Homeಅಂಕಣಗಳುಬಹುಜನ ಭಾರತ; ಈ ಜಾತಿ ದಾಂಧಲೆ ತೆಂಡೂಲ್ಕರ್ ಮನೆ ಮುಂದೆ ನಡೆದಿದ್ದರೆ!

ಬಹುಜನ ಭಾರತ; ಈ ಜಾತಿ ದಾಂಧಲೆ ತೆಂಡೂಲ್ಕರ್ ಮನೆ ಮುಂದೆ ನಡೆದಿದ್ದರೆ!

- Advertisement -
- Advertisement -

ಮಹಿಳಾ ಹಾಕಿ ಒಲಿಂಪಿಕ್ಸ್ ತಾರೆ ವಂದನಾ ಕಟಾರಿಯಾ ಮನೆ ಮುಂದೆ ದಲಿತವಿರೋಧಿ ದಾಂಧಲೆ ನಡೆಸಿದ ಜಾತಿವಾದಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ದೇಶದಲ್ಲಿ ದಲಿತ ದ್ವೇಷ ಮಾಡಿ ದಕ್ಕಿಸಿಕೊಳ್ಳುವುದು ಬಲಿಷ್ಠ ಜಾತಿಗಳಿಗೆ ಅದೆಷ್ಟು ಸಲೀಸು ಎಂಬ ಕಠೋರ ಸತ್ಯವನ್ನು ಈ ಪ್ರಕರಣ ಪ್ರತಿಫಲಿಸಿದೆ.

ಕಳಪೆ ಪ್ರದರ್ಶನ ನೀಡಿರುವ ಅದೆಷ್ಟು ಬಲಿಷ್ಠ ಜಾತಿಗಳ ಕ್ರೀಡಾ ತಾರೆಯರ ಮನೆಗಳ ಮುಂದೆ ಜಾತಿಯ ಹೆಸರು ಹಿಡಿದು ಹಳಿದ ಉದಾಹರಣೆ ಇದೆ? ಇಂತಹ ನಿರ್ದಿಷ್ಟ ಬಲಿಷ್ಠ ಜಾತಿಯವರು ತಂಡದಲ್ಲಿ ಬಹಳ ಮಂದಿ ಇದ್ದಾರೆ… ಹೀಗಾಗಿಯೇ ಭಾರತದ ತಂಡ ಸೋತಿತು ಎಂಬ ಪ್ರತಿಭಟನೆ ನಡೆದಿದೆಯೇ? ಆರೋಗ್ಯವಂತ ಸಮಾಜ ಬೇಕೆಂದು ಬಯಸುವವರು ಯಾರೂ ಇಂತಹ ಪ್ರತಿಭಟನೆ ನಡೆಯಬೇಕೆಂದು ಬಯಸುವುದಿಲ್ಲ.

ವಂದನಾ ಮನೆಯ ಮುಂದೆ ನಡೆದ ದಲಿತ ದ್ವೇಷದ ವಿಕೃತಿಯನ್ನು ಖಂಡಿಸಿರುವ ಮಹಾಮಹಿಮರು ಯಾರಾದರೂ ಇದ್ದಾರೆಯೇ? ಅವರ ಬಾಯಿಗಳು ಸಾರಾಸಗಟಾಗಿ ಹೊಲಿದುಕೊಂಡಿರುವುದು ಯಾಕೆ? ಮೌನ
ಧರಿಸಿರುವುದು ಸಮ್ಮತಿಯ ಅಥವಾ ನಿರ್ಲಕ್ಷ್ಯದ ಲಕ್ಷಣ ಅಲ್ಲವೇ?

ಟೋಕಿಯೋ ಒಲಿಂಪಿಕ್ಸ್‌ನ ಮಹಿಳಾ ಹಾಕಿ ಸೆಮಿಫೈನಲ್ಸ್ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಭಾರತದ ಸೋಲಿಗೆ ದಲಿತರನ್ನು ದೂರಿದ್ದು ನಾಚಿಕೆಗೇಡು. ತಂಡದ ಪ್ರಮುಖ ಆಟಗಾರ್ತಿ ವಂದನಾ ಕಟಾರಿಯ ದಲಿತ ಜನಾಂಗಕ್ಕೆ ಸೇರಿದವರು. ಹರಿದ್ವಾರದ ರೋಶನಾಬಾದ್ ಗ್ರಾಮದ ವಾಸಿ. ತಂಡದ ಸೋಲಿನ ಕೆಲವೇ ತಾಸುಗಳಲ್ಲಿ ಆಕೆಯ ಮನೆಯ ಮುಂದೆ ಆಕೆಯ ಜಾತಿ ಹಿಡಿದು ಬೈಗುಳಗಳ ಕಿರುಚಾಟ ಕೇಳಿತು.

ಬಲಿಷ್ಠ ಜಾತಿಯ ಮೂವರು ಯುವಕರು ವಂದನಾ ಕಟಾರಿಯ ಕುಟುಂಬವನ್ನು ಹಳಿದು ಅಣಕಿಸಿ ಪಟಾಕಿ ಸಿಡಿಸಿ ಕುಣಿದಾಡಿದ್ದಾರೆ. ತಂಡದಲ್ಲಿ ಬಹಳ ಮಂದಿ ದಲಿತ ಆಟಗಾರ್ತಿಯರಿದ್ದ ಕಾರಣದಿಂದಲೇ ಭಾರತ ತಂಡ ಸೋತಿತು. ಹಾಕಿಯಲ್ಲಿ ಮಾತ್ರವಲ್ಲ ಎಲ್ಲ ಕ್ರೀಡೆಗಳಿಂದಲೂ ದಲಿತರನ್ನು ದೂರ ಇರಿಸಬೇಕೆಂದು ಅವಹೇಳನ ಮಾಡಿದ್ದಾರೆ.

ಇದೇ ಒಲಿಂಪಿಕ್ಸ್‌ನಲ್ಲಿ ತಂಡವನ್ನು ಕ್ವಾರ್ಟರ್ ಫೈನಲ್‌ಗೆ ತಲುಪಿಸಿದ್ದೇ ವಂದನಾ ಅವರ ಅದ್ಭುತ ಆಟ. ದಕ್ಷಿಣ ಆಫ್ರಿಕಾ ವಿರುದ್ಧದ ಆ ಪಂದ್ಯದಲ್ಲಿ ವಂದನಾ ಸತತ ಮೂರು ಗೋಲು ಬಾರಿಸಿದ್ದರು. ಭಾರತ ನಾಲ್ಕು ಗೋಲುಗಳನ್ನು ಮತ್ತು ದಕ್ಷಿಣ ಆಫ್ರಿಕಾ ಮೂರು ಗೋಲುಗಳನ್ನು ಗಳಿಸಿತ್ತು. ಒಲಿಂಪಿಕ್ಸ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಪ್ರಥಮ ಭಾರತೀಯಳೆಂಬ ದಾಖಲೆಯನ್ನು ವಂದನಾ ನಿರ್ಮಿಸಿದ್ದರು.

ಅರ್ಜೆಂಟೀನಾ ವಿರುದ್ಧ ಸೋತ ಪಂದ್ಯ ತೀವ್ರ ಸೆಣಸಿನದಾಗಿತ್ತು. ಭಾರತದ ತಂಡ ಸೋತದ್ದು ಒಂದು ಗೋಲಿನ ಅಂತರದಿಂದ. ಕಂಚಿನ ಪದಕಕ್ಕಾಗಿ ನಡೆದ ಮುಂದಿನ ಪಂದ್ಯದಲ್ಲಿ ಭಾರತದ ಈ ತಂಡ ಬ್ರಿಟನ್ ವಿರುದ್ಧ ವಿರೋಚಿತವಾಗಿ ಸೋತಿತು. ಈ ಪಂದ್ಯದಲ್ಲೂ ಮೂರನೆಯ ಗೋಲು ವಂದನಾ ಅವರದಾಗಿತ್ತು. ಆಕೆ ಭಾರತ ತಂಡದ ಸಾರ್ವಕಾಲಿಕ ಶ್ರೇಷ್ಠ ಫಾರ್ವರ್ಡ್ ಆಟಗಾರ್ತಿಯರಲ್ಲೊಬ್ಬರು.

ದೆಹಲಿಯ ಸ್ಮಶಾನವೊಂದರಲ್ಲಿ ಒಂಬತ್ತು ವರ್ಷದ ಹಾಲುಗಲ್ಲದ ದಲಿತ ಹೆಣ್ಣುಮಗುವನ್ನು ರೇಪ್ ಮಾಡಿ ಕೊಂದು ಸುಟ್ಟುಹಾಕಿದ ವಿಕೃತಿಯ ಬೆನ್ನಿಗೇ ವಂದನಾ ಕಟಾರಿಯ ಪ್ರಕರಣ ವರದಿಯಾಗಿದೆ. ಇಂತಹ ಸಾವಿರಾರು ಪ್ರಕರಣಗಳನ್ನು ಸದ್ದಿಲ್ಲದೆ ಹೂತುಹಾಕಲಾಗುತ್ತಿದೆ.

ದಲಿತ ದ್ವೇಷದ ಅಪರಾಧಗಳು, ದಮನ ದೌರ್ಜನ್ಯ ತಾರತಮ್ಯಗಳು ನಿತ್ಯ ಬದುಕಿನ ರಿವಾಜುಗಳಾಗಿ ಹೋಗಿವೆ. ಗ್ರಾಮಗಳಲ್ಲಿ ಅವರನ್ನು ಊರಹೊರಗಿನ ಹೊಲಗೇರಿಗಳಲ್ಲಿ ಇಡಲಾಗಿದೆ. ಪೇಟೆ ಪಟ್ಟಣ ನಗರಗಳಲ್ಲಿ ಅವರನ್ನು ಮನೋನಿರ್ಮಿತ ಹೊಲಗೇರಿಗಳಿಗೆ ಅಟ್ಟಲಾಗಿದೆ. ಮುಖ್ಯಧಾರೆಯ ಸಮಾಜವೆಂಬುದು ಅವರ ಪಾಲಿನ ಅಗೋಚರ ಕಾರಾಗೃಹ. ಎತ್ತರೆತ್ತರಕ್ಕೆ ಎದ್ದುನಿಂತಿರುವ ಬಗೆಬಗೆಯ ಅಸ್ಪೃಶ್ಯತೆಯ ತಡೆಗೋಡೆಗಳ ನಡುವೆ ಅವರು ವಿನಾಕಾರಣ ಕಳಂಕಿತ ಕೈದಿಗಳು.

ಈ ಅಮಾನುಷ ನಡವಳಿಕೆಯು ಭಾರತದ ಆತ್ಮವನ್ನು ಗಾಯಗೊಳಿಸಿದೆ. ಶತಮಾನಗಳ ಕೀವು ಮಡುಗಟ್ಟಿದೆ. ಈ ಗಾಯವನ್ನು ತೊಳೆದು ಮದ್ದು ತುಂಬಿ ಪಟ್ಟಿಕಟ್ಟುವುದು ಪೆಟ್ಟು ನೀಡುತ್ತಿರುವವರ ಕರ್ತವ್ಯ. ಆದರೆ ನಿರಾಕರಣೆ ನಿರ್ಲಕ್ಷ್ಯಗಳಲ್ಲಿ ಮುಳುಗಿಬಿಟ್ಟಿದ್ದಾರೆ ಅವರು. ಮದ್ದು ಅರೆಯುವ ಬದಲಿಗೆ ನಂಜು ಕಾರತೊಡಗಿದ್ದಾರೆ. ಉಪ್ಪು ಉಜ್ಜತೊಡಗಿದ್ದಾರೆ. ಭಾರತದ ಆತ್ಮದ ಗಾಯವು ತಮ್ಮ ಆತ್ಮಕ್ಕೆ ಅಂಟಿರುವ ವ್ಯಾಧಿ ಎಂಬುದನ್ನು ಕಾಣದೆ ಹೋಗಿದ್ದಾರೆ. ಖುದ್ದು ದಲಿತ ಮತ್ತು ಸ್ತ್ರೀದ್ವೇಷದ ಕೈದಿಗಳಾಗಿದ್ದಾರೆ. ದಲಿತ ಜನಕೋಟಿಯ ವಿಮೋಚನೆಯಲ್ಲಿ ತಮ್ಮ ಬಿಡುಗಡೆಯೂ ಆಡಗಿದೆ ಎಂಬ ನಿಜವನ್ನು ನಿರಾಕರಿಸತೊಡಗಿದ್ದಾರೆ.

ವಿನೋದ್ ಕಾಂಬ್ಳಿಯಂತಹ ಕ್ರಿಕೆಟಿಗನ ಪ್ರತಿಭೆ ಚಮ್ಮಾರನೆಂದು ಮೂದಲಿಕೆಗಳಲ್ಲಿ ಕಮರಿ ಹೋಯಿತು. ಕಾಂಬ್ಳಿ ಕಡಿಮೆ ರನ್ ಗಳಿಸಿದಾಗ ಜಾತಿ ಹಿಡಿದು ಹಂಗಿಸಿದ ಮನಸುಗಳು, ಬಲಿಷ್ಠ ಜಾತಿಗಳ ಆಟಗಾರರು ರನ್ ಗಳಿಗೆಯಲ್ಲಿ ಪರದಾಡಿ ಔಟ್ ಆದಾಗ ಅವರ ಜಾತಿಗಳನ್ನು ಹಿಡಿದು ಬೈದ ಉದಾಹರಣೆ ಹುಡುಕಿದರೂ ಕಾಣದು.

ಸುರೇಶ್ ರೈನಾ ಇತ್ತೀಚೆಗಷ್ಟೇ ಬ್ರಾಹ್ಮಣ್ಯದ ಗರಿಮೆ ಮೆರೆದರು. ’ಭಾರತ ರತ್ನ’ವೆನಿಸಿದ ಸಚಿನ್ ತೆಂಡೂಲ್ಕರ್ ತಾವು ಜನಿವಾರ ಧರಿಸಿದ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹೆಮ್ಮೆಯಿಂದ ಹಂಚಿಕೊಳ್ಳುತ್ತಾರೆ. ತೆಂಡೂಲ್ಕರ್ ಅವರನ್ನು ದೈವವೆಂದು ಆರಾಧಿಸಲಾಗುತ್ತದೆ. ಹ್ಯಾಟ್ರಿಕ್ ಗೋಲು ದಾಖಲೆ ಸ್ಥಾಪಿಸಿದ ವಂದನಾ ಅವರ ದಲಿತ ಜಾತಿ ಮೂಲವನ್ನು ಹಿಡಿದು ಹಳಿಯಲಾಗುತ್ತದೆ. ಖಡ್ಗಗಳನ್ನು ಹಿರಿದು ಝಳಪಿಸಿ ತಾನು ರಜಪೂತನೆಂದು ಮೆರೆಯುತ್ತಾರೆ ರವೀಂದ್ರ ಜಡೇಜ. ಈ ಹಿಂದೆ ತಮ್ಮೊಂದಿಗೆ ಆಡಿದ ಯಜುವೇಂದ್ರ ಚಹಲ್ ಎಂಬ ದಲಿತ ಕ್ರಿಕೆಟಿಗನನ್ನು ’ಭಂಗಿ’ (ಮಾನವ ಮಲ ಬಾಚಿ ಹೊತ್ತು ಸಾಗಿಸುವ ಕೆಲಸ ಮಾಡುವ ದಲಿತ ಜಾತಿ) ಎಂದು ಕರೆಯುತ್ತಾರೆ ಮತ್ತೊಬ್ಬ ಕ್ರಿಕೆಟ್ ತಾರೆ ಯುವರಾಜ್ ಸಿಂಗ್. ಟೀಕೆ ಎದುರಾದಾಗ ಈ ಜಾತಿಸೂಚಕದ ಸಾಧಕ ಬಾಧಕಗಳು ತನಗೆ ತಿಳಿದೇ ಇರಲಿಲ್ಲ ಎಂದು ವಾದಿಸುತ್ತಾರೆ.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಭಾರತ ತಂಡ ಸೇರಿ ಕ್ರಿಕೆಟ್ ಆಡಿದ ದಲಿತರು ಮತ್ತು ಹಿಂದುಳಿದವರು ಬೆರಳೆಣಿಕೆಯವರು-ಏಕನಾಥ ಸೋಲ್ಕರ್, ಕರ್ಸನ್ ಘಾವ್ರಿ, ವಿನೋದ್ ಕಾಂಬ್ಳಿ, ಭುವನೇಶ್ವರ ಕುಮಾರ್, ದೊಡ್ಡನರಸಯ್ಯ ಗಣೇಶ್, ವಿಜಯಕೃಷ್ಣ…

ತುಳಸಿ ಹೆಲೆನ್ ಎಂಬ ಬಾಕ್ಸರ್ ತನ್ನ ದಲಿತ ಹಿನ್ನೆಲೆಯ ಕುರಿತು ಮುಕ್ತವಾಗಿ ಮಾತಾಡಿ ಮೂಲೆಗುಂಪಾದಳು. ಲೇಡಿ ಮಹಮ್ಮದ್ ಆಲಿ ಎಂದು ಕರೆಸಿಕೊಂಡಿದ್ದ ಈಕೆ ಹೊಟ್ಟೆ ಹೊರೆಯಲು ಆಟೋ ಓಡಿಸಿದಳು. ಪೀಜ್ಜಾ ಡೆಲಿವರಿ ಮಾಡಿದಳು. ದಲಿತಳಾಗಿ ಹುಟ್ಟಿದ್ದಕ್ಕೆ ತಳದಿಂದ ಮೇಲೇಳುವ ಅವಕಾಶವೇ ನನಗಿಲ್ಲ ಎಂದು ಹಲುಬುವುದಷ್ಟೇ ಆಕೆಗೆ ಉಳಿದದ್ದು.

ದೆಹಲಿಯ ಬ್ಯಾಂಕ್ ಜವಾನನ ಮಗಳಾಗಿ ಹುಟ್ಟಿದ ದಲಿತೆ ಕುಸ್ತಿಪಟು ಜ್ಯೋತಿ. ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಮೂರು ಬಾರಿ ಕಂಚು ಪದಕ ವಿಜೇತೆ. ’ಡೊಮೆಸ್ಟಿಕ್ ಟೂರ್ನಿಯೊಂದರ ಸೆಮಿಫೈನಲ್‌ನಲ್ಲಿ ನಿಚ್ಚಳ ಗೆಲುವು ನನ್ನದಾಗಿದ್ದರೂ, ಸೋತಿದ್ದೇನೆಂದು ಸಾರಲಾಯಿತು. ಈ ಸೆಮಿಫೈನಲ್ ಮರುದಿನ ನಡೆಯುವುದೆಂದು ನಿರ್ಧರಿಸಲಾಗಿತ್ತು. ಆದರೆ ನನಗೆ ಹೆಚ್ಚು ವಿಶ್ರಾಂತಿ ಸಿಗಬಾರದೆಂದೂ, ಕಂಚಿನ ಪದಕ ನನಗೆ ದಕ್ಕಬಾರದೆಂದೂ ಸಂಚು ಮಾಡಿ ಅದೇ ದಿನ ಪಂದ್ಯ ನಡೆಸಲಾಯಿತು. ನನ್ನ ದಲಿತ ಹುಟ್ಟೇ ಈ ಅನ್ಯಾಯದ ಮೂಲ’ ಎಂಬುದು ಆಕೆಯ ಅಳಲು.

ಸಾಂತಿ ಸೌಂದರ ರಾಜನ್ ಎಂಬ ದಲಿತ ಅಥ್ಲೆಟ್ ಆತ್ಮಹತ್ಯೆಯ ವಿಫಲ ಪ್ರಯತ್ನ ನಡೆಸಿದ್ದಳು. ಪಾದಗಳಲ್ಲಿ ಆರು ಬೆರಳುಗಳುಳ್ಳ ಸ್ವಪ್ನಾ ಬರ್ಮನ್ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗಳಿಸಿದ್ದ ದಲಿತ ಹೆಣ್ಣುಮಗಳು. ಏಷ್ಯನ್ ಕ್ರೀಡೆಗಳ ಅತಿ ಕಠಿಣ ಹೆಪ್ಟತ್ಲಾನ್‌ನಲ್ಲಿ ಪಾದಗಳ ನೋವಿನ ನಡುವೆಯೂ ಛಲ ತೊಟ್ಟು ಚಿನ್ನದ ಪದಕ ಗಳಿಸಿದಳು. ಆರು ಬೆರಳುಗಳು ಹಿಡಿಯುವ ವಿಶೇಷ ಶೂಗಳ ಖರೀದಿಸಲು ಅಸಮರ್ಥಳು. ಭಾರತದ ಧ್ವಜವನ್ನು ಅಂತಾರಾಷ್ಟ್ರೀಯ ಕ್ರೀಡಾವೇದಿಕೆಗಳಲ್ಲಿ ಹಾರಿಸಿರುವ ಹಿಮಾ ದಾಸ್ ಎಂಬ ದಲಿತ ಓಟಗಾರ್ತಿಯ ಜಾತಿ ಯಾವುದೆಂದು ತಿಳಿಯಲು ದಾಖಲೆ ಸಂಖ್ಯೆಯ ಗೂಗಲ್ ಸರ್ಚ್ ಮಾಡಲಾಗಿದೆ. ನಿವೃತ್ತಿ ಹೊಂದಿದ ನಂತರವೂ ಪಿ.ಟಿ. ಉಷಾ ಎಂಬ ಮತ್ತೊಬ್ಬ ದಲಿತ ದಂತಕತೆಯ ಕುಲವನ್ನು ಹೀಗೆಯೇ ಹುಡುಕಿದ ದಾಖಲೆಗಳಿವೆ.

‘1979-80ರಲ್ಲಿ ನಾನು ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿಯಾಗಿದ್ದೆ. ಹಿಂದುಳಿದ ಜಾತಿಯ ಹಣೆಪಟ್ಟಿ ಬೇಟೆಯಾಡಿತು. ಆಸೆಗಳೆಲ್ಲ ನುಚ್ಚುನೂರಾಗಿ ಅಕೆಡಮಿಕ್ಸ್ ಹಾದಿ ಹಿಡಿದೆ. ಆಧುನಿಕ ದ್ರೋಣಾಚಾರ್ಯರು ಅರ್ಜುನರಿಗೆ ತರಬೇತಿ ನೀಡುತ್ತಾರೆಯೇ ವಿನಾ ಏಕಲವ್ಯರಿಗೆ ಅಲ್ಲ. ಹಲವು ಅಥ್ಲೀಟ್‌ಗಳ ಬದುಕು ನಾಶವಾದದ್ದನ್ನು ಕಣ್ಣಾರೆ ಕಂಡಿದ್ದೇನೆ. ಮಹಿಳಾ ದಲಿತ ಅಥ್ಲೀಟ್‌ಗಳ ಸ್ಥಿತಿ ಮತ್ತಷ್ಟು ಶೋಚನೀಯ’ ಎಂದಿರುವವರು ಪ್ರೊಫೆಸರ್ ವೈ. ಸ್ವರೂಪಾ ಆರ್. ಶಂಕರ್ ಹೈದರಾಬಾದ್ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕಿ.


ಇದನ್ನೂ ಓದಿ: ಕೆಲವು ಕ್ರೀಡೆಗಳು ಸೃಷ್ಟಿಸುವ ಹೈಪರ್ ನ್ಯಾಷನಲಿಸಂ ಮತ್ತು ಕ್ರೀಡಾಪಟುಗಳ ಜಾತಿನಿಂದನೆ – ಇವುಗಳ ನಡುವೆ ಸಂಭ್ರಮಿಸುವುದಾದರೂ ಹೇಗೆ?

ಇದನ್ನೂ ಓದಿ: ಒಲಿಂಪಿಕ್ಸ್ ಪದಕ ಗೆಲುವಿಗೆ ನಾಂದಿ ಹಾಡಿದ ನಾರಿಯರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...