ಪೆಗಾಸಸ್ ಗೂಡಚಾರ ವಿವಾದದ ಬಗ್ಗೆ ಮಾಧ್ಯಮಗಳು ಮಾಡಿರುವ ಆರೋಪಗಳು ಸರಿಯಾಗಿದ್ದರೆ, “ಹಗರಣವು ನಿಜಕ್ಕೂ ಗಂಭೀರವಾಗಿದೆ” ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ. ಇಸ್ರೇಲ್ ಮೂಲದ ತಂತ್ರಾಂಶದ ಬಗ್ಗೆ ಎದ್ದಿರುವ ಆರೋಪಗಳ ಕುರಿತು ವಿಶೇಷ ತನಿಖೆ ನಡೆಸುವಂತೆ ಭಾರತದ ಎಡಿಟರ್ಸ್ ಗಿಲ್ಡ್ ಹಾಗೂ ಹಿರಿಯ ಪತ್ರಕರ್ತ ಎನ್ ರಾಮ್ ಸೇರಿದಂತೆ ಹಲವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ಕೈಗೆತ್ತಿಕೊಂಡಿದೆ. ಎಡಿಟರ್ಸ್ ಗಿಲ್ಡ್ ಹಾಗೂ ಪತ್ರಕರ್ತರ ಪರವಾಗಿ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರಿಗೆ, ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಪೀಠವು ಆರಂಭದಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಇದನ್ನೂ ಓದಿ: ‘ತಂಡದಲ್ಲಿ ದಲಿತರು ಹೆಚ್ಚು ಇದ್ದಿದ್ದರಿಂದ ಸೋಲಾಯಿತು!’; ಸಾಧಕಿ ವಂದನಾಗೆ ಜಾತಿ ನಿಂದನೆ
ಆರೋಪಗಳು ನಿಜ ಆಗಿದ್ದರೆ ಅದು ಗಂಭೀರ ವಿಚಾರವಾಗಿದೆ. ಎಲ್ಲಾ ಅರ್ಜಿದಾರರು ತಮ್ಮ ಅರ್ಜಿಯ ಪ್ರತಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದ ನ್ಯಾಯಾಲಯ ವಿಚಾರಣೆಗೆ ಒಕ್ಕೂಟ ಸರ್ಕಾರ ಹಾಜರಾಗಬೇಕು ಎಂದು ಹೇಳಿದೆ.
ಸತ್ಯ ಹೊರಬರಬೇಕು, ಯಾರ ಹೆಸರುಗಳಿವೆ ಎಂದು ನಮಗೆ ತಿಳಿದಿಲ್ಲ ಸುಪ್ರೀಂಕೋರ್ಟ್ ತಿಳಿಸಿತ್ತು.
ಕಪಿಲ್ ಸಿಬಲ್, “ಅರ್ಜಿಗಳಲ್ಲಿ ಫೋನ್ ಹ್ಯಾಕ್ ಮಾಡಿರುವ 10 ಪ್ರಕರಣಗಳ ಬಗ್ಗೆ ಮಾಹಿತಿ ಇದೆ” ಎಂದು ಹೇಳಿದ್ದಾರೆ.
ಅರ್ಜಿಗಳ ಪ್ರತಿಯನ್ನು ಒಕ್ಕೂಟ ಸರ್ಕಾರಕ್ಕೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಕಪಿಲ್ ಸಿಬಲ್ ಅವರಿಗೆ ಕೇಳಿದ್ದು, ಆಗಸ್ಟ್ 10 ರಂದು ವಿಚಾರಣೆಯನ್ನು ಮುಂದೂಡಿದೆ.
ಇಸ್ರೇಲ್ ಮೂಲದ ಸಂಸ್ಥೆ NSO ನ ತಂತ್ರಾಂಶವಾದ ಪೆಗಾಸಸ್ ಅನ್ನು ಬಳಸಿಕೊಂಡು ದೇಶದ ಹಲವಾರು ರಾಜಕಾರಣಿಗಳು, ಪತ್ರಕರ್ತರು, ಮಾನವ ಹಕ್ಕುಗಳ ಹೋರಾಟಗಾರರು ಹಾಗೂ ಉದ್ಯಮಿಗಳ ಮೇಲೆ ಗೂಡಚಾರ ನಡೆಸಲಾಗಿದೆ ಎಂದು ಮಾಧ್ಯಮಗಳ ಒಕ್ಕೂಟವೊಂದು ವರದಿ ಮಾಡಿತ್ತು.
ಪೆಗಾಸಸ್ ಬಳಸಿ ಕಣ್ಗಾವಲು ಮಾಡಬಹುದಾದ ಸಂಭಾವ್ಯ ಗುರಿಗಳ ಪಟ್ಟಿಯಲ್ಲಿ 300 ಕ್ಕೂ ಹೆಚ್ಚು ಭಾರತೀಯ ಮೊಬೈಲ್ ಫೋನ್ ಸಂಖ್ಯೆಗಳಿವೆ ಎಂದು ವರದಿಯಲ್ಲಿ ಹೇಳಲಾಗಿತ್ತು.
ಇದನ್ನೂ ಓದಿ: ಹಲವು ದೇಶಗಳಿಗೆ ‘ಪೆಗಾಸಸ್’ ಅನ್ನು ತಾತ್ಕಾಲಿಕವಾಗಿ ತಡೆಹಿಡಿದ ಎನ್ಎಸ್ಒ!