Homeಮುಖಪುಟಪಿಕಳಾರ ಹಕ್ಕಿಯ ಕೆಂಪು ಕುತ್ತಿಗೆ ಮತ್ತು ಜಾರ್ಜ್‌ನ ಹಾರನ್ ಶಬ್ದ!

ಪಿಕಳಾರ ಹಕ್ಕಿಯ ಕೆಂಪು ಕುತ್ತಿಗೆ ಮತ್ತು ಜಾರ್ಜ್‌ನ ಹಾರನ್ ಶಬ್ದ!

- Advertisement -
- Advertisement -

ಅದೊಂತರಾ ಹಂಗೇ!! ಏನೋ ಮಾಡಕ್ಕೆ ಹೋದಾಗ ಮತ್ತೇನೋ ಆಗುತ್ತೆ. ಇಂಥವು ಹಲವು ಬಾರಿ ಹೊಸ ಆವಿಷ್ಕಾರಗಳಿಗೆ ಎಡೆಮಾಡಿಕೊಟ್ಟಿರುವ ಬಗ್ಗೆ ಕೂಡ ನಾನೂ ಓದಿದ್ದೆ. ಆದರೆ ನಾನು ಯಾವ್ದೋ ಹಕ್ಕಿ ಹುಡುಕ್ಲಿಕ್ಕೆ ಹೋಗಿ ಮತ್ಯಾವ್ದೋ ಅಪರೂಪದ ಹಕ್ಕಿ ನೋಡಕ್ಕೆ ಸಿಗುತ್ತೆ ಅಂತ ಮಾತ್ರ ಅಂದ್ಕೊಂಡಿರ್ಲಿಲ್ಲ. ಹಕ್ಕಿ ಫೋಟೋಗ್ರಫಿ ಶುರು ಮಾಡಿದ ಆರಂಭದ ದಿನಗಳು, ಪ್ರತೀ ದಿನ ಮನೇಲಿ ಹಕ್ಕಿಯ ಬಗ್ಗೆಯೇ ಚಿಂತೆ ಮತ್ತು ಧ್ಯಾನ. ಯಾವ್ಕಡೆ ಹೋದ್ರೆ ಯಾವ್ ಹಕ್ಕಿ ಸಿಗ್ಬೋದು ಅನ್ನೋ ಚಿಂತೇಲೆ ಕಳಿತಿದ್ದ ದಿನಗಳವು.

ಅದೊಂದಿನ ಭಾನುವಾರ, ಬೆಳಿಗ್ಗೆ ಲೇಟಾಗಿ ಎದ್ದವನೇ ಬಿಸ್ಬಿಸಿ ಕಾಫಿ ಕಪ್ ಹಿಡ್ಕಂಡು, ಕಾಫಿ ಹೀರ್ತಾ ಮನೇ ಮುಂದೆ ನಿಂತಿದ್ದೆ. ಮನೆ ಎದುರು 200 ಮೀಟರ್ ದೂರದಲ್ಲಿ ಕಾಫಿ ತೋಟವಿತ್ತು. ಆ ಕಾಫಿ ತೋಟದಲ್ಲಿ ತುಂಬಾ ಸೀಬೆ ಹಣ್ಣಿನ ಮರಗಳಿದ್ದವು. ಆ ಸೀಬೆ ಹಣ್ಣಿನ ಮರಕ್ಕೆ ಬೇರೆಬೇರೆ ಬಗೆಯ ಹಕ್ಕಿಗಳು ಬರ್ತಿದ್ದವು. ಅದರಲ್ಲಿ ಪಿಕಳಾರಗಳು, ಗಿಳಿಗಳು ಮತ್ತು ಕುಟುರ್ ಪಕ್ಷಿಗಳನ್ನು ನಾನು ಗುರುತು ಹಿಡಿಯಲು ಕಲಿತಿದ್ದೆ. ಅದೇ ಮರಕ್ಕೆ ಬರುತ್ತಿದ್ದ ಉಳಿದ ಹಕ್ಕಿಗಳನ್ನು ಗುರುತಿಸುವುದನ್ನು ಕಲಿಯುವುದಕ್ಕೆ ನನಗೆ ಬಹಳ ಹೆಚ್ಚಿನ ಸಮಯ ಹಿಡಿಯಿತು. ಆದರೆ ಆ ದಿನ ಮಾತ್ರ, ಸೀಬೆ ಮರದಲ್ಲಿ ಯಾವುದೇ ಹಕ್ಕಿಗಳು ಇರ್ಲಿಲ್ಲ. ಹಕ್ಕಿಗಳನ್ನು ಕಾಯುತ್ತಾ ಕೈಲಿದ್ದ ಕಾಫಿ ಕಪ್ ಖಾಲಿಯಾಯ್ತು. ಆದರೆ ಒಂದೂ ಹಕ್ಕಿ ಕಾಣ್ಲಿಲ್ಲ. ಇನ್ನೇನು ತಿರುಗಿ ಮನೆಯೊಳಗೆ ಹೊರಡಬೇಕು, ಅಷ್ಟರಲ್ಲಿ ದೂರದಿಂದ ಕರ್ಕಶವಾಗಿ ಕ್ಕೆಕ್ಕೆಕ್ಕೆಕ್ಕೆ ಕ್ಕೆಕ್ಕೆಕ್ಕೆಕ್ಕೆ ಅನ್ನುವಂತೆ, ಯಾರೋ ಕಿರುಚಿದಂತ ಶಬ್ದ ಕೇಳಿಬಂತು. ಇದೇನಿದು? ಹೊಸಾ ಶಬ್ದ ಅನ್ನುತ್ತಾ ತೋಟದ ಕಡೆಗೆ ನೋಡಿದೆ, ಏನೂ ಕಾಣಲಿಲ್ಲ, ಅಷ್ಟರಲ್ಲಿ ಮತ್ತೊಮ್ಮೆ ಜೋರಾಗಿ ಕಿರುಚಿದಂಥ ಶಬ್ದ, ಅದು ನಿಲ್ಲುತ್ತಿದ್ದಂತೇ ಮತ್ತೊಂದು ಕಿರುಚಾಟ. ಇದ್ಯಾವ್ದು ಹೊಸಾ ಹಕ್ಕಿ? ಅನ್ನುತ್ತಾ ಮನೆಯಿಂದ ಹೊರಗೆ ಹೋದವನೇ, ಎದುರಿಗಿದ್ದ ಕಾಂಪೌಂಡ್ ಮೇಲೆ ಹತ್ತಿ ತೋಟದ ಕಡೆಗೆ ನೋಡತೊಡಗಿದೆ. ದೂರದಲ್ಲಿದ್ದ ಒಂದು ದೊಡ್ಡ ಮತ್ತಿ ಮರದ ಮೇಲಿಂದ ಪುರ್ರಂತ ಒಂದು ಹಕ್ಕಿ ಹಾರಿತು. ರೆಕ್ಕೆ ಬಡಿಯುತ್ತಾ, ನೇರವಾಗಿ ನಾನಿರುವ ಕಡೆಯೇ ಹಾರಿ ಬಂತು. ಅರೆ, ಇದೇನಿದು? ಅಂದುಕೊಳ್ಳುತ್ತಾ ನಾನು ಆಶ್ಚರ್ಯದಿಂದ ನೋಡುತ್ತಿದ್ದರೆ, ಆ ಹಕ್ಕಿ ನನ್ನ ಕಡೆಗೆ ಹಾರಿಬಂದು, ನನ್ನ ತಲೆಯ ಮೇಲಿಂದಲೇ ನಮ್ಮ ಮನೆಯೆ ಹಿಂಭಾಗಕ್ಕೆ ಹಾರಿಹೋಯ್ತು. ಯಾವ್ಕಡೆ ಹೋಗ್ತಿದೆ? ಅನ್ನುವ ಕುತೂಹಲಕ್ಕೆ ಕಾಂಪೌಂಡಿನಿಂದ ಜಿಗಿದವನೇ, ಮನೆಯ ಹಿತ್ತಲ ಕಡೆಗೆ ಓಡಿದೆ. ಹಕ್ಕಿ ಹಾರುತ್ತಾ ಮತ್ತೊಂದು ತೋಟದ ಕಡೆಗೆ ಹೋಗಿ ದೊಡ್ಡ ಕಾಡು ಮಾವಿನ ಮರದ ಮೇಲೆ ಕುಳಿತುಕೊಳ್ತು. ಕ್ಯಾಮರಾ ತೆಗೆದುಕೊಂಡು ಆ ಕಡೆಗೆ ಹೋಗುವ ಆಸೆಯಿಂದ ಮನೆ ಕಡೆಗೆ ಓಡಿಬಂದೆ, ಅಷ್ಟರಲ್ಲಿ ಎದುರಿಗಿದ್ದ ಕಾಫೀ ತೋಟದ ಮತ್ತಿ ಮರದ ಮೇಲಿಂದ ಮತ್ತೊಂದು ಹಕ್ಕಿ ಕರ್ಕಶವಾಗಿ ಕೂಗುತ್ತಾ ನನ್ನ ಕಡೆಯೇ ಹಾರಿ ಬಂತು. ಈ ಸಲ ಸರಿಯಾಗಿ ಗಮನಿಸಿದೆ. ಹಕ್ಕಿಯ ಕೊಕ್ಕು ಉದ್ದಕ್ಕೆ, ದೊಡ್ಡದಾಗಿ ಚೂಪಾಗಿದೆ. ರೆಕ್ಕೆ ಬಡಿತದ ಸದ್ದು ಜೋರಾಗಿಯೇ ಕೇಳ್ತಿದೆ. ಹಾರುತ್ತಾ ಹಾರುತ್ತಾ ಹಕ್ಕಿ ಹೋಗಿ ಅದೇ ಮಾವಿನ ಮರದ ಮೇಲೆ ಕುಳಿತುಕೊಳ್ತು. ನಾನು ಕ್ಯಾಮರಾ ತೆಗೆದುಕೊಂಡು ತೋಟದ ಕಡೆಗೆ ಓಡಿದೆ. 30 ಅಡಿಯೂ ಓಡಿಲ್ಲ, ಅಷ್ಟರಲ್ಲಿ ಮತ್ತೆ ಕರ್ಕಶ ಶಬ್ದ ಮಾಡುತ್ತಾ, ಎರಡೂ ಹಕ್ಕಿಗಳು ಮಾವಿನ ಮರದಿಂದ ಹಾರಿ ಅದರ ಹಿಂದಿನ ಬೆಟ್ಟದ ಕಡೆಗೆ ಹಾರಿಹೋದವು.

ಅಪರೂಪದ ಹಕ್ಕಿ ಕಂಡ ಖುಷಿಯಿಂದ ಮನೆಗೆ ಹೋದವನೇ, ಹಕ್ಕಿ ಪುಸ್ತಕ ತೆಗೆದು ಹುಡುಕಾಡಿದೆ, ಆಗ ಗೊತ್ತಾಯ್ತು ಅದು ಬೂದು ಮಂಗಟ್ಟೆ ಹಕ್ಕಿ ಅಂತ (Malabar Grey Hornbill); ಹೊಸಾ ಹಕ್ಕಿ ಕಂಡ ಮೇಲೆ ಸುಮ್ಮನಿರಲಾದೀತೇ? ಆ ಹಕ್ಕಿಯ ಬಗ್ಗೆ ಸ್ವಲ್ಪ ಓದಿ ತಿಳಿದುಕೊಂಡು, ಸಂಜೆಯ ಸಮಯದಲ್ಲಿ ಕ್ಯಾಮರಾ ತೆಗೆದುಕೊಂಡು ನನ್ನ ಮಾಮೂಲಿ ಸ್ಥಳಕ್ಕೆ ಹೋದೆ. ಅದೇ ನೀಲಿ ಮಿಂಚುಳ್ಳಿ ಕಂಡಿತ್ತಲ್ಲಾ? ಅದೇ ಸ್ಥಳಕ್ಕೆ. ಅಲ್ಲಿರುವುದು ದೇವರಕಾಡು, ಅದರ ಮಧ್ಯೆ, ಪಕ್ಕದ ಗ್ರಾಮಕ್ಕೆ ಹೋಗಲು ಇರುವ ಡಾಂಬರು ರಸ್ತೆ. ರಸ್ತೆಯ ಎರಡೂ ಬದಿಯಲ್ಲಿ ಇರುವ ತೋಟದ ಮತ್ತು ಕಾಡಿನ ಮರಗಳಲ್ಲಿ ಹಕ್ಕಿ ಹುಡುಕೋದು ನನ್ನ ಕೆಲಸ. ತೋಟದ ಬದಿಯಲ್ಲಿ ಕೆಲವು ಲಂಟಾನ ಗಿಡಗಳು ಎತ್ತರಕ್ಕೆ ಬೆಳೆದಿದ್ದು ಅದರಲ್ಲಿ ಬಣ್ಣಬಣ್ಣದ ಹೂವುಗಳು ಅರಳಿರುತ್ತಿದ್ದವು. ಆ ಹೂವುಗಳ ಮಕರಂದ ಹೀರಲು ಬಗೆಬಗೆಯ ಹಕ್ಕಿಗಳು ಬರುತ್ತಿದ್ದವು. ಹೆಚ್ಚಾಗಿ ಪಿಕಳಾರಗಳೇ ಬರುತ್ತಿದ್ದರಿಂದ ಮತ್ತು ನಾನು ಅವುಗಳ ಫೋಟೋ ಈಗಾಗಲೇ ತೆಗೆದಿದ್ದರಿಂದ ನಾನು ಅವುಗಳ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಬೆಳ್ ಬೆಳಿಗ್ಗೆ ಮಂಗಟ್ಟೆ ಬೇರೆ ನೋಡಿದ್ದರಿಂದ ಅದ್ರದ್ದೇ ಗುಂಗು. ಎಲ್ಲಾ ಮರಗಳನ್ನೂ ಹುಡುಕಿದ್ರೂ ಮಂಗಟ್ಟೆ ಕಾಣಲಿಲ್ಲ. ಹಾಗೇ ರಸ್ತೆ ಬದಿಯ ಮೋರಿ ಕಟ್ಟೆ ಮೇಲೆ ಕುಳಿತೆ. ಎದುರಿಗೆ ಲಂಟಾನದ ಗಿಡದ ಮೇಲಿನ ಹೂವನ್ನೇ ನೋಡ್ತಾ ಕುಳಿತೆ. ಹೂವಿನ ಮಕರಂದ ಹೀರಲು ಸೂರಕ್ಕಿಗಳು ಆವಾಗಾವಾಗ ಬರ್ತಿದ್ದವು. ಹಾಗೇ ಸಡನ್ನಾಗಿ ಒಂದು ಹಕ್ಕಿ ಬಂದು ಅದೇ ರೆಂಬೆಯ ಮೇಲೆ ಕುಳಿತುಕೊಳ್ತು. ಕಡುಕಪ್ಪು ತಲೆ, ಬಿಳೀ ಕಣ್ಣು, ಯಾವ್ದಿದು? ಅನ್ನುತ್ತಾ ಯೋಚಿಸುವಾಗಲೇ ಹಕ್ಕಿ ಹಾರಿ ಹೋಯ್ತು. ಯಾವ್ದಿದು? ಅನ್ನುತ್ತಾ ಅಲ್ಲಿಂದಲೇ ನನ್ನ ಗುರುಗಳಿಗೆ ಕರೆ ಮಾಡಿ ಕೇಳ್ದೆ. ಕಪ್ಪು ತಲೆ, ಬಿಳೀ ಕಣ್ಣು ಎಂದಕೂಡಲೇ ಅವ್ರ್ ಅದು ರೂಬಿ ತ್ರೋಟೆಡ್ ಬುಲ್ ಬುಲ್ ಕಣಾ, ಅಲ್ಲೇ ಬರುತ್ತೆ ಕಾದು ನೋಡು ಎಂದರು. ಹೆಸರು ಗೊತ್ತಾಯ್ತಲಾ? ಇನ್ನೇನು ಅನ್ನುತ್ತಾ ಅಲ್ಲೇ ಮೊಬೈಲಿನಿಂದ ಗೂಗಲ್ ಮಾಡಿ ನೋಡಿದೆ. Flame Throated Bulbull or Ruby Throated Bulbull ಎನ್ನುವ ಹೆಸರಿನ ಈ ಹಕ್ಕಿ ಪಿಕಳಾರ ಕುಟುಂಬಕ್ಕೆ ಸೇರಿದ ಹಕ್ಕಿಯೇ ಆಗಿತ್ತು. ಹೋ ಇವ್ರ್ ಫ್ಯಾಮಿಲಿಲಿ ಇಷ್ಟ್ ಚಂದಿರೋರೂ ಇದಾರ? ಅಂದುಕೊಂಡವನೇ ಮತ್ತೆ ಅದೇ ಗಿಡದ ಕಡೆಗೆ ನೋಡುತ್ತಾ ಕುಳಿತೆ, ಕೆಲ ನಿಮಿಷಗಳ ನಂತರ ಮತ್ತೆ ಅದೇ ಹಕ್ಕಿ ಬಂದು, ಅದೇ ರೆಂಬೆಯೆ ಮೇಲೆ ಕುಳಿತಿದ್ದೇ, ನನ್ನ ಕಡೆಗೆ ನೋಡಿ ಪುರ್ರಂತ ಹಾರಿಹೋಯ್ತು. ಹಿಂದಿನ ಸಲ ನೀಲಿ ಮಿಂಚುಳ್ಳಿ ಪಕ್ಷಿ ಕಲಿಸಿದ ಪಾಠ ಮರೆತಿರಲಿಲ್ಲ ನಾನು. ಕೂಡಲೇ ಸ್ಥಳ ಬದಲಿಸಿ ಹಕ್ಕಿ ಕೂರುವ ಗಿಡದ ಬಲಭಾಗಕ್ಕೆ ಹೋಗಿ ನಿಂತುಕೊಂಡೆ. ಅಕಸ್ಮಾತ್ ಹಕ್ಕಿ ಬಂದರೂ ನೇರವಾಗಿ ನೋಡಿದಾಗ ನಾನು ಕಾಣಬಾರದು ಎನ್ನುವ ಉಪಾಯವದು. ಉಪಾಯ ವರ್ಕೌಟ್ ಆಯ್ತು. ಈ ಸಲ ಹಕ್ಕಿ ಬಂದಾಗ ಅದಕ್ಕೆ ನಾನು ಕಾಣಲಿಲ್ಲವಾದ್ದರಿಂದ, ಅಲ್ಲೇ ರೆಂಬೆಯ ಮೇಲೆ ಕುಳಿತು ಲಂಟಾನ ಗಿಡದ ಹಣ್ಣನ್ನು ತಿನ್ನುತ್ತಾ ಸಂಭ್ರಮಿಸತೊಡಗಿತು. ನಾನು ನಿಂತ ಜಾಗದಿಂದಲೇ ಹಕ್ಕಿಯ ಒಂದು ಚಿತ್ರ ತೆಗೆದೆ, ಹಕ್ಕಿ ಕುಳಿತಿದ್ದ ರೆಂಬೆ ಓಲಾಡ್ತಿದ್ದರಿಂದ, ಚಿತ್ರ ಬ್ಲರ್ರ್ ಆಗಿ ಬಂತು. ಹಾಗಾಗಿ ಮೊದಲಿದ್ದ ಜಾಗಕ್ಕೆ ಹೋಗಿ ಕ್ಲಿಕ್ಕಿಸುವ ಯೋಚನೆಯಲ್ಲಿ ಎರಡು ಹೆಜ್ಜೆ ರಸ್ತೆಯ ಕಡೆಗೆ ಇಟ್ಟು ಹಕ್ಕಿಯ ಕಡೆಗೆ ಕ್ಯಾಮರಾ ತಿರುಗಿಸಿದೆ, ಆಗ ಕಾಣ್ತು ಹಕ್ಕಿಯ ಕುತ್ತಿಗೆಯಲ್ಲಿನ ಕೆಂಪು ಬಣ್ಣ. ಅದೆಂತಾ ಚಂದ! ನಾನು ಖುಷಿಯಿಂದ ಹಕ್ಕಿಯ ಕಣ್ಣಿಗೆ ಫೋಕಸ್ ಮಾಡಲು ಪ್ರಯತ್ನಿಸುವಷ್ಟರಲ್ಲಿ ರಸ್ತೆಯ ಒಂದು ಕಡೆಯಿಂದ ಕಿರ್ರ್ ಅನ್ನುವ ಹಾರನ್ ಸದ್ದು ಮಾಡುತ್ತಾ ಪಿಕ್‌ಅಪ್ ಗಾಡಿಯೊಂದು ಬರಬೇಕೆ? ಹಕ್ಕಿ ಹಾರಿ ಹೋಯ್ತು. ಪಿಕ್‌ಅಪ್ ಪಾರ್ಟಿ ನನ್ನ ನೋಡಿದವನೇ ಗಾಡಿ ನಿಲ್ಲಿಸಿ, ಹೋಯ್ ವಿನೋದಣಾ.. ಇದೇನ್ ಈ ಕಡೆ? ಹೇಗಿದಿರಿ? ಅನ್ನುತ್ತಾ ಕೈ ಬೀಸಿದ. ಪರಿಚಯದ ಡ್ರೈವರ್, ಜಾರ್ಜ್. ಅವನಿಗೆ ಹಕ್ಕಿ ಫೋಟೋ ತೆಗೆಯುತ್ತಿರುವ ಬಗ್ಗೆ ಹೇಳಿದೆ. ನಗಾಡಿದ, ಸರ್ಕಾರಿ ಕೆಲ್ಸದಲ್ಲಿದ್ಕೊಂಡು ಇದೆಲ್ಲಾ ಯಾಕೆ ಸಾರ್? ಸುಮ್ನೇ ಕಾರ್ ಗೀರ್ ತಕಂಡು ಸುತ್ತಾಡದಲ್ವಾ? ಅನ್ನುತ್ತಾ, ಇಲ್ಲೇ ಮನೆ ಕೆಲ್ಸ ನಡೀತಿದೆ ಅವ್ರಿಗೆ ಸಿಮೆಂಟ್ ಸಪ್ಲೈ ಮಾಡ್ತಿದಿನಿ, ಇನ್ನೊಂದ್ ಟ್ರಿಪ್ ಇದೆ ಅಂದಾ. ಹೌದಾ? ಸರಿ ಸರಿ, ಆದ್ರೆ ಮುಂದಿನ್ಸಲ ಬರ್ವಾಗ ಹಾರ್ನ್ ಮಾಡ್ಬೇಡ ಮಾರಾಯ ಹಕ್ಕಿ ಹಾರಿ ಹೋಗುತ್ತೆ ಅಂದೆ. ಸರಿ ಅನ್ನುತ್ತಾ ಜಾರ್ಜ್ ಹೊರಟ.

ಇದನ್ನೂ ಓದಿ: ಫೋಟೋ ಪ್ರಬಂಧ; ಸಣ್ಣ ನೀಲಿ ಮಿಂಚುಳ್ಳಿಯೊಂದಿಗೆ ನನ್ನ ಮೊದಲ ಭೇಟಿ..

ನಾನು ಮತ್ತೆ ಅದೇ ಜಾಗದಲ್ಲಿ ಕಾಯುತ್ತಾ ನಿಂತೆ. ಸಮಯ ಮೀರ್ತಿತ್ತು, 5.30 ದಾಟಿತ್ತು. 6 ಗಂಟೆ ಕಳೆದರೆ ಸೂರ್ಯನ ಬೆಳಕು ಕಡಿಮೆಯಾಗ್ತಿದ್ದಂತೇ ನನ್ನ ಕ್ಯಾಮರಾ ಸರಿಯಾಗಿ ಕೆಲ್ಸ ಮಾಡ್ತಿರ್ಲಿಲ್ಲ, ಅಂದರೆ ಬೆಳಕು ಕಡಿಮೆ ಇದ್ದಾಗ ಪೋಕಸ್ ಮಾಡುವುದು ಕಷ್ಟವಾಗ್ತಿತ್ತು. ಈ ಸಲ ಹಕ್ಕಿ ಮತ್ತೆ ಬರಲು ತಡ ಮಾಡ್ತು. ಜಾರ್ಜಿಗೆ ಮನಸ್ಸಿನಲ್ಲೇ ಬೈಯುತ್ತಾ ಕೈಕೈ ಹಿಸುಕಿಕೊಂಡೆ. ನಿಮಿಷಗಳು ಕಳೆಯುತ್ತಿದ್ದಂತೇ, ಚಡಪಡಿಕೆ ಹೆಚ್ಚಾಯ್ತು. ಕೊನೆಗೂ ಹಕ್ಕಿ ಬಂತು. ನೇರವಾಗಿ ಅದೇ ರೆಂಬೆಯ ಮೇಲೆ ಬಂದು ಕುಳಿತು, ನೇರವಾಗಿ ನನ್ನನ್ನೇ ನೋಡಿ, ಅದೆಷ್ಟ್ ಫೋಟೋ ತಗೋತಿಯೋ ತಗೋ ಅನ್ನುವಂತೆ ಪೋಸ್ ಕೊಡ್ತು. ಕ್ಯಾಮರಾ ಆ ಕಡೆ ತಿರುಗಿಸಿದವನೇ, ಫೋಕಸ್ ಮಾಡಲು ಪ್ರಯತ್ನಿಸಿದೆ, ಉಹೂಂ, ಅ ಕಡಿಮೆ ಬೆಳಕಿನಲ್ಲಿ ಹಕ್ಕಿಯನ್ನು ಫೋಕಸ್ ಮಾಡಲು ಎಷ್ಟೇ ಪ್ರಯತ್ನಿಸಿದರೂ ಆಗುತ್ತಿರಲಿಲ್ಲ, ಕ್ಯಾಮರಾ ಲೆನ್ಸ್ ಹಿಂದೆಮುಂದೆ ಝೂಮ್ ಆಗ್ತಾ ಹಕ್ಕಿಯನ್ನು ಫೋಕಸ್ ಮಾಡಲು ಕಷ್ಟ ಪಡುತ್ತಿತ್ತು. ಹಕ್ಕಿ ಮಾತ್ರ ನನ್ನೇ ನೋಡ್ತಿತ್ತು. ತಕ್ಷಣ ನಿಧಾನವಾಗಿ ಮ್ಯಾನ್ಯುವಲ್ ಮೋಡ್‌ನಲ್ಲಿ ಹಕ್ಕಿಯನ್ನು ಫೋಕಸ್ ಮಾಡಲು ಪ್ರಯತ್ನಿಸಿದೆ, ಅಷ್ಟರಲ್ಲಿ ರಸ್ತೆಯ ಆ ತುದಿಯಿಂದ ಕಿರ್ರ್ ಕಿರ್ರ್ ಸದ್ದು ಮಾಡುತ್ತಾ ಜಾರ್ಜ್ ಮತ್ತೆ ಬರಬೇಕೆ? ಹಕ್ಕಿ ಪುರ್ರಂತ ಹಾರಿಹೋಯ್ತು. ಜಾರ್ಜ್ ಬಾಯ್ ವಿನೋದಣಾ ಅನ್ನುತ್ತಾ ಗಾಡಿ ನಿಲ್ಲಿಸದೇ ಹೋದ. ನಾನು ಬ್ಲರ್ ಆಗಿ ತೆಗೆದಿದ್ದ ಚಿತ್ರವನ್ನೆ ಮತ್ತೊಮ್ಮೆ ನೋಡಿ ಮನೆ ಕಡೆ ಹೊರಟೆ.

ವಿನೋದ್ ಕುಮಾರ್ ವಿ ಕೆ

ವಿನೋದ್ ಕುಮಾರ್ ವಿ ಕೆ
ವಿನೋದ್ ಹುಟ್ಟಿದ್ದು ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ. 2011ರಿಂದ ಛಾಯಾಗ್ರಹಣದಲ್ಲಿ ಆಸಕ್ತಿ. ಹಕ್ಕಿ, ಚಿಟ್ಟೆ, ಕೀಟಗಳಿಂದ ಪ್ರಾರಂಭವಾಗಿ ಟ್ರೆಕ್ಕಿಂಗ್ ಹವ್ಯಾಸವಾಗಿ ಬೆಳೆದಿದೆ. ಅರಣ್ಯ ಇಲಾಖೆಯಲ್ಲಿ ಕಚೇರಿ ಸಹಾಯಕನಾಗಿ ವೃತ್ತಿ. ಸದ್ಯಕ್ಕೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ವಾಸವಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...