Homeಮುಖಪುಟರಾಷ್ಟ್ರಪತಿ ದ್ರೌಪದಿ ಮುರ್ಮು ಹೆಸರು ಹಿಮಾಲಯದೆತ್ತರಕ್ಕೆ?

ರಾಷ್ಟ್ರಪತಿ ದ್ರೌಪದಿ ಮುರ್ಮು ಹೆಸರು ಹಿಮಾಲಯದೆತ್ತರಕ್ಕೆ?

- Advertisement -
- Advertisement -

ಪ್ರಸ್ತುತ ಪ್ರಜಾಸತ್ತೆಯ ಹೆಸರಿನಲ್ಲಿ ನಡೆಯುತ್ತಿರುವ ರಾಜಪ್ರಭುತ್ವದ ಆಚರಣೆಗಳು ಬ್ರಾಹ್ಮಣಶಾಹಿಯ ದಿಗ್ವಿಜಯದಂತಿವೆ. ಪ್ರಧಾನಿ ನರೇಂದ್ರ ಮೋದಿಯವರು ಬ್ರಾಹ್ಮಣ ಪುರೋಹಿತರ ದಂಡಿನೊಂದಿಗೆ ದಕ್ಷಿಣದ ಚೋಳ ರಾಜರ ಕಾಲದ್ದೆಂಬ ರಾಜದಂಡ “ಸೆಂಗೋಲ್”ಅನ್ನು ಸಂಸತ್ ಭವನದಲ್ಲಿ ಯಜ್ಞದೀಕ್ಷಿತರಾಗಿ ಪ್ರತಿಷ್ಠಾಪಿಸಿದರು-ರಾಜನ ಪಟ್ಟಾಭಿಷೇಕದಂತೆ.

ರಾಷ್ಟ್ರದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ’ಶಿಷ್ಟಾಚಾರ’ ಕಾರಣದಿಂದ ಆಹ್ವಾನಿಸಿರಲಿಲ್ಲ. ಆದರೆ, ಆ ಶಿಷ್ಟಾಚಾರ ಏನೆಂದು ತಿಳಿದುಬರುವುದಿಲ್ಲ. ಮೊದಲಿಗೆ, ಮುರ್ಮು ಅವರು ಒಬ್ಬ ವಿಧವೆ, ಅದೂ ಬುಡಕಟ್ಟು (ಎಸ್.ಟಿ) ಮಹಿಳೆ. ಆದ್ದರಿಂದ ಅವರು ನೂತನ ಸಂಸತ್ ಭವನವನ್ನು ಉದ್ಘಾಟಿಸಿದರೆ ಅದರ ಪಾವಿತ್ರ್ಯತೆಗೆ ಭಂಗ ಬರುತ್ತದೆ ಎಂಬ ಸನಾತನ ’ಶಿಷ್ಟತೆ’ಗಳು ಕಾರಣವಾದವೇ? ಅಥವಾ ’ಸೆಂಗೋಲ್’ ಎಂಬ ರಾಜದಂಡವನ್ನು ಪುರುಷನು ಮಾತ್ರ ಸ್ವೀಕರಿಸಲರ್ಹ ಎಂಬ ರಾಜಪ್ರಭುತ್ವದ ಸಂಪ್ರದಾಯವೋ?- ಈ ಚರ್ಚೆಗಳು ಜಾರಿಯಲ್ಲಿವೆ. ಒಟ್ಟಾರೆ ಮುರ್ಮು ಅವರನ್ನು ಸಮಾರಂಭಕ್ಕೆ ಆಹ್ವಾನಿಸದೆ ಸ್ತ್ರೀ ಸಂಕುಲವನ್ನೇ ಅವಮಾನಿಸಲಾಯಿತು. ಇದು ಪ್ರಜಾತಂತ್ರದಲ್ಲಿ ದೇಶದ ಪ್ರಥಮ ಮಹಿಳೆಗೆ ನಾವು ತೋರಿದ ಅಕ್ಷಮ್ಯ ಅಪರಾಧ!

ಎರಡನೆಯದಾಗಿ, ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್‌ನ ವಿರುದ್ಧ ಕಳೆದೊಂದು ತಿಂಗಳಿನಿಂದ ಜಂತರ್‌ಮಂತರ್‌ನಲ್ಲಿ ಆತನಿಂದ ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳಾ ಕುಸ್ತಿ ಪಟುಗಳು ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಎಂದು ಧರಣಿ ಸತ್ಯಾಗ್ರಹ ಹಿಡಿದಿದ್ದಾರೆ. ಅವರು ಇದೇ ನೂತನ ಸಂಸತ್ ಭವನದ ಉದ್ಘಾಟನೆ ಸಮಾರಂಭದ ದಿನ ಇಂಡಿಯಾ ಗೇಟ್ ಬಳಿ ಧರಣಿ ಕೂರಲು ಹೊರಟರು. ಆದರೆ ಇದರಿಂದ ಶಾಂತಿ ಭಂಗವಾಗುತ್ತದೆಂದು ನೆಪವೊಡ್ಡಿ ಪೊಲೀಸರು ಅವರನ್ನು ಬಡಿದು ಎಳೆದು ಹಾಕಿದರು. ಆ ದೃಶ್ಯ ಸುದ್ದಿ ಮಾಧ್ಯಮಗಳಲ್ಲಿ ಹರಿದುಬಂತು. ಅತ್ತ ಉದ್ಘಾಟನೆಯ ಮಂತ್ರಘೋಷ ದಿಗ್ಮಂಡಲ ತುಂಬಿದರೆ, ಇತ್ತ ಒಲಂಪಿಕ್ಸ್‌ನಲ್ಲಿ ಪದಕಗಳಿಸಿ ದೇಶದ ಕೀರ್ತಿಯನ್ನು ದಿಗಂತ ವಿಸ್ತಾರಗೊಳಿಸಿದ ಮಹಿಳಾ ಕುಸ್ತಿಪಟುಗಳ ಅಸಹಾಯಕ ಅರಣ್ಯ ರೋದನ. ಈ ಪ್ರಹಸನದ ಬಗ್ಗೆ ಪ್ರಧಾನಿ ಮೋದಿಯವರು ತುಟಿಬಿಚ್ಚುತ್ತಿಲ್ಲ; ಗುಟ್ಟು ಏನೆಂದು ತಿಳಿಯುತ್ತಿಲ್ಲ. ನಮ್ಮ ರಾಷ್ಟ್ರಪತಿಗಳಾದರೂ ಮೌನ ಮುರಿಯುತ್ತಿಲ್ಲ. ಏಕೆ? ಕಾರಣ ತಿಳಿಯುತ್ತಿಲ್ಲ!

ಈ ಹಿನ್ನೆಲೆಯಲ್ಲಿ ಅವಲೋಕಿಸಿದರೆ ಈ ದೇಶದಲ್ಲಿ ಮಹಿಳೆಯರಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲವಾಗಿದೆ. ಹೆಣ್ಣು ಏನಿದ್ದರೂ ಗೃಹಸ್ವಾಮಿನಿ ಮಾತ್ರ ಎನ್ನುತ್ತದೆ ಮನುಧರ್ಮ ಶಾಸ್ತ್ರ. ಈ ಎಲ್ಲ ಬೆಳವಣಿಗೆಯನ್ನು ಮನಗಂಡು ನಮ್ಮ ರಾಷ್ಟ್ರಪತಿಯವರು ಸರ್ಕಾರಕ್ಕೆ ಸ್ಪಷ್ಟೀಕರಣ ಕೋರಿ ಒಂದು ದಿಟ್ಟ ಕ್ರಮಕ್ಕಾದರೂ ಮುಂದಾಗಬಹುದೇ?. ಹಾಗೆ ಮಾಡಬೇಕೆಂಬುದು ಪ್ರಜಾತಂತ್ರವಾದಿಗಳ ಅದಮ್ಯ ಅಪೇಕ್ಷೆ! ಇದು ತಮ್ಮ ಅಧಿಕಾರದ ಚೌಕಟ್ಟಿನಲ್ಲಿ ಮಾಡಬಹುದಾಗಿದ್ದರೆ, ಅಧಿಕಾರದಾಚೆಗೂ ಪ್ರತಿಭಟಿಸುವ ಅವಕಾಶ ಅವರಿಗಿದೆ.

ಇದಕ್ಕೆ ಪೂರಕವಾಗಿ ಭಾರತೀಯ ಸಂಸ್ಕೃತಿಯ ಕೆನೆಯಂತಿರುವ ರಾಮಾಯಣದ ಹಾಗೂ ಶಾಕುಂತಲ ನಾಟಕದ ಸೀತಾ-ಶಕುಂತಲೆಯರ ಪಾತ್ರಗಳ ನಿರ್ಧಾರವನ್ನು ಇಲ್ಲಿ ಪ್ರಸ್ತಾಪಿಸಬಹುದು. ಈ ಇಬ್ಬರು ನಾಯಕಿಯರು ತಾವು ತೀವ್ರ ಅವಮಾನಿತರಾದಾಗ ತೆಗೆದುಕೊಳ್ಳುವ ಅಂತಿಮ ನಿರ್ಧಾರ ಅನುಪಮ. ಮೊದಲಿಗೆ, ಲವ-ಕುಶರ ಕಾಳಗದ ನಂತರ ಪುರುಷೋತ್ತಮ ರಾಮನು ಸೀತೆಯನ್ನು ಸಂಧಿಸಿ ಅಯೋಧ್ಯೆಗೆ ಬರಲು ಆಹ್ವಾನಿಸುತ್ತಾನೆ. ಆದರೆ ಅಂದು ಪರಿತ್ಯಾಗಗೊಂಡ ಭೂಜಾತೆ ಸೀತೆ ತಣ್ಣಗೆ ರಾಜನ ಆಹ್ವಾನವನ್ನು ನಿರಾಕರಿಸಿ ವಾಲ್ಮೀಕಿ ಆಶ್ರಮದಲ್ಲೇ ಉಳಿಯುತ್ತಾಳೆ. ಇದು ಉತ್ತರ ರಾಮಾಯಣದ ಅಮೋಘ ದರ್ಶನ ಸಾರ.

ಇನ್ನು ಶಾಕುಂತಲ ನಾಟಕದಲ್ಲಿ ಬೇಟೆಗೆಂದು ಬಂದ ದುಷ್ಯಂತ ಕಣ್ವಾಶ್ರಮದಲ್ಲಿ ಮಗ ಭರತ ಹಾಗೂ ಅವನ ತಾಯಿ ಶಕುಂತಲೆಯನ್ನು ಕಂಡು ’ವಸಂತಕಾಲಕ್ಕೆ ಬಳ್ಳಿ ಹೂ ತಳೆಯುವಂತೆ ನೀನು ಈ ಅಭಿಜ್ಞಾನವನ್ನು ಪುನಃ ತೊಡು’ ಎಂದು ಗುರುತಿನ ಉಂಗುರವನ್ನು ನೀಡುತ್ತಾನೆ. ಆದರೆ ’ಸರಿಯಾದ ಸಮಯಕ್ಕೆ ಅದು ನನಗೆ ಕೈ ಕೊಟ್ಟಿತು, ಬೇಡ’ ಎಂದು ತಣ್ಣಗೆ ನಿರಾಕರಿಸುತ್ತಾಳೆ. ಮತ್ತು ಋಷ್ಯಾಶ್ರಮದಲ್ಲೇ ಉಳಿಯುತ್ತಾಳೆ ಶಕುಂತಲೆ. ಈ ಎರಡೂ ಜಾಗತಿಕ ಪ್ರತಿರೋಧಗಳು ಸ್ತ್ರೀ ಸಂವೇದನೆಯ ಸಂಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದ ಸಂದರ್ಭಗಳಾಗಿವೆ.

ಅದಿರಲಿ, ಪ್ರಸ್ತುತ ನಮ್ಮ ಪ್ರಜಾಪ್ರಭುತ್ವ ಸಂದರ್ಭದಲ್ಲಿ ವಿಚಾರ ಮಾಡಿದರೆ ಪುರುಷಪಾರಮ್ಯದ ನೀತಿಯನ್ನನುಸರಿಸುವ ಪ್ರಧಾನಿ ಮೋದಿಯವರ ನಡೆ ನೋಡಿದರೆ ಈ ಸರ್ಕಾರ ಬುಡಕಟ್ಟು ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ದೇವೆ ಎಂದು ಬೀಗುತ್ತಿದೆಯೇ ಹೊರತು ವಾಸ್ತವವಾಗಿ ಮಹಿಳೆಯರಿಗೆ ನೀಡುವ ಘನತೆ ಗೌರವಗಳಿಗೆ ಲೋಪವೆಸಗುತ್ತಾ ಬರುತ್ತಿದೆ. ಆದ ಪ್ರಯುಕ್ತ ಈ ಸಂಘರ್ಷ ಸಮಯದಲ್ಲಿ ದ್ರೌಪದಿ ಮುರ್ಮು ಅವರು ತಮ್ಮ ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ದೃಢನನಿರ್ಧಾರ ತೆಗೆದುಕೊಂಡು ರಾಷ್ಟ್ರಪತಿಭವನದಿಂದ ಹೊರಬರುವುದು ಪ್ರತಿಭಟನೆಯ ಸಂಕೇತವಾದೀತು. ಈ ಒಂದು ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಲು ಅವರಿಂದ ಸಾಧ್ಯವೆ? ಹಾಗೇನಾದರೂ ಅವರು ಮಾಡಿದರಾದರೆ ಇದೊಂದು ಅನನ್ಯ ಐತಿಹಾಸಿಕ ಘಟನೆಯಾಗುತ್ತದೆ. ಮುರ್ಮು ಅವರ ಹೆಸರು ಸೀತಾ-ಶಕುಂತಲೆಯರ ಸಾಲಿಗೆ ನಿಲ್ಲುತ್ತದೆ. ಮತ್ತು ಜಾಗತಿಕ ಸ್ತ್ರೀ ಸಂಕುಲದಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ. ಮುರ್ಮು ಅವರು ಬಡತನ ಸಿರಿತನಗಳನ್ನು ಕಂಡುಂಡು ಬಾಳಿ ಬದುಕಿದವರು. ಅವರಿಗೆ ರಾಷ್ಟ್ರಪತಿ ಭವನವನ್ನು ತೊರೆದು ಬರಲು ಅಂಥ ಮೋಹವೇನೂ ಇರಲಾರದು. ಹೇಗೂ ಐದು ವರ್ಷದ ತರುವಾಯ ತೆರವುಗೊಳಿಸಲೇಬೇಕಲ್ಲಾ! ’ನಾಳೆ ಬಪ್ಪುದು ಇಂದೇ ಬರಲಿ’ ಎಂದು ಹೊರಬಂದರೆ ಅದೊಂದು ಅಮೃತ ಮುಹೂರ್ತ! ಅದು ಎಷ್ಟೋ ದಮನಿತ ಮಹಿಳೆಯರಿಗೆ ಸ್ಪೂರ್ತಿದಾಯಕವೂ ಆದೀತು ಮತ್ತು ಅವರ ಹೆಸರು ಹಿಮಾಲಯದೆತ್ತರಕ್ಕೆ ಏರುತ್ತದೆ!.

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...