ಮೇಘಾಲಯದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅರ್ನೆಸ್ಟ್ ಮಾವ್ರಿ ಅವರು, ”ನಾನು ಗೋಮಾಂಸ ತಿನ್ನುತ್ತೇನೆ. ಆದರೂ ಬಿಜೆಪಿಯಲ್ಲಿದ್ದೇನೆ. ಇದರಿಂದ ಯಾವುದೇ ಸಮಸ್ಯೆಯೂ ಆಗಿಲ್ಲ” ಎಂದು ಹೇಳಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸುದ್ದಿ ಸಂಸ್ಥೆ ಐಎಎನ್ಎಸ್ ನಡೆಸಿರುವ ಸಂದರ್ಶನದಲ್ಲಿ ಅರ್ನೆಸ್ಟ್ ಮಾವ್ರಿ ಮಾತನಾಡಿದ್ದಾರೆ. ರಾಜ್ಯದಲ್ಲಿ ಶೇಕಡ 90ರಷ್ಟು ಕ್ರೈಸ್ತರು ಇದ್ದಾರೆ. ಇಲ್ಲಿ ಗೋಮಾಂಸ ನಿಷೇಧ, ಸಿಎಎ ಮತ್ತು ಇತರ ವಿಷಯಗಳ ಬಗ್ಗೆ ಬಿಜೆಪಿಯ ಕಠಿಣ ನಿಲುವುಗಳನ್ನು ಒಪ್ಪಿಕೊಳ್ಳಲು ಸಿದ್ಧರಾಗಿದ್ದಾರೆ ಎಂದು ನೀವು ನಂಬುತ್ತೀರಾ? ಎಂದು ಪ್ರಶ್ನೆ ಕೇಳಿದ್ದಾರೆ.
ಅದಕ್ಕೆ ಉತ್ತರಿಸಿರುವ ಅರ್ನೆಸ್ಟ್ ಮಾವ್ರಿ, ”ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಒಂಬತ್ತು ವರ್ಷಗಳಾಗಿದ್ದು, ಯಾವುದೇ ಚರ್ಚ್ ದಾಳಿಗಳು ನಡೆದಿರುವುದನ್ನು ನಾವು ನೋಡಿಲ್ಲ. ಗೋಮಾಂಸ ಸೇವನೆಗೂ ಯಾವುದೇ ನಿರ್ಬಂಧವಿಲ್ಲ. ನಾನು ಗೋಮಾಂಸ ತಿನ್ನುತ್ತೇನೆ. ನಾನು ಬಿಜೆಪಿಯಲ್ಲೇ ಇದ್ದೇನೆ. ಇದರಿಂದ ಯಾವುದೇ ಸಮಸ್ಯೆಯಾಗಿದ್ದನ್ನು ನಾನು ಕಂಡಿಲ್ಲ. ಮೇಘಾಲಯದ ಜನತೆ ಈ ಬಾರಿ ಬಿಜೆಪಿ ಜೊತೆಗಿದ್ದಾರೆ. ಅದನ್ನು ಮಾರ್ಚ್ 2ರಂದು ಎಲ್ಲರೂ ನೋಡಲಿದ್ದಾರೆ” ಎಂದು ಹೇಳಿದ್ದಾರೆ.
ಫೆಬ್ರುವರಿ 27ರಂದು ಮೇಘಾಲಯ ವಿಧಾನಸಭೆಯ ಮತದಾನ ನಡೆಯಲಿದೆ. ಮಾರ್ಚ್ 2ರಂದು ಫಲಿತಾಂಶ ಹೊರ ಬೀಳಲಿದೆ. ರಾಜ್ಯದಲ್ಲಿ ಬಿಜೆಪಿಯು ಎನ್ಪಿಪಿಯೊಂದಿಗೆ ಮೈತ್ರಿಯನ್ನು ಕಡಿದುಕೊಂಡಿದ್ದು, 60 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದೆ.
ಇದನ್ನೂ ಓದಿ: ಒಡಿಶಾ: ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಬಿಜೆಪಿ ನಾಯಕನಿಂದ ಹಲ್ಲೆ
ಬಿಜೆಪಿ ನಾಯಕರು ಚುನಾವಣಾ ಪ್ರಣಾಳಿಕೆಗಳಲ್ಲಿ, ಪ್ರಚಾರಗಳಲ್ಲಿ ಗೋಹತ್ಯೆ ನಿಷೇಧ ಮಾಡುವುದಾಗಿ ಹೇಳುತ್ತಿರುತ್ತಾರೆ. ಬಿಜೆಪಿ ಕಾರ್ಯಕರ್ತರಂತೂ ಗೋಹತ್ಯೆ ಮಹಾಪಾಪ ಎಂದು ದೇಶಾದ್ಯಂತ ಗೋಮಾಂಸ ನಿಷೇಧಕ್ಕಾಗಿ ಪ್ರಚಾರ ಮಾಡುತ್ತಾರೆ ಕೆಲವು ಬಿಜೆಪಿ ನಾಯಕರು ತಮ್ಮ ಅನುಕೂಲಕ್ಕೆ ತಕ್ಕಂತೆ ತಾವು ಗೋಮಾಂಸ ತಿನ್ನುವ ಸತ್ಯವನ್ನು ಆಗಾಗ ಹೊರಹಾಕುತ್ತಿರುತ್ತಾರೆ. ಮೇಘಾಲಯದ ಬಿಜೆಪಿ ಅಧ್ಯಕ್ಷ ಇದೀಗ ಚುನಾವಣಾ ಸಂದರ್ಭದಲ್ಲಿ ಗೋಮಾಂಸ ತಿನ್ನುವ ಬಗ್ಗೆ ಮಾತನಾಡಿದ್ದಾರೆ.
ಈ ಹಿಂದೆ ಅಸ್ಸಾಂ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರು ಗೋಮಾಂಸ ಭಾರತದ ‘ರಾಷ್ಟ್ರೀಯ ಆಹಾರ’ ಎಂದು ಹೇಳಿ ಅಚ್ಚರಿ ಮೂಡಿಸಿದ್ದರು. ಅಸ್ಸಾಂನ ಬಿಜೆಪಿ ನಾಯಕ ಬನೇಂದ್ರ ಕುಮಾರ್ ಮುಷಾರಿ ಅವರು, ಮುಸ್ಲಿಂ ಪ್ರಾಬಲ್ಯದ ಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದರು.
”ಗೋಮಾಂಸವನ್ನು ನಿಷೇಧಿಸಲು ಸಾಧ್ಯವಿಲ್ಲ. ಇದು ಭಾರತದ ರಾಷ್ಟ್ರೀಯ ಆಹಾರವಾಗಿದೆ” ಎಂದು ಮುಷಾರ ಹೇಳಿದ್ದರು. ಇವರ ಹೇಳಿಕೆಗೆ ಬಿಜೆಪಿ ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದು, ಅವರ ಮೇಲೆ ಎಫ್ಐಆರ್ ಕೂಡ ದಾಖಲಿಸಲಾಗಿತ್ತು.