Homeಮುಖಪುಟಫೋಟೋ ಪ್ರಬಂಧ; ಸಣ್ಣ ನೀಲಿ ಮಿಂಚುಳ್ಳಿಯೊಂದಿಗೆ ನನ್ನ ಮೊದಲ ಭೇಟಿ..

ಫೋಟೋ ಪ್ರಬಂಧ; ಸಣ್ಣ ನೀಲಿ ಮಿಂಚುಳ್ಳಿಯೊಂದಿಗೆ ನನ್ನ ಮೊದಲ ಭೇಟಿ..

- Advertisement -
- Advertisement -

ಮನುಷ್ಯನಿಗೆ ಒಲುಮೆಯಿಂದ ಯಾರನ್ನಾದರೂ ಒಲಿಸಿಕೊಳ್ಳುವುದು ಅವನ ಅಪರಿಮಿತ ಆಸೆಗಳಲ್ಲಿ ಒಂದಲ್ಲವೇ? ಬಾಲ್ಯದಲ್ಲಿ ಆಟಕ್ಕೆ-ಊಟಕ್ಕೆ ಪೋಷಕರನ್ನು ಒಲಿಸಿಕೊಳ್ಳಲು ಯತ್ನಿಸಿದರೆ, ಯೌವ್ವನದಲ್ಲಿ ಪ್ರೇಮಕ್ಕೆ ಪ್ರಣಯಕ್ಕೆ ಸಂಗಾತಿಯನ್ನು ಒಲಿಸಿಕೊಳ್ಳುವ ನಿರಂತರ ಪ್ರಯತ್ನ ಇದ್ದೇ ಇರುತ್ತದೆ. ನಾನೂ ಈ ಎಲ್ಲಾ ಪ್ರಯತ್ನಗಳನ್ನು ದಾಟಿದವನೇ! ಆದರೆ ನಿಜವಾಗಿಯೂ ಒಲಿಸಿಕೊಳ್ಳುವ ಕಷ್ಟ ಗೊತ್ತಾಗಿದ್ದು ಮಾತ್ರ ನಾನು ಹಕ್ಕಿ ಫೋಟೋಗ್ರಫಿ ಶುರು ಮಾಡಿದ ಮೇಲೆ.

2000 ಇಸವಿಯಲ್ಲೇ ನಾನು ಫೋಟೋಗ್ರಫಿ ಕಲಿಯುವ ಪ್ರಯತ್ನ ಮಾಡಿದ್ದರೂ, ಹಕ್ಕಿ ಫೋಟೋಗ್ರಫಿ ಶುರು ಮಾಡಿದ್ದು ಮಾತ್ರ 2010ರಿಂದ. ಫೋಟೋ ತೆಗೆಯುವುದಕ್ಕಿಂತಲೂ ಹಕ್ಕಿಗಳನ್ನು ಪತ್ತೆ ಮಾಡುವ, ಗುರುತಿಸುವ ಅವುಗಳ ಬಗ್ಗೆ ಅರಿಯುವ ಪ್ರಯತ್ನ ಮಾಡಬೇಕು ಅನ್ನುವ ಜ್ಞಾನ ಪುಸ್ತಕಗಳ ಮುಖಾಂತರ ಅದಾಗಲೇ ತಲೆಗೆ ತುಂಬಿತ್ತು. ಅದೊಂದು ಸಂಜೆ ಕ್ಯಾಮರಾ ಹಿಡಿದು ಸುತ್ತಾಡುತ್ತಿದ್ದವನಿಗೆ, ನಾನು ನಡೆಯುತ್ತಿದ್ದ ರಸ್ತೆ ಬದಿಯ ಗದ್ದೆಯಲ್ಲಿ ಒಂದು ನೀಲಿ ಮಿಂಚುಳ್ಳಿ ಹಕ್ಕಿ ಕಾಣ್ತು. ದೂರದಿಂದ ಸಣ್ಣ ಗಾತ್ರಕ್ಕೆ ನೀಲಿ ಬಣ್ಣದಲ್ಲಿ ಕಾಣುವ ಈ ಹಕ್ಕಿ ಎಂತವರನ್ನೂ ಅದರತ್ತ ಸೆಳೆಯದೇ ಇರದು. ನನ್ನ ಬಳಿ ಇದ್ದ ಕ್ಯಾಮರಾದಿಂದ ತುಂಬಾ ದೂರದಲ್ಲಿ ಕುಳಿತ ಹಕ್ಕಿಯ ಚಿತ್ರ ತೆಗೆಯಲು ಕಷ್ಟವಾಗಿದ್ದರಿಂದ ನಾನು ನಿಧಾನವಾಗಿ ರಸ್ತೆಯಿಂದ ಗದ್ದೆಗಿಳಿದವನೇ, ಮೆಲ್ಲಮೆಲ್ಲನೆ ಹಕ್ಕಿ ಕುಳಿತಿದ್ದ ಕಡೆ ನಡೆಯತೊಡಗಿದೆ. ಅಲ್ಲಿಂದಲೇ ಚಿತ್ರೆ ತೆಗೆಯುವ ಮನಸ್ಸಾದರೂ, ಮತ್ತಷ್ಟು ಹತ್ತಿರ ಹೋಗಿ ಇನ್ನೂ ಸ್ಪಷ್ಟವಾಗಿ ತೆಗೆಯೋಣ ಅನ್ನುವ ಆಸೆಯೊಂದಿಗೆ ಮತ್ತಷ್ಟು ಹತ್ತಿರ ಹೋಗುವ ಪ್ರಯತ್ನ ಮಾಡಿದ್ದೇ ತಡ, ನನ್ನನ್ನು ನೋಡಿದ ಹಕ್ಕಿ ಪುರ್ರೆಂದು ಹಾರಿಹೋಯ್ತು. ಛೇ! ಅನ್ನುತ್ತಾ ಬೇಸರ ಅಸಮಾಧಾನದಿಂದ ಹಿಂತಿರುಗಿದವನೇ, ಒಂದು ಹೆಜ್ಜೆ ಎತ್ತಿಡುವ ಮೊದಲೇ ನನ್ನ ಬಲಭಾಗದಲ್ಲಿ ಮತ್ತೊಂದು ಮಿಂಚುಳ್ಳಿ ಕುಳಿತಿದ್ದು ಕಾಣ್ತು! ನೀಲಿ ಬಣ್ಣದ ಹಕ್ಕಿ, ಸಣ್ಣ ನೀಲಿ ಮಿಂಚುಳ್ಳಿ; ನಿಧಾನವಾಗಿ ಬಲಕ್ಕೆ ತಿರುಗಿ ಕ್ಯಾಮರಾ ಹಿಡಿದ ಕೈಯನ್ನು ಮೇಲೆತ್ತಿದ್ದೇ ತಡ, ಹಕ್ಕಿ ಹಾರಿಹೋಯ್ತು! ಛೇ, ಇಷ್ಟು ಹತ್ತಿರದಿಂದ ಹಕ್ಕಿ ಕಂಡರೂ ಅದರ ಚಂದದ ಚಿತ್ರ ತೆಗೆಯಲಾಗಲಿಲ್ಲವಲ್ಲ ಅನ್ನುವ ಕೊರಗಿನಿಂದ ಮನೆಗೆ ಹೋದವನಿಗೆ, ಅಂದು ರಾತ್ರಿ ನಿದ್ರೆಯೇ ಬರಲಿಲ್ಲ. ಹೇಗಾದರೂ ಸರಿ, ಆ ನೀಲಿ ಸುಂದರ ಹಕ್ಕಿಯ ಫೋಟೋ ತೆಗೆಯಲೇಬೇಕು ಅನ್ನುವ ಆಸೆ ಮನಸ್ಸಿನಲ್ಲಿ ಬಲವಾಗಿ ಮೂಡಿತು.

ಅವತ್ತಿನಿಂದ ಸ್ವಲ್ಪ ಹೆಚ್ಚೇ ಅನ್ನುವಂತೆ ನನ್ನ ಮಿಂಚುಳ್ಳಿಯ ಹುಡುಕಾಟ ನಡೆಯಿತು. ತೇಜಸ್ವಿ, ಕಾರಂತರ ಹಕ್ಕಿಗಳ ಕುರಿತಾದ ಬರಹಗಳ ಜೊತೆಗೆ, ಗೂಗಲ್‌ನಲ್ಲೂ ಹುಡುಕಾಟ ಜೋರು ನಡೆಯಿತು. ಓದುತ್ತಾ ಓದುತ್ತಾ, ಹಕ್ಕಿ ಫೋಟೋಗ್ರಫಿಗೆ ಹಕ್ಕಿಗಳ ವಾಸಸ್ಥಾನದ ಬಗ್ಗೆ, ಅವುಗಳ ನಡವಳಿಕೆಯ ಬಗ್ಗೆ ಅರಿಯುವುದು ಅತ್ಯಂತ ಮುಖ್ಯವಾದ ವಿಷಯ ಅನ್ನುವುದು ಅರಿವಾಯ್ತು. ಹಕ್ಕಿಗಳ ನಾಚಿಕೆ ಸ್ವಭಾವದ ಬಗ್ಗೆ, ಅವುಗಳ ಆಹಾರ ಪದ್ಧತಿಗಳ ಬಗ್ಗೆ, ದೇಹ ರಚನೆಯಲ್ಲಿನ ವೈವಿಧ್ಯತೆಗಳ ಬಗ್ಗೆ ಅರಿಯುತ್ತಿದ್ದಂತೇ, ’ಅಬ್ಬಾ! ಪ್ರಕೃತಿ ಅದೆಂತಾ ಸೋಜಿಗ!’ ಎಂಬ ಅರಿವಾಗುತ್ತಾ ಬಂತು. ಹಕ್ಕಿ ಫೋಟೋಗ್ರಫಿಗೆ ಅವುಗಳನ್ನು ಅಪ್ರೋಚ್ ಮಾಡುವ ವಿಧಾನವೇ ಅತ್ಯಂತ ಪ್ರಮುಖವಾದ ವಿಷಯ ಎಂಬುದು ತಿಳಿಯಿತು.

ಇದನ್ನೂ ಓದಿ: ಅಧಿಕಾರಕ್ಕೆ ಬಂದ್ರೆ ಅದಾನಿ ಗ್ರೂಪ್ ವಿರುದ್ಧ ತನಿಖೆ ನಡೆಸುತ್ತೇವೆ: ರಾಹುಲ್ ಗಾಂಧಿ

ಸಾಮಾನ್ಯವಾಗಿ ಗದ್ದೆಯ ಬಳಿ ಹರಿಯುವ ತೊರೆಗಳ ಸಮೀಪ, ಅಥವಾ ನೀರಿನ ಸೆಲೆಯಿರುವ ಕಡೆಗಳಲ್ಲಿ, ಕೆರೆಯ ಬದಿಗಳಲ್ಲಿ ಸಣ್ಣ ನೀಲಿ ಮಿಂಚುಳ್ಳಿ ಕಾಣಸಿಗುವುದಾಗಿಯೂ ಮತ್ತು ಅವುಗಳ ಬದಿಯ ಗೋಡೆಗಳಲ್ಲಿ ಮಣ್ಣನ್ನು ಕೊರೆದು ಗೂಡು ಮಾಡುವುದಾಗಿ ಮಾಹಿತಿ ದೊರೆಯಿತು. ಇನ್ನೇನು ಬೇಕು? ನಾನು ದಿನಾ ಫೋಟೋ ತೆಗೆಯಲು ಹೋಗುತ್ತಿದ್ದ ಒಂದು ಕಡೆಯಲ್ಲಿ ಸಣ್ಣದಾಗಿ ತೊರೆ ಹರಿಯುತ್ತಿತ್ತು; ಅಲ್ಲಿಗೆ ಹೋಗಿ ನೋಡುವ ಎಂದು ಮಾರನೆ ದಿನ ಬೆಳಿಗ್ಗೆಯೇ ತೊರೆಯ ಬಳಿ ಹೊರಟೆ. ತೊರೆಯ ಬಳಿ ತಲುಪಿ ಒಂದರ್ಧ ಗಂಟೆ ಕಾಯುತ್ತಿದ್ದಂತೇ ನಾನು ಕಾಯುತ್ತಿದ್ದ ಸಂಗಾತಿ ಎಲ್ಲಿಂದಲೋ ಹಾರಿ ಬಂದು ತೊರೆಯ ಬದುವಿನ ಮೇಲಿನ ಸಣ್ಣ ಗಿಡದ ಟೊಂಗೆಯ ಮೇಲೆ ಕುಳಿತು ನೀರಿನೆಡೆಗೆ ನೋಡುತ್ತಾ ಧ್ಯಾನಸ್ಥವಾಯ್ತು. ಕಳೆದ ಸಲ ಮಾಡಿದ ತಪ್ಪನ್ನು ಈ ಸಲವೂ ಮಾಡಬಾರದು ಅಂದುಕೊಳ್ಳುತ್ತಾ, ಮೆಲ್ಲನೆ ತೊರೆಯ ಬಳಿಗೆ ಇಳಿದವನಿಗೆ, ತಕ್ಷಣವೇ ನಿರಾಸೆಯಾಯ್ತು. ನಾನು ರಸ್ತೆಯ ಮೇಲಿಂದ ಕೆಳಗಿಳಿದ ಕೂಡಲೇ ಹಕ್ಕಿ ಹಾರಿಹೋಯ್ತು. ಛೇ! ಏನಿದು ಕರ್ಮ, ನಾನೇನು ತಪ್ ಮಾಡ್ದೆ? ಅಂದುಕೊಳ್ಳುತ್ತಾ ಅಲ್ಲಿಯೇ ತೊರೆಯ ಬಳಿಯಲ್ಲಿ ಕುಳಿತವನಿಗೇ ಅನತಿದೂರದಲ್ಲಿ ಮತ್ತೊಂದು ಹಕ್ಕಿ ಕುಳಿತಿರುವುದು ಕಂಡಿತು. ಹೋ! ಇಲ್ಲಿ ನೀಲಿ ಮಿಂಚುಳ್ಳಿಗಳ ಓಡಾಟ ಇರುವುದು ಕನ್ಫರ್ಮ್ ಅಂದುಕೊಂಡವನೇ, ತೊರೆಯ ಬಳಿಯ ಬದುವಿನಿಂದ ನಿಧಾನವಾಗಿ ನಡೆಯುತ್ತಾ ಮತ್ತೊಂದು ಹಕ್ಕಿ ಕುಳಿತಿದ್ದ ಕಡೆಗೆ ಹೊರಟೆ. ಇನ್ನೇನು ಹಕ್ಕಿಗೂ ನನಗೂ ಕೆಲವೇ ಮೀಟರ್‌ಗಳ ಅಂತರ! ಕ್ಯಾಮರಾ ನಿಧಾನವಾಗಿ ಮೇಲೆತ್ತುತ್ತಿದ್ದಂತೇ ಹಕ್ಕಿ ಹಾರಿತು. ಮತ್ತೆ ನಿರಾಸೆ. ನಂತರ ಒಂದು ಗಂಟೆ ಕಾದರೂ ಹಕ್ಕಿ ಪುನಃ ಬರಲಿಲ್ಲ. ಬೇಸರದಿಂದ ಮನೆಗೆ ಹೊರಟೆ.

ಮತ್ತೊಂದು ನಿದ್ರೆ ಇಲ್ಲದ ರಾತ್ರಿ ಕಳೆಯುವಂತಾಯ್ತು. ಆದರೆ ನಾನು ಆಸೆ ಬಿಡಲಿಲ್ಲ. ಮಾರನೇ ದಿನ ಬೆಳಿಗ್ಗೆ ಮಾಮೂಲಿ ಹೋಗುವುದಕ್ಕಿಂತ ಅರ್ದ ಗಂಟೆ ಬೇಗನೇ, ಅಂದರೆ 6.30ಕ್ಕೆಲ್ಲಾ ತೊರೆಯ ಬಳಿ ಹೋಗಿ, ಹಿಂದಿನ ದಿನ ಮಿಂಚುಳ್ಳಿ ಕುಳಿತ ಸ್ಥಳದಿಂದ ಸ್ವಲ್ಪ ದೂರದಲ್ಲಿ ಕುಳಿತೆ. ಒಂದು ಗಂಟೆ ಕಾದ ನಂತರ ಸಣ್ಣದಾಗಿ ಟ್ಚೀಟ್ಚೀ॒… ಎನ್ನುವ ಸದ್ದಿನೊಂದಿಗೆ ಹಾರುತ್ತಾ ಬಂದ ನೀಲಿ ಮಿಂಚುಳ್ಳಿ ನಾನು ಕುಳಿತ ಸ್ಥಳದಿಂದ 3 ಮೀಟರ್ ಅಂತರದಲ್ಲಿ ಕುಳಿತು ನೀರಿನೆಡೆಗೆ ನೋಡತೊಡಗಿತು. ಆಹಾ ಅದೇನು ಚಂದ! ನೀಲಿ ಬಣ್ಣದ ರೆಕ್ಕೆ, ಗಾಢ ಹೊಂಬಣ್ಣದ ಹೊಟ್ಟೆಯ ಭಾಗ, ಉದ್ದಕ್ಕೆ ಚೂಪಾದ ಕೊಕ್ಕು, ನೀಲಿ ಬಣ್ಣದ ತಲೆ, ಹೊಳೆಯುವ ಕಪ್ಪು ಕಣ್ಣು, ಅಬ್ಬಬ್ಬಾ ಅದೇನು ಚಂದ ಈ ಸಣ್ಣ ಮಿಂಚುಳ್ಳಿ ಎಂದು ಅಚ್ಚರಿಗೊಳಗಾದೆ! ಕುಳಿತ ಜಾಗದಲ್ಲಿಯೇ ಕೊಕ್ಕನ್ನು ಬಾಗಿಸಿ, ನೀರಿನೆಡೆಗೆ ದೃಷ್ಟಿ ನೆಟ್ಟು ಮೀನಿಗೋಸ್ಕರ ಕಾಯುತ್ತಾ ಕುಳಿತಿತು ಮಿಂಚುಳ್ಳಿ. ಆಗಿಂದಾಗ್ಗೆ ತಲೆಯನ್ನು ಬಾಲವನ್ನೂ ಮೇಲೆ ಕೆಳಗೆ ಆಡಿಸುತ್ತಾ ನೀರಿನೆಡೆಗೆ ನೋಡುತ್ತಾ ಕುಳಿತಿತ್ತು ಸುಂದರಿ ಹಕ್ಕಿ. ಇನ್ನೇನು ಫೋಟೋ ತೆಗೆಯಲು ಕ್ಯಾಮರಾ ತೆಗೆದು ಸೆಟ್ಟಿಂಗ್ಸ್ ಸರಿ ಮಾಡಿ, ಝೂಮ್ ಮಾಡಿ, ಫೋಕಸ್ ಮಾಡುತ್ತಿದ್ದಂತೇ, ಕುಳಿತಲ್ಲಿಂದ ಚಂಗನೆ ನೀರಿಗೆ ನೆಗೆದ ಮಿಂಚುಳ್ಳಿ ಸಣ್ಣ ಗಾತ್ರದ ಮೀನನ್ನು ಹಿಡಿದು ಮತ್ತೆ ಮೇಲೆ ಬಂದು ಕುಳಿತುಕೊಳ್ತು. ಅಬ್ಬಾ! ಅದೇನು ವೇಗ! ನಾನು ದಂಗಾದೆ. ಅಷ್ಟರಲ್ಲಿ ಹಿಡಿದ ಬೇಟೆಯ ಸಮೇತ ನನ್ನ ಕಡೆ ನೋಡಿಯೇಬಿಟ್ಟಿತು ಮಿಂಚುಳ್ಳಿ! ಪುರ್ರನೇ ಹಾರಿ ದೂರದಲ್ಲಿನ ಮತ್ತೊಂದು ಟೊಂಗೆಯ ಮೇಲೆ ಕುಳಿತು, ಹಿಡಿದ ಮೀನನ್ನು ಕೊಕ್ಕಿನ ಸಹಾಯದಿಂದ, ಕುಳಿತ ಟೊಂಗೆಯ ಮೇಲೆ ಅಪ್ಪಳಿಸಿ, ಅಪ್ಪಳಿಸಿ ಮೀನನ್ನು ಕೊಂದು ಮೀನಿನ ತಲೆಯ ಭಾಗವನ್ನು ಬಾಯಿಯ ಕಡೆಗೆ ತಿರುಗಿಸಿಕೊಂಡು, ಕೊಕ್ಕಿನಿಂದ ಮೀನನ್ನು ಮೇಲೆ ಟಾಸ್ ಮಾಡಿ ಬಾಯಿ ಅಗಲಿಸಿ ಮೀನನ್ನು ನೇರ ಬಾಯಿಗೇ ಇಳಿಸಿಕೊಂಡು ನುಂಗಿಬಿಡ್ತು. ನಾನು ಈ ಬಾರಿ ನಿರಾಶನಾಗಲಿಲ್ಲ, ಬದಲಾಗಿ ಖುಷಿಯಾದೆ. ಈ ಮಿಂಚುಳ್ಳಿಯನ್ನು ನಾನು ಒಲಿಸಿಕೊಳ್ಳುವುದು ಕಷ್ಟವೇನಲ್ಲ ಅಂದುಕೊಳ್ಳುತ್ತಾ, ಹತ್ತಿರದಿಂದ ಮಿಂಚುಳ್ಳಿಯ ಸೊಬಗನ್ನು ಅದರ ಬೇಟೆಯ ವೈಖರಿಯನ್ನು ನೋಡಿದ ಖುಷಿಯಲ್ಲಿ ಮನೆಗೆ ತೆರಳಿದೆ. ಮಾರನೆಯ ದಿನ ಮತ್ತೆ ಬೆಳಿಗ್ಗೆಯೇ ಬೇಗ ತೊರೆಯ ದಡದ ಮೇಲೆ ಹೋಗಿ ಮಿಂಚುಳ್ಳಿ ಕೂರುವ ಸ್ಥಳದ ಪಕ್ಕದಲ್ಲಿಯೇ 3 ಮೀಟರ್ ದೂರದಲ್ಲಿ ಒಂದು ಸಣ್ಣ ಮರದ ಬುಡದಲ್ಲಿ ಇದ್ದ ಪೊದೆಯಂಥ ಗಿಡದ ನಡುವೆ ಹಸಿರು ಬಣ್ಣದ ಬಟ್ಟೆ ಧರಿಸಿ ಕ್ಯಾಮರಾವನ್ನು ಚಿತ್ರ ತೆಗೆಯುವ ಪೊಸಿಷನ್‌ಗೆ ರೆಡಿ ಮಾಡಿಕೊಂಡು ಕಾಯುತ್ತಾ ಕುಳಿತೆ. ಈ ಬಾರಿ ಹೆಚ್ಚು ಕಾಯಿಸದೇ ಟ್ಚೀಟ್ಚೀ॒… ಎನ್ನುವ ಸದ್ದಿನೊಂದಿಗೆ ಹಾರುತ್ತಾ ಬಂದ ಮಿಂಚುಳ್ಳಿ ನಾನಿದ್ದ ನೇರಕ್ಕೆ ಎದುರಿಗಿದ್ದ ಸಣ್ಣ ಗಿಡದ ಮೇಲೆ ಕುಳಿತುಕೊಳ್ತು. ನಾನು ಕ್ಯಾಮರಾ ರೆಡಿ ಮಾಡಿಕೊಂಡೆ, ಅದಕ್ಕೆ ನನ್ನ ಇರುವಿಕೆ ಅರಿವಾಯ್ತು, ಪುರ್ರನೇ ಹಾರಿಹೋಯ್ತು. ಮತ್ತೆ ಬರಲೇ ಇಲ್ಲ. ಅವತ್ತು ಮಾತ್ರ ಗಂಟೆಗಟ್ಟಲೆ ಕಾದು ಕುಳಿತರೂ ಹಕ್ಕಿ ಮತ್ತೆ ಬರಲಿಲ್ಲ. ನಾನು ಮನೆಗೆ ಹೋದವನೇ, ಹೆಂಡತಿಯ ಬಳಿ ಇದೆಲ್ಲಾ ಕಥೆ ವಿವರಿಸಿ ಹೇಳಿದೆ. ಮಾರನೆಯ ದಿನ ಖಂಡಿತಾ ಚಂದದ ಚಿತ್ರ ತೆಗೆಯುವದಾಗಿ ಹೇಳಿದೆ. ಆಗ ಆಕೆ, ಪಾಪ ಆ ಹಕ್ಕಿ, ನಿಮ್ಮಿಂದ ಅದಕ್ಕೆ ಡಿಸ್ಟರ್ಬ್ ಆಗಿರುತ್ತೆ, ಸೋ ಎರಡ್ ದಿನ ಬಿಟ್ಟು ಹೋಗೆಂದು ಸಲಹೆಯಿತ್ತಳು. ನಾನು ಹಾಗೆಯೇ ತೀರ್ಮಾನಿಸಿ, ಎರಡು ದಿನ ಬಿಟ್ಟು ಅದೇ ಜಾಗಕ್ಕೆ ಹೋಗಿ ಕುಳಿತೆ. ಈ ಬಾರಿಯೂ ಮಿಂಚುಳ್ಳಿ ಬಂದು ನೇರವಾಗಿ ಅದೇ ಗಿಡದ ಮೇಲೆ ಕುಳಿತುಕೊಂಡು ಸುತ್ತಾಮುತ್ತಾ ಒಮ್ಮೆ ನೋಡಿತು ಮತ್ತು ನನ್ನನ್ನು ಕಂಡಿತು ಕೂಡಾ! ಮೊದಲನೇ ಬಾರಿ ನಾನು ಹಾಗೂ ಮಿಂಚುಳ್ಳಿ ಪರಸ್ಪರ ಕಣ್ಣು ಮಿಲಾಯಿಸಿಕೊಂಡೆವು. ನಾನು ಚೂರೂ ಅಲುಗಾಡದೇ ಕುಳಿತೆ. ಹಕ್ಕಿ ಮಾತ್ರ ಕೆಲವು ಗಳಿಗೆಗಳ ಕಾಲ ನನ್ನನ್ನೇ ದುರುಗುಟ್ಟಿ ನೋಡುತ್ತಾ ಕುಳಿತು, ನಂತರ ಅದರ ಪಾಡಿಗೆ ಅದು ನೀರಿನೆಡೆಗೆ ದೃಷ್ಟಿ ನೆಟ್ಟು ಬೇಟೆಗೆ ಕಾಯತೊಡಗಿತು.

ಆಗ ನಾನು ನಿಧಾನವಾಗಿ ಕ್ಯಾಮರಾ ರೆಡಿ ಮಾಡಿಕೊಂಡು, ಝೂಮ್ ಮಾಡಿ, ಫೋಕಸ್ ಮಾಡಿ ಕ್ಲಿಕ್ಕಿಸಿದೆ. ಡಿಸ್‌ಪ್ಲೇನಲ್ಲಿ ನೋಡಿದೆ. ಆಹಾ ಎಂಥ ಚಂದ! ಶಾರ್ಪ್ ಇದೆ ಅನ್ನಿಸ್ತು. ಮತ್ತೆರಡು ಕ್ಲಿಕ್ಕಿಸಿದೆ, ಬೇರೆ ಬೇರೆ ಸೆಟ್ಟಿಂಗ್ಸ್‌ನಲ್ಲಿ ತೆಗೆದೆ. ಹಕ್ಕಿ ಮಾತ್ರ ಯಾವುದೇ ಆತಂಕಕ್ಕೊಳಗಾಗದೇ ಆರಾಮಾಗಿ ಕುಳಿತು ಬೇಟೆಗೆ ಕಾಯತೊಡಗಿತು. ನಾನು ಕುಳಿತಲ್ಲಿಂದಲೇ ಮೆಲ್ಲನೆ ಎರಡು ಹೆಜ್ಜೆ ಮುಂದೆ ಇಟ್ಟು ಮತ್ತಷ್ಟು ಹತ್ತಿರ ಹೋದೆ. ಮತ್ತೊಮ್ಮೆ ಕಣ್ಣು ಮಿಲಾಯಿಸಿ ಮತ್ತೆರಡು ಚಿತ್ರ ತೆಗೆದೆ. ಅಷ್ಟರಲ್ಲಿ ನೀರಿನಲ್ಲಿ ಬೇಟೆ ಕಂಡ ಮಿಂಚುಳ್ಳಿ ಚಂಗನೆ ನೀರಿಗೆ ನೆಗೆದು ಮೀನನ್ನು ಹಿಡಿದು ಕೊಕ್ಕಿನಲ್ಲಿ ಕಚ್ಚಿಕೊಂಡು ಪುರ್ರನೇ ಹಾರಿ ಮತ್ತೊಂದು ಕಡೆ ಹೋಗಿ ಕುಳಿತು ಮೀನನ್ನು ಕೊಕ್ಕಿನಿಂದ ಅಪ್ಪಳಿಸಲು ಶುರು ಮಾಡಿತು. ನಾನು ಮಾತ್ರ ಏನೋ ಸಾಧನೆ ಮಾಡಿದವನಂತೆ, ಸ್ಪರ್ಧೆಯಲ್ಲಿ ಮೊದಲನೇ ಬಹುಮಾನ ಪಡೆದವನಂತೆ ಖುಷಿಯಲ್ಲಿ ಮನೆ ಕಡೆ ಹೊರಟೆ. ತೊರೆಯ ಬದಿಯಲ್ಲಿ ನಡೆಯುತ್ತಿದ್ದವನಿಗೆ, ಮಿಂಚುಳ್ಳಿ ಮೀನನ್ನು ಅಪ್ಪಳಿಸುವ ಸದ್ದು ಅಸ್ಪಷ್ಟವಾಗಿ ಕೇಳುತ್ತಿತ್ತು.

ವಿನೋದ್ ಕುಮಾರ್ ವಿ ಕೆ

ವಿನೋದ್ ಕುಮಾರ್ ವಿ ಕೆ
ವಿನೋದ್ ಹುಟ್ಟಿದ್ದು ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ. 2011ರಿಂದ ಛಾಯಾಗ್ರಹಣದಲ್ಲಿ ಆಸಕ್ತಿ. ಹಕ್ಕಿ, ಚಿಟ್ಟೆ, ಕೀಟಗಳಿಂದ ಪ್ರಾರಂಭವಾಗಿ ಟ್ರೆಕ್ಕಿಂಗ್ ಹವ್ಯಾಸವಾಗಿ ಬೆಳೆದಿದೆ. ಅರಣ್ಯ ಇಲಾಖೆಯಲ್ಲಿ ಕಚೇರಿ ಸಹಾಯಕನಾಗಿ ವೃತ್ತಿ. ಸದ್ಯಕ್ಕೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ವಾಸವಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗೋಮಾಂಸ ಸಾಗಣೆ ಆರೋಪದ ಮೇಲೆ ವಾಹನ ಮುಟ್ಟುಗೋಲು: ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಗೋಮಾಂಸ ಸಾಗಣೆ ಮಾಡುತ್ತಿದ್ದಾರೆ ಎಂದು ಕೇವಲ ಅನುಮಾನದ ಮೇಲೆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದು ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಅಂತಹ ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ವೈಜ್ಞಾನಿಕ ದೃಢೀಕರಣ ಅಗತ್ಯ...

ಎಕ್ಸಿಟ್‌ ಪೋಲ್ಸ್‌ಗಳು ‘ಹಣ-ಒತ್ತಡ’ದಿಂದ ಕೂಡಿವೆ; ಟಿಎಂಸಿ 226 ಸ್ಥಾನಗಳನ್ನು ಮೀರಲಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನದ ನಂತರ ಇತ್ತೀಚಿನ ಚುನಾವಣೋತ್ತರ ಸಮೀಕ್ಷೆಗಳ ವಿಶ್ವಾಸಾರ್ಹತೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಲವಾಗಿ ತಳ್ಳಿಹಾಕಿದ್ದಾರೆ. ಅವರ ಪಕ್ಷವಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) 294 ಸದಸ್ಯರ ವಿಧಾನಸಭೆಯಲ್ಲಿ 226...

ಗುಜರಾತ್‌| ರಾಮ ಮಂದಿರ ಕಾರ್ಯಕ್ರಮದಲ್ಲಿ ದಲಿತರಿಗೆ ಪ್ರತ್ಯೇಕ ಊಟದ ವ್ಯವಸ್ಥೆ; ಅಸ್ಪೃಶ್ಯತೆ ಆಚರಣೆ ಆರೋಪ

ಗುಜರಾತ್‌ನ ಜುನಾಗಢ್ ಜಿಲ್ಲೆಯಲ್ಲಿ ಜಾತಿ ತಾರತಮ್ಯದ ಆರೋಪ ಹೊರಿಸಲಾಗಿದ್ದು, ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ದೇವಾಲಯದ ಆಯೋಜಕರು ಅಸ್ಪೃಶ್ಯತೆ ಆಚರಿಸುತ್ತಿದ್ದಾರೆ ಎಂದು ದಲಿತ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ. ಭುಟ್ಡಿ ಗ್ರಾಮದ ನಿವಾಸಿ 25 ವರ್ಷದ ಅಜಯ್...

ಕೋಗಿಲು ಬಡಾವಣೆ ಮನೆಗಳ ನೆಲಸಮ: ಹದಿನೈದು ದಿನಗಳೊಳಗೆ ಪುನರ್ವಸತಿ ಕಲ್ಪಿಸದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ

ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಪ್ರದೇಶದ ಕೋಗಿಲು ಲೇಔಟ್‌ನ ಫಕೀರ್ ಕಾಲೋನಿ ಮತ್ತು ಮಹಾನಾಯಕ ಅಂಬೇಡ್ಕರ್ ನಗರ (ವಾಸಿಂ ಲೇಔಟ್‌) ಪ್ರದೇಶದ ಬಡ ನಿವಾಸಿಗಳ ಮನೆಗಳನ್ನು 2025 ಡಿಸೆಂಬರ್ 20ರಂದು ಬೆಳಿಗ್ಗೆ ಸುಮಾರು...

ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟ 95.20 ರೂ.ಗೆ ಕುಸಿತ ಕಂಡ ಭಾರತೀಯ ರೂಪಾಯಿ ಮೌಲ್ಯ 

ನವದೆಹಲಿ: ಏಪ್ರಿಲ್ 30ರಂದು ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 95.07 ಕ್ಕೆ ಕುಸಿದಿದೆ. ಕರೆನ್ಸಿ 0.4% ಕುಸಿತದೊಂದಿಗೆ 95.2325 ಕ್ಕೆ ಇಳಿದಿದೆ. ಇದು ಮಾರ್ಚ್...

ತಮಿಳುನಾಡು| ದಲಿತ ಯುವಕನ ಶವ ಪತ್ತೆ; ‘ಜಾತಿ ಕಾರಣಕ್ಕೆ ಹತ್ಯೆಯಾಗಿದೆ’ ಎಂದು ಕುಟುಂಬದ ಆರೋಪ

ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯ ಕ್ವಾರಿ ಕೆರೆಯ ಬಳಿ 20 ವರ್ಷದ ದಲಿತ ಯುವಕನ ಶವ ಪತ್ತೆಯಾಗಿದ್ದು, ಹಿಂದುಳಿದ ವರ್ಗದ ಯುವತಿಯೊಂದಿಗಿನ ಸಂಬಂಧದಿಂದಾಗಿ ಆತನನ್ನು ಕೊಲ್ಲಲಾಗಿದೆ ಎಂದು ಆತನ ಕುಟುಂಬ ಆರೋಪಿಸಿದೆ. ಆದರೆ, ಈ...

‘ಬಾಲ ಕಾರ್ಮಿಕ’ ಶಂಕೆಯ ಮೇಲೆ 155 ಮುಸ್ಲಿಂ ವಿದ್ಯಾರ್ಥಿಗಳ ಬಂಧನ: ಧಾರ್ಮಿಕ ಗುರುತಿನ ಕಾರಣಕ್ಕೆ ಬಂಧಿಸಿರುವುದಾಗಿ ಪೋಷಕರ ಆರೋಪ

ಮಧ್ಯಪ್ರದೇಶದ ಕಟ್ನಿಯಲ್ಲಿ ಸರ್ಕಾರಿ ರೈಲ್ವೆ ಪೊಲೀಸರು (GRP) 155 ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಎಂಟು ಶಿಕ್ಷಕರನ್ನು "ಬಾಲ ಕಾರ್ಮಿಕ" ಶಂಕೆಯ ಮೇಲೆ ಬಂಧಿಸಿದ ನಂತರ, ಪೋಷಕರು ಮುಸ್ಲಿಂ ವಿರೋಧಿ ಪಕ್ಷಪಾತವನ್ನು ಹೊಂದಿದ್ದಾರೆಂದು ಆರೋಪಿಸಿದ್ದಾರೆ....

ಜನಿವಾರದ ಹಿಂದೆ ಬಿದ್ದಿರುವ ವಿರೋಧ ಪಕ್ಷ ಮತ್ತು ಮಾಧ್ಯಮಗಳು

ಏಪ್ರಿಲ್ 23, 2026 ರಂದು ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ವೇಳೆ ಬೆಂಗಳೂರಿನ ಕೋರಮಂಗಲದಲ್ಲಿರುವ ಕೃಪಾನಿಧಿ ಪಿಯು ಕಾಲೇಜಿನಲ್ಲಿ ಐವರು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಘಟನೆ ರಾಜಕೀಯ...

ಒಡಿಶಾ| ಸಾವಿನ ದಾಖಲೆ ಕೇಳಿದ ಬ್ಯಾಂಕ್‌ ಸಿಬ್ಬಂದಿ; ಸಮಾದಿ ಅಗೆದು ಸಹೋದರಿಯ ಅಸ್ಥಿಪಂಜರ ತಂದ ಬುಡಕಟ್ಟು ವ್ಯಕ್ತಿ

ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ, ಬುಡಕಟ್ಟು ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಅಸ್ಥಿಪಂಜರವನ್ನು ಅಗೆದು ಗ್ರಾಮೀಣ ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿದ್ದಾನೆ. ಆಕೆಯ ಸಾವನ್ನು ಸಾಬೀತುಪಡಿಸುವ ಮೂಲಕ ಆಕೆಯ ಖಾತೆಯಲ್ಲಿ ಜಮಾ ಮಾಡಿದ ಹಣವನ್ನು ಪಡೆಯಲು...

ಜಾತಿ ಕಿರುಕುಳಕ್ಕೆ ದಲಿತ ವಿದ್ಯಾರ್ಥಿ ಸಾವು ಪ್ರಕರಣ: ಇಂದು ಸಂಜೆ 6 ರವರೆಗೆ ಕೇರಳ ಬಂದ್

ಜಾತಿ ಆಧಾರಿತ ಕಿರುಕುಳದಿಂದ ಮನನೊಂದಿದ್ದ ಕೇರಳದ ಅಂಚರಕಂಡಿಯ ಕಣ್ಣೂರು ದಂತ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿ ಆರ್.ಎಲ್. ನಿತಿನ್ ರಾಜ್ ಆತ್ಮಹತ್ಯೆಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ...