Homeಮುಖಪುಟಬೆಳ್ಳಿಚುಕ್ಕಿ: ಕಾಲ್ಪನಿಕ ಗಡಿಯಾರದ ಮೂಲಕ ಆಕಾಶಕಾಯಗಳನ್ನು ಗುರುತಿಸುವ ಬಗೆ!

ಬೆಳ್ಳಿಚುಕ್ಕಿ: ಕಾಲ್ಪನಿಕ ಗಡಿಯಾರದ ಮೂಲಕ ಆಕಾಶಕಾಯಗಳನ್ನು ಗುರುತಿಸುವ ಬಗೆ!

- Advertisement -
- Advertisement -

ಚಳಿಗಾಲದ ಶುಭ್ರ ಆಕಾಶದಲ್ಲಿ ಆಕಾಶ ವೀಕ್ಷಣೆ ಮಾರ್ಗದರ್ಶಿಯ ಸಹಾಯದಿಂದ, ಸೌರ ಮಂಡಲದ ಗ್ರಹಗಳು, ಚಂದ್ರನ ಬಿಂಬಾವಸ್ಥೆಗಳು, ನಕ್ಷತ್ರ ಪುಂಜಗಳು, ನಿಹಾರಿಕೆ ಮತ್ತು ನಕ್ಷತ್ರಗಳ ಗೊಂಚಲುಗಳನ್ನು ನೋಡಿದ ಸವಿ ಇನ್ನೂ ಉಳಿದಿರುವಂತೆಯೇ, ಆಕಾಶ ವೀಕ್ಷಣೆಯ ಆಸಕ್ತಿಗಳನ್ನು ಹಾಗೂ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಇದು ಸಕಾಲ.

ಆಕಾಶ ವೀಕ್ಷಣೆಯ ಹವ್ಯಾಸ ಉನ್ನತಿಯಾದಂತೆ, ಆಗಸದಲ್ಲಿ ಕಾಣುವ ಕಾಯಗಳನ್ನು ಸುಲಭವಾಗಿ ವೀಕ್ಷಿಸಲು ಮತ್ತು ಇತರರಿಗೆ ಸುಲಭವಾಗಿ ತಿಳಿಸಲು ಅನುವಾಗುವಂತೆ ಕೆಲವು ಕಾಲ್ಪನಿಕ ಉಪಕರಣಗಳನ್ನು/ ಮಾರ್ಗಸೂಚಿಯನ್ನು ಖಗೋಳ ವಿಜ್ಞಾನಾಸಕ್ತರು ಜಗತ್ತಿನಾದ್ಯಂತ ಬಳಸುತ್ತಾರೆ. ಅಂತಹ ಒಂದು ಕಾಲ್ಪನಿಕ ಉಪಕರಣದ/ಮಾರ್ಗಸೂಚಿ ಸಹಾಯದಿಂದ ಆಕಾಶ ವೀಕ್ಷಣೆ ಮಾಡುವುದು ಹೇಗೆ ಎಂಬುದನ್ನು ಈ ಸಂಚಿಕೆಯಲ್ಲಿ ತಿಳಿಯೋಣ. ನೆನಪಿರಲಿ, ಇದು ಕಾಲ್ಪನಿಕವಾಗಿ ನಿಮ್ಮ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುವ ಉಪಕರಣ! ಬೌತಿಕವಾಗಿ ಖರೀದಿ ಮಾಡುವುದಲ್ಲ.

ಅಂದಹಾಗೆ, ಯಾವುದಪ್ಪಾ ಈ ಉಪಕರಣ ಅಂದರೆ, ದಿನ ನಾವು-ನೀವು ಸಮಯ ನೋಡಲು ಬಳಸುವ ಗಡಿಯಾರವೇ ಆ ಉಪಕರಣ! ಹೌದು ಗಡಿಯಾರವನ್ನು ಆಗಸದಲ್ಲಿ ಕಲ್ಪಿಸಿಕೊಂಡು ಆಕಾಶ ವೀಕ್ಷಣೆ ಮಾಡುವುದು ಹವ್ಯಾಸಿ ಆಕಾಶ ವೀಕ್ಷಕರ ತಂತ್ರಗಾರಿಕೆ. ಆಕಾಶ ವೀಕ್ಷಣೆಯ ಸಂದರ್ಭದಲ್ಲಿ ಅತ್ಯಂತ ಸುಲಭವಾಗಿ ಯಾವ ದಿಕ್ಕಿನಲ್ಲಿ, ಯಾವ ನಕ್ಷತ್ರ ಪುಂಜವಿದೆ, ಗ್ರಹವಿದೆ ಮತ್ತು ನಿಹಾರಿಕೆಗಳಿವೆ ಎಂಬುದನ್ನು ಇತರರಿಗೂ ಸೂಚಿಸಲು ಈ ತಂತ್ರಗಾರಿಕೆಯನ್ನು ಆಕಾಶ ವೀಕ್ಷಕರು ಬಳಸುತ್ತಾರೆ.

ಚಿತ್ರ-1

ಈಗ ಚಿತ್ರ (1)ನ್ನು ಗಮನಿಸಿ, ಈ ಚಿತ್ರದಲ್ಲಿರುವ ಪ್ರಸಿದ್ಧ ನಕ್ಷತ್ರ ಪುಂಜವನ್ನು ನೀವು ಈಗಾಗಲೇ ಆಗಸದಲ್ಲಿ ಕಂಡಿದ್ದೀರಿ ಅಲ್ಲವೆ? ಹೌದು ಆ ನಕ್ಷತ್ರ ಪುಂಜ ಒರಿಯಾನ್ ನಕ್ಷತ್ರ ಪುಂಜ. ಈ ತಿಂಗಳ ಯಾವುದೇ ದಿನರಾತ್ರಿ 7 ಗಂಟೆಯಿಂದ 7.30 ಗಂಟೆಯ ಸಮಯದಲ್ಲಿ, ಪೂರ್ವಕ್ಕೆ ಮುಖಮಾಡಿ ನೆತ್ತಿಯಿಂದ ಪೂರ್ವ ದಿಕ್ಕಿಗೆ ಕಣ್ಣಾಡಿಸಿದರೆ, ಈ ಚಿತ್ರದಲ್ಲಿರುವ ಒರಿಯಾನ್ ಮತ್ತು ಎಲ್ಲಾ ನಕ್ಷತ್ರಗಳು ಹಾಗೂ ನಕ್ಷತ್ರ ಪುಂಜಗಳನ್ನು ಕಾಣಬಹುದು. ಇಲ್ಲಿರುವ ಎಲ್ಲಾ ಚಿತ್ರಗಳಲ್ಲು ನಕ್ಷತ್ರ ಪುಂಜಗಳನ್ನು ಗುರುತಿಸಲು ಕಾಲ್ಪನಿಕ ರೇಖೆಗಳನ್ನು ತಂತ್ರಾಂಶದಿಂದ ಸೃಜಿಸಲಾಗಿದೆ.

ಈಗ ನಾವು ನಮ್ಮ ಗಡಿಯಾರದ ತಂತ್ರಗಾರಿಕೆಗೆ ಬರೋಣ. ಚಿತ್ರ (2)ರಲ್ಲಿ ಒರಿಯಾನ್ ನಕ್ಷತ್ರ ಪುಂಜದ ಬೀಟಲ್‌ಜೂಸ್/ಬಿಟಲ್‌ಗೀಸ್ ನಕ್ಷತ್ರವನ್ನು ಕೇಂದ್ರವಾಗಿಟ್ಟುಕೊಂಡು ಒಂದು ಕಾಲ್ಪನಿಕ ಗಡಿಯಾರವನ್ನು ಊಹಿಸಿಕೊಳ್ಳಬಹುದಾಗಿದೆ. ಈ ಕಾಲ್ಪನಿಕ ಗಡಿಯಾರದಲ್ಲಿನ ಸಂಖ್ಯೆ 6 ಪೂರ್ವ ದಿಕ್ಕಿಗಿದೆ. ಅಂದರೆ, ನೀವು ಪೂರ್ವ ದಿಕ್ಕಿಗೆ ಮುಖ ಮಾಡಿ ಒರಿಯಾನ್ ನಕ್ಷತ್ರ ಪುಂಜವನ್ನು ನೋಡಿ, ಅದರ ನಕ್ಷತ್ರ ಬಿಟಲ್‌ಗೀಸ್‌ಅನ್ನು ನೋಡಿ, ಗಡಿಯಾರದ ಸಂಖ್ಯೆ 06, ಪೂರ್ವ ದಿಕ್ಕಿಗೆ ಬರುವಂತೆ ಕಾಲ್ಪನಿಕವಾಗಿ ಗಡಿಯಾರವನ್ನು ಊಹಿಸಿಕೊಳ್ಳಬೇಕು ಎಂದರ್ಥ. ಹಾಗೆ ಊಹಿಸಿಕೊಂಡಾಗ, ಕಾಲ್ಪನಿಕ ಗಡಿಯಾರದ ಸಂಖ್ಯೆ 09 ಉತ್ತರ ದಿಕ್ಕನ್ನು, ಸಂಖ್ಯೆ 12 ಪಶ್ಚಿಮ ದಿಕ್ಕನ್ನು ಮತ್ತು ಸಂಖ್ಯೆ 03 ದಕ್ಷಿಣ ದಿಕ್ಕನ್ನು ಸೂಚಿಸುತ್ತಿರುತ್ತದೆ. ಇದು ಮೊದಲನೇ ಹಂತ.

ಚಿತ್ರ-2

ಇನ್ನು ಎರಡನೇ ಹಂತಕ್ಕೆ ಬರೋಣ. ಚಿತ್ರ (2)ರಲ್ಲಿ ಊಹಿಸಿಕೊಂಡಿರುವ ಗಡಿಯಾರ ಸಮಯ ತಿಳಿಸುವ ಗಡಿಯಾರ ಅಲ್ಲ, ಬದಲಾಗಿ ದಿಕ್ಕುಗಳನ್ನು ಸುಲಭವಾಗಿ ಗುರುತಿಸುವುದಕ್ಕೆ ಕಲ್ಪಿಸಿಕೊಂಡಿರುವ ಗಡಿಯಾರ. ಈಗ ಈ ಗಡಿಯಾರದಲ್ಲಿ ಗಂಟೆಯನ್ನು ಸೂಚಿಸುವ ಮುಳ್ಳನ್ನು ಮಾತ್ರ ಊಹಿಸಿಕೊಳ್ಳೋಣ.

ಈಗ ಒಂದು ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ -ಇಲ್ಲಿ ಒಬ್ಬ ಹವ್ಯಾಸಿ ಆಕಾಶ ವೀಕ್ಷಕ, ಹಲವರಿಗೆ ಮಾರ್ಗದರ್ಶನ ನೀಡುತ್ತಿದ್ದಾನೆ..

ಹವ್ಯಾಸಿ ಆಕಾಶ ವೀಕ್ಷಕ: ಎಲ್ಲರೂ ಪೂರ್ವ ದಿಕ್ಕಿಗೆ ತಿರುಗಿ ಒರಿಯಾನ್ ನಕ್ಷತ್ರ ಪುಂಜ ನೋಡಿ, ಒರಿಯಾನ್‌ನ ಬಿಟಲ್‌ಗೀಸ್ ನಕ್ಷತ್ರ ಕೇಂದ್ರದಲ್ಲಿರುವಂತೆ ಒಂದು ಗಡಿಯಾರ ಊಹಿಸಿಕೊಂಡು, ಅದರ 2 ಗಂಟೆಯ ದಿಕ್ಕಿನಲ್ಲಿ ಒಂದು ಕಾಲ್ಪನಿಕ ರೇಖೆ ಎಳೆಯಿರಿ, ಆ ಕಾಲ್ಪನಿಕ ರೇಖೆ ಒಂದು ನಕ್ಷತ್ರದ ಬಳಿ ಬಂದು ತಲುಪುತ್ತದೆ. ಅದೇ, ರೀಗಲ್ ನಕ್ಷತ್ರ!

ವೀಕ್ಷಕರು: [ಸಹಾಯಕ್ಕೆ ಚಿತ್ರ (3)ನ್ನು ಗಮನಿಸಿ] ಮೊದಲು ಪೂರ್ವ ದಿಕ್ಕಿಗೆ ತಿರುಗುತ್ತಾರೆ. ನಂತರ ಒರಿಯಾನ್ ನಕ್ಷತ್ರ ಪುಂಜವನ್ನು ಗುರುತಿಸಿ ಹವ್ಯಾಸಿ ಆಕಾಶ ವೀಕ್ಷಕ ಹೇಳಿದ್ದನ್ನು ಅನುಸರಿಸಿ ರೀಗಲ್ ನಕ್ಷತ್ರವನ್ನು ವೀಕ್ಷಿಸುತ್ತಾರೆ…

ಚಿತ್ರ-3

ಮೇಲಿನ ಸನ್ನಿವೇಶದಲ್ಲಿ, ಗಡಿಯಾರದ ಗಂಟೆ-ಮುಳ್ಳು ತೋರಿಸುವ ದಿಕ್ಕುಗಳಲ್ಲಿ ಕಾಲ್ಪನಿಕ ರೇಖೆಗಳನ್ನು ಉಹಿಸಿಕೊಂಡು, ಆಗಸದಲ್ಲಿ ಒಂದು ನಕ್ಷತ್ರ ಪುಂಜದಿಂದ ಇನ್ನೊಂದು ನಕ್ಷತ್ರ ಪುಂಜಕ್ಕೆ ನೋಟವನ್ನು ಬದಲಿಸಿ, ಆಕಾಶ ಕಾಯಗಳನ್ನು ವೀಕ್ಷಿಸಬೇಕು. ಇಂತಹ ಆಕಾಶ ವೀಕ್ಷಣೆಗೆ ಯಾವುದೇ ಭೌತಿಕ ಉಪಕರಣಗಳು ಬೇಕಿಲ್ಲಾ. ಅಂತೆಯೇ ಈ ಗಡಿಯಾರವನ್ನು ಬಿಟಲ್‌ಗೀಸ್ ನಂತರ ರೀಗಲ್ ನಕ್ಷತ್ರಕ್ಕೂ ಊಹಿಸಿಕೊಂಡು (ಕೇಂದ್ರವಾಗಿಸಿಕೊಂಡು) ಅಲ್ಲಿಂದ ಮುಂದೆ ತೆರಳಬಹುದು.

ಇದು, ಹವ್ಯಾಸಿ ಖಗೋಳ ವಿಜ್ಞಾನಿಗಳು ಯಾವುದೇ ಅನ್ಯ ಉಪಕರಣಗಳಿಲ್ಲದೆ ಆಕಾಶ ವೀಕ್ಷಣೆಯನ್ನು ಮಾಡಲು ಕಂಡುಕೊಂಡ ಮಾರ್ಗ ಮತ್ತು ಇದು ಸುಲಭವಾಗಿ ಆಕಾಶ ವೀಕ್ಷಣೆ ಕಲಿಸುವ ಮಾರ್ಗ. ಇದೊಂದೇ ನಿಯಮ ಅಥವಾ ಅಧಿಕೃತವಾದ ಆಕಾಶ ವೀಕ್ಷಣೆಯ ಮಾರ್ಗವೆಂದೇನಲ್ಲ. ಆಕಾಶ ವೀಕ್ಷಣೆಯು ಅಭ್ಯಾಸವಾದ ಮೇಲೆ, ಎಲ್ಲರೂ ತಮ್ಮತಮ್ಮ ಸೃಜನಶೀಲತೆಯಿಂದ ಇಂತಹ ಇನ್ನೂ ಹತ್ತು ಹಲವು ಮಾರ್ಗಗಳನ್ನು ಕಂಡುಕೊಳ್ಳಬಹುದು.

ಚಿತ್ರ-4

ಚಿತ್ರ (4): ಗಡಿಯಾರದ 11 ಗಂಟೆಯ ಆಸುಪಾಸಿನ ದಿಕ್ಕಿನಲ್ಲಿ, ಒಂದು ಕಾಲ್ಪನಿಕ ರೇಖೆಯನ್ನು ಉಹಿಸಿಕೊಳ್ಳಿ, ಆ ರೇಖೆಯು ಕಿತ್ತಳೆ ಬಣ್ಣದ ನಕ್ಷತ್ರದ ಬಳಿ ಬರುತ್ತದೆ. ಇದೇ ರೋಹಿಣಿ ನಕ್ಷತ್ರ. ಹಿಂದಿನ ಸಂಚಿಕೆಯ ಲೇಖನದಲ್ಲಿ ರೋಹಿಣಿ ನಕ್ಷತ್ರವನ್ನು ಒರಿಯಾನ್ ನಕ್ಷತ್ರ ಪುಂಜದಿಂದ ಹೇಗೆ ಗುರುತಿಸಿದೆವು ಎಂಬುದನ್ನು ನೆನಪಿಸಿಕೊಳ್ಳಿ. ಕಾಲ್ಪನಿಕ ಗಡಿಯಾರದ ಮೂಲಕ ಗುರುತಿಸುವುದು ಸಲಭವೋ ಅಥವಾ ಹಿಂದಿನ ಸಂಚಿಕೆಯ ಮಾರ್ಗಸೂಚಿ ಸುಲಭವೋ ನೀವೇ ಕಂಡುಕೊಳ್ಳಿ. ರೋಹಿಣಿ ನಕ್ಷತ್ರವು ವೃಷಭ ನಕ್ಷತ್ರ ಪುಂಜದಲ್ಲಿದೆ (ಇದು ರಾಶಿಯೂ ಹೌದು). ಈ ರೋಹಿಣಿ ನಕ್ಷತ್ರ ಸೂರ್ಯನಿಗೆ ಹೋಲಿಸಿದರೆ 44 ಪಟ್ಟು ದೊಡ್ಡದಿದೆ ಹಾಗೂ ಸುಮಾರು 65 ಜ್ಯೋತಿರ್ವರ್ಷಗಳ ದೂರವಿದೆ [1 ಜ್ಯೋತಿರ್ವರ್ಷವೆಂದರೆ 9.5 ಟ್ರಿಲಿಯನ್ (1012) ಕಿಲೋಮೀಟರ್]. ನಮ್ಮ ಸೂರ್ಯ 8 ಜ್ಯೋತಿರ್ವರ್ಷಗಳ ದೂರದಲ್ಲಿದ್ದಾನೆ.

ಚಿತ್ರ-5

ಚಿತ್ರ (5): ಈಗ, ಗಡಿಯಾರದ ಒಂಬತ್ತುವರೆ ಗಂಟೆಯ ದಿಕ್ಕನ್ನು ಉಹಿಸಿಕೊಳ್ಳಿ, ಬಿಟಲ್‌ಗೀಸ್ ನಕ್ಷತ್ರದಿಂದ ನೇರವಾಗಿ ಆ ದಿಕ್ಕು ಮತ್ತೊಂದು ಪ್ರಕಾಶಮಾನವಾದ ನಕ್ಷತ್ರಕ್ಕೆ ಬಡಿಯುತ್ತದೆ. ಇದು ಪೆಲ್ಲಾ ನಕ್ಷತ್ರ. ಆರಿಗಾ ನಕ್ಷತ್ರ ಪುಂಜದ ಅತೀ ಹೆಚ್ಚು ಪ್ರಕಾಶಮಾನವಾದ ನಕ್ಷತ್ರ. ಈ ನಕ್ಷತ್ರವನ್ನು ಬ್ರಹ್ಮ ಹೃದಯ ಎಂದೂಕರೆಯುತ್ತಾರೆ. ಈ ನಕ್ಷತ್ರ 42 ಜ್ಯೋತಿರ್ವರ್ಷಗಳ ದೂರವಿದ್ದು, ಸೂರ್ಯನಿಗಿಂತ 12 ಪಟ್ಟು ದೊಡ್ಡದಿದೆ. ಹಾಗೆಯೇ ಚಿತ್ರ (5)ರಲ್ಲಿ ಗುರುತಿಸಿರುವ ಆರಿಗಾ ನಕ್ಷತ್ರ ಪುಂಜದ ಪೆಂಟಗನ್‌ನಲ್ಲಿರುವ ನಕ್ಷತ್ರಗಳನ್ನು ವೀಕ್ಷಿಸಲು ಪ್ರಯತ್ನಿಸಿ.

ಚಿತ್ರ-6

ಚಿತ್ರ (6): ಇದೇ ರೀತಿ, ಗಡಿಯಾರದ 07.30 ದಿಕ್ಕಿನಲ್ಲಿ ನೋಡಿ, ಈ ದಿಕ್ಕಿನಲ್ಲಿ ಕಾಣುವ ಪ್ರಕಾಶಮಾನವಾದ ನಕ್ಷತ್ರ ಪೊಲಾಕ್ಸ್. ಅದರ ಪಕ್ಕದಲ್ಲಿರುವ ಇನ್ನೊಂದು ಪ್ರಕಾಶಮಾನವಾದ ನಕ್ಷತ್ರ ಕ್ಯಾಸ್ಟರ್ ಎಂದು. ಈ ಕ್ಯಾಸ್ಟ್‌ರ್ ಮತ್ತು ಪೊಲಾಕ್ಸ್ ಮಿಥುನ ನಕ್ಷತ್ರ ಪುಂಜದಲ್ಲಿದೆ. ಮಿಥುನ ನಕ್ಷತ್ರ ಪುಂಜ ರಾಶಿಯು ಹೌದು. ನೀವು ಮಿಥುನ ರಾಶಿಯ ಪುನರ್ವಸು ನಕ್ಷತ್ರ ಎಂದು ಕೇಳಿರಬಹುದು. ಈ ಪುನರ್ವಸು ನಕ್ಷತ್ರವೇ ಪೊಲಾಕ್ಸ್ ನಕ್ಷತ್ರ. ಇದು 33 ಜ್ಯೋತಿರ್ವರ್ಷಗಳ ದೂರವಿದ್ದು, ಸೂರ್ಯನಿಗಿಂತ 8 ಪಟ್ಟು ದೊಡ್ಡದಿದೆ.

ಚಿತ್ರ (7): ಗಡಿಯಾರದ ನಾಲ್ಕು ಗಂಟೆಯ ದಿಕ್ಕು. ಈ ದಿಕ್ಕಿನಲ್ಲಿ ಯಾವ ನಕ್ಷತ್ರ ಇದೆ? ಸಿರಿಯಸ್ ನಕ್ಷತ್ರ. ಈ ಸಿರಿಯಸ್ ನಕ್ಷತ್ರ ಆಕಾಶದ ಅತ್ಯಂತ ಪ್ರಕಾಶಮಾನವಾದ ನಕ್ಷತ್ರ. ಇದನ್ನು ಲುಬ್ದಕ ನಕ್ಷತ್ರ ಎಂದೂ ಕರೆಯುತ್ತಾರೆ. ಇದು ಕ್ಯಾನಿಸ್ ಮೇಜರ್ ಎನ್ನುವ ನಕ್ಷತ್ರ ಪುಂಜದಲ್ಲಿದೆ. ಈ ನಕ್ಷತ್ರದ ವಿಶೇಷವೆಂದರೆ, ಸಿರಿಯಸ್ ಮೂರು ನಕ್ಷತ್ರಗಳುಳ್ಳ ಒಂದು ವ್ಯವಸ್ಥೆ ಎಂದು ಗ್ರಹಿಸಿರುವುದು. ಅಂದರೆ, ಮೂರು ನಕ್ಷತ್ರಗಳು ಒಟ್ಟಾಗಿ ತಿರುಗುತ್ತಿರುವಂತೆ. ಬರಿಗಣ್ಣಿಗೆ ಸಿರಿಯಸ್ ಒಂದೇ ನಕ್ಷತ್ರವಾಗಿ ಕಾಣಿಸಿದರೂ, ದೊಡ್ಡ ದೂರದರ್ಶಕದಲ್ಲಿ ಸಿರಿಯಸ್‌ನ ಇತರೆ ನಕ್ಷತ್ರಗಳನ್ನು ಕಾಣಬಹುದಾಗಿದೆ. ಈ ನಕ್ಷತ್ರ ಸುಮಾರು 8.5 ಜ್ಯೋತಿರ್ವರ್ಷಗಳ ದೂರವಿದ್ದು, ಸೂರ್ಯನಿಗಿಂತಲೂ 1.7 ರಷ್ಟು ದೊಡ್ಡದಾಗಿದೆ.

ಚಿತ್ರ-7

ಇಂತಹ ಕಾಲ್ಪನಿಕ ಗಡಿಯಾರವನ್ನು ಊಹಿಸಿಕೊಂಡು ಆಕಾಶ ವೀಕ್ಷಣೆಯು ಅಭ್ಯಾಸವಾದರೆ, ಆಗಸದ ವಿವಿಧ ಭಾಗಗಳಲ್ಲಿರುವ ನಕ್ಷತ್ರ, ನಕ್ಷತ್ರ ಪುಂಜಗಳು ಮತ್ತು ನಿಹಾರಿಕೆಗಳ ಪರಿಚಯ ಬಹಳ ವೇಗವಾಗಿ ಮತ್ತು ಸುಲಭವಾಗಿ ಲಭಿಸುತ್ತದೆ.

ಈ ಕಾಲ್ಪನಿಕ ಗಡಿಯಾರದ ಆಕಾಶ ವೀಕ್ಷಣೆ ಕ್ರಮವನ್ನು ಇನ್ನಷ್ಟು ಅನ್ವೇಷಿಸಿ. ಏನಾದರೂ ಪ್ರಶ್ನೆಗಳಿದ್ದರೆ ಇಲ್ಲಿ ಹಂಚಿಕೊಳ್ಳಿ- [email protected]


ಇದನ್ನೂ ಓದಿ: ಬೆಳ್ಳಿ ಚುಕ್ಕಿ: ರಾತ್ರಿ ಆಕಾಶದಲ್ಲಿ ಒರಿಯಾನ್ ನಿಹಾರಿಕೆ ಮತ್ತು ಕೃತಿಕಾ ನಕ್ಷತ್ರ ಪುಂಜ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...