Homeಮುಖಪುಟಫೋಟೋ ಪ್ರಬಂಧ; ಸಣ್ಣ ನೀಲಿ ಮಿಂಚುಳ್ಳಿಯೊಂದಿಗೆ ನನ್ನ ಮೊದಲ ಭೇಟಿ..

ಫೋಟೋ ಪ್ರಬಂಧ; ಸಣ್ಣ ನೀಲಿ ಮಿಂಚುಳ್ಳಿಯೊಂದಿಗೆ ನನ್ನ ಮೊದಲ ಭೇಟಿ..

- Advertisement -
- Advertisement -

ಮನುಷ್ಯನಿಗೆ ಒಲುಮೆಯಿಂದ ಯಾರನ್ನಾದರೂ ಒಲಿಸಿಕೊಳ್ಳುವುದು ಅವನ ಅಪರಿಮಿತ ಆಸೆಗಳಲ್ಲಿ ಒಂದಲ್ಲವೇ? ಬಾಲ್ಯದಲ್ಲಿ ಆಟಕ್ಕೆ-ಊಟಕ್ಕೆ ಪೋಷಕರನ್ನು ಒಲಿಸಿಕೊಳ್ಳಲು ಯತ್ನಿಸಿದರೆ, ಯೌವ್ವನದಲ್ಲಿ ಪ್ರೇಮಕ್ಕೆ ಪ್ರಣಯಕ್ಕೆ ಸಂಗಾತಿಯನ್ನು ಒಲಿಸಿಕೊಳ್ಳುವ ನಿರಂತರ ಪ್ರಯತ್ನ ಇದ್ದೇ ಇರುತ್ತದೆ. ನಾನೂ ಈ ಎಲ್ಲಾ ಪ್ರಯತ್ನಗಳನ್ನು ದಾಟಿದವನೇ! ಆದರೆ ನಿಜವಾಗಿಯೂ ಒಲಿಸಿಕೊಳ್ಳುವ ಕಷ್ಟ ಗೊತ್ತಾಗಿದ್ದು ಮಾತ್ರ ನಾನು ಹಕ್ಕಿ ಫೋಟೋಗ್ರಫಿ ಶುರು ಮಾಡಿದ ಮೇಲೆ.

2000 ಇಸವಿಯಲ್ಲೇ ನಾನು ಫೋಟೋಗ್ರಫಿ ಕಲಿಯುವ ಪ್ರಯತ್ನ ಮಾಡಿದ್ದರೂ, ಹಕ್ಕಿ ಫೋಟೋಗ್ರಫಿ ಶುರು ಮಾಡಿದ್ದು ಮಾತ್ರ 2010ರಿಂದ. ಫೋಟೋ ತೆಗೆಯುವುದಕ್ಕಿಂತಲೂ ಹಕ್ಕಿಗಳನ್ನು ಪತ್ತೆ ಮಾಡುವ, ಗುರುತಿಸುವ ಅವುಗಳ ಬಗ್ಗೆ ಅರಿಯುವ ಪ್ರಯತ್ನ ಮಾಡಬೇಕು ಅನ್ನುವ ಜ್ಞಾನ ಪುಸ್ತಕಗಳ ಮುಖಾಂತರ ಅದಾಗಲೇ ತಲೆಗೆ ತುಂಬಿತ್ತು. ಅದೊಂದು ಸಂಜೆ ಕ್ಯಾಮರಾ ಹಿಡಿದು ಸುತ್ತಾಡುತ್ತಿದ್ದವನಿಗೆ, ನಾನು ನಡೆಯುತ್ತಿದ್ದ ರಸ್ತೆ ಬದಿಯ ಗದ್ದೆಯಲ್ಲಿ ಒಂದು ನೀಲಿ ಮಿಂಚುಳ್ಳಿ ಹಕ್ಕಿ ಕಾಣ್ತು. ದೂರದಿಂದ ಸಣ್ಣ ಗಾತ್ರಕ್ಕೆ ನೀಲಿ ಬಣ್ಣದಲ್ಲಿ ಕಾಣುವ ಈ ಹಕ್ಕಿ ಎಂತವರನ್ನೂ ಅದರತ್ತ ಸೆಳೆಯದೇ ಇರದು. ನನ್ನ ಬಳಿ ಇದ್ದ ಕ್ಯಾಮರಾದಿಂದ ತುಂಬಾ ದೂರದಲ್ಲಿ ಕುಳಿತ ಹಕ್ಕಿಯ ಚಿತ್ರ ತೆಗೆಯಲು ಕಷ್ಟವಾಗಿದ್ದರಿಂದ ನಾನು ನಿಧಾನವಾಗಿ ರಸ್ತೆಯಿಂದ ಗದ್ದೆಗಿಳಿದವನೇ, ಮೆಲ್ಲಮೆಲ್ಲನೆ ಹಕ್ಕಿ ಕುಳಿತಿದ್ದ ಕಡೆ ನಡೆಯತೊಡಗಿದೆ. ಅಲ್ಲಿಂದಲೇ ಚಿತ್ರೆ ತೆಗೆಯುವ ಮನಸ್ಸಾದರೂ, ಮತ್ತಷ್ಟು ಹತ್ತಿರ ಹೋಗಿ ಇನ್ನೂ ಸ್ಪಷ್ಟವಾಗಿ ತೆಗೆಯೋಣ ಅನ್ನುವ ಆಸೆಯೊಂದಿಗೆ ಮತ್ತಷ್ಟು ಹತ್ತಿರ ಹೋಗುವ ಪ್ರಯತ್ನ ಮಾಡಿದ್ದೇ ತಡ, ನನ್ನನ್ನು ನೋಡಿದ ಹಕ್ಕಿ ಪುರ್ರೆಂದು ಹಾರಿಹೋಯ್ತು. ಛೇ! ಅನ್ನುತ್ತಾ ಬೇಸರ ಅಸಮಾಧಾನದಿಂದ ಹಿಂತಿರುಗಿದವನೇ, ಒಂದು ಹೆಜ್ಜೆ ಎತ್ತಿಡುವ ಮೊದಲೇ ನನ್ನ ಬಲಭಾಗದಲ್ಲಿ ಮತ್ತೊಂದು ಮಿಂಚುಳ್ಳಿ ಕುಳಿತಿದ್ದು ಕಾಣ್ತು! ನೀಲಿ ಬಣ್ಣದ ಹಕ್ಕಿ, ಸಣ್ಣ ನೀಲಿ ಮಿಂಚುಳ್ಳಿ; ನಿಧಾನವಾಗಿ ಬಲಕ್ಕೆ ತಿರುಗಿ ಕ್ಯಾಮರಾ ಹಿಡಿದ ಕೈಯನ್ನು ಮೇಲೆತ್ತಿದ್ದೇ ತಡ, ಹಕ್ಕಿ ಹಾರಿಹೋಯ್ತು! ಛೇ, ಇಷ್ಟು ಹತ್ತಿರದಿಂದ ಹಕ್ಕಿ ಕಂಡರೂ ಅದರ ಚಂದದ ಚಿತ್ರ ತೆಗೆಯಲಾಗಲಿಲ್ಲವಲ್ಲ ಅನ್ನುವ ಕೊರಗಿನಿಂದ ಮನೆಗೆ ಹೋದವನಿಗೆ, ಅಂದು ರಾತ್ರಿ ನಿದ್ರೆಯೇ ಬರಲಿಲ್ಲ. ಹೇಗಾದರೂ ಸರಿ, ಆ ನೀಲಿ ಸುಂದರ ಹಕ್ಕಿಯ ಫೋಟೋ ತೆಗೆಯಲೇಬೇಕು ಅನ್ನುವ ಆಸೆ ಮನಸ್ಸಿನಲ್ಲಿ ಬಲವಾಗಿ ಮೂಡಿತು.

ಅವತ್ತಿನಿಂದ ಸ್ವಲ್ಪ ಹೆಚ್ಚೇ ಅನ್ನುವಂತೆ ನನ್ನ ಮಿಂಚುಳ್ಳಿಯ ಹುಡುಕಾಟ ನಡೆಯಿತು. ತೇಜಸ್ವಿ, ಕಾರಂತರ ಹಕ್ಕಿಗಳ ಕುರಿತಾದ ಬರಹಗಳ ಜೊತೆಗೆ, ಗೂಗಲ್‌ನಲ್ಲೂ ಹುಡುಕಾಟ ಜೋರು ನಡೆಯಿತು. ಓದುತ್ತಾ ಓದುತ್ತಾ, ಹಕ್ಕಿ ಫೋಟೋಗ್ರಫಿಗೆ ಹಕ್ಕಿಗಳ ವಾಸಸ್ಥಾನದ ಬಗ್ಗೆ, ಅವುಗಳ ನಡವಳಿಕೆಯ ಬಗ್ಗೆ ಅರಿಯುವುದು ಅತ್ಯಂತ ಮುಖ್ಯವಾದ ವಿಷಯ ಅನ್ನುವುದು ಅರಿವಾಯ್ತು. ಹಕ್ಕಿಗಳ ನಾಚಿಕೆ ಸ್ವಭಾವದ ಬಗ್ಗೆ, ಅವುಗಳ ಆಹಾರ ಪದ್ಧತಿಗಳ ಬಗ್ಗೆ, ದೇಹ ರಚನೆಯಲ್ಲಿನ ವೈವಿಧ್ಯತೆಗಳ ಬಗ್ಗೆ ಅರಿಯುತ್ತಿದ್ದಂತೇ, ’ಅಬ್ಬಾ! ಪ್ರಕೃತಿ ಅದೆಂತಾ ಸೋಜಿಗ!’ ಎಂಬ ಅರಿವಾಗುತ್ತಾ ಬಂತು. ಹಕ್ಕಿ ಫೋಟೋಗ್ರಫಿಗೆ ಅವುಗಳನ್ನು ಅಪ್ರೋಚ್ ಮಾಡುವ ವಿಧಾನವೇ ಅತ್ಯಂತ ಪ್ರಮುಖವಾದ ವಿಷಯ ಎಂಬುದು ತಿಳಿಯಿತು.

ಇದನ್ನೂ ಓದಿ: ಅಧಿಕಾರಕ್ಕೆ ಬಂದ್ರೆ ಅದಾನಿ ಗ್ರೂಪ್ ವಿರುದ್ಧ ತನಿಖೆ ನಡೆಸುತ್ತೇವೆ: ರಾಹುಲ್ ಗಾಂಧಿ

ಸಾಮಾನ್ಯವಾಗಿ ಗದ್ದೆಯ ಬಳಿ ಹರಿಯುವ ತೊರೆಗಳ ಸಮೀಪ, ಅಥವಾ ನೀರಿನ ಸೆಲೆಯಿರುವ ಕಡೆಗಳಲ್ಲಿ, ಕೆರೆಯ ಬದಿಗಳಲ್ಲಿ ಸಣ್ಣ ನೀಲಿ ಮಿಂಚುಳ್ಳಿ ಕಾಣಸಿಗುವುದಾಗಿಯೂ ಮತ್ತು ಅವುಗಳ ಬದಿಯ ಗೋಡೆಗಳಲ್ಲಿ ಮಣ್ಣನ್ನು ಕೊರೆದು ಗೂಡು ಮಾಡುವುದಾಗಿ ಮಾಹಿತಿ ದೊರೆಯಿತು. ಇನ್ನೇನು ಬೇಕು? ನಾನು ದಿನಾ ಫೋಟೋ ತೆಗೆಯಲು ಹೋಗುತ್ತಿದ್ದ ಒಂದು ಕಡೆಯಲ್ಲಿ ಸಣ್ಣದಾಗಿ ತೊರೆ ಹರಿಯುತ್ತಿತ್ತು; ಅಲ್ಲಿಗೆ ಹೋಗಿ ನೋಡುವ ಎಂದು ಮಾರನೆ ದಿನ ಬೆಳಿಗ್ಗೆಯೇ ತೊರೆಯ ಬಳಿ ಹೊರಟೆ. ತೊರೆಯ ಬಳಿ ತಲುಪಿ ಒಂದರ್ಧ ಗಂಟೆ ಕಾಯುತ್ತಿದ್ದಂತೇ ನಾನು ಕಾಯುತ್ತಿದ್ದ ಸಂಗಾತಿ ಎಲ್ಲಿಂದಲೋ ಹಾರಿ ಬಂದು ತೊರೆಯ ಬದುವಿನ ಮೇಲಿನ ಸಣ್ಣ ಗಿಡದ ಟೊಂಗೆಯ ಮೇಲೆ ಕುಳಿತು ನೀರಿನೆಡೆಗೆ ನೋಡುತ್ತಾ ಧ್ಯಾನಸ್ಥವಾಯ್ತು. ಕಳೆದ ಸಲ ಮಾಡಿದ ತಪ್ಪನ್ನು ಈ ಸಲವೂ ಮಾಡಬಾರದು ಅಂದುಕೊಳ್ಳುತ್ತಾ, ಮೆಲ್ಲನೆ ತೊರೆಯ ಬಳಿಗೆ ಇಳಿದವನಿಗೆ, ತಕ್ಷಣವೇ ನಿರಾಸೆಯಾಯ್ತು. ನಾನು ರಸ್ತೆಯ ಮೇಲಿಂದ ಕೆಳಗಿಳಿದ ಕೂಡಲೇ ಹಕ್ಕಿ ಹಾರಿಹೋಯ್ತು. ಛೇ! ಏನಿದು ಕರ್ಮ, ನಾನೇನು ತಪ್ ಮಾಡ್ದೆ? ಅಂದುಕೊಳ್ಳುತ್ತಾ ಅಲ್ಲಿಯೇ ತೊರೆಯ ಬಳಿಯಲ್ಲಿ ಕುಳಿತವನಿಗೇ ಅನತಿದೂರದಲ್ಲಿ ಮತ್ತೊಂದು ಹಕ್ಕಿ ಕುಳಿತಿರುವುದು ಕಂಡಿತು. ಹೋ! ಇಲ್ಲಿ ನೀಲಿ ಮಿಂಚುಳ್ಳಿಗಳ ಓಡಾಟ ಇರುವುದು ಕನ್ಫರ್ಮ್ ಅಂದುಕೊಂಡವನೇ, ತೊರೆಯ ಬಳಿಯ ಬದುವಿನಿಂದ ನಿಧಾನವಾಗಿ ನಡೆಯುತ್ತಾ ಮತ್ತೊಂದು ಹಕ್ಕಿ ಕುಳಿತಿದ್ದ ಕಡೆಗೆ ಹೊರಟೆ. ಇನ್ನೇನು ಹಕ್ಕಿಗೂ ನನಗೂ ಕೆಲವೇ ಮೀಟರ್‌ಗಳ ಅಂತರ! ಕ್ಯಾಮರಾ ನಿಧಾನವಾಗಿ ಮೇಲೆತ್ತುತ್ತಿದ್ದಂತೇ ಹಕ್ಕಿ ಹಾರಿತು. ಮತ್ತೆ ನಿರಾಸೆ. ನಂತರ ಒಂದು ಗಂಟೆ ಕಾದರೂ ಹಕ್ಕಿ ಪುನಃ ಬರಲಿಲ್ಲ. ಬೇಸರದಿಂದ ಮನೆಗೆ ಹೊರಟೆ.

ಮತ್ತೊಂದು ನಿದ್ರೆ ಇಲ್ಲದ ರಾತ್ರಿ ಕಳೆಯುವಂತಾಯ್ತು. ಆದರೆ ನಾನು ಆಸೆ ಬಿಡಲಿಲ್ಲ. ಮಾರನೇ ದಿನ ಬೆಳಿಗ್ಗೆ ಮಾಮೂಲಿ ಹೋಗುವುದಕ್ಕಿಂತ ಅರ್ದ ಗಂಟೆ ಬೇಗನೇ, ಅಂದರೆ 6.30ಕ್ಕೆಲ್ಲಾ ತೊರೆಯ ಬಳಿ ಹೋಗಿ, ಹಿಂದಿನ ದಿನ ಮಿಂಚುಳ್ಳಿ ಕುಳಿತ ಸ್ಥಳದಿಂದ ಸ್ವಲ್ಪ ದೂರದಲ್ಲಿ ಕುಳಿತೆ. ಒಂದು ಗಂಟೆ ಕಾದ ನಂತರ ಸಣ್ಣದಾಗಿ ಟ್ಚೀಟ್ಚೀ॒… ಎನ್ನುವ ಸದ್ದಿನೊಂದಿಗೆ ಹಾರುತ್ತಾ ಬಂದ ನೀಲಿ ಮಿಂಚುಳ್ಳಿ ನಾನು ಕುಳಿತ ಸ್ಥಳದಿಂದ 3 ಮೀಟರ್ ಅಂತರದಲ್ಲಿ ಕುಳಿತು ನೀರಿನೆಡೆಗೆ ನೋಡತೊಡಗಿತು. ಆಹಾ ಅದೇನು ಚಂದ! ನೀಲಿ ಬಣ್ಣದ ರೆಕ್ಕೆ, ಗಾಢ ಹೊಂಬಣ್ಣದ ಹೊಟ್ಟೆಯ ಭಾಗ, ಉದ್ದಕ್ಕೆ ಚೂಪಾದ ಕೊಕ್ಕು, ನೀಲಿ ಬಣ್ಣದ ತಲೆ, ಹೊಳೆಯುವ ಕಪ್ಪು ಕಣ್ಣು, ಅಬ್ಬಬ್ಬಾ ಅದೇನು ಚಂದ ಈ ಸಣ್ಣ ಮಿಂಚುಳ್ಳಿ ಎಂದು ಅಚ್ಚರಿಗೊಳಗಾದೆ! ಕುಳಿತ ಜಾಗದಲ್ಲಿಯೇ ಕೊಕ್ಕನ್ನು ಬಾಗಿಸಿ, ನೀರಿನೆಡೆಗೆ ದೃಷ್ಟಿ ನೆಟ್ಟು ಮೀನಿಗೋಸ್ಕರ ಕಾಯುತ್ತಾ ಕುಳಿತಿತು ಮಿಂಚುಳ್ಳಿ. ಆಗಿಂದಾಗ್ಗೆ ತಲೆಯನ್ನು ಬಾಲವನ್ನೂ ಮೇಲೆ ಕೆಳಗೆ ಆಡಿಸುತ್ತಾ ನೀರಿನೆಡೆಗೆ ನೋಡುತ್ತಾ ಕುಳಿತಿತ್ತು ಸುಂದರಿ ಹಕ್ಕಿ. ಇನ್ನೇನು ಫೋಟೋ ತೆಗೆಯಲು ಕ್ಯಾಮರಾ ತೆಗೆದು ಸೆಟ್ಟಿಂಗ್ಸ್ ಸರಿ ಮಾಡಿ, ಝೂಮ್ ಮಾಡಿ, ಫೋಕಸ್ ಮಾಡುತ್ತಿದ್ದಂತೇ, ಕುಳಿತಲ್ಲಿಂದ ಚಂಗನೆ ನೀರಿಗೆ ನೆಗೆದ ಮಿಂಚುಳ್ಳಿ ಸಣ್ಣ ಗಾತ್ರದ ಮೀನನ್ನು ಹಿಡಿದು ಮತ್ತೆ ಮೇಲೆ ಬಂದು ಕುಳಿತುಕೊಳ್ತು. ಅಬ್ಬಾ! ಅದೇನು ವೇಗ! ನಾನು ದಂಗಾದೆ. ಅಷ್ಟರಲ್ಲಿ ಹಿಡಿದ ಬೇಟೆಯ ಸಮೇತ ನನ್ನ ಕಡೆ ನೋಡಿಯೇಬಿಟ್ಟಿತು ಮಿಂಚುಳ್ಳಿ! ಪುರ್ರನೇ ಹಾರಿ ದೂರದಲ್ಲಿನ ಮತ್ತೊಂದು ಟೊಂಗೆಯ ಮೇಲೆ ಕುಳಿತು, ಹಿಡಿದ ಮೀನನ್ನು ಕೊಕ್ಕಿನ ಸಹಾಯದಿಂದ, ಕುಳಿತ ಟೊಂಗೆಯ ಮೇಲೆ ಅಪ್ಪಳಿಸಿ, ಅಪ್ಪಳಿಸಿ ಮೀನನ್ನು ಕೊಂದು ಮೀನಿನ ತಲೆಯ ಭಾಗವನ್ನು ಬಾಯಿಯ ಕಡೆಗೆ ತಿರುಗಿಸಿಕೊಂಡು, ಕೊಕ್ಕಿನಿಂದ ಮೀನನ್ನು ಮೇಲೆ ಟಾಸ್ ಮಾಡಿ ಬಾಯಿ ಅಗಲಿಸಿ ಮೀನನ್ನು ನೇರ ಬಾಯಿಗೇ ಇಳಿಸಿಕೊಂಡು ನುಂಗಿಬಿಡ್ತು. ನಾನು ಈ ಬಾರಿ ನಿರಾಶನಾಗಲಿಲ್ಲ, ಬದಲಾಗಿ ಖುಷಿಯಾದೆ. ಈ ಮಿಂಚುಳ್ಳಿಯನ್ನು ನಾನು ಒಲಿಸಿಕೊಳ್ಳುವುದು ಕಷ್ಟವೇನಲ್ಲ ಅಂದುಕೊಳ್ಳುತ್ತಾ, ಹತ್ತಿರದಿಂದ ಮಿಂಚುಳ್ಳಿಯ ಸೊಬಗನ್ನು ಅದರ ಬೇಟೆಯ ವೈಖರಿಯನ್ನು ನೋಡಿದ ಖುಷಿಯಲ್ಲಿ ಮನೆಗೆ ತೆರಳಿದೆ. ಮಾರನೆಯ ದಿನ ಮತ್ತೆ ಬೆಳಿಗ್ಗೆಯೇ ಬೇಗ ತೊರೆಯ ದಡದ ಮೇಲೆ ಹೋಗಿ ಮಿಂಚುಳ್ಳಿ ಕೂರುವ ಸ್ಥಳದ ಪಕ್ಕದಲ್ಲಿಯೇ 3 ಮೀಟರ್ ದೂರದಲ್ಲಿ ಒಂದು ಸಣ್ಣ ಮರದ ಬುಡದಲ್ಲಿ ಇದ್ದ ಪೊದೆಯಂಥ ಗಿಡದ ನಡುವೆ ಹಸಿರು ಬಣ್ಣದ ಬಟ್ಟೆ ಧರಿಸಿ ಕ್ಯಾಮರಾವನ್ನು ಚಿತ್ರ ತೆಗೆಯುವ ಪೊಸಿಷನ್‌ಗೆ ರೆಡಿ ಮಾಡಿಕೊಂಡು ಕಾಯುತ್ತಾ ಕುಳಿತೆ. ಈ ಬಾರಿ ಹೆಚ್ಚು ಕಾಯಿಸದೇ ಟ್ಚೀಟ್ಚೀ॒… ಎನ್ನುವ ಸದ್ದಿನೊಂದಿಗೆ ಹಾರುತ್ತಾ ಬಂದ ಮಿಂಚುಳ್ಳಿ ನಾನಿದ್ದ ನೇರಕ್ಕೆ ಎದುರಿಗಿದ್ದ ಸಣ್ಣ ಗಿಡದ ಮೇಲೆ ಕುಳಿತುಕೊಳ್ತು. ನಾನು ಕ್ಯಾಮರಾ ರೆಡಿ ಮಾಡಿಕೊಂಡೆ, ಅದಕ್ಕೆ ನನ್ನ ಇರುವಿಕೆ ಅರಿವಾಯ್ತು, ಪುರ್ರನೇ ಹಾರಿಹೋಯ್ತು. ಮತ್ತೆ ಬರಲೇ ಇಲ್ಲ. ಅವತ್ತು ಮಾತ್ರ ಗಂಟೆಗಟ್ಟಲೆ ಕಾದು ಕುಳಿತರೂ ಹಕ್ಕಿ ಮತ್ತೆ ಬರಲಿಲ್ಲ. ನಾನು ಮನೆಗೆ ಹೋದವನೇ, ಹೆಂಡತಿಯ ಬಳಿ ಇದೆಲ್ಲಾ ಕಥೆ ವಿವರಿಸಿ ಹೇಳಿದೆ. ಮಾರನೆಯ ದಿನ ಖಂಡಿತಾ ಚಂದದ ಚಿತ್ರ ತೆಗೆಯುವದಾಗಿ ಹೇಳಿದೆ. ಆಗ ಆಕೆ, ಪಾಪ ಆ ಹಕ್ಕಿ, ನಿಮ್ಮಿಂದ ಅದಕ್ಕೆ ಡಿಸ್ಟರ್ಬ್ ಆಗಿರುತ್ತೆ, ಸೋ ಎರಡ್ ದಿನ ಬಿಟ್ಟು ಹೋಗೆಂದು ಸಲಹೆಯಿತ್ತಳು. ನಾನು ಹಾಗೆಯೇ ತೀರ್ಮಾನಿಸಿ, ಎರಡು ದಿನ ಬಿಟ್ಟು ಅದೇ ಜಾಗಕ್ಕೆ ಹೋಗಿ ಕುಳಿತೆ. ಈ ಬಾರಿಯೂ ಮಿಂಚುಳ್ಳಿ ಬಂದು ನೇರವಾಗಿ ಅದೇ ಗಿಡದ ಮೇಲೆ ಕುಳಿತುಕೊಂಡು ಸುತ್ತಾಮುತ್ತಾ ಒಮ್ಮೆ ನೋಡಿತು ಮತ್ತು ನನ್ನನ್ನು ಕಂಡಿತು ಕೂಡಾ! ಮೊದಲನೇ ಬಾರಿ ನಾನು ಹಾಗೂ ಮಿಂಚುಳ್ಳಿ ಪರಸ್ಪರ ಕಣ್ಣು ಮಿಲಾಯಿಸಿಕೊಂಡೆವು. ನಾನು ಚೂರೂ ಅಲುಗಾಡದೇ ಕುಳಿತೆ. ಹಕ್ಕಿ ಮಾತ್ರ ಕೆಲವು ಗಳಿಗೆಗಳ ಕಾಲ ನನ್ನನ್ನೇ ದುರುಗುಟ್ಟಿ ನೋಡುತ್ತಾ ಕುಳಿತು, ನಂತರ ಅದರ ಪಾಡಿಗೆ ಅದು ನೀರಿನೆಡೆಗೆ ದೃಷ್ಟಿ ನೆಟ್ಟು ಬೇಟೆಗೆ ಕಾಯತೊಡಗಿತು.

ಆಗ ನಾನು ನಿಧಾನವಾಗಿ ಕ್ಯಾಮರಾ ರೆಡಿ ಮಾಡಿಕೊಂಡು, ಝೂಮ್ ಮಾಡಿ, ಫೋಕಸ್ ಮಾಡಿ ಕ್ಲಿಕ್ಕಿಸಿದೆ. ಡಿಸ್‌ಪ್ಲೇನಲ್ಲಿ ನೋಡಿದೆ. ಆಹಾ ಎಂಥ ಚಂದ! ಶಾರ್ಪ್ ಇದೆ ಅನ್ನಿಸ್ತು. ಮತ್ತೆರಡು ಕ್ಲಿಕ್ಕಿಸಿದೆ, ಬೇರೆ ಬೇರೆ ಸೆಟ್ಟಿಂಗ್ಸ್‌ನಲ್ಲಿ ತೆಗೆದೆ. ಹಕ್ಕಿ ಮಾತ್ರ ಯಾವುದೇ ಆತಂಕಕ್ಕೊಳಗಾಗದೇ ಆರಾಮಾಗಿ ಕುಳಿತು ಬೇಟೆಗೆ ಕಾಯತೊಡಗಿತು. ನಾನು ಕುಳಿತಲ್ಲಿಂದಲೇ ಮೆಲ್ಲನೆ ಎರಡು ಹೆಜ್ಜೆ ಮುಂದೆ ಇಟ್ಟು ಮತ್ತಷ್ಟು ಹತ್ತಿರ ಹೋದೆ. ಮತ್ತೊಮ್ಮೆ ಕಣ್ಣು ಮಿಲಾಯಿಸಿ ಮತ್ತೆರಡು ಚಿತ್ರ ತೆಗೆದೆ. ಅಷ್ಟರಲ್ಲಿ ನೀರಿನಲ್ಲಿ ಬೇಟೆ ಕಂಡ ಮಿಂಚುಳ್ಳಿ ಚಂಗನೆ ನೀರಿಗೆ ನೆಗೆದು ಮೀನನ್ನು ಹಿಡಿದು ಕೊಕ್ಕಿನಲ್ಲಿ ಕಚ್ಚಿಕೊಂಡು ಪುರ್ರನೇ ಹಾರಿ ಮತ್ತೊಂದು ಕಡೆ ಹೋಗಿ ಕುಳಿತು ಮೀನನ್ನು ಕೊಕ್ಕಿನಿಂದ ಅಪ್ಪಳಿಸಲು ಶುರು ಮಾಡಿತು. ನಾನು ಮಾತ್ರ ಏನೋ ಸಾಧನೆ ಮಾಡಿದವನಂತೆ, ಸ್ಪರ್ಧೆಯಲ್ಲಿ ಮೊದಲನೇ ಬಹುಮಾನ ಪಡೆದವನಂತೆ ಖುಷಿಯಲ್ಲಿ ಮನೆ ಕಡೆ ಹೊರಟೆ. ತೊರೆಯ ಬದಿಯಲ್ಲಿ ನಡೆಯುತ್ತಿದ್ದವನಿಗೆ, ಮಿಂಚುಳ್ಳಿ ಮೀನನ್ನು ಅಪ್ಪಳಿಸುವ ಸದ್ದು ಅಸ್ಪಷ್ಟವಾಗಿ ಕೇಳುತ್ತಿತ್ತು.

ವಿನೋದ್ ಕುಮಾರ್ ವಿ ಕೆ

ವಿನೋದ್ ಕುಮಾರ್ ವಿ ಕೆ
ವಿನೋದ್ ಹುಟ್ಟಿದ್ದು ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ. 2011ರಿಂದ ಛಾಯಾಗ್ರಹಣದಲ್ಲಿ ಆಸಕ್ತಿ. ಹಕ್ಕಿ, ಚಿಟ್ಟೆ, ಕೀಟಗಳಿಂದ ಪ್ರಾರಂಭವಾಗಿ ಟ್ರೆಕ್ಕಿಂಗ್ ಹವ್ಯಾಸವಾಗಿ ಬೆಳೆದಿದೆ. ಅರಣ್ಯ ಇಲಾಖೆಯಲ್ಲಿ ಕಚೇರಿ ಸಹಾಯಕನಾಗಿ ವೃತ್ತಿ. ಸದ್ಯಕ್ಕೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ವಾಸವಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನಾನು ಪ್ರೀತಿ-ವಿಶ್ವಾಸಗಳಿಗೆ ತಲೆಬಾಗುವವನೇ ಹೊರತು ಒತ್ತಡ-ಪ್ರಭಾವಗಳಿಗೆ ಒಳಗಾಗುವವನಲ್ಲ’: ವಿದಾಯ ಭಾಷಣದಲ್ಲಿ ಸಿದ್ದರಾಮಯ್ಯ

ಹೈಕಮಾಂಡ್ ಯಾವಾಗ ಸೂಚಿಸುತ್ತದೆಯೋ ಆಗ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ 2026 ಮೇ 28 ರಂದು ಹೈಕಮಾಂಡ್ ಸೂಚನೆ ಮೇರೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ...

ಪಶ್ಚಿಮ ಬಂಗಾಳ| ಬಕ್ರೀದ್‌ ಹಬ್ಬಕ್ಕೂ ಮುನ್ನ ರೈತರಿಗೆ ಸಂಕಷ್ಟ; ಜಾನುವಾರು ಮಾರುಕಟ್ಟೆಗಳು ನಿರ್ಜನ

ಈದ್ ಅಲ್-ಅಧಾ ಹಬ್ಬದ ಮುನ್ನ ಉತ್ತರ ಬಂಗಾಳದಾದ್ಯಂತ ಜಾನುವಾರು ಮಾರುಕಟ್ಟೆಗಳು ಹೆಚ್ಚಾಗಿ ನಿರ್ಜನವಾಗಿದ್ದವು. ವ್ಯಾಪಾರಿಗಳು ಮತ್ತು ರೈತರು ಜಾನುವಾರು ಮಾರಾಟದ ಮೇಲಿನ ನಿರ್ಬಂಧಗಳಿಂದಾಗಿ ವ್ಯಾಪಾರದಲ್ಲಿ ಪ್ರಮುಖ ಕುಸಿತ ಕಂಡುಬಂದಿದೆ ಎಂದು ಅವಲತ್ತುಕೊಂಡಿದ್ದಾರೆ. ಮಾಲ್ಡಾ...

ಅತ್ಯಾಚಾರ – ಮಕ್ಕಳ ಮೇಲಿನ ಸಾಮೂಹಿಕ ಲೈಂಗಿಕ ದೌರ್ಜನ್ಯ ಪ್ರಕರಣ: ಸ್ವಯಂ ಘೋಷಿತ ದೇವಮಾನವ ಅಸಾರಾಂ ಖುಲಾಸೆ

ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಅವರನ್ನು ಭಾರತೀಯ ದಂಡ ಸಂಹಿತೆ, ಪೋಕ್ಸೋ ಕಾಯ್ದೆಯಡಿಯಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಮಕ್ಕಳ ಮೇಲಿನ ಸಾಮೂಹಿಕ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆರೋಪಗಳಿಂದ ಖುಲಾಸೆಗೊಳಿಸಲಾಗಿದೆ. ಮೇ 27...

ಸಿದ್ದರಾಮಯ್ಯ ಅವರ ಮನವೊಲಿಸಿದ ಕಾಂಗ್ರೆಸ್‌ ಹೈಕಮಾಂಡ್; ಮುಖ್ಯಮಂತ್ರಿ ಸ್ಥಾನಕ್ಕೆ ನಾಳೆ ರಾಜೀನಾಮೆ?

ಕರ್ನಾಟಕದ ಮುಖ್ಯಮಂತ್ರಿ ಹುದ್ದೆಯ ಸುತ್ತಲಿನ ತೀವ್ರ ರಾಜಕೀಯ ನಾಟಕವು ಅಂತಿಮವಾಗಿ ನಿರ್ಣಾಯಕ ಹಂತ ತಲುಪಿದೆ. ನವದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್‌ನ ನಿರಂತರ ಒತ್ತಡ ಮತ್ತು ಮಾತುಕತೆಗಳ ನಂತರ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲು...

“ಎಚ್.ಎಸ್. ದೊರೆಸ್ವಾಮಿ ಭೌತಿಕವಾಗಿ ಇಲ್ಲದಿದ್ದರೂ ನಮ್ಮನ್ನು ಸದಾ ಪ್ರೇರೇಪಿಸುತ್ತಾರೆ”: ತೀಸ್ತಾ ಸೆಟಲ್ವಾಡ್

ಬೆಂಗಳೂರು: "ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ದಿ. ಎಚ್.ಎಸ್. ದೊರೆಸ್ವಾಮಿ ಅವರು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರ ಹೋರಾಟದ ಹಾದಿ ಮತ್ತು ಆದರ್ಶಗಳು ನಮ್ಮನ್ನು ಸದಾ ಪ್ರೇರೇಪಿಸುತ್ತಲೇ ಇರುತ್ತವೆ" ಎಂದು ಪ್ರಮುಖ ಮಾನವ ಹಕ್ಕುಗಳ ಹೋರಾಟಗಾರ್ತಿ...

ಕೇರಳ | ಆದಿವಾಸಿ ಯುವಕ ಮಧು ಗುಂಪು ಹತ್ಯೆ ಪ್ರಕರಣ : 12 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಹೈಕೋರ್ಟ್

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೇರಳದ ಆದಿವಾಸಿ ಯುವಕ ಮಧು ಗುಂಪು ಹಲ್ಲೆ ಮತ್ತು ಹತ್ಯೆ ಪ್ರಕರಣದ 12 ಜನ ಅಪರಾಧಿಗಳಿಗೆ ಹೈಕೋರ್ಟ್ ಸೋಮವಾರ (ಮೇ.25) ಜೀವಾವಧಿ ಶಿಕ್ಷೆ ಮತ್ತು ತಲಾ 2...

“ನನ್ನ ಅನುಮತಿ ಇಲ್ಲದೆ ನನ್ನ ಮಗುವನ್ನು ಸುಡಲಾಗಿದೆ”: ಕೊಲೆಯಾದ ಕೊಯಮತ್ತೂರು ಬಾಲಕಿಯ ತಾಯಿ ಅಳಲು

ಕೊಯಮತ್ತೂರು ಬಳಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಕೊಲೆಯಾದ 10 ವರ್ಷದ ಬಾಲಕಿಯ ತಾಯಿ, ತನ್ನ ಮಗಳ ಮೃತದೇಹದ ಅಂತ್ಯಸಂಸ್ಕಾರಕ್ಕೆ ತಾನು ಅನುಮತಿ ನೀಡಿರಲಿಲ್ಲ ಎಂದು ಹೇಳಿದ್ದಾರೆ. ಮಗುವಿನ ಮರಣೋತ್ತರ ಪರೀಕ್ಷೆಯ ನಂತರ, ತನ್ನ ಪತಿ...

ಅಷ್ಟೊಂದು ‘ಸೆಂಟಿಮೆಂಟ್’ ಬೇಡ: ‘ಕಾಕ್ರೋಚ್ ಅಭಿಯಾನ’ದ ವಿರುದ್ಧದ ಅರ್ಜಿಗೆ ಸಿಜೆಐ ಪ್ರತಿಕ್ರಿಯೆ

"ವ್ಯವಸ್ಥೆಯ ಮೇಲೆ ದಾಳಿ ಮಾಡುವವರ" ಕುರಿತು ತಾವು ನೀಡಿದ್ದ ಹೇಳಿಕೆಗೆ ವ್ಯಂಗ್ಯದ ರೂಪದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಯಾಗಿರುವ ‘ಕಾಕ್ರೋಚ್ ಜನತಾ ಪಾರ್ಟಿ’  ವಿವಾದವನ್ನು ಅಷ್ಟೊಂದು "ಭಾವನಾತ್ಮಕವಾಗಿ ತೆಗೆದುಕೊಳ್ಳಬೇಡಿ" ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ...

ನಾಳೆ ದಿ. ಎಚ್.ಎಸ್ ದೊರೆಸ್ವಾಮಿ ಅವರಿಗೆ ‘ಕರ್ನಾಟಕದ ಗೌರವಾರ್ಪಣೆ’

ಸ್ವಾತಂತ್ರ್ಯ ಸೇನಾನಿ ದಿ. ಎಚ್.ಎಸ್ ದೊರೆಸ್ವಾಮಿ ಅವರಿಗೆ 'ಕರ್ನಾಟಕದ ಗೌರವಾರ್ಪಣೆ' ಕಾರ್ಯಕ್ರಮವನ್ನು ನಾಳೆ, ಅಂದರೆ 2026 ಮೇ 26 ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಎಚ್.ಎಸ್‌ ದೊರೆಸ್ವಾಮಿ ಸ್ಮಾರಕ ಪ್ರತಿಷ್ಠಾನ,...

FACT CHECK : ಕಾಕ್ರೋಚ್ ಜನತಾ ಪಾರ್ಟಿಯ ಹೆಚ್ಚಿನ ಫಾಲೋವರ್ಸ್ ಪಾಕಿಸ್ತಾನದವರಾ?

ಇತ್ತೀಚೆಗೆ ಹುಟ್ಟಿಕೊಂಡ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಇನ್‌ಸ್ಟಾಗ್ರಾಮ್ ಪೇಜ್ ಕಾಂಗ್ರೆಸ್‌ನ 13 ಮಿಲಿಯನ್ ಮತ್ತು ಬಿಜೆಪಿಯ 9 ಮಿಲಿಯನ್ ಫಾಲೋವರ್ಸ್‌ಗಳ ಗಡಿಯನ್ನು ದಾಟಿದ್ದು, ಬರೋಬ್ಬರಿ 23 ಮಿಲಿಯನ್ (ಮೇ 24ರಂತೆ) ಫಾಲೋವರ್ಸ್‌...