ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ಬಹಿರಂಗ ಬಂಡಾಯ ನಡೆಸುತ್ತಿರುವ ಸಚಿನ್ ಪೈಲಟ್, ಅಸ್ಸಾಂ ಮತ್ತು ಬಿಹಾರದಲ್ಲಿ ಪ್ರವಾಹದಿಂದ ಹಾನಿಗೊಳಗಾದವರಿಗೆ ಬೆಂಬಲ ನೀಡಬೇಕೆಂದು ದೇಶದ ಜನರನ್ನು ಕೋರಿದ್ದಾರೆ.
“ಅಸ್ಸಾಂ ಮತ್ತು ಬಿಹಾರ ಪ್ರವಾಹದಿಂದ ಹಾನಿಗೊಳಗಾದ ಎಲ್ಲ ಕುಟುಂಬಗಳೊಂದಿಗೆ ನಾನಿದ್ದು, ಅವರಿಗಾಗಿ ಪ್ರಾರ್ಥಿಸುತ್ತೇನೆ. ಅಸ್ಸಾಂವೊಂದರಲ್ಲೇ 68 ಕ್ಕೂ ಹೆಚ್ಚು ಜೀವಹಾನಿಯಾಗಿದ್ದು, 3.6 ಮಿಲಿಯನ್ ಜನರು ಬಾಧಿತರಾಗಿದ್ದಾರೆ. ಈ ವಿಪರೀತ ಪ್ರವಾಹ ಸಂದರ್ಭದಲ್ಲಿ ನಾವೆಲ್ಲ ಒಟ್ಟಿಗೆ ಸೇರಿ ಪ್ರವಾಹ ಪೀಡಿತರಿಗೆ ಸಹಾಯವಾಗುವ ಪ್ರಯತ್ನ ಮಾಡೋಣ ಎಂದು ಎಲ್ಲಾ ಭಾರತೀಯರಿಗೆ ಮನವಿ ಮಾಡುತ್ತೇನೆ” ಎಂದು ಪೈಲಟ್ ಟ್ವೀಟ್ ಮಾಡಿದ್ದಾರೆ.
My thoughts & prayers with all those families affected by the Assam & Bihar floods. Over 68 lives lost & 3.6 million people affected in Assam alone.
I appeal to all Indians, to come together, join in the efforts to help support those affected in these extreme flood situations.— Sachin Pilot (@SachinPilot) July 18, 2020
ಸದ್ಯಕ್ಕೆ ಸಚಿನ್ ಪೈಲಟ್ ದೆಹಲಿಯಲ್ಲಿದ್ದಾರಾದರೂ ಅವರನ್ನು ಬೆಂಬಲಿಸಿರುವ ಹಲವಾರು ಶಾಸಕರು ಎಲ್ಲಿದ್ದಾರೆ ಎಂಬುದು ಇದುವರೆಗೂ ಪತ್ತೆಯಾಗಿಲ್ಲ. ರಾಜಸ್ಥಾನ ಪೊಲೀಸರು ಹರಿಯಾಣದಲ್ಲಿ ಹುಡುಕಾಡಿದರೂ ಸಿಕ್ಕಿಲ್ಲ. ಅಲ್ಲದೇ ಬಂಡಾಯ ಶಾಸಕರು ಬೆಂಗಳೂರಿನತ್ತ ಮುಖ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ವರ್ಷದ ಆರಂಭದಲ್ಲಿ ಮಧ್ಯಪ್ರದೇಶದಲ್ಲಿ ಜ್ಯೋತಿರಾಧಿತ್ಯ ಸಿಂಧಿಯ ನೇತೃತ್ವದಲ್ಲಿ ಕೆಲ ಶಾಸಕರು ಸರ್ಕಾರದ ವಿರುದ್ಧ ಬಂಡಾಯವೆದ್ದಾಗಲೂ ಸಹ ಅವರನ್ನು ಬೆಂಗಳೂರಿನ ಹೋಟೆಲ್ನಲ್ಲಿ ಇರಿಸಲಾಗಿತ್ತು.
ಸದ್ಯಕ್ಕೆ ಸಚಿನ್ ಪೈಲಟ್ ತಮ್ಮೊಡನೆ 30 ಶಾಸಕರು ಇದ್ದಾರೆ ಎಂದು ತಿಳಿಸಿದ್ದಾರೆ. ಸಿಎಂ ಅಶೋಕ್ ಗೆಹ್ಲೋಟ್ ಕೂಡ ತನಗೆ 101 ಶಾಸಕರ ಬೆಂಬಲವಿದೆ ಎಂದು ಹೇಳಿದ್ದಾರೆ. ಇಂದು ರಾಜ್ಯಪಾಲರನ್ನು ಸಿಎಂ ಭೇಟಿಯಾಗಿದ್ದು ಮುಂದಿನ ವಾರ ವಿಶ್ವಾಸಮತ ಯಾಚನೆ ನಡೆಯುವ ಸಂಭವವಿದೆ.
ಇದನ್ನೂ ಓದಿ : ರಾಜಸ್ಥಾನ ಬಿಕ್ಕಟ್ಟು: ಇಬ್ಬರು ಪ್ರಾದೇಶಿಕ ಪಕ್ಷಗಳ ಶಾಸಕರ ಬೆಂಬಲವಿದೆಯೆಂದ ಗೆಹ್ಲೋಟ್