ಬಿಜೆಪಿಯ ನಾಯಕ, ರಾಜ್ಯಸಭಾ ಸಂಸದ ಸುಬ್ರಮಣ್ಯನ್ ಸ್ವಾಮಿ ಅವರು ಮುಖ್ಯಮಂತ್ರಿ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ನಾನು ಬೂಟ್ ನೆಕ್ಕುವ ಮೂಲಕ ಮಂತ್ರಿಯಾಗಿಲ್ಲ” ಎಂದು ಅವರು ಗುರುವಾರ ಬೊಮ್ಮಾಯಿ ವಿರುದ್ಧ ಕಿಡಿಕಾರಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿ ಅವರು ಕರ್ನಾಟಕ ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡುತ್ತಾ, ಸ್ವಂತ ಪಕ್ಷ ಮತ್ತು ಅದರ ನಾಯಕತ್ವದ ವಿರುದ್ಧ ಮಾತನಾಡುವುದು ಸುಬ್ರಮಣ್ಯನ್ ಸ್ವಾಮಿಯವರ ಸ್ವಾಭಾವ ಎಂದು ಹೇಳಿದ್ದರು.
“ಸುಬ್ರಮಣ್ಯನ್ ಸ್ವಾಮಿ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿದೆ. ಅವರು ಯಾವ ಪಕ್ಷದಲ್ಲಿದ್ದರೂ ಸ್ವತಂತ್ರ ರಾಜಕಾರಣಿಯಂತೆ ವರ್ತಿಸುತ್ತಾ, ತನ್ನ ಮನಸ್ಸಿಗೆ ಬಂದದ್ದನ್ನು ಹೇಳುತ್ತಾರೆ. ಅವರ ವಿಶ್ಲೇಷಣೆಯ ಆಧಾರದ ಮೇಲೆ, ಅವರು ವಿಷಯಗಳನ್ನು ಹೇಳುತ್ತಲೇ ಇರುತ್ತಾರೆ” ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಗೆ ಪ್ರತಿಕ್ರಿಯೆ ನೀಡುತ್ತಾ ಹೇಳಿದ್ದರು.
ಇದನ್ನೂ ಓದಿ: ರೈಲು ದರ ವಿವಾದ: ಕೇಂದ್ರದ ಮೂರ್ಖತನವೆಂದ ಬಿಜಿಪಿ ಸಂಸದ ಸುಬ್ರಮಣ್ಯ ಸ್ವಾಮಿ
ಸಿದ್ದರಾಮಯ್ಯ ಅವರು ಪೆಟ್ರೋಲ್ ಬೆಲೆ ಏರಿಕೆಯ ಬಗ್ಗೆ ಸುಬ್ರಮಣ್ಯನ್ ಸ್ವಾಮಿ ಸೇರಿದಂತೆ ಬಿಜೆಪಿ ನಾಯಕರು ಸರ್ಕಾರದ ವಿರುದ್ದ ನೀಡಿರುವ ಹೇಳಿಕೆಗಳ ಬಗ್ಗೆ ವಿಧಾನ ಸಭೆಯಲ್ಲಿ ಹಂಚಿಕೊಂಡಿದ್ದರು.
ಈ ಬಗ್ಗೆ ವಾರ್ತಾಭಾರತಿಯ ಇಂಗ್ಲಿಷ್ ಪತ್ರಿಕೆ ವರದಿ ಮಾಡಿದ್ದ ಸುದ್ದಿಯನ್ನು ಹಂಚಿಕೊಂಡಿರುವ ಸುಬ್ರಮಣ್ಯನ್ ಸ್ವಾಮಿ, “ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ ಅವರು ಸುಬ್ರಮಣಿಯನ್ ಸ್ವಾಮಿ ‘ಸ್ವತಂತ್ರ ರಾಜಕಾರಣಿ’ ಎಂದು ಕರೆದಿದ್ದಾರೆ. 3 ಬಾರಿ ಲೋಕಸಭೆ ಸೇರಿದಂತೆ ಆರು ಅವಧಿಯ ಸಂಸದನಾಗಿದ್ದು ಮತ್ತು ಎರಡು ಬಾರಿ ಮಂತ್ರಿಯಾಗಿದ್ದು, ‘ಬೂಟ್ ನೆಕ್ಕುವ ಮೂಲಕ ಅಲ್ಲ’. ಬದಲಾಗಿ ರೋಮಾಂಚಕ ಪ್ರಜಾಪ್ರಭುತ್ವಕ್ಕೆ ಅಗತ್ಯವಾದ ಸತ್ಯವನ್ನು ತಿಳಿಸಿ” ಎಂದು ಹೇಳಿದ್ದಾರೆ.
Karnataka CM Basavaraj Bommai calls Subramanian Swamy a 'freelance politician' —
I did not become six term MP[3 in LS] and twice in Minister rank by boot-licking but by propagating the truth essential for a vibrant democracyhttps://t.co/E1JOlw8a21— Subramanian Swamy (@Swamy39) September 16, 2021
ಸುಬ್ರಮಣ್ಯನ್ ಅವರು ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಎಂ ಬೊಮ್ಮಾಯಿ, “ಸುಬ್ರಮಣ್ಯನ್ ಸ್ವಾಮಿ ಅವರನ್ನು ನಾನು ಸ್ವತಂತ್ರ ಚಿಂತಕ ಎಂದು ಹೇಳಿದ್ದೇನೆ. ನಾನೇನು ಅವರನ್ನು ಟೀಕಿಸಿಲ್ಲ. ನನ್ನ ಹೇಳಿಕೆ ಖಂಡಿಸಿ ಟ್ವೀಟ್ ಮಾಡಿರುವ ಅವರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’’ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಶುಕ್ರವಾರ ಹೇಳಿದ್ದಾರೆ.
ಸುಬ್ರಮಣ್ಯನ್ ಸ್ವಾಮಿ ಅವರು ಫೆಬ್ರವರಿಯಲ್ಲಿ ರಾಮಾಯಣವನ್ನು ಉಲ್ಲೇಖಿಸುವ ಮೂಲಕ ಭಾರತದಲ್ಲಿ ಪೆಟ್ರೋಲ್ ಬೆಲೆಯ ಹೆಚ್ಚಳದ ಬಗ್ಗೆ ಒಕ್ಕೂಟ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಅವರು, “ಪೆಟ್ರೋಲ್ ಬೆಲೆ ರಾಮನ ಭಾರತದಲ್ಲಿ 92, ಸೀತೆಯ ನೇಪಾಳದಲ್ಲಿ 53 ಮತ್ತು ರಾವಣನ ಲಂಕಾದಲ್ಲಿ 51 ರೂ.ಗಳು” ಎಂದು ಹೇಳಿದ್ದರು.
ಇದನ್ನೂ ಓದಿ: ಅಂಧ ಭಕ್ತರೆ, ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಯಾರು ಕಾರಣ? ಮೋದಿ ವಿರುದ್ಧ ಸಿಡಿದ ಸುಬ್ರಮಣಿಯನ್ ಸ್ವಾಮಿ