ಉತ್ತರ ಪ್ರದೇಶದ ಹತ್ರಾಸ್ನಲ್ಲಿ ದಲಿತ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪೊಲೀಸರಿಗೆ ಪತ್ರ ಬರೆದಿದ್ದು, ಈ ಪ್ರಕರಣದಲ್ಲಿ ತಾನು ಮತ್ತು ಇತರ ಮೂವರನ್ನು ಬಲಿಪಶು ಮಾಡಲಾಗಿದೆ ಎಂದು ಹೇಳಿದ್ದಾನೆ. ಅಲ್ಲದೇ ನಮ್ಮಿಬ್ಬರ ಸ್ನೇಹವನ್ನು ಒಪ್ಪದ ಕಾರಣಕ್ಕೆ ಯುವತಿಯನ್ನು ತಾಯಿ ಮತ್ತು ಸಹೋದರ ಸೇರಿ ಹಿಂಸಿಸಿದ್ದಾರೆ ಎಂದು ಆರೋಪಿಸಿದ್ದಾನೆ.
ಆರೋಪಿಗಳಲ್ಲಿ ಒಬ್ಬನು ಸಂತ್ರಸ್ತೆಯ ಕುಟುಂಬಕ್ಕೆ ಈ ಹಿಂದೆಯೆ ಪರಿಚಯವಿದ್ದುದ್ದಕ್ಕೆ ಪುರಾವೆಗಳಿವೆ ಎಂದು ಪೊಲೀಸರು ಹೇಳಿಕೊಂಡ ಬೆನ್ನಿಗೆ ಈ ಪತ್ರ ಹೊರಬಿದ್ದಿದೆ.
ಇದನ್ನೂ ಓದಿ: ಹತ್ರಾಸ್: ಸಂತ್ರಸ್ತ ಯುವತಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ನಾಯಕ
ತಾನು ಮತ್ತು ಸಂತ್ರಸ್ತೆ ಯುವತಿ “ಸ್ನೇಹಿತರು” ಎಂದು ಹೇಳಿರುವ ಆರೋಪಿ ಸಂದೀಪ್ ಠಾಕೂರ್, “ಭೇಟಿಯ ಹೊರತಾಗಿಯು, ನಾವು ಕೆಲವೊಮ್ಮೆ ಫೋನ್ನಲ್ಲಿ ಮಾತನಾಡಿಕೊಳ್ಳುತ್ತಿದ್ದೆವು” ಎಂದು ಪತ್ರದಲ್ಲಿ ಹೇಳಿದ್ದಾನೆ.
ಆರೋಪಿ ಸಂದೀಪ್ ಠಾಕೂರ್ ಜೊತೆ ಯುವತಿಯ ಸಹೋದರ ಸಂಪರ್ಕ ಹೊಂದಿರುವುದು ಮೊಬೈಲ್ ಕಾಲ್ ದಾಖಲೆಗಳು ಬಹಿರಂಗಪಡಿಸುತ್ತವೆ ಎಂದಿರುವ ಯುಪಿ ಪೊಲೀಸರು, ಕಳೆದ ವರ್ಷ ಅಕ್ಟೋಬರ್ನಿಂದ ಮಾರ್ಚ್ವರೆಗೆ ಯುವತಿಯ ಸಹೋದರ ಮತ್ತು ಸಂದೀಪ್ ಠಾಕೂರ್ ನಡುವೆ ಸುಮಾರು 104 ಕರೆಗಳನ್ನು ಮಾಡಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಹತ್ರಾಸ್: ಘಟನೆಯನ್ನು ’ಅಸಾಧಾರಣ ಮತ್ತು ಆಘಾತಕಾರಿ’ ಎಂದು ಕರೆದ ಸುಪ್ರೀಂ
“ಇದರ ನಂತರ ನಾವಿಬ್ಬರು ಸ್ನೇಹ ಹೊಂದಿದ್ದಕ್ಕಾಗಿ ಯುವತಿಯ ತಾಯಿ ಮತ್ತು ಸಹೋದರ ಯುವತಿಯನ್ನು ಕ್ರೂರವಾಗಿ ಥಳಿಸಿ ಗಾಯಗೊಳಿಸಿದ್ದಾರೆ ಎಂದು ಗ್ರಾಮಸ್ಥರ ಮೂಲಕ ತಿಳಿದುಕೊಂಡೆ. ನಾನು ಯುವತಿಯನ್ನು ಎಂದಿಗೂ ಥಳಿಸಿಲ್ಲ ಹಾಗೂ ತಪ್ಪಾಗಿ ನಡೆದುಕೊಂಡಿಲ್ಲ. ಯುವತಿಯ ತಾಯಿ ಮತ್ತು ಸಹೋದರ ನನ್ನ ಮೇಲೆ ಮತ್ತು ಇತರ ಮೂವರನ್ನು ಸುಳ್ಳು ಆರೋಪ ಮಾಡಿ ನಮ್ಮನ್ನು ಜೈಲಿಗೆ ಕಳುಹಿಸಿದ್ದಾರೆ. ನಾವೆಲ್ಲರೂ ನಿರಪರಾಧಿಗಳು. ದಯವಿಟ್ಟು ತನಿಖೆ ನಡೆಸಿ ನಮಗೆ ನ್ಯಾಯ ದೊರಕಿಸಿಕೊಡುವಂತೆ ವಿನಂತಿಸುತ್ತೇವೆ” ಎಂದು ಬರೆದಿದ್ದಾನೆ.
ಆರೋಪಿಗಳು ಇರುವ ಅಲಿಗಡ್ ಜೈಲಿನ ಹಿರಿಯ ಅಧಿಕಾರಿಯೊಬ್ಬರು ಆರೋಪಿಗಳು ಹತ್ರಾಸ್ ಪೊಲೀಸರಿಗೆ ಪತ್ರ ಬರೆದಿರುವುದನ್ನು ದೃಢಪಡಿಸಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ. “ಆರೋಪಿಗಳು ನಿನ್ನೆ ಸಂಜೆ ಹತ್ರಾಸ್ ಪೊಲೀಸ್ ಅಧೀಕ್ಷಕರಿಗೆ ತಮ್ಮ ಪತ್ರವನ್ನು ಕಳುಹಿಸಿದ್ದು, ಕಾನೂನಿನ ಪ್ರಕಾರ ನಾವು ಹತ್ರಾಸ್ ಪೊಲೀಸ್ ವರಿಷ್ಠಾಧಿಕಾರಿಗೆ ಕಳುಹಿಸಿದ್ದೇವೆ. ಮುಂದಿನದು ತನಿಖಾ ಸಂಸ್ಥೆಗಳು ನೋಡಿಕೊಳ್ಳುತ್ತವೆ” ಎಂದು ಅಲಿಗಡ್ ಜೈಲಿನ ಹಿರಿಯ ಅಧೀಕ್ಷಕ ಅಲೋಕ್ ಸಿಂಗ್ ತಿಳಿಸಿದ್ದಾರೆ.
ಅತ್ಯಾಚಾರ ಆರೋಪಿಗಳು ಮಾಡಿದ ಆರೋಪಗಳನ್ನು ಸಂತ್ರಸ್ತೆಯ ತಂದೆ ನಿರಾಕರಿಸಿದ್ದಾರೆ. “ನಾನು ನನ್ನ ಮಗಳನ್ನು ಕಳೆದುಕೊಂಡಿದ್ದೇನೆ. ಈಗ ಅವರು ನಮ್ಮನ್ನು ಕೆಣಕಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ನಾವು ಹೆದರುವುದಿಲ್ಲ. ಅವರ ಆರೋಪಗಳು ಸಂಪೂರ್ಣವಾಗಿ ಸುಳ್ಳಾಗಿದ್ದು, ನಮಗೆ ಯಾವುದೇ ಪರಿಹಾರ ಅಥವಾ ಹಣ ಬೇಕಾಗಿಲ್ಲ. ನಮಗೆ ನ್ಯಾಯ ಬೇಕು” ಎಂದಿದ್ದಾರೆ.
ಹತ್ರಾಸ್ ಪ್ರಕರಣದಲ್ಲಿ ನಡೆಯುತ್ತಿರುವ ಹೊಸ ಬೆಳವಣಿಗೆಯ ಬಗ್ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಹೆಣ್ಣುಮಗಳ ಚಾರಿತ್ರ್ಯಹರಣ ಮಾಡುವ ನಿರೂಪಣೆಗಳನ್ನು ಹರಿಯಬಿಟ್ಟು, ಅವಳ ವಿರುದ್ಧದ ಅಪರಾಧಕ್ಕೆ ಯಾರೋ ಕಾರಣ ಎಂದು ತಿರುಚಲಾಗುತ್ತಿದೆ. ಅಮಾನುಷ ಅಪರಾಧ ನಡೆದು 20 ವರ್ಷದ ಯುವತಿ ಪ್ರಾಣ ಬಿಟ್ಟಿದ್ದಾಳೆ. ಯುವತಿಯ ದೇಹವನ್ನು ಕುಟುಂಬದ ಉಪಸ್ಥಿತಿಯಿಲ್ಲದೆ ಹಾಗೂ ಒಪ್ಪಿಗೆಯಿಲ್ಲದೆ ಸುಡಲಾಗಿದೆ. ಯುವತಿಗೆ ನ್ಯಾಯ ಬೇಕಾಗಿದೆ, ಅಪನಿಂದನೆಯಲ್ಲ” ಎಂದು ಹೇಳಿದ್ದಾರೆ.
..Her body has been burned without the participation or consent of her family.
SHE DESERVES JUSTICE NOT SLANDER.
2/2#बेशर्मBJP
— Priyanka Gandhi Vadra (@priyankagandhi) October 8, 2020
ಇದನ್ನೂ ಓದಿ: ಹತ್ರಾಸ್: ಶವ ಸುಟ್ಟಿದ್ದನ್ನು ಸುಪ್ರೀಂನಲ್ಲಿ ಸಮರ್ಥಿಸಿಕೊಂಡ ಯುಪಿ ಸರ್ಕಾರ!
ವಿಡಿಯೋ ನೋಡಿ: ರಾಮ ರಾಜ್ಯ ಎಂದರೆ ದಲಿತ, ಮಹಿಳೆ, ಅಲ್ಪ ಸಂಖ್ಯಾತರ ಮೇಲೆ ಅತ್ಯಾಚಾರ, ದಾಳಿ ಮಾಡುವಂತದ್ದೇ ?