Homeಮುಖಪುಟರಾಷ್ಟ್ರಪತಿ ದ್ರೌಪದಿ ಮುರ್ಮು ಹೆಸರು ಹಿಮಾಲಯದೆತ್ತರಕ್ಕೆ?

ರಾಷ್ಟ್ರಪತಿ ದ್ರೌಪದಿ ಮುರ್ಮು ಹೆಸರು ಹಿಮಾಲಯದೆತ್ತರಕ್ಕೆ?

- Advertisement -
- Advertisement -

ಪ್ರಸ್ತುತ ಪ್ರಜಾಸತ್ತೆಯ ಹೆಸರಿನಲ್ಲಿ ನಡೆಯುತ್ತಿರುವ ರಾಜಪ್ರಭುತ್ವದ ಆಚರಣೆಗಳು ಬ್ರಾಹ್ಮಣಶಾಹಿಯ ದಿಗ್ವಿಜಯದಂತಿವೆ. ಪ್ರಧಾನಿ ನರೇಂದ್ರ ಮೋದಿಯವರು ಬ್ರಾಹ್ಮಣ ಪುರೋಹಿತರ ದಂಡಿನೊಂದಿಗೆ ದಕ್ಷಿಣದ ಚೋಳ ರಾಜರ ಕಾಲದ್ದೆಂಬ ರಾಜದಂಡ “ಸೆಂಗೋಲ್”ಅನ್ನು ಸಂಸತ್ ಭವನದಲ್ಲಿ ಯಜ್ಞದೀಕ್ಷಿತರಾಗಿ ಪ್ರತಿಷ್ಠಾಪಿಸಿದರು-ರಾಜನ ಪಟ್ಟಾಭಿಷೇಕದಂತೆ.

ರಾಷ್ಟ್ರದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ’ಶಿಷ್ಟಾಚಾರ’ ಕಾರಣದಿಂದ ಆಹ್ವಾನಿಸಿರಲಿಲ್ಲ. ಆದರೆ, ಆ ಶಿಷ್ಟಾಚಾರ ಏನೆಂದು ತಿಳಿದುಬರುವುದಿಲ್ಲ. ಮೊದಲಿಗೆ, ಮುರ್ಮು ಅವರು ಒಬ್ಬ ವಿಧವೆ, ಅದೂ ಬುಡಕಟ್ಟು (ಎಸ್.ಟಿ) ಮಹಿಳೆ. ಆದ್ದರಿಂದ ಅವರು ನೂತನ ಸಂಸತ್ ಭವನವನ್ನು ಉದ್ಘಾಟಿಸಿದರೆ ಅದರ ಪಾವಿತ್ರ್ಯತೆಗೆ ಭಂಗ ಬರುತ್ತದೆ ಎಂಬ ಸನಾತನ ’ಶಿಷ್ಟತೆ’ಗಳು ಕಾರಣವಾದವೇ? ಅಥವಾ ’ಸೆಂಗೋಲ್’ ಎಂಬ ರಾಜದಂಡವನ್ನು ಪುರುಷನು ಮಾತ್ರ ಸ್ವೀಕರಿಸಲರ್ಹ ಎಂಬ ರಾಜಪ್ರಭುತ್ವದ ಸಂಪ್ರದಾಯವೋ?- ಈ ಚರ್ಚೆಗಳು ಜಾರಿಯಲ್ಲಿವೆ. ಒಟ್ಟಾರೆ ಮುರ್ಮು ಅವರನ್ನು ಸಮಾರಂಭಕ್ಕೆ ಆಹ್ವಾನಿಸದೆ ಸ್ತ್ರೀ ಸಂಕುಲವನ್ನೇ ಅವಮಾನಿಸಲಾಯಿತು. ಇದು ಪ್ರಜಾತಂತ್ರದಲ್ಲಿ ದೇಶದ ಪ್ರಥಮ ಮಹಿಳೆಗೆ ನಾವು ತೋರಿದ ಅಕ್ಷಮ್ಯ ಅಪರಾಧ!

ಎರಡನೆಯದಾಗಿ, ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್‌ನ ವಿರುದ್ಧ ಕಳೆದೊಂದು ತಿಂಗಳಿನಿಂದ ಜಂತರ್‌ಮಂತರ್‌ನಲ್ಲಿ ಆತನಿಂದ ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳಾ ಕುಸ್ತಿ ಪಟುಗಳು ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಎಂದು ಧರಣಿ ಸತ್ಯಾಗ್ರಹ ಹಿಡಿದಿದ್ದಾರೆ. ಅವರು ಇದೇ ನೂತನ ಸಂಸತ್ ಭವನದ ಉದ್ಘಾಟನೆ ಸಮಾರಂಭದ ದಿನ ಇಂಡಿಯಾ ಗೇಟ್ ಬಳಿ ಧರಣಿ ಕೂರಲು ಹೊರಟರು. ಆದರೆ ಇದರಿಂದ ಶಾಂತಿ ಭಂಗವಾಗುತ್ತದೆಂದು ನೆಪವೊಡ್ಡಿ ಪೊಲೀಸರು ಅವರನ್ನು ಬಡಿದು ಎಳೆದು ಹಾಕಿದರು. ಆ ದೃಶ್ಯ ಸುದ್ದಿ ಮಾಧ್ಯಮಗಳಲ್ಲಿ ಹರಿದುಬಂತು. ಅತ್ತ ಉದ್ಘಾಟನೆಯ ಮಂತ್ರಘೋಷ ದಿಗ್ಮಂಡಲ ತುಂಬಿದರೆ, ಇತ್ತ ಒಲಂಪಿಕ್ಸ್‌ನಲ್ಲಿ ಪದಕಗಳಿಸಿ ದೇಶದ ಕೀರ್ತಿಯನ್ನು ದಿಗಂತ ವಿಸ್ತಾರಗೊಳಿಸಿದ ಮಹಿಳಾ ಕುಸ್ತಿಪಟುಗಳ ಅಸಹಾಯಕ ಅರಣ್ಯ ರೋದನ. ಈ ಪ್ರಹಸನದ ಬಗ್ಗೆ ಪ್ರಧಾನಿ ಮೋದಿಯವರು ತುಟಿಬಿಚ್ಚುತ್ತಿಲ್ಲ; ಗುಟ್ಟು ಏನೆಂದು ತಿಳಿಯುತ್ತಿಲ್ಲ. ನಮ್ಮ ರಾಷ್ಟ್ರಪತಿಗಳಾದರೂ ಮೌನ ಮುರಿಯುತ್ತಿಲ್ಲ. ಏಕೆ? ಕಾರಣ ತಿಳಿಯುತ್ತಿಲ್ಲ!

ಈ ಹಿನ್ನೆಲೆಯಲ್ಲಿ ಅವಲೋಕಿಸಿದರೆ ಈ ದೇಶದಲ್ಲಿ ಮಹಿಳೆಯರಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲವಾಗಿದೆ. ಹೆಣ್ಣು ಏನಿದ್ದರೂ ಗೃಹಸ್ವಾಮಿನಿ ಮಾತ್ರ ಎನ್ನುತ್ತದೆ ಮನುಧರ್ಮ ಶಾಸ್ತ್ರ. ಈ ಎಲ್ಲ ಬೆಳವಣಿಗೆಯನ್ನು ಮನಗಂಡು ನಮ್ಮ ರಾಷ್ಟ್ರಪತಿಯವರು ಸರ್ಕಾರಕ್ಕೆ ಸ್ಪಷ್ಟೀಕರಣ ಕೋರಿ ಒಂದು ದಿಟ್ಟ ಕ್ರಮಕ್ಕಾದರೂ ಮುಂದಾಗಬಹುದೇ?. ಹಾಗೆ ಮಾಡಬೇಕೆಂಬುದು ಪ್ರಜಾತಂತ್ರವಾದಿಗಳ ಅದಮ್ಯ ಅಪೇಕ್ಷೆ! ಇದು ತಮ್ಮ ಅಧಿಕಾರದ ಚೌಕಟ್ಟಿನಲ್ಲಿ ಮಾಡಬಹುದಾಗಿದ್ದರೆ, ಅಧಿಕಾರದಾಚೆಗೂ ಪ್ರತಿಭಟಿಸುವ ಅವಕಾಶ ಅವರಿಗಿದೆ.

ಇದಕ್ಕೆ ಪೂರಕವಾಗಿ ಭಾರತೀಯ ಸಂಸ್ಕೃತಿಯ ಕೆನೆಯಂತಿರುವ ರಾಮಾಯಣದ ಹಾಗೂ ಶಾಕುಂತಲ ನಾಟಕದ ಸೀತಾ-ಶಕುಂತಲೆಯರ ಪಾತ್ರಗಳ ನಿರ್ಧಾರವನ್ನು ಇಲ್ಲಿ ಪ್ರಸ್ತಾಪಿಸಬಹುದು. ಈ ಇಬ್ಬರು ನಾಯಕಿಯರು ತಾವು ತೀವ್ರ ಅವಮಾನಿತರಾದಾಗ ತೆಗೆದುಕೊಳ್ಳುವ ಅಂತಿಮ ನಿರ್ಧಾರ ಅನುಪಮ. ಮೊದಲಿಗೆ, ಲವ-ಕುಶರ ಕಾಳಗದ ನಂತರ ಪುರುಷೋತ್ತಮ ರಾಮನು ಸೀತೆಯನ್ನು ಸಂಧಿಸಿ ಅಯೋಧ್ಯೆಗೆ ಬರಲು ಆಹ್ವಾನಿಸುತ್ತಾನೆ. ಆದರೆ ಅಂದು ಪರಿತ್ಯಾಗಗೊಂಡ ಭೂಜಾತೆ ಸೀತೆ ತಣ್ಣಗೆ ರಾಜನ ಆಹ್ವಾನವನ್ನು ನಿರಾಕರಿಸಿ ವಾಲ್ಮೀಕಿ ಆಶ್ರಮದಲ್ಲೇ ಉಳಿಯುತ್ತಾಳೆ. ಇದು ಉತ್ತರ ರಾಮಾಯಣದ ಅಮೋಘ ದರ್ಶನ ಸಾರ.

ಇನ್ನು ಶಾಕುಂತಲ ನಾಟಕದಲ್ಲಿ ಬೇಟೆಗೆಂದು ಬಂದ ದುಷ್ಯಂತ ಕಣ್ವಾಶ್ರಮದಲ್ಲಿ ಮಗ ಭರತ ಹಾಗೂ ಅವನ ತಾಯಿ ಶಕುಂತಲೆಯನ್ನು ಕಂಡು ’ವಸಂತಕಾಲಕ್ಕೆ ಬಳ್ಳಿ ಹೂ ತಳೆಯುವಂತೆ ನೀನು ಈ ಅಭಿಜ್ಞಾನವನ್ನು ಪುನಃ ತೊಡು’ ಎಂದು ಗುರುತಿನ ಉಂಗುರವನ್ನು ನೀಡುತ್ತಾನೆ. ಆದರೆ ’ಸರಿಯಾದ ಸಮಯಕ್ಕೆ ಅದು ನನಗೆ ಕೈ ಕೊಟ್ಟಿತು, ಬೇಡ’ ಎಂದು ತಣ್ಣಗೆ ನಿರಾಕರಿಸುತ್ತಾಳೆ. ಮತ್ತು ಋಷ್ಯಾಶ್ರಮದಲ್ಲೇ ಉಳಿಯುತ್ತಾಳೆ ಶಕುಂತಲೆ. ಈ ಎರಡೂ ಜಾಗತಿಕ ಪ್ರತಿರೋಧಗಳು ಸ್ತ್ರೀ ಸಂವೇದನೆಯ ಸಂಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದ ಸಂದರ್ಭಗಳಾಗಿವೆ.

ಅದಿರಲಿ, ಪ್ರಸ್ತುತ ನಮ್ಮ ಪ್ರಜಾಪ್ರಭುತ್ವ ಸಂದರ್ಭದಲ್ಲಿ ವಿಚಾರ ಮಾಡಿದರೆ ಪುರುಷಪಾರಮ್ಯದ ನೀತಿಯನ್ನನುಸರಿಸುವ ಪ್ರಧಾನಿ ಮೋದಿಯವರ ನಡೆ ನೋಡಿದರೆ ಈ ಸರ್ಕಾರ ಬುಡಕಟ್ಟು ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ದೇವೆ ಎಂದು ಬೀಗುತ್ತಿದೆಯೇ ಹೊರತು ವಾಸ್ತವವಾಗಿ ಮಹಿಳೆಯರಿಗೆ ನೀಡುವ ಘನತೆ ಗೌರವಗಳಿಗೆ ಲೋಪವೆಸಗುತ್ತಾ ಬರುತ್ತಿದೆ. ಆದ ಪ್ರಯುಕ್ತ ಈ ಸಂಘರ್ಷ ಸಮಯದಲ್ಲಿ ದ್ರೌಪದಿ ಮುರ್ಮು ಅವರು ತಮ್ಮ ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ದೃಢನನಿರ್ಧಾರ ತೆಗೆದುಕೊಂಡು ರಾಷ್ಟ್ರಪತಿಭವನದಿಂದ ಹೊರಬರುವುದು ಪ್ರತಿಭಟನೆಯ ಸಂಕೇತವಾದೀತು. ಈ ಒಂದು ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಲು ಅವರಿಂದ ಸಾಧ್ಯವೆ? ಹಾಗೇನಾದರೂ ಅವರು ಮಾಡಿದರಾದರೆ ಇದೊಂದು ಅನನ್ಯ ಐತಿಹಾಸಿಕ ಘಟನೆಯಾಗುತ್ತದೆ. ಮುರ್ಮು ಅವರ ಹೆಸರು ಸೀತಾ-ಶಕುಂತಲೆಯರ ಸಾಲಿಗೆ ನಿಲ್ಲುತ್ತದೆ. ಮತ್ತು ಜಾಗತಿಕ ಸ್ತ್ರೀ ಸಂಕುಲದಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ. ಮುರ್ಮು ಅವರು ಬಡತನ ಸಿರಿತನಗಳನ್ನು ಕಂಡುಂಡು ಬಾಳಿ ಬದುಕಿದವರು. ಅವರಿಗೆ ರಾಷ್ಟ್ರಪತಿ ಭವನವನ್ನು ತೊರೆದು ಬರಲು ಅಂಥ ಮೋಹವೇನೂ ಇರಲಾರದು. ಹೇಗೂ ಐದು ವರ್ಷದ ತರುವಾಯ ತೆರವುಗೊಳಿಸಲೇಬೇಕಲ್ಲಾ! ’ನಾಳೆ ಬಪ್ಪುದು ಇಂದೇ ಬರಲಿ’ ಎಂದು ಹೊರಬಂದರೆ ಅದೊಂದು ಅಮೃತ ಮುಹೂರ್ತ! ಅದು ಎಷ್ಟೋ ದಮನಿತ ಮಹಿಳೆಯರಿಗೆ ಸ್ಪೂರ್ತಿದಾಯಕವೂ ಆದೀತು ಮತ್ತು ಅವರ ಹೆಸರು ಹಿಮಾಲಯದೆತ್ತರಕ್ಕೆ ಏರುತ್ತದೆ!.

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗದಿದ್ದರೆ ಮತ್ತೆ ಹಾಗೆ ಮಾಡ್ತಾರೆ: ಅತ್ಯಾಚಾರ ಸಂತ್ರಸ್ತೆಯ ಸಹೋದರಿ ಹೇಳಿಕೆ

0
"ಪ್ರಜ್ವಲ್ ಮತ್ತು ರೇವಣ್ಣ ಯಾವತ್ತೂ ತಲೆ ಎತ್ತಿ ನಡೆಯಬಾರದು, ಅಂತಹ ಶಿಕ್ಷೆಯಾಗಬೇಕು" ಎಂದು ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯೊಬ್ಬರ ಸಹೋದರಿ ಮಾಲಾ (ಹೆಸರು ಬದಲಿಸಲಾಗಿದೆ) ಹೇಳಿರುವುದಾಗಿ thenewsminute.com ವರದಿ ಮಾಡಿದೆ. ಮಾಲಾಗೆ ತನ್ನ ಸಹೋದರಿ...