ಉಕ್ರೇನ್ನಿಂದ ಹಿಂದಿರುಗುವ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳನ್ನು ದೇಶದ ವೈದ್ಯಕೀಯ ಕಾಲೇಜುಗಳಿಗೆ ದಾಖಲಿಸುವಂತೆ ಭಾರತೀಯ ವೈದ್ಯಕೀಯ ಸಂಘ ಮತ್ತು ಛತ್ತೀಸ್ಗಢದ ಆರೋಗ್ಯ ಸಚಿವ ಟಿ.ಎಸ್. ಸಿಂಗ್ ದೇವ್ ಶುಕ್ರವಾರ ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಪಡೆಯಲು ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಉಕ್ರೇನ್ಗೆ ತೆರಳುತ್ತಾರೆ. ಫೆಬ್ರವರಿ 24 ರಂದು ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣದಿಂದಾಗಿ, ಅಲ್ಲಿ ಶಿಕ್ಷಣ ಪಡೆಯುತ್ತಿರುವ ಅನೇಕ ಭಾರತೀಯ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿಕೊಂಡಿದ್ದಾರೆ. ಅದರಲ್ಲಿ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದು, ಮತ್ತೊಬ್ಬರಿಗೆ ಗುಂಡೇಟು ತಗುಲಿದೆ. ಹೆಚ್ಚಿನವರನ್ನು ಸ್ಥಳಾಂತರಿಸಲಾಗುತ್ತಿದೆ.
ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಭಾರತೀಯ ವೈದ್ಯಕೀಯ ಸಂಘವು, “ಈಗ ಉಕ್ರೇನ್ನಿಂದ ಹಿಂದಿರುಗಿದ ವಿದ್ಯಾರ್ಥಿಗಳು ತಮ್ಮ ಬ್ಯಾಚುಲರ್ ಆಫ್ ಮೆಡಿಸಿನ್, ಬ್ಯಾಚುಲರ್ ಆಫ್ ಸರ್ಜರಿ ಅಥವಾ ಎಂಬಿಬಿಎಸ್ ಕೋರ್ಸ್ನ ಉಳಿದ ಅವಧಿಗೆ ವೈದ್ಯಕೀಯ ಕಾಲೇಜುಗಳಿಗೆ ದಾಖಲಾಗಲು ಅವಕಾಶ ನೀಡಬೇಕು” ಎಂದು ಮನವಿ ಮಾಡಿದೆ.
ವೈದ್ಯಕೀಯ ಸಂಸ್ಥೆಗಳಲ್ಲಿ ಇದನ್ನು ವಿದ್ಯಾರ್ಥಿಗಳ ವಾರ್ಷಿಕ ದಾಖಲಾತಿ ಸಾಮರ್ಥ್ಯದ ಹೆಚ್ಚಳವಾಗಿ ನೋಡಬಾರದು.”ಒಂದು ಬಾರಿ ವಿನಾಯಿತಿ” ಎಂದು ಪರಿಗಣಿಸಬೇಕು. ಇದಕ್ಕಾಗಿ, ವಿದ್ಯಾರ್ಥಿಗಳು ಮೂಲತಃ ಉಕ್ರೇನ್ನಲ್ಲಿ ಪ್ರವೇಶ ಪಡೆದ ವೈದ್ಯಕೀಯ ಕಾಳೇಜುಗಳ ಅಧಿಕಾರಿಗಳು ಮಾಡಿದ ಮೌಲ್ಯೀಕರಣ ಪ್ರಮಾಣಪತ್ರವನ್ನು ಹಾಜರುಪಡಿಸಬೇಕಾಗುತ್ತದೆ ಎಂದು ವೈದ್ಯಕೀಯ ಸಂಘ ಹೇಳಿದೆ.
ಇದನ್ನೂ ಓದಿ: ಟಾಯ್ಲೆಟ್ ಕ್ಲೀನ್ ಮಾಡಿದ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತೇವೆ ಎಂದ ರಾಯಭಾರಿ ಕಚೇರಿ: ಆರೋಪ
ಇದರ ಜೊತೆಗೆ “ಇಲ್ಲಿ ಉತ್ತೀರ್ಣರಾದ ನಂತರ ಅವರು ಭಾರತೀಯ ವೈದ್ಯಕೀಯ ಪದವೀಧರರಾತ್ತಾರೆಯೇ ಹೊರತು ವಿದೇಶಿ ವೈದ್ಯಕೀಯ ಪದವೀಧರರಲ್ಲ” ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಭಾರತದಿಂದ ಉಕ್ರೇನ್ಗೆ ವೈದ್ಯಕೀಯ ಶಿಕ್ಷಣ ಪಡೆಯಲು ತೆರಳಲು ಕಾರಣ, ಅಲ್ಲಿ ವೈದ್ಯಕೀಯ ಶಿಕ್ಷಣ ಅಗ್ಗವಾಗಿದೆ. ಇದಲ್ಲದೆ, ವೈದ್ಯಕೀಯ ಕೋರ್ಸ್ಗಳ ಸೀಟುಗಳ ಸಂಖ್ಯೆಯು ಭಾರತಕ್ಕಿಂತ ಉಕ್ರೇನ್ನಲ್ಲಿ ಹೆಚ್ಚಾಗಿದೆ. ಅಲ್ಲಿಂದ ಹಿಂದಿರುಗಿದ ವಿದ್ಯಾರ್ಥಿಗಳು ಭಾರತದಲ್ಲಿ ವೈದ್ಯರಾಗಿ ಅಭ್ಯಾಸ ಮಾಡಲು ವಿದೇಶಿ ವೈದ್ಯಕೀಯ ಪದವೀಧರರ ಪರೀಕ್ಷೆ ಅಥವಾ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಸ್ಕ್ರೀನಿಂಗ್ ಟೆಸ್ಟ್ ಎಂದೂ ಕರೆಯಲ್ಪಡುವ ಪರೀಕ್ಷೆಗಳಲ್ಲಿ ಅರ್ಹರಾಗಬೇಕು.
ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಜಯೇಶ್ ಲೇಲೆ ಅವರನ್ನು ಉಲ್ಲೇಖಿಸಿರುವ ಮಿಂಟ್, “ಭಾರತದಲ್ಲಿ ಸುಮಾರು 500 ವೈದ್ಯಕೀಯ ಕಾಲೇಜುಗಳಿದ್ದು, ಪ್ರತಿ ವರ್ಷ 70,000 ರಿಂದ 80,000 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ವಿದ್ಯಾರ್ಥಿಗಳ ವೃತ್ತಿಜೀವನವು ಹಾಳಾಗದಂತೆ ತಾತ್ಕಾಲಿಕವಾಗಿ ಸೀಟುಗಳನ್ನು ತಿದ್ದುಪಡಿ ಮಾಡಲು ಮತ್ತು ಹೆಚ್ಚಿಸಲು ಸರ್ಕಾರ ಮತ್ತು ರಾಷ್ಟ್ರೀಯ ವೈದ್ಯಕೀಯ ಆಯೋಗ ಕ್ರಮ ಕೈಗೊಳ್ಳಬೇಕು” ಎಂದಿದ್ದಾರೆ.
ಇನ್ನು, ಯುದ್ಧ ಪೀಡಿತ ಉಕ್ರೇನ್ನಿಂದ ವಾಪಸಾಗುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ದೇಶದ ವೈದ್ಯಕೀಯ ಕಾಲೇಜುಗಳಿಗೆ ದಾಖಲಾಗಲು ಅವಕಾಶ ನೀಡುವಂತೆ ಛತ್ತೀಸ್ಗಢದ ಆರೋಗ್ಯ ಸಚಿವ ಟಿ.ಎಸ್. ಸಿಂಗ್ ದೇವ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಬರೆದ ಪತ್ರದಲ್ಲಿ ಸಿಂಗ್ ಡಿಯೋ ಈ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಜೊತೆಗೆ, ಇಂಟರ್ನ್ಶಿಪ್ ಮುಗಿಸದ ವಿದೇಶಿ ವಿದ್ಯಾರ್ಥಿಗಳು ವಿದೇಶಿ ವೈದ್ಯಕೀಯ ಪದವೀಧರರ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಅವರು ಭಾರತದಲ್ಲಿ ಅದನ್ನು ಮುಗಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗವು ಅನುಮತಿ ನೀಡಿದೆ ಎಂದು ಎಎನ್ಐ ವರದಿ ಮಾಡಿದೆ.
Amid the ongoing evacuation of Indian medical students from #Ukraine, National Medical Commission (NMC) allows Foreign Medical Graduates with incomplete internships due to compelling situations like the Covid19 & war…to apply to complete internships in India if they clear FMGE pic.twitter.com/tqxeCNPdYy
— ANI (@ANI) March 5, 2022
ಇದನ್ನೂ ಓದಿ: ಉಕ್ರೇನ್ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳಿಗೆ ಆಪದ್ಬಾಂಧವನಾದ ನಟ ಸೋನು ಸೂದ್