ವಿಭಿನ್ನ ಸಮುದಾಯದ ಜೋಡಿಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಮಣ್ಯದ ದೇವಾಸ್ಥಾನಗಳಿಗೆ ಭೇಟಿ ನೀಡುವುದನ್ನು ಹಿಂದುತ್ವ ಕಾರ್ಯಕರ್ತರು ತಡೆದು, ಮತೀಯ ಗೂಂಡಾಗಿರಿ ನಡೆಸಿರುವ ಘಟನೆ ವರದಿಯಾಗಿದೆ.
ಗದಗ ಜಿಲ್ಲೆಯ 26 ವರ್ಷದ ರಫೀಕ್ ಮತ್ತು ಆತನ ಸ್ನೇಹಿತೆ ಶನಿವಾರ ಧರ್ಮಸ್ಥಳದ ಮಂಜುನಾಥೇಶ್ವರ ದೇವಾಲಯಕ್ಕೆ ಹೊರಟಿದ್ದರು. ಅಲ್ಲಿ ದೇವರ ದರ್ಶನ ಪಡೆಯುವುದು ಅವರ ಉದ್ದೇಶವಾಗಿತ್ತು. ಆದರೆ ಅವರಿಗೆ ಅಲ್ಲಿ ಉಳಿದುಕೊಳ್ಳಲು ಜಾಗ ದೊರೆತಿರಲಿಲ್ಲ.
ಲಾಡ್ಜ್ ಒಂದರಲ್ಲಿ ಉಳಿದುಕೊಳ್ಳಲು ಯತ್ನಿಸಿದಾಗ ಅದರ ಮ್ಯಾನೇಜರ್ ಇಬ್ಬರು ಭಿನ್ನ ಧರ್ಮಕ್ಕೆ ಸೇರಿದವರಾದ್ದರಿಂದ ವಸತಿ ನೀಡಲು ನಿರಾಕರಿಸಿದ್ದರು. ಬಹಳ ಜಾಗಗಳಲ್ಲಿ ಉಳಿದುಕೊಳ್ಳಲು ಯತ್ನಿಸಿ ವಿಫಲರಾದ ನಂತರ ಆ ಜೋಡಿಯು ಕುಕ್ಕೆ ಸುಬ್ರಮಣ್ಯದ ಕಡೆಗೆ ಪ್ರಯಾಣ ಬೆಳೆಸಿತ್ತು.
ಈ ಮಾಹಿತಿ ಪಡೆದ ಬಲಪಂಥೀಯ ಕಾರ್ಯಕರ್ತರು ಪುತ್ತೂರು ತಾಲ್ಲೂಕಿನ ಕಪಿನ ಬಾಗಿಲು ಎಂಬ ಸ್ಥಳದಲ್ಲಿ ಅವರನ್ನು ತಡೆದು ದಾಂಧಲೆ ನಡೆಸಿದ್ದಾರೆ. ನಂತರ ಆ ಜೋಡಿಯನ್ನು ಉಪ್ಪಿನಂಗಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರು ಹುಡುಗಿಯ ಮನೆಯವರನ್ನು ಸಂಪರ್ಕಿಸಿ ಅವರನ್ನು ಕರೆಸಿಕೊಂಡು ನಂತರ ಹುಡುಗಿಯನ್ನು ಅವರೊಂದಿಗೆ ಕಳಿಸಿದ್ದಾರೆ. ಆನಂತರ ರಫೀಕ್ನನ್ನು ಸಹ ಬಿಟ್ಟು ಕಳಿಸಲಾಗಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮತೀಯ ಗೂಂಡಾಗಿರಿಗಳ ಹಿನ್ನೆಲೆಯಲ್ಲಿ ಈ ಪ್ರಕರಣ ಆತಂಕ ಸೃಷ್ಟಿಸಿತ್ತು. ಧರ್ಮಸ್ಥಳದಲ್ಲಿ ಈ ಹಿಂದೆ ಹಲವು ಬಾರಿ ಲಕ್ಷ ದೀಪೋತ್ಸವದ ಸಂದರ್ಭದಲ್ಲಿ ವೀರೇಂದ್ರ ಹೆಗಡೆಯವರು ಸರ್ವ ಧರ್ಮ ಸಮ್ಮೇಳನವನ್ನು ಆಯೋಜಿಸುತ್ತಿದ್ದರು. ಹೀಗಿರುವಾಗ ಭಿನ್ನ ಧರ್ಮದ ವ್ಯಕ್ತಿಗಳು ದೇವಾಸ್ಥಾನಕ್ಕೆ ಬರುವುದು ತಪ್ಪೇ? ಆ ಜೋಡಿಯನ್ನು ತಡೆದು ಹಿಂಸೆ ನೀಡಿದ್ದು ಏಕೆ ಎಂಬ ಚರ್ಚೆಗಳು ಆರಂಭವಾಗಿವೆ.
ಇದನ್ನೂ ಓದಿ: ರಾಜಸ್ಥಾನ: ಪಾತ್ರೆ ಮುಟ್ಟಿದ ದಲಿತ ಬಾಲಕನನ್ನು ಥಳಿಸಿ ಕೊಂದ ಶಿಕ್ಷಕ; ಎಫ್ಐಆರ್ ದಾಖಲು
ಈ ಮತೀಯ ಗೂಂಡಾಗಿರಿ ಕಂಡನಾರ್ಹ.