ಪ್ರಹ್ಲಾದ್ ಜೋಶಿಯವರು ನಮ್ಮ ದಕ್ಷಿಣ ಕರ್ನಾಟಕದ ಸಂಸ್ಕೃತಿಯ ಬ್ರಾಹ್ಮಣರಲ್ಲ. ಬ್ರಾಹ್ಮಣರ ಸಂಸ್ಕಾರದಲ್ಲಿಯೂ ಎರಡು ಮೂರು ಥರ ಇವೆ. ಇವರು ಶೃಂಗೇರಿಯ ಮಠ ಒಡೆದ, ಅಲ್ಲಿನ ವಿಗ್ರಹ ಕೆಡವಿದ ದೇಶಸ್ಥ ಬ್ರಾಹ್ಮಣರ ಗುಂಪಿಗೆ ಸೇರಿದವರು. ಮಹಾತ್ಮ ಗಾಂಧಿಯನ್ನು ಕೊಂದಂತಹ ವರ್ಗಕ್ಕೆ ಸೇರಿದವರು ಎಂಬ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರ ಹೇಳಿಕೆಗೆ ಆಪ್, ಕಾಂಗ್ರೆಸ್ ಮತ್ತು ನಟ ಚೇತನ್ ಪ್ರತಿಕ್ರಿಯಿಸಿದ್ದಾರೆ.
ಮಾನ್ಯ ಹೆಚ್.ಡಿ ದೇವೆಗೌಡರು ಎಲ್ಲಾ ಸಮುದಾಯದ ಬಗ್ಗೆ ಅಪಾರ ಗೌರವ ಕಾಳಜಿಯನ್ನು ಹೊಂದಿದ್ದಾರೆ. ಆದರೆ ಹೆಚ್.ಡಿ ಕುಮಾರಸ್ವಾಮಿರವರು ಬ್ರಾಹ್ಮಣ ಸಮುದಾಯದ ಕುರಿತು ನೀಡಿರುವ ಅವಹೇಳನಕಾರಿ ಹೇಳಿಕೆ ಖಂಡನೀಯ. ಅವರಿಗೆ ಶೋಭೆ ತರುವಂತಹದ್ದಲ್ಲ ಎಂದು ಆಪ್ ಮುಖಂಡರಾದ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಟ್ವೀಟ್ ಮಾಡಿದ್ದಾರೆ.
ಮಾನ್ಯ H D ದೇವೆಗೌಡರು ಎಲ್ಲಾ ಸಮುದಾಯದ ಬಗ್ಗೆ ಅಪಾರ ಗೌರವ ಕಾಳಜಿಯನ್ನು ಹೊಂದಿದ್ದಾರೆ.
ಆದರೆ H D ಕುಮಾರಸ್ವಾಮಿರವರು ಬ್ರಾಹ್ಮಣ ಸಮುದಾಯದ ಕುರಿತು ನೀಡಿರುವ ಅವಹೇಳನಕಾರಿ ಹೇಳಿಕೆ ಖಂಡನೀಯ. ಅವರಿಗೆ ಶೋಭೆ ತರುವಂತಹದ್ದಲ್ಲ.— Bhaskar Rao (@Nimmabhaskar22) February 5, 2023
ಯಾವುದೇ ಜಾತಿಯ ಹೆಸರು ಹಿಡಿದು ಆರೋಪ ಮಾಡುವುದು ಶೋಭೆಯಲ್ಲ. ಎಲ್ಲ ಜಾತಿ ಸಮುದಾಯದಲ್ಲಿಯೂ ಅನೇಕ ಉಪಜಾತಿಗಳಿವೆ. ಜಾತಿ ವಿಷಯದಲ್ಲಿ ರಾಜಕಾರಣ ಸಲ್ಲದು. ಬ್ರಾಹ್ಮಣ ಸಮುದಾಯ ಬಗ್ಗೆ ಮಾತನಾಡಿರುವ ಶಾಪ ಅವರನ್ನು ತಟ್ಟದೆ ಬಿಡದು ಎಂದು ಕಾಂಗ್ರೆಸ್ ಮುಖಂಡರಾದ ದಿನೇಶ್ ಗುಂಡೂರಾವ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಜೆಡಿಎಸ್ ಒಂದು ಬ್ರಾಹ್ಮಣ್ಯದ ಪಕ್ಷ: ನಟ ಚೇತನ್ ಆರೋಪ
“ಹೆಚ್ ಡಿ ಕುಮಾರಸ್ವಾಮಿ ಹೇಳುತ್ತಾರೆ, ಪ್ರಲ್ಹಾದ್ ಜೋಶಿಯು ಗಾಂಧಿಯನ್ನು ಕೊಂದ ಪೇಶ್ವೆ ಬ್ರಾಹ್ಮಣ ಸಂಪ್ರದಾಯದಿಂದ ಬಂದವರು; ಜೋಶಿ ‘ಹಳೆಯ ಕರ್ನಾಟಕದ ಸಂಪ್ರದಾಯದ’ ಬ್ರಾಹ್ಮಣರಲ್ಲ- ನಾವು ‘ಹಳೆಯ ಕರ್ನಾಟಕ ಸಂಪ್ರದಾಯದ’ ಬ್ರಾಹ್ಮಣರನ್ನು ಪೂಜಿಸುತ್ತೇವೆ ಮತ್ತು ಅವರ ಕಾಲಿಗೆ ಬೀಳುತ್ತೇವೆ ಎಂದು.
ಇದು ಎಂತಹ ಪಂಥೀಯ ಮತ್ತು ಮೂಢನಂಬಿಕೆಯ ಅಸಂಬದ್ಧತೆ! ನಮಗೆ ಬ್ರಾಹ್ಮಣರು ಸಮಸ್ಯೆಯಲ್ಲ, ಬ್ರಾಹ್ಮಣ್ಯವು ದೊಡ್ಡ ಸಮಸ್ಯೆ. ಜೆಡಿಎಸ್ ಒಂದು ಬ್ರಾಹ್ಮಣ್ಯದ ಪಕ್ಷ” ಎಂದು ನಟ ಚೇತನ್ ಆರೋಪಿಸಿದ್ದಾರೆ.
ಇನ್ನು ಪ್ರಹ್ಲಾದ್ ಜೋಶಿ ಮತ್ತು ಬ್ರಾಹ್ಮಣರ ಕುರಿತ ತಮ್ಮ ಹೇಳಿಕೆಯನ್ನು ಹೆಚ್.ಡಿ ಕುಮಾರಸ್ವಾಮಿಯವರು ಸಮರ್ಥಿಸಿಕೊಂಡಿದ್ದಾರೆ. “ಇತಿಹಾಸ ತೆಗೆದುನೋಡಿ. ಶೃಂಗೇರಿಯ ವಿದ್ಯಾರಣ್ಯರು ಕಟ್ಟಿದಂತಹ ಚಂದ್ರಮೌಳೇಶ್ವರ ದೇವಾಲಯದ ಮೇಲೆ ದಾಳಿ ಮಾಡಿ ಒಡೆದು ಹಾಕಿದವರು ಯಾರು? ಅದನ್ನು ಇಲ್ಲಿಯವರೆಗೂ ಅದನ್ನು ಪುನರ್ ನಿರ್ಮಿಸದಿರಲು ಕಾರಣವೇನು? ಶೃಂಗೇರಿಯ ಗುರುಗಳು ಕಟ್ಟಬಹುದಾಗಿತ್ತು. ಅದನ್ನು ಕಟ್ಟದಿರಲು ಕಾರಣವೆಂದರೆ ಇತಿಹಾಸದಲ್ಲಿ ಈ ರೀತಿಯ ದಾಳಿ ನಡೆಸಿರುವುದು ಸಾರ್ವಜನಿಕರಿಗೆ ಗೊತ್ತಾಗಲೆಂದು” ಎಂದು ಹೇಳಿದ್ದಾರೆ.
ಇದು ಪಂಚರತ್ನ ಯಾತ್ರೆಯಲ್ಲ, ಅದಕ್ಕೆ ನವಗ್ರಹ ಹಿಡಿದಿದೆ ಎಂದು ಟೀಕಿಸಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಹೆಚ್ಡಿಕೆ ತರಾಟೆಗೆ ತೆಗೆದುಕೊಂಡಿದ್ದರು. ಭಾನುವಾರ ಬೆಂಗಳೂರಿನ ದಾಸರಹಳ್ಳಿಯಲ್ಲಿ ನಡೆದ ಪಂಚರತ್ನ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಮ್ಮ ಭಾಗದ ಬ್ರಾಹ್ಮಣ ಸಮಾಜ ಸರ್ವಜನೋ ಸುಖಿನೋ ಭವಂತು ಎನ್ನುವವರು. ಇವರು ನಮ್ಮ ಭಾಗದ ಬ್ರಾಹ್ಮಣರಲ್ಲ. ಮಹಾರಾಷ್ಟ್ರದ ಮರಾಠ ಪೇಶ್ವೆ ವಂಶಕ್ಕೆ ಸೇರಿದವರು. ಅವರಿಗೆ ಸಂಸ್ಕತಿ ಬೇಕಿಲ್ಲ, ದೇಶ ಒಡೆಯುವ ಕುತಂತ್ರ ರಾಜಕಾರಣ ಮಾಡುತ್ತಾರೆ. ದೇಶಭಕ್ತಿಯ ಹೆಸರಿನಲ್ಲಿ ದೇಶಕ್ಕೆ ಕೊಡುಗೆ ಕೊಟ್ಟವರನ್ನು ಕೊಂದ ಪ್ರವರ್ಗದಿಂದ ಬಂದಂತವರು” ಎಂದಿದ್ದಾರೆ.
ವೀರಶೈವ ಸಮಾಜ, ಒಕ್ಕಲಿಗ ಸಮಾಜ, ಹಿಂದುಳಿದ ಮತ್ತು ದಲಿತ ಜನರು ಈ ಬಿಜೆಪಿಯ, ಆರ್ಎಸ್ಎಸ್ನ ಹುನ್ನಾರ, ಕುತಂತ್ರಕ್ಕೆ ಬಲಿಯಾಗಬಾರದು ಎಂದು ಹೇಳುತ್ತೇನೆ. ಇವರು ಈ ರಾಜ್ಯ ಒಡೆಯುತ್ತಾರೆ. ಪ್ರಹ್ಲಾದ್ ಜೋಶಿಯನ್ನು ಮುಖ್ಯಮಂತ್ರಿ ಮಾಡಿ 8 ಜನರನ್ನು ಉಪ ಮುಖ್ಯಮಂತ್ರಿಗಳಾಗಿ ಮಾಡಲು ದೆಹಲಿಯ ಆರ್ಎಸ್ಎಸ್ ಕಚೇರಿಯಲ್ಲಿ ಸಭೆ ನಡೆಸಿರುವುದರ ಕುರಿತು ನನಗೆ ಮಾಹಿತಿ ಬಂದಿದೆ ಎಂದಿದ್ದಾರೆ.
ನಮ್ಮ ಹಳೇ ಕರ್ನಾಟಕದ ಬ್ರಾಹ್ಮಣರಲ್ಲಿ ಸಂಸ್ಕೃತಿಯಿದೆ. ನಾವು ಅವರ ಕಾಲಿಗೆ ಬೀಳುತ್ತೇವೆ, ಅವರನ್ನು ಪೂಜಿಸುತ್ತೇವೆ ಮತ್ತು ಗುರುಗಳ ರೀತಿ ಕಾಣುತ್ತೇವೆ. ಆದರೆ ಮೇಲಿನ ವರ್ಗದ ಬ್ರಾಹ್ಮಣರು ಸಮಾಜ ಒಡೆಯುವವರು. ಶೃಂಗೇರಿ ಮಠವನ್ನು ಒಡೆದು, ಶಂಕರಾಚಾರ್ಯರ ವಂಶಸ್ಥರನ್ನು ಓಡಿಸಿದಂತವರು. ಆ ವರ್ಗದ ಬ್ರಾಹ್ಮಣರು ಕುರಿತು ಕರ್ನಾಟಕದ ಕನ್ನಡಿಗರು ಎಚ್ಚರಿಕೆಯಿಂದ ಇರಬೇಕೆಂದು ಕರೆ ನೀಡಿದರು.
ಇದನ್ನೂ ಓದಿ: ಗಾಂಧಿ ಕೊಂದ, ಶೃಂಗೇರಿ ಮಠ ಒಡೆದ ಬ್ರಾಹ್ಮಣರ ಬಗ್ಗೆ ಎಚ್ಚರಿಕೆಯಿಂದಿರಿ: ಪ್ರಹ್ಲಾದ್ ಜೋಶಿ ವಿರುದ್ಧ ಹೆಚ್ಡಿಕೆ ಆಕ್ರೋಶ