ಆರೆಸ್ಸೆಸ್ ಮತ್ತು ಬಿಜೆಪಿ ನಾಯಕನ ಮಗ ನಡೆಸಿರುವ ಉತ್ತರಖಂಡ ಯುವತಿ ಕೊಲೆ ಪ್ರಕರಣದ ಮತ್ತಷ್ಟು ವಿವರಗಳು ಹೊರಬೀಳುತ್ತಿವೆ. ಆರೋಪಿಗಳು ರೆಸಾರ್ಟ್ನಲ್ಲಿ ಹದಿಹರೆಯದವರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದಾರೆ ಎಂದು ಹತ್ಯೆಗೀಡಾದ ಯುವತಿಯು ತನ್ನ ಸ್ನೇಹಿತೆಗೆ ಮಾಡಿದ್ದ ವಾಟ್ಸಾಪ್ ಸಂದೇಶಗಳ ಆರೋಪವನ್ನು ದೃಢಪಡಿಸುವಂತಿದೆ ಎಂದು ಎನ್ಡಿಟಿವಿ ವರದಿ ಹೇಳಿದೆ.
“ಅವರು ನನ್ನನ್ನು ವೇಶ್ಯೆಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ” ಎಂದು ಕೊಲೆಗೀಡಾದ ಯುವತಿಯು ತನ್ನ ಸ್ನೇಹಿತರಿಗೆ ಸಂದೇಶ ಕಳುಹಿಸಿದ್ದು ಮತ್ತು ರೆಸಾರ್ಟ್ನಲ್ಲಿ ಸ್ವಾಗತಕಾರಿಣಿಯಾಗಿ ಕೆಲಸ ಮಾಡಿದ ಅನುಭವವನ್ನು ವಿವರಿಸುತ್ತಿದ್ದ ಬಗ್ಗೆ ವರದಿಗಳು ಬಹಿರಂಗಗೊಂಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಯುವತಿಯು ಕಳುಹಿಸಿರುವ ಸಂದೇಶಗಳ ಸ್ಕ್ರೀನ್ಶಾಟ್ಗಳು ಹರಿದಾಡುತ್ತಿದೆ. ಅದರಲ್ಲಿ ಅವರು, ರೆಸಾರ್ಟ್ಗೆ ಆಗಮಿಸುತ್ತಿದ್ದ ಗ್ರಾಹಕರಿಗೆ 10 ಸಾವಿರ ರೂ.ಗೆ ‘ವಿಶೇಷ ಸೇವೆಗಳನ್ನು’ ಒದಗಿಸಲು ಹೇಗೆ ಒತ್ತಾಯಿಸಲಾಯಿತು ಎಂಬುದನ್ನು ವಿವರಿಸಿದ್ದಾರೆ. ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಗಳು ಈ ಸಂದೇಶಗಳು ಕೊಲೆಗೀಡಾದ ಯುವತಿಯದ್ದೆ ಎಂದು ಸೂಚಿಸುತ್ತಿವೆ ಎಂದು ಎನ್ಡಿಟಿವಿ ಪೊಲೀಸರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ. ಈ ಬಗ್ಗೆ ಇನ್ನಷ್ಟು ಫೋರೆನ್ಸಿಕ್ ತನಿಖೆಯನ್ನು ಸಹ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಉತ್ತರಖಂಡ ಯುವತಿ ಕೊಲೆ ಪ್ರಕರಣ: ಬಿಜೆಪಿ ಮುಖಂಡನ ಪುತ್ರನ ರೆಸಾರ್ಟ್, ಬಿಜೆಪಿ ಶಾಸಕನ ಕಾರಿಗೆ ಬೆಂಕಿ
“ರೆಸಾರ್ಟ್ನಲ್ಲಿ ವ್ಯಕ್ತಿಯೊಬ್ಬ ಅನುಚಿತವಾಗಿ ತನ್ನ ಸ್ಪರ್ಶಿಸಿದ್ದು, ನಂತರ ತಾನು ಕುಡಿದಿದ್ದರಿಂದ ಹೀಗಾಯ್ತು, ಯಾರಿಗೂ ಹೇಳದಿರುವಂತೆ ಕೇಳಿಕೊಂಡಿದ್ದ” ಎಂದು ಸಂತ್ರಸ್ತ ಯುವತಿಯು ತನ್ನ ಸ್ನೇಹಿತನಿಗೆ ಹೇಳಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಇಷ್ಟೆ ಅಲ್ಲದೆ ಯುವತಿಯು ರೆಸಾರ್ಟ್ ಉದ್ಯೋಗಿಯೊಬ್ಬರಿಗೆ ಕರೆ ಮಾಡಿದ ಆಡಿಯೋ ಕ್ಲಿಪ್ ಕೂಡ ವೈರಲ್ ಆಗಿದೆ. ಅದರಲ್ಲಿ ಯುವತಿ ಫೋನ್ನಲ್ಲಿ ಅಳುವುದು ಮತ್ತು ತನ್ನ ಬ್ಯಾಗ್ ಅನ್ನು ಮೇಲಕ್ಕೆ ತರಲು ಇನ್ನೊಬ್ಬ ವ್ಯಕ್ತಿಯು ಕೇಳುವುದು ಕೇಳಿಸುತ್ತದೆ.
“ಅತಿಥಿಗಳಿಗೆ ‘ವಿಶೇಷ ಸೇವೆ’ಗಳನ್ನು ಒದಗಿಸುವಂತೆ ರೆಸಾರ್ಟ್ ಮಾಲೀಕರು ಯುವತಿಗೆ ಒತ್ತಡ ಹೇರುತ್ತಿದ್ದರು” ಎಂದು ಉತ್ತರಾಖಂಡದ ಉನ್ನತ ಪೊಲೀಸ್ ಅಶೋಕ್ ಕುಮಾರ್ ಹೇಳಿದ್ದಾರೆ.
ಯುವತಿ ಕೆಲಸ ಮಾಡುತ್ತಿದ್ದ ರೆಸಾರ್ಟ್ ಮಾಲೀಕರು ಪುಲ್ಕಿತ್ ಆರ್ಯ ಬೇಡಿಕೆಯಂತೆ ಅತಿಥಿಗಳೊಂದಿಗೆ ಲೈಂಗಿಕ ಕ್ರಿಯೆಗೆ ನಿರಾಕರಿಸಿದ ಕಾರಣ ಅವರನ್ನು ಕೊಲ್ಲಲಾಯಿತು ಎಂದು ಈ ಹಿಂದೆ ಅವರ ಫೇಸ್ಬುಕ್ ಸ್ನೇಹಿತರೊಬ್ಬರು ಹೇಳಿದ್ದರು.
ಇದನ್ನೂ ಓದಿ: ಉತ್ತರಖಂಡ: 19 ವರ್ಷದ ಯುವತಿ ಕೊಲೆಗೈದ ಬಿಜೆಪಿ ಮುಖಂಡನ ಮಗನ ಬಂಧನ
ಅದೇ ದಿನ ರಾತ್ರಿ ಕೊಲೆಗೀಡಾದ ಯುವತಿಯು ಈ ಸ್ನೇಹಿತನಿಗೆ ಕರೆ ಮಾಡಿದ್ದರು. ರಾತ್ರಿ 8:30 ರ ನಂತರ ಯುವತಿಯ ಫೋನ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಪದೇ ಪದೇ ಕರೆ ಮಾಡಲು ಪ್ರಯತ್ನಿಸಿದ್ದ ಸ್ನೇಹಿತ, ಯುವತಿ ಸಂಪರ್ಕಕ್ಕೆ ಸಿಗದ ಕಾರಣ ಪುಲ್ಕಿತ್ ಆರ್ಯನಿಗೆ ಫೋನ್ ಮಾಡಿದ್ದರು. ಆಗ ಆರೋಪಿಯು ಯುವತಿ ನಿದ್ದೆ ಮಾಡಲು ತನ್ನ ಕೋಣೆಗೆ ಹೋಗಿದ್ದಾಳೆ ಎಂದು ಹೇಳಿದ್ದಾನೆ.
ಮರುದಿನ ಕೂಡಾ ಯುವತಿಯ ಸ್ನೇಹಿತ ಪುಲ್ಕಿತ್ಗೆ ಕರೆ ಮಾಡಿದಾಗ, ಅವರ ಫೋನ್ ಸ್ವಿಚ್ ಆಫ್ ಆಗಿರುವುದು ಕಂಡುಬಂದಿದೆ. ಆಗ ಸ್ನೇಹಿತ ರೆಸಾರ್ಟ್ನ ಮ್ಯಾನೇಜರ್ ಅಂಕಿತ್ಗೆ ಫೋನ್ ಮಾಡಿದ್ದರು. ಈ ವೇಳೆ ಅಂಕಿತ್ ಯುವತಿಯು ಜಿಮ್ನಲ್ಲಿದ್ದಾರೆ ಎಂದು ಹೇಳಿದ್ದನು. ಇದರ ನಂತರ ಸ್ನೇಹಿತ ರೆಸಾರ್ಟ್ನ ಬಾಣಸಿಗರೊಂದಿಗೆ ಮಾತನಾಡಿದಾಗ, ಅವರು ಆ ದಿನ ಯುವತಿಯನ್ನು ನೋಡಿಲ್ಲ ಎಂದು ಹೇಳಿದ್ದಾರೆ.
ರೆಸಾರ್ಟ್ನಲ್ಲಿ ವಿವಿಐಪಿ ಅತಿಥಿಗಳಿಗೆ 10 ಸಾವಿರ ರೂ.ಗಳಿಗೆ ‘ಹೆಚ್ಚುವರಿ ಸೇವೆ’ಯನ್ನು ಒದಗಿಸಲಾಗಿದೆ ಎಂದು ವಾಟ್ಸಾಪ್ ಚಾಟ್ಗಳು ಸೂಚಿಸುತ್ತದೆ. ಸ್ಪಾ ನೆಪದಲ್ಲಿ ಈ ‘ಹೆಚ್ಚುವರಿ ಸೇವೆ’ ಒದಗಿಸಲಾಗಿದೆ ಎಂದು ಚಾಟ್ಗಳು ಬಹಿರಂಗಪಡಿಸುತ್ತವೆ.
ಇದನ್ನೂ ಓದಿ: ಉತ್ತರ ಪ್ರದೇಶ: ಮಹಿಳೆಯ ಮೇಲೆ ಕೈ ಮಾಡಿ, ಅಶ್ಲೀಲ ಪದಗಳಲ್ಲಿ ನಿಂದಿಸಿದ ಬಿಜೆಪಿ ಮುಖಂಡ
ಪ್ರಕರಣದ ಹಿನ್ನೆಲೆ
ಪುಲ್ಕಿತ್ ಆರ್ಯನ ರೆಸಾರ್ಟ್ನಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿ ಸೆಪ್ಟಂಬರ್ 18ರಂದು ಕಾಣೆಯಾಗಿದ್ದರು. ಸ್ವತಃ ಪುಲ್ಕಿತ್ ಆರ್ಯನೇ ಪೊಲೀಸ್ ಠಾಣೆಯಲ್ಲಿ ಯುವತಿ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದನು. ಆದರೆ 5 ದಿನದ ನಂತರ ಪುಲ್ಕಿತ್ ಆರ್ಯ ಇಬ್ಬರು ಸಿಬ್ಬಂದಿಯೊಡನೆ ಸೇರಿ ಯುವತಿಯನ್ನು ಕೊಂದಿದ್ದಾನೆ ಎಂಬ ಅಂಶ ಬೆಳಕಿಗೆ ಬಂದಿದೆ.
ಸಂತ್ರಸ್ತ ಯುವತಿಯ ಕುಟುಂಬವು ಮೊದಲಿನಿಂದಲೂ ಪುಲ್ಕಿತ್ ಆರ್ಯನ ಮೇಲೆ ಸಂಶಯ ವ್ಯಕ್ತಪಡಿಸಿತ್ತು. ಏಕೆಂದರೆ ಪ್ರಕರಣದ ಬಗ್ಗೆ ಆತ ಆರಂಭದಲ್ಲಿ ದೂರು ನೀಡಲು ನಿರಾಕರಿಸಿದ್ದ ಎಂದು ಹೇಳಲಾಗಿದೆ. ಮೃತ ದೇಹವನ್ನು ಪಕ್ಕದ ಕಾಲುವೆಯಲ್ಲಿ ಪತ್ತೆಹಚ್ಚಲಾಗಿದ್ದು, ಯುವತಿಯ ಸಂಬಂಧಿಕರನ್ನು ಗುರುತು ಪತ್ತೆ ಹಚ್ಚಲು ಕರೆಯಲಾಗಿದೆ ಎಂದು ವರದಿಯಾಗಿದೆ.
ಈ ನಡವೆ ಆರೋಪಿಯು ಹಿರಿಯ ಬಿಜೆಪಿ ಮತ್ತು ಆರ್ಎಸ್ಎಸ್ ಮುಖಂಡನ ಮಗನಾಗಿದ್ದರಿಂದ ಪೊಲೀಸರು ತನಿಖೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ವೈರಲ್ ಆದ ನಂತರ ಪೊಲೀಸರು ಮುಖ್ಯ ಆರೋಪಿ ಪುಲ್ಕಿತ್ ಮತ್ತು ಇಬ್ಬರು ಸಿಬ್ಬಂದಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ದ್ವೇಷ ಭಾಷಣ: ಹಿಮಾಚಲ ಸರ್ಕಾರಕ್ಕೆ ತರಾಟೆ, ಉತ್ತರಾಖಂಡ್ಗೆ ಖಡಕ್ ಎಚ್ಚರಿಕೆ ನೀಡಿದ ಸುಪ್ರೀಂಕೋರ್ಟ್
“ಪೊಲೀಸರು ತನಿಖೆಯಲ್ಲಿ ಲೋಪವೆಸಗುತ್ತಿದ್ದಾರೆ. ಸೆಪ್ಟಂಬರ್ 18ರಂದು ಯುವತಿ ಕಾಣೆಯಾಗಿದ್ದರು ಸಹ ಸೆಪ್ಟಂಬರ್ 21 ರಂದು ಎಫ್ಐಆರ್ ದಾಖಲಿಸಿದ್ದು ಏಕೆ? ಎಲ್ಲಿಯವರೆಗೆ ಬಿಜೆಪಿ ಮತ್ತು ಆರ್ಎಸ್ಎಸ್ ಮುಖಂಡರು ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ?” ಎಂದು ಕಾಂಗ್ರೆಸ್ ವಕ್ತಾರ ಗರಿಮ ಮೆಹ್ರ ದುಸಾನಿ ಪ್ರಶ್ನಿಸಿದ್ದಾರೆ.
ಬಂಧನದ ವೇಳೆ ಪುಲ್ಕಿತ್ ಆರ್ಯನ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರು ಪೊಲೀಸ್ ವಾಹನದ ಮೇಲೆ ದಾಳಿ ನಡೆಸಿ ಜಖಂಗೊಳಿಸಿದ್ದಾರೆ ಎಂದು ವರದಿಯಾಗಿದೆ. ರೆಸಾರ್ಟ್ ಮ್ಯಾನೇಜರ್ ಸೌರಭ್ ಭಾಸ್ಕರ್ ಮತ್ತು ಸಹಾಯಕ ಮ್ಯಾನೇಜರ್ ಅಂಕಿತ್ ಗುಪ್ತಾ ಎಂಬುವವರನ್ನು ಸಹ ಬಂಧಿಸಿದ್ದೇವೆ. ಆರಂಭದಲ್ಲಿ ಅವರು ಪೊಲೀಸರನ್ನು ದಿಕ್ಕು ತಪ್ಪಿಸಲು ಯತ್ನಿಸಿದರು. ಆದರೆ ಧೀರ್ಘ ವಿಚಾರಣೆಯ ಸಂದರ್ಭದಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.