Homeಕ್ರೀಡೆಒಲಂಪಿಕ್ಒಲಿಂಪಿಕ್ಸ್ ಪದಕ ಗೆಲುವಿಗೆ ನಾಂದಿ ಹಾಡಿದ ನಾರಿಯರು

ಒಲಿಂಪಿಕ್ಸ್ ಪದಕ ಗೆಲುವಿಗೆ ನಾಂದಿ ಹಾಡಿದ ನಾರಿಯರು

- Advertisement -
- Advertisement -

ಸೈಖೋಮ್ ಮೀರಾಬಾಯಿ ಚಾನು

ವಿಶ್ವದ ಕ್ರೀಡಾಪ್ರೇಮಿಗಳ ದೃಷ್ಟಿ ಸಮ್ಮರ್ ಒಲಿಂಪಿಕ್ಸ್ ಮೇಲೆ ನೆಟ್ಟಿದೆ. ಇದರ ನಡುವೆ ಭಾರತದ ನಾರಿ ಶಕ್ತಿ ದೇಶದ ಜನರ ಗಮನ ಸೆಳೆದಿದೆ. ಬೆಳ್ಳಿ, ಕಂಚು ಪದಕಗಳನ್ನು ಗೆಲ್ಲುವ ಮೂಲಕ ಸೈಖೋಮ್ ಮೀರಾಬಾಯಿ ಚಾನು ಮತ್ತು ಪಿ.ವಿ.ಸಿಂಧು ದೇಶದ ಕ್ರೀಡಾಸಕ್ತರಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.

ಪ್ರಸಕ್ತ ಟೋಕಿಯೋ ಒಲಂಪಿಕ್ಸ್‌ನ ವೇಟ್ ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದು ಮನೆಮಾತಾಗಿರುವ ಸೈಖೋಮ್ ಮೀರಾಬಾಯಿ ಚಾನು (27) ಆಗಸ್ಟ್ 8, 1994ರಲ್ಲಿ ಮಣಿಪುರದ ಇಂಪಾಲದಿಂದ 30 ಕಿಲೋಮೀಟರ್ ದೂರದಲ್ಲಿರುವ ನಾಂಗ್ಪೋಕ್ ಕಾಚಿಂಗ್ ಗ್ರಾಮದಲ್ಲಿ ಜನಿಸಿದವರು. ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ದೇಶದ 21 ವರ್ಷಗಳ ಪದಕದ ಕನಸನ್ನು ನನಸು ಮಾಡಿದವರು ಮೀರಾಬಾಯಿ ಚಾನು.

12 ವರ್ಷದ ಚಿಕ್ಕ ವಯಸ್ಸಿನಲ್ಲಿಯೇ ತನ್ನ ಅಣ್ಣನಿಂದಲೂ ಎತ್ತಲಾಗದ ಭಾರಿ ತೂಕದ ಸೌದೆಯ ಹೊರೆಯನ್ನು ಎತ್ತಿ ತರುತ್ತಿದ್ದ ಈಕೆಯ ಶಕ್ತಿ ಬಗ್ಗೆ ಮನೆಯವರಿಗೆ ಹೆಮ್ಮೆಯಿತ್ತು. ಚಿಕ್ಕ ವಯಸ್ಸಿನಲ್ಲಿಯೇ ಕ್ರೀಡೆ ಮೇಲೆ ಆಸಕ್ತಿ ಬೆಳೆದಿದ್ದ ಮೀರಾಬಾಯಿ ಚಾನುಗೆ ಯಶಸ್ಸಿನ ದಾರಿ ಸುಲಭವಾಗಿರಲಿಲ್ಲ ಎಂಬುದು ಅವರ ಹೇಳಿಕೆಗಳಿಂದಲೇ ಸ್ಪಷ್ಟವಾಗಿದೆ. ಮನೆಯಲ್ಲಿ ಆರ್ಥಿಕ ಸಂಕಷ್ಟ ಇತ್ತಾದರೂ, ಅಪ್ಪ ಅಮ್ಮನ ಪ್ರೋತ್ಸಾಹ ಮಗಳಿಗಿತ್ತು.

ತನ್ನ ಮನೆಯಲ್ಲಿದ್ದ ಹುಡುಗರು ಮತ್ತು ಸಂಬಂಧಿಕರು ಫುಟ್‌ಬಾಲ್ ಆಡುತ್ತಿದ್ದರಿಂದ ಪ್ರತಿದಿನ ಬಟ್ಟೆಯೆಲ್ಲ ಕೊಳಕು ಮಾಡಿಕೊಂಡು ವಾಪಸ್ ಬರುತ್ತಿದ್ದರು. ಹಾಗಾಗಿ ಶುಚಿಯಾದ, ನೀಟ್ ಆಗಿರುವ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಆಕೆ ಬಯಸಿದ್ದಳು. ಹಾಗಾಗಿ ಆರ್ಚರಿ ಅದಕ್ಕೆ ತಕ್ಕುದಾದ ಮತ್ತು ಸ್ಟೈಲ್ ಆದ ಕ್ರೀಡೆಯಾಗಿದ್ದು ಅದನ್ನು ಅಭ್ಯಸಿಸಲು ಬಯಸಿದ್ದೆ ಎಂದು ಮೀರಾಬಾಯಿ ಚಾನು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

2008ರಲ್ಲಿ ಇಂಫಾಲ್‌ನ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಕಚೇರಿಗೆ ತೆರಳಿದ ಚಾನು ಅವರಿಗೆ ಆರ್ಚರಿ ಕ್ರೀಡೆಗೆ ತರಬೇತು ನೀಡುವವರು ದೊರೆಯಲಿಲ್ಲ. ಅದೇ ಸಮಯಕ್ಕೆ ಮಣಿಪುರದ ವೇಟ್ ಲಿಫ್ಟರ್ ಕುಂಜುರಾಣಿ ದೇವಿಯವರ ವಿಡಿಯೋ ನೋಡಿದ ಅವರು ಅದರಿಂದ ಸ್ಫೂರ್ತಿಗೊಂಡು ತಾನೂ ವೇಟ್ ಲಿಫ್ಟರ್ ಆಗಲು ನಿರ್ಧರಿಸಿದರು. ನಂತರ ಅಂತಾರಾಷ್ಟ್ರೀಯ ವೇಟ್ ಲಿಫ್ಟರ್ ಮತ್ತು ಕೋಚ್ ಆಗಿದ್ದ ಅನಿತಾ ಅವರು ಚಾನುರನ್ನು ಭೇಟಿ ಮಾಡಿದ ನಂತರ ನಿರ್ಧಾರ ಪಕ್ವವಾಯಿತು. ಚಾನು ಅವರ ವೇಟ್ ಲಿಫ್ಟಿಂಗ್ ಪ್ರಯಾಣ ಆರಂಭವಾಯಿತು.

PC : NDTV Sports

ಮೀರಾಬಾಯಿ ಅವರ ವೇಟ್ ಲಿಫ್ಟರ್ ಆಗುವ ಪಯಣದ ಆರಂಭವೇ ಬಹಳಷ್ಟು ಕಷ್ಟ ಕಾರ್ಪಣ್ಯಗಳಿಂದ ಕೂಡಿತ್ತು. ತನ್ನ ಊರಿನಿಂದ 30 ಕಿ.ಮೀ ದೂರದಲ್ಲಿರುವ ತರಬೇತಿ ಕೇಂದ್ರವನ್ನು ಎರಡು ಬಸ್ ಬದಲಿಸಿ ಬೆಳಿಗ್ಗೆ 6 ಗಂಟೆಯೊಳಗೆ ತಲುಪಬೇಕಾಗಿತ್ತು. ಆದರೆ, ಮನೆಯಲ್ಲಿ ನೀಡುತಿದ್ದ 10-20 ರೂಪಾಯಿಯನ್ನು ಉಳಿಸಿಕೊಂಡು ತನ್ನ ಡಯಟ್ ಖರ್ಚು ನಿರ್ವಹಿಸಲು ಬಳಸುತ್ತಿದ್ದ ಮೀರಾಬಾಯಿ ಚಾನು, ಈ ದೂರವನ್ನು ಕ್ರಮಿಸುವುದಕ್ಕಾಗಿ, ತಮ್ಮ ತಾಯಿ ಸೈಕೋಮ್ ಒಂಗ್ಬಿ ತೊಂಬಿ ದೇವಿ ನಡೆಸುತ್ತಿದ್ದ ಚಿಕ್ಕ ಅಂಗಡಿ ಬಳಿ ನಿಲ್ಲುತ್ತಿದ್ದ ಟ್ರಕ್‌ಗಳಲ್ಲಿ ಲಿಫ್ಟ್ ತೆಗೆದುಕೊಳ್ಳುತ್ತಿದ್ದರು.

ಒಲಿಂಪಿಕ್ಸ್ ಪದಕ ಗೆದ್ದ ಮೇಲೆ ಈ ದಾರಿಯಲ್ಲಿ ತನಗೆ ಲಿಫ್ಟ್ ನೀಡುತ್ತಿದ್ದ ಟ್ರಕ್ ಚಾಲಕರಿಗೆ ಧನ್ಯವಾದ ಹೇಳಬೇಕು ಎಂದು ಮೀರಾಬಾಯಿ ಚಾನು ಹುಡುಕುತ್ತಿದ್ದಾರೆ ಎಂಬುದು ಮನಕಲಕುವ ಸಂಗತಿ.

2014ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 170 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದ ಅವರು, 2016ರಲ್ಲಿ ನಡೆದ ನ್ಯಾಷನಲ್ ಚಾಂಪಿಯನ್ ಸ್ಪರ್ಧೆಯಲ್ಲಿ 186 ಕೆಜಿ ಭಾರ ಎತ್ತಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. ಆದರೆ
ಅದೇ ವರ್ಷ ನಡೆದ ರಿಯೋ ಒಲಿಂಪಿಕ್ಸ್‌ನಲ್ಲಿ ಗಾಯಗೊಂಡು ಪದಕ ಗೆಲ್ಲಲು ಸಾಧ್ಯವಾಗಿರಲಿಲ್ಲ. ಅಂದು ತೊಟ್ಟ ಸಾಧನೆಯ ಹಠ ಇಂದಿನ ಬೆಳ್ಳಿ ಪದಕಕ್ಕೆ ಕಾರಣವಾಗಿದೆ.

2017ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮತ್ತು 2018ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲುವ ಮೂಲಕ ಚಾನು 2016ರ ಒಲಿಂಪಿಕ್ಸ್ ನೋವನ್ನು ನುಂಗಿಕೊಂಡರು. 2020ರ ಏಷ್ಯನ್ ವೇಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದುಕೊಂಡರು. ಅಲ್ಲಿಂದ ಟೋಕಿಯೋ ಒಲಿಂಪಿಕ್ಸ್‌ಗಾಗಿ ಎರಡು ವರ್ಷಗಳ ಕಾಲ ಮನೆಗಾಗಲೀ, ಯಾವ ಸಮಾರಂಭಗಳಿಗಾಗಲಿ ತೆರಳದೆ ಕಠಿಣ ಪರಿಶ್ರಮ ನಡೆಸಿದ್ದರು.

ಭಾರತೀಯ ರೈಲ್ವೆಯಲ್ಲಿ ಚೀಫ್ ಟಿಕೆಟ್ ಇನ್‌ಪ್ಸೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಚಾನು ಏಷ್ಯನ್ ಕ್ರೀಡಾಕೂಟದಲ್ಲಿ ವಿಶ್ವದಾಖಲೆಗಳಿಸಿದ್ದಾರೆ. ಟೊಕಿಯೋ ಒಲಿಂಪಿಕ್ಸ್‌ನಲ್ಲಿ 49 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು ಒಟ್ಟು 202 ಕೆಜಿ ಭಾರ ಎತ್ತುವ (87 ಕೆಜಿ ಸ್ನ್ಯಾಚ್ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 115 ಕೆಜಿ) ಮೂಲಕ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಸದ್ಯ ಮಣಿಪುರ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಹುದ್ದೆ ಅಲಂಕರಿಸಿದ್ದಾರೆ.

2018 ರಲ್ಲಿ ಭಾರತದ ಅತ್ಯುನ್ನತ ಗೌರವಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಗೆ ಹಾಗೂ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮಣಿಪುರದ ಮೀರಾಬಾಯಿ ಚಾನು ಅವರ ಮನೆಯ ಸ್ಥಿತಿಯನ್ನು ಕಂಡು ಹಲವು ಕಲಾವಿದರು, ಕ್ರೀಡಾಪಟುಗಳು ಸರ್ಕಾರ ನೀಡುವ ಸವಲತ್ತುಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕ್ರಿಕೆಟ್ ತಾರೆಯರಿಗೆ ನೀಡುವ ಸೌಲಭ್ಯಗಳಲ್ಲಿ ಕನಿಷ್ಟ ಮಟ್ಟದ ಸೌಲಭ್ಯವನ್ನು ಬೇರೆ ಕ್ರೀಡೆಗಳಿಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಪುಸರ್ಲಾ ವೆಂಕಟ ಸಿಂಧು

ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ಭರವಸೆ ಮೂಡಿಸಿದ್ದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಎಂದೇ ಹೆಚ್ಚು ಪರಿಚಿತರಾದ ಪುಸರ್ಲಾ ವೆಂಕಟ ಸಿಂಧು ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದು ಭಾರತಕ್ಕೆ ಮತ್ತೊಮ್ಮೆ ಗರಿಮೆ ತಂದಿದ್ದಾರೆ. ಒಲಿಂಪಿಕ್ಸ್‌ನಲ್ಲಿ 2 ಬಾರಿ ಪದಕ ಗೆದ್ದು ದೇಶದ ಗಮನ ಸೆಳೆದಿದ್ದಾರೆ. ಕುಸ್ತಿಪಟು ಸುಶೀಲ್ ಕುಮಾರ್ ನಂತರ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದಿರುವ ಅಥ್ಲೀಟ್ ಮತ್ತು ಮೊದಲ ಮಹಿಳೆ ಎಂಬ ದಾಖಲೆಗೂ ಭಾಜನರಾಗಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನ ಸೆಮಿಫೈನಲ್‌ನಲ್ಲಿ ಸೋಲುಂಡಿದ್ದ ಪಿ.ವಿ ಸಿಂಧು, ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಚೀನಾದ ಹಿ ಬಿಂಗ್ಜಾವ್ ಅವರ ವಿರುದ್ಧ ಸೆಣಸಿದರು. 21-13 ಅಂತರದಿಂದ ಮೊದಲ ಸೆಟ್ ಗೆದ್ದ ಸಿಂಧು ಎರಡನೇ ಸೆಟ್‌ಅನ್ನು 21-15 ಅಂತರದಲ್ಲಿ ಗೆದ್ದು ನೇರ ಸೆಟ್‌ಗಳಿಂದ ವಿಜಯಿಯಾಗಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು.

ತೆಲಂಗಾಣದ ಹೈದರಾಬಾದ್‌ನಲ್ಲಿ 1995ರ ಜುಲೈ 5ರಂದು ಜನಿಸಿದ ಪಿ.ವಿ.ಸಿಂಧು ಅವರ ತಂದೆ ಪಿ.ವಿ.ರಮಣ ರೈಲ್ವೇ ಇಲಾಖೆಯಲ್ಲಿ ನೌಕರರಾಗಿದ್ದಾರೆ. ತಂದೆ-ತಾಯಿ ಇಬ್ಬರು ಮಾಜಿ ವಾಲಿಬಾಲ್ ಆಟಗಾರರು. ರಮಣ ಅವರು ಭಾರತದ ವಾಲಿಬಾಲ್ ಟೀಂನ ಆಟಗಾರರಾಗಿದ್ದು, ಭಾರತ ಸರ್ಕಾರದ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆದರೆ, ಸಿಂಧು ಮಾತ್ರ ಆಕರ್ಷಿತರಾಗಿದ್ದು ಬ್ಯಾಡ್ಮಿಂಟನ್ ಕಡೆಗೆ. ತಮ್ಮ 8ನೇ ವಯಸ್ಸಿನಲ್ಲಿಯೇ ಬ್ಯಾಡ್ಮಿಂಟನ್ ಆಡಲು ಆರಂಭಿಸಿದ್ದರು. ನಂತರ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯ ಸದಸ್ಯೆಯಾದರು.

ಆಗಸ್ಟ್ 2013ರಲ್ಲಿ ಚೀನಾದಲ್ಲಿ ಜರುಗಿದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಸಿಂಗಲ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಪಿ.ವಿ. ಸಿಂಧು. ಸೆಪ್ಟೆಂಬರ್ 2012ರಲ್ಲಿ ಬಿಡುಗಡೆ ಮಾಡಲಾದ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಶ್ರೇಯಾಂಕಗಳಲ್ಲಿ ಮೊದಲ 20 ಸ್ಥಾನದೊಳಗೆ ಸಿಂಧು ಗುರುತಿಸಿಕೊಂಡಿದ್ದರು. ಬಿಡಬ್ಲ್ಯುಎಫ್ ವಿಶ್ವ ರ್‍ಯಾಂಕಿಂಗ್‌ನ ಐದನೇ ಸ್ಥಾನದಲ್ಲಿ ಇದ್ದ ಸಿಂಧು 2017ರಲ್ಲಿ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

PC : Business Standard

2013, 14, 17, 18, 19ರ ವಿಶ್ವ ಚಾಂಪಿಯನ್‌ಶಿಪ್‌ಗಳ ಸಿಂಗಲ್ಸ್‌ನಲ್ಲಿ ಪದಕ ಗೆದ್ದು ಭಾರತದ ಹೆಸರು ಬೆಳಗಿಸಿದ್ದಾರೆ. 2013 ಮತ್ತು 2014ರಲ್ಲಿ ಕಂಚಿನ ಪದಕ, 2017 ಮತ್ತು 2018ರಲ್ಲಿ ಬೆಳ್ಳಿ ಪದಕ ಮತ್ತು 2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬಂಗಾರದ ಪದಕ ತಮ್ಮದಾಗಿಸಿಕೊಂಡಿದ್ದಾರೆ.

2014ರ ಕಾಮನ್‌ವೆಲ್ತ್ ಗೇಮ್ಸ್‌ನ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಮತ್ತು 2018ರಲ್ಲಿ ಸಿಂಗಲ್ಸ್‌ನಲ್ಲಿ ಬೆಳ್ಳಿ ಮತ್ತು ತಂಡದೊಂದಿಗೆ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

2014ರ ಏಷಿಯನ್ ಚಾಂಪಿಯನ್‌ಶಿಪ್‌ನ ಸಿಂಗಲ್ಸ್ ವಿಭಾಗದಲ್ಲಿ ಕಂಚು ಗೆದ್ದಿದ್ದಾರೆ. ಇದಲ್ಲದೆ ಉಬರ್ ಕಪ್, ದಕ್ಷಿಣ ಏಷ್ಯಾದ ಕ್ರೀಡೆಗಳಲ್ಲಿಯೂ ಪದಕಗಳನ್ನು ಗೆದ್ದು ತಂದಿದ್ದಾರೆ.

ಕಳೆದ ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಪಿ.ವಿ. ಸಿಂಧು, ಅವರಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದರು. ಪದ್ಮಶ್ರೀ (2015), ಪದ್ಮಭೂಷಣ(2020), ಅರ್ಜುನ ಪ್ರಶಸ್ತಿ(2013) ಗೌರವಗಳಿಗೆ ಸಿಂಧು ಪಾತ್ರವಾಗಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧುಗೆ ಆಂಧ್ರಪ್ರದೇಶ ಸರ್ಕಾರ ನಗದು ಪ್ರೋತ್ಸಾಹಧನ ಘೋಷಿಸಿದೆ. ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು 2017-22 ಕ್ರೀಡಾ ನೀತಿಯ ಪ್ರಕಾರ ಸಿಂಧುಗೆ 30 ಲಕ್ಷ ರೂಪಾಯಿ ಬಹುಮಾನ ನೀಡಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೀರಾಬಾಯಿ ಚಾನು ಅವರ ಬೆಳ್ಳಿ ಪದಕ ಹಾಗೂ ಪಿವಿ ಸಿಂಧು ಅವರ ಕಂಚಿನ ಪದಕದ ದೆಸೆಯಿಂದ ಪದಕ ಪಟ್ಟಿಯಲ್ಲಿ ಈ ಲೇಖನ ಪ್ರಕಟಣೆಗೆ ಹೋಗುವ ಹೊತ್ತಿಗೆ ಭಾರತ 62ನೇ ಸ್ಥಾನದಲ್ಲಿದೆ. ಇನ್ನು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಕಂಚಿನ ಪದಕ ಗೆದ್ದಿರುವ 23 ವರ್ಷದ ಅಸ್ಸಾಂನ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರಿಂದ ಒಂದು ಪದಕ ಖಚಿತವಾಗಿದೆ.

ಹೆಣ್ಣು ಮಕ್ಕಳು ಅಡುಗೆ ಮನೆಯಲ್ಲಿರಬೇಕು ಎಂಬ ಮಾತುಗಳನ್ನು ಆಡಿದ್ದ ಆರ್‌ಎಸ್‌ಎಸ್ ನೇತಾರ ಮೋಹನ್ ಭಾಗವತ್ ಮತ್ತು ಸಮ್ಮರ್ ಒಲಿಂಪಿಕ್ಸ್‌ನಲ್ಲಿ ಪದಕ ಗೌರವಕ್ಕೆ ಭಾಜನರಾಗುತ್ತಿರುವ ಹೆಣ್ಣು ಮಕ್ಕಳ ಪೋಟೋಗಳು ಮೀಮ್ಸ್‌ಗಳಾಗಿ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೊದಲ ಪದಕ ಗಳಿಸಿದ ಮೀರಾಬಾಯಿ ಪದಕ ಗಳಿಕೆಗೆ ನಾಂದಿ ಹಾಡಿದರೆ ಅದೇ ದಾರಿಯಲ್ಲಿ ಪಿವಿ ಸಿಂಧು ಸಾಗಿದ್ದಾರೆ. ಈಗ ಅದೇ ಮಾರ್ಗದಲ್ಲಿ ಲವ್ಲಿನಾ ಮತ್ತು ಭಾರತದ ಮಹಿಳಾ ಹಾಕಿ ತಂಡವು ಇದೆ.


ಇದನ್ನೂ ಓದಿ: ಒಲಿಂಪಿಕ್ಸ್ ಬಾಕ್ಸಿಂಗ್: ಭಾರತಕ್ಕೆ ಮತ್ತೊಂದು ಪದಕ ತಂದುಕೊಟ್ಟ ಹೆಣ್ಣುಮಗಳು ಲವ್ಲಿನಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...