ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣವು ಶಿವಸೇನೆಯ ಮೂಲ ಹೆಸರು ಮತ್ತು ಅದರ ಬಿಲ್ಲು-ಬಾಣದ ಚಿಹ್ನೆಯನ್ನು ಪಡೆಯಲು ಭಾರತದ ಚುನಾವಣಾ ಆಯೋಗದೊಂದಿಗೆ ₹ 2,000 ಕೋಟಿ ವ್ಯವಹಾರ ಮಾಡಿಕೊಂಡಿದೆ ಎಂದು ಶಿವಸೇನೆಯ (ಯುಬಿಟಿ) ನಾಯಕ ಸಂಜಯ್ ರಾವತ್ ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಂಜಯ್ ರಾವತ್ ಅವರು, ”ಪಕ್ಷದ ಹೆಸರು ಮತ್ತು ಚಿಹ್ನೆ ಪಡೆಯಲು 2000 ಕೋಟಿ ರೂ.ನಷ್ಟು ಡೀಲ್ ನಡೆದಿದೆ ಎಂಬುದು ನನಗೆ ಖಚಿತವಾಗಿ ತಿಳಿದುಬಂದಿದೆ. ಇದು ಕೇವಲ ಪ್ರಾಥಮಿಕ ಡೇಟಾ ಮತ್ತೆ ಇದು ನೂರಕ್ಕೆ ನೂರರಷ್ಟು ಇದು ಸತ್ಯವಾಗಿದೆ. ಇನ್ನೂ ಇದರ ಬಗ್ಗೆ ಶೀಘ್ರದಲ್ಲೇ ಹಲವು ವಿಷಯಗಳು ಬಹಿರಂಗಗೊಳ್ಳಲಿವೆ. ದೇಶದ ಇತಿಹಾಸದಲ್ಲಿ ಈ ರೀತಿ ಆಗಿಲ್ಲ” ಎಂದು ರಾವತ್ ಟ್ವೀಟ್ ಮಾಡಿದ್ದಾರೆ.
माझी खात्रीची माहिती आहे….
चिन्ह आणि नाव मिळवण्यासाठी आता पर्यंत 2000 कोटींचा सौदा आणि व्यवहार झाले आहेत…
हा प्राथमिक आकडा आहे आणि 100 टक्के सत्य आहे..
बऱ्याच गोष्टी लवकरच उघड होतील..
देशाच्या इतिहासात असे कधीच घडले नव्हते.. pic.twitter.com/3Siiro6O9b— Sanjay Raut (@rautsanjay61) February 19, 2023
”ಈ ವ್ಯವಹಾರ ನಡೆದಿರುವ ಬಗ್ಗೆ ನನ್ನ ಬಳಿ ಸಾಕ್ಷ್ಯಗಳಿವೆ. ಆದಷ್ಟು ಬೇಗ ಅವುಗಳನ್ನು ಬಹಿರಂಗಪಡಿಸುತ್ತೇನೆ. ಸರ್ಕಾರಕ್ಕೆ ಹತ್ತಿರವಿರುವ ಬಿಲ್ಡರ್ವೊಬ್ಬರು ನನ್ನೊಂದಿಗೆ ಎಲ್ಲ ಮಾಹಿತಿಯನ್ನು ಹಂಚಿಕೊಂಡಿದ್ದಾರೆ” ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಭಾರತದ ಚುನಾವಣಾ ಆಯೋಗವು, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣವನ್ನು ನಿಜವಾದ ಶಿವಸೇನೆ ಎಂದು ಗುರುತಿಸಿದ ರೀತಿ ನ್ಯಾಯವಲ್ಲ, ಅದು “ವ್ಯವಹಾರ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
”ಈ ಪ್ರಕರಣದಲ್ಲಿ ಇಲ್ಲಿಯವರೆಗೆ 2,000 ಕೋಟಿ ರೂ. ವ್ಯವಹಾರ ನಡೆದಿದೆ. ಇದು ನನ್ನ ಪ್ರಾಥಮಿಕ ಮಾಹಿತಿಯಾಗಿದೆ. ಅವರ ಪರವಾದ ಈ ನಿರ್ಧಾರವನ್ನು ಖರೀದಿಸಲಾಗಿದೆ” ಎಂದು ರಾಜ್ಯಸಭಾ ಸದಸ್ಯ ರಾವತ್ ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: ಇಂದಿರಾ ಗಾಂಧಿ ಕಾಂಗ್ರೆಸ್ ಚಿಹ್ನೆ ಕಳೆದುಕೊಂಡಿದ್ದನ್ನು ಠಾಕ್ರೆಗೆ ನೆನಪಿಸಿದ ಶರದ್ ಪವಾರ್
”ಶಾಸಕರೊಬ್ಬರನ್ನು ₹ 50 ಕೋಟಿಗೆ, ಸಂಸದರನ್ನು ₹ 100 ಕೋಟಿಗೆ, ನಮ್ಮ ಕೌನ್ಸಿಲರ್ ಮತ್ತು ಶಾಖಾ ಪ್ರಮುಖರನ್ನು ₹ 1 ಕೋಟಿಗೆ ಬಿಡ್ ಮಾಡಿ ಕೊಂಡುಕೊಳ್ಳುವ ಈ ಸರ್ಕಾರ, ನಿರ್ಲಜ್ಜರ ಗುಂಪು ಎಂದು ಕಿಡಿಕಾರಿದ್ದಾರೆ. ಇನ್ನೂ ನೀವೇ ಊಹಿಸಿಕೊಳ್ಳಿ, ಪಕ್ಷದ ಚಿಹ್ನೆ ಮತ್ತು ಪಕ್ಷದ ಹೆಸರನ್ನು ಖರೀದಿಸಲು ಅವರು ಎಷ್ಟು ಬಿಡ್ ಮಾಡಬಹುದೆಂದು.. ನನಗೆ ತಿಳಿದ ಮಾಹಿತಿ ಪ್ರಕಾರ ₹ 2,000 ಕೋಟಿ” ಎಂದು ರಾವತ್ ಆರೋಪಿಸಿದ್ದಾರೆ.
ಏಕನಾಥ್ ಶಿಂಧೆ ಬಣದ ಶಾಸಕ ಸದಾ ಸರ್ವಂಕರ್ ಅವರು, ಈ ಆರೋಪವನ್ನು ತಳ್ಳಿಹಾಕಿದ್ದು, “ಸಂಜಯ್ ರಾವುತ್ ಏನು ಕ್ಯಾಷಿಯರ್?” ಎಂದು ಪ್ರಶ್ನೆ ಮಾಡಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣವೇ ನಿಜವಾದ ಶಿವಸೇನೆ ಎಂದು ಗುರುತಿಸಿ ಬಿಲ್ಲು ಮತ್ತು ಬಾಣದ ಚಿಹ್ನೆಯನ್ನು ಚುನಾವಣಾ ಆಯೋಗವು ನಿಗದಿಪಡಿಸಿದೆ. ಉದ್ದವ್ ಠಾಕ್ರೆ ಬಣಕ್ಕೆ ‘ಶಿವಸೇನಾ (ಉದ್ಧವ್ ಬಾಳಾಸಾಹೇಬ್ ಠಾಕ್ರೆ)’ ಎಂಬ ಹೆಸರು ಮತ್ತು ‘ಪಂಜು’ (ಉರಿಯುತ್ತಿರುವ ಟಾರ್ಚ್) ಚಿಹ್ನೆಯನ್ನು ಚುನಾವಣಾ ಆಯೋಗವು ನೀಡಿದೆ.
ಶುಕ್ರವಾರ ಸಂಜೆ, ಶಿಂಧೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ”ಚುನಾವಣಾ ಆಯೋಗದ ನಿರ್ಧಾರವು ಸತ್ಯ ಮತ್ತು ಜನರ ವಿಜಯವಾಗಿದೆ. ನಾನು ಚುನಾವಣಾ ಆಯೋಗಕ್ಕೆ ಧನ್ಯವಾದ ಹೇಳುತ್ತೇನೆ. ಪ್ರಜಾಪ್ರಭುತ್ವದಲ್ಲಿ ಬಹುಮತ ಪರಿಗಣನೆಯಾಗುತ್ತದೆ” ಎಂದು ತಿಳಿಸಿದ್ದಾರೆ.
”ಚುನಾವಣಾ ಆಯೋಗವು ಅರ್ಹತೆಯ ಆಧಾರದಲ್ಲಿ ನಿರ್ಧಾರ ಕೈಗೊಂಡಿದೆ” ಎಂದು ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಠಾಕ್ರೆ ಬಣದ ಸಂಸದ ಸಂಜಯ್ ರಾವುತ್ ಪ್ರತಿಕ್ರಿಯಿಸಿ, ”ಚುನಾವಣಾ ಆಯೋಗದ ನಿರ್ಧಾರವು ಪ್ರಜಾಪ್ರಭುತ್ವದ ಕೊಲೆಯಾಗಿದೆ ಎಂದು ಬಣ್ಣಿಸಿದ್ದಾರೆ. ನಾವು ಈ ನಿರ್ಧಾರವನ್ನು ಪ್ರಶ್ನಿಸುತ್ತೇವೆ. ಇಂತಹ ನಿರ್ಧಾರವನ್ನು ನಿರೀಕ್ಷಿಸಲಾಗಿತ್ತು. ಇದೆಲ್ಲವೂ ಒತ್ತಡದಲ್ಲಿ ನಡೆದಿದೆ. ನನಗೆ ಚುನಾವಣಾ ಆಯೋಗದ ಮೇಲೆ ನಂಬಿಕೆ ಇಲ್ಲ” ಎಂದು ಟೀಕಿಸಿದ್ದಾರೆ.