ಉದ್ಧವ್ ಠಾಕ್ರೆಯವರನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನಾಗಿ ಮಾಡುವ ನನ್ನ ಜವಾಬ್ದಾರಿ ಮುಗಿದಿದೆ. “ನಾನು ಚಾಣಕ್ಯ ಅಲ್ಲ. ನಾನು ಶಿವಸೇನೆ ಯೋಧ” ಎಂದು ಶಿವಸೇನೆಯ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
ಫಲಿತಾಂಶ ಪ್ರಕಟವಾದಾಗಿನಿಂದಲೂ ಅಧಿಕಾರ ರಚನೆಯ ಕುರಿತು ಮಾತುಕತೆಯಲ್ಲಿ ಮುಂಚೂಣಿಯಲ್ಲಿದ್ದ ಸಂಜಯ್ ರಾವತ್ರವರು ಬಿಜೆಪಿ, ಎನ್ಸಿಪಿ ಮತ್ತು ಕಾಂಗ್ರೆಸ್ ಮೂರು ಪಕ್ಷದ ಜೊತೆ ಮಾತುಕತೆ ನಡೆಸಿದ್ದರು.
ಬಿಜೆಪಿಯೊಂದಿಗಿನ ಮಾತುಕತೆಯಲ್ಲಿ ಎರಡೂವರೆ ವರ್ಷ ಶಿವಸೇನೆಗೆ ಮುಖ್ಯಮಂತ್ರಿಯ ಹುದ್ದೆಯ ಪಟ್ಟು ಹಿಡಿದಿದ್ದ ಅವರು ಬಿಜೆಪಿ ಒಪ್ಪದಿದ್ದಾಗ ಅದರ ವಿರುದ್ಧ ತೀವ್ರ ಟೀಕೆ ನಡೆಸಿದ್ದರು.
ನಂತರ ಎನ್ಸಿಪಿಯ ಶರದ್ ಪವಾರ್ ಮತ್ತು ಕಾಂಗ್ರೆಸ್ನ ಪ್ರಫುಲ್ಲ ಪಟೇಲ್ ನಡುವೆ ವ್ಯವಹಾರ ಕುದುರಿಸಿ ಯಶಸ್ವಿಯೂ ಆಗಿದ್ದರು. ಈ ನಡುವೆ ಇವರು ಎದೆನೋವಿನ ಸಮಸ್ಯೆಯಿಂದಾಗಿ ಎರಡು ದಿನ ಆಸ್ಪತ್ರೆಯಲ್ಲಿರಬೇಕಾಗಿತ್ತು.
ಇದನ್ನೂ ಓದಿ: ಮಹಾರಾಷ್ಟ್ರ ವಿಕಾಸ್ ಅಘಾಡಿ ಅಸ್ತಿತ್ವಕ್ಕೆ: ಡಿಸೆಂಬರ್ 1 ರಂದು ಸಿಎಂ ಆಗಿ ಉದ್ಧವ್ ಠಾಕ್ರೆ ಪ್ರಮಾಣ ವಚನ
ಯಾವಾಗ ಅಜಿತ್ ಪವಾರ್ ಜೊತೆಗೂಡಿ ಬಿಜೆಪಿಯ ಫಡ್ನವಿಸ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರೋ ಆಗಿನಿಂದ ಸಂಜಯ್ ರಾವತ್ ಮತ್ತಷ್ಟು ಅಗ್ರೆಸ್ಸಿವ್ ಆಗಿದ್ದರು. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ತಮ್ಮ ಶಾಸಕರನ್ನೊ ಹಿಡಿತದಲ್ಲಿಟ್ಟುಕೊಂಡು ನಾವು 162 ಶಾಸಕರಿದ್ದೇವೆ ಎಂದು ಟ್ವೀಟ್ ಮಾಡುವ ಮೂಲಕ ಗಮನ ಸೆಳೆದಿದ್ದರು.
ನಿನ್ನೆ ಫಡ್ನವಿಸ್ ರಾಜಿನಾಮೆ ನೀಡುವುದರೊಂದಿಗೆ ನಾಟಕೀಯ ಬೆಳವಣಿಗೆ ಕೊನೆಗೊಂಡ ಹಿನ್ನೆಲೆಯಲ್ಲಿ ಅವರು ಸತ್ಯಮೇವ ಜಯತೆ. ಸತ್ಯಕ್ಕೆ ತೊಂದರೆಗೊಳಗಾಗಬಹುದು ಆದರೆ ಸೋಲಲು ಸಾಧ್ಯವಿಲ್ಲ ಎಂದು ಟ್ವಿಟ್ ಮಾಡಿದ್ದರು.
ಈಗ “ನಾನು ಚಾಣಕ್ಯ ಅಲ್ಲ. ನಾನು ಶಿವಸೇನೆ ಯೋಧ”, ನನ್ನ ಜವಾಬ್ದಾರಿ ಮುಗಿದಿದೆ ಎಂದು ಸಂಜಯ್ ರಾವತ್ ಹೇಳಿದದಾರೆ.