪಿನ ಪಿತೂರಿ ಸಿದ್ಧಾಂತವೆಂದೇ ಬಣ್ಣಿಸಲಾದ ‘ಲವ್ ಜಿಹಾದ್’ ಮತ್ತು ‘ಧಾರ್ಮಿಕ ಮತಾಂತರಗಳ ವಿರುದ್ಧ’ದ ಕಾನೂನುಗಳಿಗೆ ಸಂಬಂಧಿಸಿದಂತೆ ಹಲವರು ಮಾತನಾಡಿದ್ದರು.

ಮಾಹಿತಿ ಕೃಪೆ: ‘ದಿ ವೈರ್‌’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆರೋಪಿ ಲೊಕೇಶನ್‌ ಪಿನ್ ಹಂಚಿಕೊಳ್ಳಬೇಕೆಂಬ ಜಾಮೀನು ಷರತ್ತು ಗೌಪ್ಯತೆ ಹಕ್ಕಿಗೆ ಧಕ್ಕೆ ತರುತ್ತದೆ: ಸುಪ್ರೀಂ...

0
ಆರೋಪಿ ಗೂಗಲ್ ಲೊಕೇಷನ್‌ ಪಿನ್ ಹಂಚಿಕೊಳ್ಳಬೇಕೆಂಬ ಜಾಮೀನು ಷರತ್ತು ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಗೌಪ್ಯತೆಯ ಹಕ್ಕಿಗೆ ಧಕ್ಕೆ ತರುತ್ತದೆ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಮೌಖಿಕವಾಗಿ  ಹೇಳಿದೆ. ಗೂಗಲ್ ಲೊಕೇಷನ್‌ ಪಿನ್ ಹಂಚಿಕೊಳ್ಳಲು...